ಹ್ಯಾಪಿ ನ್ಯೂಸ್; ವಿದ್ಯುತ್ ಕಾರುಗಳಿಗೆ ಸರಕಾರ ಸಹಾಯಧನ
ವಿದ್ಯುತ್ ಕಾರು ಪ್ರೇಮಿಗಳಿಗೊಂದು ಸಿಹಿ ಸುದ್ದಿ ಬಂದಿದ್ದು, ದೇಶದ ಎಲೆಕ್ಟ್ರಿಕ್ ಕಾರುಗಳಿಗೆ ಸಹಾಯಧನ (ಸಬ್ಸಿಡಿ) ಒದಗಿಸಲು ಕೇಂದ್ರ ಸರಕಾರ ಮುಂದಾಗಿದೆ. ಹೌದು, ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆಯ (ಎನ್ಇಎಂಎಂಪಿ) ಅಂಗವಾಗಿ 2014ರ ಎಪ್ರಿಲ್ನಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿವೊದಗಿಸಲು ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಸರಕಾರದ ಈ ಕ್ರಮವು ದೇಶದಲ್ಲಿ ಪರಿಸರ ಸ್ನೇಹಿ ಕಾರುಗಳನ್ನು ಉತ್ಪಾದಿಸುವ ಸಂಸ್ಥೆಗಳಿಗೆ ಉತ್ತೇಜಿಸಲಿದೆ. ಇದು ದೇಶದ ನಗರಗಳಲ್ಲಿ ಹೆಚ್ಚೆಚ್ಚು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳು ಓಡಾಡಲು ನೆರವು ಮಾಡಲಿದೆ.

ಎರಡು ವರ್ಷಗಳ ಹಿಂದೆಯೇ ಎಲೆಕ್ಟ್ರಿಕ್ ವಾಹನಗಳಿಗೆ ಸಹಾಯಧನ ನೀಡುವ ಕ್ರಮವನ್ನು ಸರಕಾರ ಘೋಷಿಸಿತ್ತು. ಆದರೆ ಹಲವಾರು ತೊಡಕುಗಳು ಎದುರಾಗಿದ್ದರಿಂದ ಯೋಜನೆಗೆ ವಿಘ್ನವುಂಟಾಗಿತ್ತು.

ಆದರೆ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಹೆವಿ ಇಂಡಸ್ಟ್ರೀಸ್ ಸಚಿವಾಲಯದ ವಿಚಾರಗೋಷ್ಠಿಯಲ್ಲಿ ಈ ಬಗ್ಗೆ ಹಸಿರು ನಿಶಾನೆ ನೀಡಲಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಎನ್ಇಎಂಎಂಪಿ ಯೋಜನೆ 2014 ಎಪ್ರಿಲ್ ತಿಂಗಳಿನಿಂದಲೇ ಜಾರಿಗೆ ಬರಲಿದೆ ಎಂದಿದೆ.

ಮುಂದಿನ ಏಳು ವರ್ಷ ಅಂದರೆ 2020ರ ವರೆಗೆ ಮುಂದುವರಿಯಲಿರುವ ಈ ಯೋಜನೆಯಲ್ಲಿ ಒಟ್ಟು 12,000 ಕೋಟಿ ರು.ಗಳನ್ನು ಹಂಚಲಾಗುವುದು. ಈ ಯೋಜನೆಯ ಮುಖಾಂತರ ವರ್ಷಂಪ್ರತಿ ಅಂದಾಜು 2,000 ಕೋಟಿ ರು.ಗಳಷ್ಟು ಅನುವು ಮಾಡಿಕೊಡಲಾಗುವುದು. ಇದರಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ಹಂಚಿಕಾ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಮುಂದಿನ ಏಳು ವರ್ಷದೊಳಗೆ ಆರರಿಂದ ಏಳು ದಶಲಕ್ಷ ಎಲೆಕ್ಟ್ರಿಕ್ ವಾಹನಗಳು ದೇಶದ ರಸ್ತೆಗಿಳಿಸುವುದು ಸರಕಾರದ ಗುರಿಯಾಗಿದೆ. ಇದರಲ್ಲಿ ನಾಲ್ಕು ಚಕ್ರ ಸೇರಿದಂತೆ ದ್ವಿಚಕ್ರ ವಾಹನವು ಸೇರಿದೆ.

ಈ ಎಲ್ಲ ಯೋಜನೆಗಳು ಅಂದುಕೊಂಡಂತೆ ನಡೆದ್ದಲ್ಲಿ ದೇಶವು ಒಟ್ಟಾರೆಯಾಗಿ 40,000 ಕೋಟಿ ರು.ಗಳ ಇಂಧನವನ್ನು ಉಳಿತಾಯ ಮಾಡಲಿದೆ. ಇದು ದೇಶವು ಆರ್ಥಿಕವಾಗಿ ಇನ್ನಷ್ಟು ಸಧೃಡ ರಾಷ್ಟ್ರವನ್ನಾಗಿ ಬೆಳೆಯಲು ಸಹಾಯ ಮಾಡಲಿದೆ.

ಪ್ರಸ್ತುತ ದೇಶದಲ್ಲಿರುವ ಏಕೈಕ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯೆಂದರೆ ಅದುವೇ ಮಹೀಂದ್ರ ರೇವಾ. ಕೆಲವು ದಿನಗಳ ಹಿಂದೆಯಷ್ಟೇ ಸರಕಾರದಿಂದ ಸೂಕ್ತ ಬೆಂಬಲ ದೊರಕದ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ರವಾನಿಸಿತ್ತು.

ಮಹೀಂದ್ರ ಹೊರತುಪಡಿಸಿ ಟಾಟಾ ಮೋಟಾರ್ಸ್, ಟಿವಿಎಸ್, ಬಜಾಜ್ ಸಹ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಯೋಜನೆಯಲ್ಲಿದೆ. ಅಂದ ಹಾಗೆ ಸರಕಾರದಿಂದ ಸಬ್ಸಿಡಿ ದೊರೆತ್ತಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಸೆಡಾನ್ ಮತ್ತು ಇನ್ನಿತರ ವಾಣಿಜ್ಯ ವಾಹನಗಳನ್ನು ಗ್ರಾಹಕರು ಸದ್ಯದಲ್ಲೇ ನಿರೀಕ್ಷಿಸಬಹುದಾಗಿದೆ.


Click it and Unblock the Notifications








