ಕಾಯಕವೇ ಕೈಲಾಸ: ರಸ್ತೆ ಗುಂಡಿಗೆ ಮಣ್ಣು ತುಂಬಿಸುವ ಶ್ರಮಜೀವಿ!
ಬಹುಶ: ತಾನು, ತನ್ನದ್ದು ಎಂಬ ಆಹಂಭಾವ ಹುಟ್ಟಿಕೊಳ್ಳುವ ಈ ಆಧುನಿಕ ಕಾಲದಲ್ಲೂ ಇಂತಹ ಸಹೃದಯಿಗಳನ್ನು ಹುಡುಕಿಕೊಳ್ಳುವುದು ಕಷ್ಟಕರ. ಹಾಗಿರುವಾಗ ಹೈದರಾಬಾದ್ನಲ್ಲಿನ ತಾತಾರೊರ್ವರು ರಸ್ತೆಯಲ್ಲಿನ ಗುಂಡಿಗಳಿಗೆಲ್ಲ ಮಣ್ಣು ತುಂಬಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು, ಅಕ್ಷರಶ: ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಬದುಕಿರುವಾಗ ಇತರರಿಗೆ ಒಳ್ಳೆಯ ಕೆಲಸ ಮಾಡಬೇಕೆಂಬುದು ಈ ಶ್ರಮಜೀವಿಯ ಇಂಗಿತವಾಗಿದೆ. ಇದಕ್ಕಾಗಿ ತಮ್ಮದೇ ಆದ 'ಶ್ರಮದಾನಂ' ಎಂಬ ಟ್ರಸ್ಟ್ ರೂಪಿಸಿದ್ದಾರೆ. ಅಷ್ಟಕ್ಕೂ ಈ ಶ್ರೇಷ್ಠ ಮನುಷ್ಯ ಯಾರು? ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಇವರೇ ಗಂಗಾಧರ ತಿಲಕ್ ಕತ್ನಂ (Gangadhara Tilak Katnam). ಮೂಲತ: ಹೈದರಾಬಾದ್ ನಿವಾಸಿಯಾಗಿರುವ ಇವರು ಸರಕಾರದ ನೆರವಿಗಾಗಿ ಕಾಯದೇ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿಸಿದ್ದಾರೆ.

ಇದಕ್ಕಾಗಿ 67ರ ಹರೆಯದ ಗಂಗಾಧರ ಅವರು ಶ್ರಮದಾನಂ ಎಂಬ ಸಹಾಯಾರ್ಥ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ಹಿರಿಯ ನಾಗರಿಕನ ಜೊತೆಯೀಗ ಅನೇಕ ಅನುಯಾಯಿಗಳು ಸೇರಿಕೊಂಡಿದ್ದು, ಹೈದರಾಬಾದ್ ಎಲ್ಲೆಡೆ ತೆರಳಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುಗಡೆಗೊಳಿಸುತ್ತಾರೆ.

'ಕಾಯಕವೇ ಕೈಲಾಸ' ಎಂಬ ವಚನದಂತೆ ಗಂಗಾಧರ ಅವರು ತಮ್ಮ ಈ ಕೆಲಸದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದು, ಅಲ್ಲದೆ ಸಂಪೂರ್ಣ ನೆಮ್ಮದಿಯನ್ನು ಹೊಂದಿದ್ದಾರೆ. ಯಾಕೆಂದರೆ ರಸ್ತೆಯ ಗುಂಡಿಗಳಿಂದಾಗಿ ದೈನಂದಿನ ನಡೆಯುವ ಅಪಘಾತಗಳ ಬಗ್ಗೆ ನಾವು ಹೆಚ್ಚೇನು ಹೇಳುವ ಅಗತ್ಯವಿಲ್ಲ.

ಗಂಗಾಧರ ಹಾಗೂ ಅವರ ಯಾವುದೇ ಲಾಭ ರಹಿತ ಸಹಾಯಾರ್ಥ ಸಂಸ್ಥೆವು ಇದುವರೆಗೆ 1,100 ಹೆಚ್ಚು ರಸ್ತೆ ಗುಂಡಿಗಳನ್ನು ಮುಚ್ಚುಗಡೆಗೊಳಿಸಿದೆ. ಈ ಮೂಲಕ ಸುರಕ್ಷಿತ ಪಯಣವನ್ನು ಖಾತ್ರಿಪಡಿಸುವುದರೊಂದಿಗೆ ಬೆಳೆ ಬಾಳುವ ಜೀವವನ್ನು ಕಾಪಾಡಿಕೊಳ್ಳಲು ಕಾರಣವಾಗಿದ್ದಾರೆ.

ಎಲ್ಲಿಯಾದರೂ ಹೆದ್ದಾರಿ ಅಥವಾ ಅಗಲ ಕಿರಿದಾದ ರಸ್ತೆಗಳಲ್ಲಿ ಗುಂಡಿಗಳಿವೆ ಎಂಬುದು ತಿಳಿದಾಕ್ಷಣ ಗಂಗಾಧರ ನೇತೃತ್ವದ ಶ್ರಮದಾನ ತಂಡವು ಅಂಬುಲೆನ್ಸ್ ಸಹಿತ ಸಂಪೂರ್ಣ ಸಜ್ಜೀಕರಣದೊಂದಿಗೆ ಸ್ಥಳಾಕ್ಕಾಮಿಸಿ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕಾಗಿ ಇವರ ತಂಡವೇ ಸ್ಥಳಕ್ಕೆ ಡಾಮರು ಇತ್ಯಾದಿ ಸಲಕರಣೆಗಳನ್ನು ತಲುಪಿಸುತ್ತಾರೆ.

ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ಗಂಗಾಧರ ಅವರು, "ಒಂದು ದಿನ ನಾನು ಕಾರಿನಲ್ಲಿ ಸಂಚರಿಸುತ್ತಿರುವಾಗ ರಸ್ತೆಯಲ್ಲಿದ್ದ ಗುಂಡಿಗೆ ಚಕ್ರ ಜಾರಿಕೊಂಡಿತ್ತು. ಪರಿಣಾಮ ಹತ್ತಿರದ ಮಕ್ಕಳ ಮೇಲೆ ಕೆಸರು ಸಿಂಪಡನೆಯಾಗಿತ್ತು. ಈ ಘಟನೆಯಿಂದ ನಾಚಿಕೆಯಾಗಿದ್ದ ತಾನು 5000 ರು.ಗಳಷ್ಟು ಖರ್ಚು ಮಾಡಿ ರಸ್ತೆ ಗುಂಡಿ ತುಂಬುವ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಿದ್ದೆ" ಎಂದು ವಿವರಿಸಿದ್ದಾರೆ.

"ನನಗಿದು ಹವ್ಯಾಸವಾಗಿಬಿಟ್ಟಿದೆ. ನಾನು ರೈಲ್ವೆ ಸರ್ಕಾರಿ ಉದ್ಯೋಗದಲ್ಲಿದ್ದಾಗ ಭೋಜನ ವಿರಾಮ ಹಾಗೂ ವಾರಂತ್ಯದ ವೇಳೆ ರಸ್ತೆ ರಿಪೇರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆದರೆ ಬಿಡುವಿಲ್ಲದ ಕೆಲಸದಿಂದಾಗಿ ನನಗೆ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಕೆಲಸ ರಾಜೀನಾಮೆ ನೀಡಿರುವೆನು" ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

"ಒಂದೆರಡು ಬಾರಿ ನನ್ನ ಕಣ್ಣೆದುರಿಗೆಯೇ ನಡೆದ ಘಟನೆಯಿಂದಾಗಿ ನಾನಿದರ ಬಗ್ಗೆ ಗಂಭೀರವಾದ ನಿಲುವನ್ನು ತೆಗೆದುಕೊಂಡೆ. ಅಂದೊಮ್ಮೆ ನಡೆದ ಅಪಘಾತದಲ್ಲಿ ಬೈಕ್ ಸವಾರ ತನ್ನ ಕಾಲುಗಳನ್ನೇ ಕಳೆದುಕೊಂಡಿದ್ದರೆ ಮತ್ತೊಂದು ಘಟನೆಯಲ್ಲಿ ಆಟೋ ರಿಕ್ಷಾ ಬಸ್ ಜೊತೆ ಢಿಕ್ಕಿಯಾದ ಪ್ರಕರಣದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು. ಇವೆಲ್ಲ ಅಪಘಾತಗಳಿಗೂ ರಸ್ತೆಯಲ್ಲಿದ್ದ ಗುಂಡಿಗಳು ಹೇತುವಾಗಿತ್ತು" ಎಂದವರು ತಿಳಿಸಿದ್ದಾರೆ.

ತಮ್ಮ ನಿವೃತ್ತಿ ವೇತನದಿಂದ ದೈನಂದಿನ 500 ರು.ಗಳನ್ನು ಖರ್ಚು ಮಾಡುವ ಗಂಗಾಧರ ಅವರು ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಇಳಿ ವಯಸ್ಸಿನಲ್ಲೂ ತಾತ ಮಾಡುವ ಮಾನವ ಸೇವೆಯು ನಿಜಕ್ಕೂ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿದಾಯಕವಾಗಿದೆ.

ತಮ್ಮ ಈ ಕೆಲಸಕ್ಕಾಗಿ ಯಾವುದೇ ಕೆಲಸಗಾರರನ್ನಾಗಲಿ ಅಥವಾ ಸಹಾಯ ನಿಧಿಯನ್ನು ಸ್ವೀಕರಿಸದ ಗಂಗಾಧರ ಅವರು ತಮ್ಮ ಆತ್ಮ ಸಂತೃಪ್ತಿಗಾಗಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇನ್ನು ಮುಂದೆಯಾದರೂ ರಸ್ತೆ ರಿಪೇರಿ ಕೆಲಸವನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಈಗ ಗಂಗಾಧರ ಅವರ ಶ್ರಮದಾನಂ ಟ್ರಸ್ಟ್ ಐದು ವಸಂತಗಳನ್ನು ಪೂರೈಸಿದೆ. ಅಲ್ಲದೆ ಅವರೇ ಸ್ವತ: ತಮ್ಮ ಮಾತುಗಳಲ್ಲೇ ಹೇಳುವ ಪ್ರಕಾರ, "ಜಗತ್ತಿನ ಬದಲಾವಣೆ ನೋಡಲು ಬಯಸುವುದಕ್ಕಿಂತ ಮೊದಲು ತಮ್ಮಲ್ಲಿ ತಾವೇ ಬದಲಾವಣೆಯನ್ನು ತರಬೇಕು" ಎನ್ನುತ್ತಾರೆ.

ಒಟ್ಟಿನಲ್ಲಿ ಗುಂಡಿಗಳಿಂದ ತುಂಬಿಕೊಂಡಿರುವ ನಮ್ಮ ಬೆಂಗಳೂರು ರಸ್ತೆಯಲ್ಲೂ ಗಂಗಾಧರ ಮಾದರಿಯಂತೆ ಯಾರಾದರೂ ಶ್ರಮಜೀವಿಗಳು ಮುಂದೆ ಬರುವರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.


Click it and Unblock the Notifications








