ತಕ್ಷಣವೇ ಕಾರು ವಿತರಿಸುವಂತೆ ಶೋರೂಂ ಮಾಲೀಕರಿಗೆ ಶಿಫಾರಸು ಪತ್ರ ಬರೆದ ನಟ ಕಂ ಸಂಸದ
ಸನ್ನಿ ಡಿಯೋಲ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಅವರ ತಂದೆ ಧರ್ಮೇದ್ರ ಸಹ ಜನಪ್ರಿಯ ಚಿತ್ರ ನಟರು. ಇನ್ನು ಅವರ ಸಹೋದರ ಬಾಬ್ಬಿ ಡಿಯೋಲ್ ಹಾಗೂ ಸಂಬಂಧಿ ಅಭಯ್ ಡಿಯೋಲ್ ಸಹ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸನ್ನಿ ಡಿಯೋಲ್ ಅವರ ತಂದೆ ಧರ್ಮೇಂದ್ರ 15 ನೇ ಲೋಕ ಸಭಾ ಚುನಾವಣೆಯಲ್ಲಿ ರಾಜಸ್ತಾನದ ಬಿಕಾನೇರ್ ಲೋಕ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಬಾರಿ ಸನ್ನಿ ಡಿಯೋಲ್ ರವರು ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಪಂಜಾಬ್ನ ಗುರುದಾಸ್ಪುರ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಸನ್ನಿ ಡಿಯೋಲ್ ಅವರ ಇತ್ತೀಚಿನ ಶಿಫಾರಸು ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಲೇಖನದಲ್ಲಿ ಸನ್ನಿ ಡಿಯೋಲ್ ರವರು ಯಾರಿಗೆ ಶಿಫಾರಸು ಪತ್ರವನ್ನು ನೀಡಿದರು, ಯಾವ ಕಾರಣಕ್ಕೆ ನೀಡಿದರು ಎಂಬುದನ್ನು ನೋಡೋಣ.

ಸನ್ನಿ ಡಿಯೋಲ್ ಮಹೀಂದ್ರಾ ಕಾರು ಮಾರಾಟಗಾರರೊಬ್ಬರಿಗೆ ತಮ್ಮ ಶಿಫಾರಸು ಪತ್ರವನ್ನು ಬರೆದಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿಗಳು ತಮಗೆ ಪರಿಚಯವಿರುವವರಿಗೆ ಉದ್ಯೋಗ ಕೊಡಿಸುವ ಸಲುವಾಗಿ ಅಥವಾ ಅಧ್ಯಯನಕ್ಕಾಗಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಬೇಗ ಕೆಲಸ ಮುಗಿಸುವ ಸಲುವಾಗಿ ಶಿಫಾರಸು ಪತ್ರಗಳನ್ನು ನೀಡುತ್ತಾರೆ.

ಆದರೆ ಸನ್ನಿ ಡಿಯೋಲ್ ಬೇರೆ ಕಾರಣಕ್ಕೆ ಶಿಫಾರಸು ಪತ್ರ ನೀಡಿದ್ದಾರೆ. ಸನ್ನಿ ಡಿಯೋಲ್ ತಕ್ಷಣವೇ ಕಾರ್ ಅನ್ನು ವಿತರಿಸುವಂತೆ ಕಾರು ಮಾರಾಟಗಾರರಿಗೆ ಶಿಫಾರಸು ಪತ್ರ ಬರೆದಿದ್ದಾರೆ. ಅವರು ನೀಡಿರುವ ಈ ಶಿಫಾರಸು ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಥಾರ್, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅತ್ಯಂತ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಕಾರು ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಕಾರಣಕ್ಕೆ ದೇಶದ ಕೆಲವು ಭಾಗಗಳಲ್ಲಿ ಈ ಎಸ್ಯುವಿ ವಿತರಣೆ ಪಡೆಯಲು ಹಲವು ತಿಂಗಳು ಕಾಯಬೇಕಾಗಿದೆ.

ವರದಿಗಳ ಪ್ರಕಾರ ಮಾರಾಟಗಾರ, ರಾಜ್ಯ ಹಾಗೂ ನಗರಗಳ ಆಧಾರದ ಮೇಲೆ ಈ ಎಸ್ಯುವಿಯನ್ನು ಪಡೆಯಲು ಸುಮಾರು ಒಂದು ವರ್ಷದವರೆಗೆ ಕಾಯುವ ಪರಿಸ್ಥಿತಿ ಇದೆ. ಇಷ್ಟು ಬೇಡಿಕೆ ಹೊಂದಿರುವ ಎಸ್ಯುವಿಯನ್ನು ತಕ್ಷಣವೇ ವಿತರಿಸುವಂತೆ ಸಂಸದ ಸನ್ನಿ ಡಿಯೋಲ್ ಶಿಫಾರಸು ಪತ್ರ ನೀಡಿದ್ದಾರೆ.

ಈ ಪತ್ರವನ್ನು ಪಂಜಾಬ್ನ ಪಠಾಣ್ಕೋಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೀಂದ್ರಾ ಕಂಪನಿಯ ಶೋರೂಂಗೆ ಬರೆಯಲಾಗಿದೆ. ಸನ್ನಿ ಡಿಯೋಲ್ ಈ ಶಿಫಾರಸು ಪತ್ರವನ್ನು ಯಾರಿಗಾಗಿ ಬರೆದಿದ್ದಾರೆ ಎಂಬುದು ಇನ್ನೂ ಕುತೂಹಲ ಮೂಡಿಸಿದೆ.

ಅವರು ಈ ಶಿಫಾರಸು ಪತ್ರವನ್ನು ಸುಜನ್ಪುರ ಶಾಸಕರಾದ ದಿನೇಶ್ ಸಿಂಗ್ ಠಾಕೂರ್ ಅವರ ಪುತ್ರಿ ಸುರ್ಬಿ ಠಾಕೂರ್ ರವರಿಗಾಗಿ ಬರೆದಿದ್ದಾರೆ. ಈ ಪತ್ರದಲ್ಲಿ ಅವರು, ಸುಜಾನ್ ಪುರ ಶಾಸಕರ ಪುತ್ರಿ ಸುರ್ಬಿ ಠಾಕೂರ್ ಅವರಿಗೆ ಆದ್ಯತೆಯ ಮೇರೆಗೆ ತಕ್ಷಣವೇ ಥಾರ್ ಎಸ್ಯುವಿಯನ್ನು ನೀಡಬೇಕು ಎಂದು ಹೇಳಿದ್ದಾರೆ.

ಹೊಸ ಥಾರ್ ಎಸ್ಯುವಿಗಾಗಿ ಸುರ್ಬಿ ಠಾಕೂರ್ ರವರು ಈಗಾಗಲೇ 21 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ. ಅವರಿಗೆ ತಕ್ಷಣವೇ ಕಾರನ್ನು ತಕ್ಷಣವೇ ನೀಡಿ ಎಂದು ಪತ್ರದಲ್ಲಿ ಹೇಳಲಾಗಿದೆ. ವರದಿಗಳ ಪ್ರಕಾರ ಸುಜಾನ್ ಪುರ ಶಾಸಕ ದಿನೇಶ್ ಸಿಂಗ್ ಠಾಕೂರ್ ರವರ ಪುತ್ರಿ ಸುರ್ಬಿ ಠಾಕೂರ್ ಇನ್ನು ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕಾರಣಕ್ಕೆ ಅವರು ಹೊಸ ಕಾರು ಖರೀದಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೋರೂಂಗೆ ಮನವಿ ರೂಪದಲ್ಲಿ ಸನ್ನಿ ಡಿಯೋಲ್ ಈ ಶಿಫಾರಸು ಪತ್ರವನ್ನು ಬರೆದಿದ್ದಾರೆ. ಆದರೆ ಶೋರೂಂ ಆಡಳಿತ ಮಂಡಳಿ ಈ ಪತ್ರಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

ಅಂದ ಹಾಗೆ ಸನ್ನಿ ಡಿಯೋಲ್ ರವರು ಈ ಶಿಫಾರಸು ಪತ್ರವನ್ನು ನೀಡಿರುವುದು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ. ಆದರೆ ಈ ಪತ್ರವು ಈಗ ವೈರಲ್ ಆಗಿದೆ. ಮಹೀಂದ್ರ ಥಾರ್ ಎಸ್ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಆರು ವಿಭಿನ್ನ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಥಾರ್ ಎಸ್ಯುವಿಯನ್ನು ನೆಪೋಲಿಯನ್ ಬ್ಲಾಕ್, ರೇಜ್ ರೆಡ್, ಅಕ್ವಾಮರೀನ್, ಗ್ಯಾಲಕ್ಸಿ ಗ್ರೇ, ರಾಕಿ ಬೀಜ್ ಹಾಗೂ ಮಿಸ್ಟಿಕ್ ಕಾಪರ್ ಎಂಬ ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್ಯುವಿಯು ಎರಡು ರೂಫ್ ಆಯ್ಕೆಗಳನ್ನು ಹೊಂದಿದೆ.

ಹೊಸ ತಲೆಮಾರಿನ ಥಾರ್ ಎಸ್ಯುವಿಯು ಹಳೆಯ ತಲೆಮಾರಿನ ಥಾರ್ ಎಸ್ಯುವಿಗಿಂತ ಹೆಚ್ಚು ಫೀಚರ್ ಗಳನ್ನು ಹೊಂದಿದೆ. ಈ ಹಿಂದೆ ಕೇವಲ ಆಫ್ ರೋಡ್ ವಾಹನವಾಗಿ ಮಾತ್ರ ಬಳಕೆಯಾಗುತ್ತಿದ್ದ ಥಾರ್ ಎಸ್ಯುವಿಯು ಈಗ ಕುಟುಂಬಗಳ ವಾಹನವಾಗಿ ಬದಲಾಗಿದೆ.

ಮಹೀಂದ್ರಾ ಕಂಪನಿಯು ಈ ಎಸ್ಯುವಿಯನ್ನು 2.0 ಲೀಟರ್ ಪೆಟ್ರೋಲ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ. ಇದರದಲ್ಲಿ ಪೆಟ್ರೋಲ್ ಎಂಜಿನ್ ಗರಿಷ್ಠ 147 ಬಿಹೆಚ್ಪಿ ಪವರ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ ಗರಿಷ್ಠ 127 ಬಿಹೆಚ್ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ 6 ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗುತ್ತದೆ. ಇನ್ನು ಈ ಎಸ್ಯುವಿಯಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್ವಿಎಂ, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಬೆಂಬಲಿತ 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಕೀ ಲೆಸ್ ಎಂಟ್ರಿ ಯಂತಹ ಹಲವಾರು ಫೀಚರ್ ಗಳಿವೆ.


Click it and Unblock the Notifications