ಮಂಗಳೂರು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಹದ್ದಿನ ಕಣ್ಣು
ಮಂಗಳೂರು ವಿಭಾಗದ ಬೆಜೈನಲ್ಲಿರುವ ಮುಖ್ಯ ಬಸ್ ನಿಲ್ದಾಣದಲ್ಲಿ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾ ಹದ್ದಿನ ಕಣ್ಣಿಡಲಿದೆ. ಈ ಮೂಲಕ ಎಲ್ಲ ಬೆಳವಣಿಗೆಗಳು ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷಾ ಮಾನದಂಡ ಅನುಸರಿಸುವ ನಿಟ್ಟಿನಲ್ಲಿ ಇಂತಹದೊಂದು ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿಯಲ್ಲಿ ದಾಖಲಾಗುವ ಎಲ್ಲ ವೀಡಿಯೋ ತುಣಕುಗಳು ಸರ್ವರ್ನಲ್ಲಿ ಸ್ಟೋರ್ ಆಗಲಿದ್ದು, ಭವಿಷ್ಯದಲ್ಲೂ ನೆರವಾಗಲಿದೆ. ಇದನ್ನು ಯಾವುದೇ ವಿಚಾರಣೆ ಸಂದರ್ಭದಲ್ಲಿ ಪೊಲೀಸ್ ಹಾಗೂ ಇತರ ತನಿಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುವುದು.
ಆರಂಭದಲ್ಲಿ 12 ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದನ್ನು ಇತರ ಬಸ್ ನಿಲ್ದಾಣಕ್ಕೂ ವ್ಯಾಪಿಸಲಾಗುವುದು ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಎಂ ಮಹೇಶ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಒಟ್ಟು 450 ಬಸ್ ಸರ್ವೀಸ್ಗಳನ್ನು ನಿಯಂತ್ರಿಸುತ್ತಿದ್ದು, ಇದು ಧರ್ಮಸ್ಥಳ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಾಸರಗೋಡು ಮುಂತಾದ ಕಡೆಗಳಿಗೆ ಸಂರ್ಪಕ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಈ ಪೈಕಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥ ಕ್ಷೇತ್ರ ಹಾಗೂ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಗಳಿಗೆ ಗರಿಷ್ಠ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಿದ್ದಾರೆ.


Click it and Unblock the Notifications









