ಭಾರತೀಯ ಆಟೋಮೊಬೈಲ್ ಉದ್ಯಮವನ್ನು ನಂ 1 ಆಗಿಸುವತ್ತ ಗುರಿಯಿಟ್ಟ ಸಾರಿಗೆ ಸಚಿವ
ಐದು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ರಫ್ತಿನಲ್ಲಿ ಭಾರತದ ಆಟೋಮೊಬೈಲ್ ಉದ್ಯಮವನ್ನು ವಿಶ್ವದಲ್ಲೇ ನಂಬರ್ 1 ಮಾಡುವ ಗುರಿ ಹೊಂದಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿರವರು ಶುಕ್ರವಾರ ಹೇಳಿದ್ದಾರೆ. ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತದ ಭವಿಷ್ಯವು ತುಂಬಾ ಉಜ್ವಲವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ನಮ್ಮ ಆಟೋ ಮೊಬೈಲ್ ಉದ್ಯಮದ ವಹಿವಾಟು ರೂ. 7.5 ಲಕ್ಷ ಕೋಟಿಗಳಾಗಿದೆ. ಐದು ವರ್ಷಗಳಲ್ಲಿ ನಮ್ಮ ಉದ್ಯಮವು ರೂ. 15 ಲಕ್ಷ ಕೋಟಿಗಳಿಗಿಂತ ಹೆಚ್ಚು ಆಗಲಿದೆ ಮತ್ತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ಗರಿಷ್ಠ ಉದ್ಯೋಗ, ರಫ್ತು ಮತ್ತು ಆದಾಯವನ್ನು ಒದಗಿಸುವ ಉದ್ಯಮವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಅವರು ಅನಂತಕುಮಾರ್ ಸ್ಮಾರಕ ಉಪನ್ಯಾಸದ ಮೊದಲ ಆವೃತ್ತಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಐದು ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳು, ಸ್ಕೂಟರ್ಗಳು, ಬಸ್ಗಳು, ಆಟೋ ರಿಕ್ಷಾಗಳು ಹಾಗೂ ಟ್ರಕ್ಗಳ ರಫ್ತಿನಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮವನ್ನು ವಿಶ್ವದಲ್ಲೇ ನಂ 1 ಸ್ಥಾನದಲ್ಲಿರಿಸುವುದು ತಮ್ಮ ಗುರಿ ಹಾಗೂ ಬದ್ಧತೆಯಾಗಿದೆ ಎಂದು ಅವರು ಹೇಳಿದರು. ನಾವು ರಫ್ತು ಹೆಚ್ಚಿಸುವ ಹಾಗೂ ಆಮದು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಈಗ ಪರಿಸರ ಬಗ್ಗೆ ಕಾಳಜಿ ವಹಿಸುವ ಸಮಯ ಬಂದಿದೆ ಎಂದು ಗಡ್ಕರಿ ಹೇಳಿದರು.

ಭಾರತೀಯ ಸಮಾಜದ ಮೂರು ಪ್ರಮುಖ ಸ್ತಂಭಗಳೆಂದರೆ ಆರ್ಥಿಕತೆ, ನೈತಿಕತೆ ಹಾಗೂ ಪರಿಸರ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಭಾರತವನ್ನು ವಿಶ್ವದ ನಂ. 1 ಆರ್ಥಿಕತೆಯನ್ನಾಗಿ ಮಾಡಲು ಬಯಸುತ್ತೇವೆ ಎಂದು ನಿತಿನ್ ಗಡ್ಕರಿ ಹೇಳಿದರು. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ರವರ ಪುಣ್ಯ ಸ್ಮರಣೆಯ ಅಂಗವಾಗಿ ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಸಂಸ್ಮರಣಾ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಈ ವೇಳೆ ನಿತಿನ್ ಗಡ್ಕರಿ ರವರು ಬೆಂಗಳೂರಿನ ಸ್ಟಾರ್ಟ್ಅಪ್ಗಳು, ಉದ್ಯಮಗಳು ಹಾಗೂ ಸಂಶೋಧನಾ ಸಂಸ್ಥೆಗಳು ಮಾಡಿರುವ ಕೆಲಸವನ್ನು ಶ್ಲಾಘಿಸಿದರು, ಎಲ್ಎನ್ಜಿ, ತ್ಯಾಜ್ಯ ನೀರಿನಿಂದ ಹಸಿರು ಹೈಡ್ರೋಜನ್, ಎಥೆನಾಲ್, ಎಲೆಕ್ಟ್ರಿಕ್ ವಾಹನ ಹಾಗೂ ಫ್ಲೆಕ್ಸ್ ಎಂಜಿನ್ಗಳನ್ನು ಉತ್ತೇಜಿಸುವ ಸರ್ಕಾರದ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಮಾಲಿನ್ಯ ನಿಯಂತ್ರಣಕ್ಕೆ ನೆರವಾಗುವ ಎಲೆಕ್ಟ್ರಿಕ್ ಅಥವಾ ಫ್ಲೆಕ್ಸ್ ಎಂಜಿನ್ ಹೊಂದಿರುವ ವಾಹನಗಳನ್ನು ಖರೀದಿಸುವಂತೆ ಅವರು ಜನರಿಗೆ ಮನವಿ ಮಾಡಿದರು. ಸಾರಿಗೆ ವಲಯದ ಕುರಿತು ಮಾತನಾಡಿದ ಗಡ್ಕರಿರವರು, ನಮ್ಮ ಮೊದಲ ಆದ್ಯತೆ ಜಲಮಾರ್ಗ, ಎರಡನೇಯದು ರೈಲ್ವೆ, ಮೂರನೇಯದು ರಸ್ತೆ ಹಾಗೂ ನಾಲ್ಕನೇಯದು ವಿಮಾನಯಾನವಾಗಿದೆ. ಆದರೆ ದುರದೃಷ್ಟವಶಾತ್ ಈಗ 90%ನಷ್ಟು ಪ್ರಯಾಣಿಕರ ದಟ್ಟಣೆ ರಸ್ತೆಯಲ್ಲಿದ್ದರೆ, 70% ನಷ್ಟು ಸರಕು ಸಾಗಣೆ ರಸ್ತೆಯಲ್ಲಿದೆ ಎಂದು ಹೇಳಿದರು.

ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಸುಮಾರು 96 ಸಾವಿರ ಕಿ.ಮೀಗಳ ರಾಷ್ಟ್ರೀಯ ಹೆದ್ದಾರಿ ಇತ್ತು. ಈಗ ಸುಮಾರು 1,47,000 ಕಿ.ಮೀಗಳ ರಾಷ್ಟ್ರೀಯ ಹೆದ್ದಾರಿ ಇದೆ. ಅಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಗ ದಿನಕ್ಕೆ 2 ಕಿ.ಮೀಗಳಾಗಿತ್ತು. ಈಗ ದಿನಕ್ಕೆ 38 ಕಿ.ಮೀಗಳಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ, ನಾವು ಈಗ ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.

ಹೆದ್ದಾರಿ ರಸ್ತೆ ಕಾಮಗಾರಿಯನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದ ಉದಾಹರಣೆಯನ್ನು ಉಲ್ಲೇಖಿಸಿದ ನಿತಿನ್ ಗಡ್ಕರಿ, ರಸ್ತೆ ನಿರ್ಮಾಣದಲ್ಲಿ ನಾವು ಮುಂದಿದ್ದೇವೆ, ನನ್ನ ಧ್ಯೇಯ, ನನ್ನ ಗುರಿ ಮೂರು ವರ್ಷಗಳಲ್ಲಿ ಭಾರತೀಯ ರಸ್ತೆಗಳನ್ನು ಅಮೆರಿಕಾದ ಗುಣಮಟ್ಟಕ್ಕೆ ಮಾಡುವುದು. ಈಗ ಚೆನ್ನೈನಿಂದ ಬೆಂಗಳೂರುವರೆಗೆ ಗ್ರೀನ್ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಸಾಕಷ್ಟು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು ರಿಂಗ್ ರೋಡ್ನಲ್ಲಿಯೂ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು. ಹಡಗು ಹಾಗೂ ಜಲಮಾರ್ಗ ಸಚಿವರಾಗಿದ್ದಾಗ 103 ಜಲಮಾರ್ಗಗಳಿಗೆ ಕೈಗೊಂಡ ಕ್ರಮಗಳ ಬಗ್ಗೆ ಒತ್ತಿ ಹೇಳಿದರು.

ಭಾರತದಲ್ಲಿ ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಆದರೆ ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿಲ್ಲ. ಈ ಬಾರಿ ಹಬ್ಬದ ಸಂದರ್ಭದಲ್ಲಿ ಕಾರುಗಳ ಮಾರಾಟ ಪ್ರಮಾಣವು ಕುಸಿತಗೊಳ್ಳಲು ಹಲವಾರು ಕಾರಣಗಳಿವೆ. ಈ ಕಾರಣಗಳು ಯಾವುವು ಎಂಬುದನ್ನು ನೋಡುವುದಾದರೆ..

ಹೆಚ್ಚುತ್ತಿರುವ ಕಾರುಗಳ ಬೆಲೆ, ಹೊಸ ಕಾರುಗಳ ವಿತರಣೆ ಪಡೆಯಲು ದೀರ್ಘ ಕಾಲ ಕಾಯುವಿಕೆ, ಹೊಸ ಸ್ಕ್ರ್ಯಾಪ್ ನಿಯಮಗಳು ಹಾಗೂ ಒಂದೇ ಸಮನೆ ಏರಿಕೆಯಾಗುತ್ತಿರುವ ಇಂಧನ ಬೆಲೆಗಳಿಂದ ಗ್ರಾಹಕರು ಹೊಸ ಕಾರ್ ಅನ್ನು ಖರೀದಿಸಲು ಯೋಚಿಸುವಂತಾಗಿದೆ. ಇವುಗಳ ಜೊತೆಗೆ ಜನರು ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.

ದೇಶಾದ್ಯಂತ ಪ್ರತಿ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಬಹುತೇಕ ನಗರಗಳಲ್ಲಿ ಅವುಗಳ ಬೆಲೆ ರೂ. 100ರ ಗಡಿ ದಾಟಿದೆ. ಈ ಪರಿಸ್ಥಿತಿಯಲ್ಲಿ ಪೆಟ್ರೋಲ್ ವಾಹನ ಖರೀದಿಸಿದರೆ ಇನ್ನೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಪೆಟ್ರೋಲ್ ಬೆಲೆ ಪ್ರತಿ ನಿತ್ಯ ಹೊಸ ಎತ್ತರವನ್ನು ಮುಟ್ಟುತ್ತಿದೆ. ದೇಶದ ಹಲವು ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 117 ಗಳಾಗಿದೆ.

ಮುಂಬರುವ ದಿನಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡು ಬರುವ ಸಾಧ್ಯತೆಗಳಿಲ್ಲ. ಈ ಪರಿಸ್ಥಿತಿಯಲ್ಲಿ, ಹೊಸ ಕಾರನ್ನು ಖರೀದಿಸುವುದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಬಹುದು. ಮೊದಲೇ ಕೋವಿಡ್ 19 ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ಇದು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆಗಳಿವೆ.

ದೇಶದ ಬಹುತೇಕ ಕಾರು ಕಂಪನಿಗಳು ಈ ವರ್ಷ ತಮ್ಮ ಕಾರುಗಳ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿವೆ. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ವಾರ್ಷಿಕವಾಗಿ ಬೆಲೆ ಏರಿಸಲಾಗಿತ್ತು. ನಂತರ ಏಪ್ರಿಲ್ ತಿಂಗಳಿನಲ್ಲಿ ಹಾಗೂ ಅದಾದ ನಂತರ ಆಗಸ್ಟ್ - ಸೆಪ್ಟೆಂಬರ್ ಅವಧಿಯಲ್ಲಿ ಬೆಲೆ ಏರಿಕೆ ಮಾಡಲಾಯಿತು. ಇದು ಸಹ ಗ್ರಾಹಕರು ಹೊಸ ಕಾರು ಖರೀದಿಸಲು ಹಿಂದೇಟು ಹಾಕಲು ಕಾರಣವಾಗಿದೆ.

ಪ್ರಪಂಚದಾದ್ಯಂತ ಸೆಮಿ ಕಂಡಕ್ಟರ್ ಗಳ ಕೊರತೆಯಿಂದಾಗಿ ಕಾರುಗಳ ವಿತರಣೆ ಪಡೆಯಲು ಹೆಚ್ಚು ಕಾಲ ಕಾಯಬೇಕಾಗಿದೆ. ಸೆಮಿಕಂಡಕ್ಟರ್ ಗಳ ಕೊರತೆಯು ದೇಶಿಯ ಮಾರುಕಟ್ಟೆಯಲ್ಲಿನ ಹಲವು ಕಂಪನಿಗಳ ಮೇಲೂ ಪರಿಣಾಮ ಬೀರಿದೆ. ಜನಪ್ರಿಯ ಎಸ್ಯುವಿಗಳ ವಿತರಣೆ ಪಡೆಯಲು 3 - 6 ತಿಂಗಳ ಕಾಯಬೇಕಾಗಿದೆ. ಹಲವು ಮಾದರಿಗಳ ವಿತರಣೆ ಪಡೆಯಲು ಒಂದು ವರ್ಷದವರೆಗೆ ಕಾಯ ಬೇಕಾಗಿದೆ.

ಸೆಮಿಕಂಡಕ್ಟರ್ ಗಳ ಕೊರತೆಯು Mahindra XUV 700, MG Aster ನಂತಹ ಹೊಸ ಮಾದರಿಗಳ ಮೇಲೂ ಪರಿಣಾಮ ಬೀರಿದೆ. ಕಂಪನಿಗಳು ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡುತ್ತಿವೆ. ಆದರೆ ಕಂಪನಿಗಳು ವಾಹನಗಳನ್ನು ಉತ್ಪಾದಿಸಿ ಕಾರ್ಖಾನೆಯ ಯಾರ್ಡ್ಗಳಲ್ಲಿ ಇರಿಸಿವೆ. ಸೆಮಿಕಂಡಕ್ಟರ್ಗಳ ಕೊರತೆಯ ಕಾರಣಕ್ಕೆ ಅವುಗಳನ್ನು ಡೀಲರ್ಗಳಿಗೆ ಕಳುಹಿಸುತ್ತಿಲ್ಲ. ಮುಂದಿನ ಕೆಲವು ತಿಂಗಳುಗಳ ಕಾಲ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆಗಳಿವೆ.


Click it and Unblock the Notifications