ಮತ್ತೊಂದು ಇವಿ ಸ್ಕೂಟರ್ ಬೆಂಕಿ ಅವಘಡ: ಪ್ರಾಣಾಪಾಯದಿಂದ ಪಾರಾದ ವಾಹನ ಮಾಲೀಕ
ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಬ್ಯಾಟರಿ ಸ್ಪೋಟ ಪ್ರಕರಣಗಳಲ್ಲಿ ಜೀವ ಹಾನಿಯು ಆಗಿದೆ. ಈ ನಡುವೆ ವಾರಕ್ಕೊಂದು ಎಂಬಂತೆ ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಎಲೆಕ್ಟ್ರಿಕ್ ವಾಹನ ಗ್ರಾಹಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಇದೀಗ ತಮಿಳುನಾಡಿನ ಹೊಸೂರು ಹೊರವಲಯದ ಜುಜುವಾಡಿಯಲ್ಲಿ ಮಾಲೀಕ ಸತೀಶ್ ಎಂಬ 29 ವರ್ಷದ ಯುವಕ ಓಕಿನಾವಾ ಐ-ಪ್ರೇಸ್ + ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ವಾಹನ ಬಹುತೇಕ ಸುಟ್ಟು ಹೋಗಿದೆ.

ಕರ್ನಾಟಕದ ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿರುವ ಸತೀಶ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದ ಟೆಕ್ ಹಬ್ಗೆ ಹಿಂತಿರುಗಿಸುತ್ತಿದ್ದಾಗ ವಾಹನಕ್ಕೆ ಸ್ವಯಂಪ್ರೇರಿತವಾಗಿ ಬೆಂಕಿ ಹೊತ್ತಿಕೊಂಡಿದೆ. ಸತೀಶ್ ತನ್ನ ಉರಿಯುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ನಿಂದ ಜಿಗಿದಿದ್ದಾನೆ. ಕೆಲವು ಸ್ಥಳೀಯರ ಸಹಾಯದಿಂದ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರಾದರೂ, ಅಷ್ಟೊತ್ತಿಗಾಗಲೇ ವಾಹನ ಸುಟ್ಟುಹೋಗಿತ್ತು.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಸತೀಶ್ ಅವರು ಒಂದು ವರ್ಷದ ಹಿಂದೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದರು. ತಮಿಳುನಾಡಿನ ಹೊಸೂರಿನ ಈ ಸುದ್ದಿ ಮತ್ತೊಮ್ಮೆ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಮೇಲೆ ಅನಪೇಕ್ಷಿತ ಸ್ಪಾಟ್ಲೈಟ್ ಅನ್ನು ಬೆಳಗಿಸುತ್ತಿದೆ.
ಕಳೆದ ಕೆಲವು ವಾರಗಳಿಂದ ದೇಶಾದ್ಯಂತ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೋಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳು ಎಲೆಕ್ಟ್ರಿಕ್ ಸ್ಕೂಟರ್ಗಳ ಬ್ಯಾಟರಿ ದೋಷ, ಕಳಪೆ ಗುಣಮಟ್ಟದಂತಹ ಸಮಸ್ಯೆಗಳಿಂದ ಬೆಂಕಿ ಅವಘಡಗಳಿಗೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರೆಗೆ ಮೂವರು ವ್ಯಕ್ತಿಗಳ ಸಾವಿಗೆ ಎಲೆಕ್ಟ್ರಿಕ್ ವಾಹನಗಳು ಕಾರಣವಾಗಿವೆ.

ಈ ಬೆಂಕಿಗೆ ನಿಜವಾದ ಕಾರಣ ತಿಳಿದಿಲ್ಲವಾದರೂ, ದೇಶದಾದ್ಯಂತ ಕೆಲವು ಪ್ರದೇಶಗಳಲ್ಲಿನ ತಾಪಮಾನವು ನಲವತ್ತರ ಗಡಿಯನ್ನು ತಲುಪುತ್ತಿರುವುದು ಕೂಡ ಈ ಅವಘಡಗಳಿಗೆ ಕಾರಣವಾಗಿರಬಹುದು. ಒಕಿನಾವಾ ಸ್ಕೂಟರ್ ಹೊತ್ತಿ ಉರಿದಿರುವುದು ಇದೇ ಮೊದಲಲ್ಲ. ಒಂದು ತಿಂಗಳ ಹಿಂದೆ, ಉತ್ತರ ತಮಿಳುನಾಡು ರಾಜ್ಯದ ವೆಲ್ಲೂರಿನಲ್ಲಿ ಓಕಿನಾವಾ ಸ್ಕೂಟರ್ ಹೊತ್ತಿ ಉರಿದಿತ್ತು.

ರಾತ್ರಿ 1 ಗಂಟೆ ಸುಮಾರಿಗೆ ಚಾರ್ಜ್ ಆಗುತ್ತಿದ್ದಾಗ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅದರ ಮಾಲೀಕರು ಮತ್ತು ಅವರ ಅಪ್ರಾಪ್ತ ಮಗಳು ಗಾಢ ನಿದ್ದೆಯಲ್ಲಿದ್ದಾಗ ಹಳೆಯ ಸಾಕೆಟ್ನಿಂದ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಇಬ್ಬರೂ ಸಾವನ್ನಪ್ಪಿದ್ದಾರೆ.

ತಮ್ಮ ಇ-ಸ್ಕೂಟರ್ಗಳಲ್ಲಿ ಬೆಂಕಿ ಕಾರಣವನ್ನು ಕಂಡುಕೊಳ್ಳಲು ಕಂಪನಿಯು ಸ್ವಯಂಪ್ರೇರಿತವಾಗಿ ಹಿಂಪಡೆಯುವಿಕೆ ಘೋಷಿಸಿದೆ. ಒಟ್ಟಾರೆಯಾಗಿ, ಓಕಿನಾವಾ, ಓಲಾ ಎಲೆಕ್ಟ್ರಿಕ್, ಪ್ಯೂರ್ ಇವಿ ಮತ್ತು ಇತರ ಇವಿ ತಯಾರಕರಂತಹ ಕಂಪನಿಗಳಿಂದ 7,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅವುಗಳ ತಯಾರಕರು ಮುನ್ನೆಚ್ಚರಿಕೆ ಕ್ರಮವಾಗಿ ಹಿಂಪಡೆದಿದ್ದಾರೆ.

ಈ ಇತ್ತೀಚಿನ ಹೊಸೂರು ಘಟನೆಯು ದುರದೃಷ್ಟವಶಾತ್ ದೇಶದಾದ್ಯಂತ ಸಾಮಾನ್ಯ ದೃಶ್ಯವಾಗುತ್ತಿರುವ ಮತ್ತೊಂದು ಬೆಂಕಿ ಅವಘಡಕ್ಕೆ ಉದಾಹರಣೆಯಾಗಿ ಇವಿ ವಲಯಕ್ಕೆ ದೊಡ್ಡ ಪೆಟ್ಟಾಗಿ ಪರಿಣಮಿಸಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್, ಮಾಲೀಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.

ಓಲಾ ಸ್ಕೂಟರ್ಗೆ ಬೆಂಕಿಯಿಟ್ಟ ಮಾಲೀಕ
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ತನ್ನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಅಸಮಾಧಾನಗೊಂಡು ಪೆಟ್ರೋಲ್ ಸುರಿದು ರಸ್ತೆಯಲ್ಲಿ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ತಮಿಳುನಾಡಿನ ಅಂಬೂರಿನ ಫಿಸಿಯೋಥೆರಪಿಸ್ಟ್ ಪೃಥ್ವಿರಾಜ್ ಕಳೆದ ಮೂರು ತಿಂಗಳಿಂದ ಓಲಾ ಎಸ್1 ಪ್ರೊ ಟಾಪ್ ಎಂಡ್ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದಾರೆ.

ಆದರೆ, ಸ್ಕೂಟರ್ ಖರೀದಿಸಿದ ಮೊದಲ ದಿನದಿಂದಲೇ ಅದರಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಓಲಾ ಸಂಸ್ಥೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪೃತ್ವಿರಾಜ್ ದೂರಿದ್ದಾರೆ. ಈ ವಾಹನದ ನೋಂದಣಿಯಿಂದ ಹಿಡಿದು ಅದರ ವ್ಯಾಪ್ತಿಯವರೆಗೆ ಪೃಥ್ವಿರಾಜ್ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ Ola S1-Pro ಎಲೆಕ್ಟ್ರಿಕ್ ಸ್ಕೂಟರ್ ಸ್ಟ್ಯಾಂಡರ್ಡ್ ಕಂಡಿಷನ್ಸ್ ಪ್ರಕಾರ, ಪೂರ್ಣ ಚಾರ್ಜ್ನಲ್ಲಿ 181 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಪ್ರಮಾಣೀಕರಿಸಲಾಗಿದೆ. ಆದರೆ, ಅವರು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಕೇವಲ 44 ಕಿ.ಮೀಗೆ ಸ್ಕೂಟರ್ ನಿಂತುಹೋಗುತ್ತಿದೆ. ಇದರಿಂದ ಕುಪಿತಗೊಂಡ ಮಾಲೀಕ ಆಂಬೂರು ಹೆದ್ದಾರಿ ಬದಿ ನಿಲ್ಲಿಸಿ ತನ್ನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮಿಳಿನ ಜನಪ್ರಿಯ ಸುದ್ದಿ ವಾಹಿನಿಯೊಂದು ಕೂಡ ಈ ಕುರಿತ ಸುದ್ದಿಯನ್ನು ಪ್ರಸಾರ ಮಾಡಿದೆ.

ವೀಡಿಯೊದಲ್ಲಿರುವ ವರದಿ ಪ್ರಕಾರ, ಪೃಥ್ವಿರಾಜ್ ಖರೀದಿಸಿದ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗುಡಿಯಾಥಂ ಆರ್ಟಿಒಗೆ ನೋಂದಣಿಗಾಗಿ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಆರ್ ಟಿಒ ಅಧಿಕಾರಿಗಳು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ಆಂಬೂರಿನಲ್ಲಿ ನೋಂದಣಿ ಮಾಡಿಸಬೇಕು ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ.

ಒರಿಜಿನಲ್ ಸ್ಕೂಟರ್ ನಲ್ಲಿ ನಾನಾ ಸಮಸ್ಯೆಗಳಿಂದ ಕಂಗೆಟ್ಟಿದ್ದ ಪೃಥ್ವಿರಾಜ್ ಗೆ ನೋಂದಣಿ ಪ್ರಕ್ರಿಯೆ ಇನ್ನಷ್ಟು ಗೊಂದಲ ಮೂಡಿಸಿತ್ತು. ಇದೇ ಸಂದರ್ಭದಲ್ಲಿ ಅವರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಂಬೂರು ಕಡೆಗೆ ಬರುತ್ತಿದ್ದಾಗ ಏಕಾಏಕಿ ಎಲೆಕ್ಟ್ರಿಕ್ ಸ್ಕೂಟರ್ ಅರ್ಧಕ್ಕೆ ನಿಂತಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಮಸ್ಯೆಗಳ ಸರಮಾಲೆಯಿಂದ ಸಿಟ್ಟಿಗೆದ್ದ ಪೃಥ್ವಿರಾಜ್ ರಸ್ತೆ ಬದಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ.


Click it and Unblock the Notifications








