ಕನ್ನಡಿಗರಿಗೆ ಜಾಬ್ ನೀಡದಿದ್ರೆ ವಿನಾಯಿತಿ ವಾಪಸ್

ರಾಜ್ಯದ ಕೋಲಾರ ಜಿಲ್ಲೆಯ ನರ್ಸಪುರದಲ್ಲಿರುವ ಹೋಂಡಾ ಘಟಕ(ಎಚ್ಎಂಎಸ್ಐ)ದಿಂದ ಉತ್ಪಾದನೆಯಾಗುವ ವಾಹನಗಳಿಗೆ ನೋಂದಣಿ ಶುಲ್ಕ ವಿನಾಯಿತಿ ಮತ್ತು ವ್ಯಾಟ್ ವಿನಾಯಿತಿಯನ್ನು ಮುಂದೂಡಲು ಕರ್ನಾಟಕ ಸರಕಾರ ನಿರ್ಧರಿಸಿದೆ.
ಮುಂದಿನ ಹತ್ತು ವರ್ಷಗಳ ಕಾಲ ವ್ಯಾಟ್ ಪಾವತಿ ವಿನಾಯಿತಿ ಮುಂದೂಡಲು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸಮ್ಮತಿ ನೀಡಿದ್ದಾರೆ. ಅಂದರೆ ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಘಟಕದಿಂದ ಉತ್ಪಾದನೆಯಾಗುವ ವಾಹನಗಳಿಗೆ 10ವರ್ಷಗಳ ಕಾಲ ಶೇಕಡ 40ರಷ್ಟು ಕಡಿಮೆ ವ್ಯಾಟ್ ವಿಧಿಸಲಾಗಿದೆ.
ಇದರೊಂದಿಗೆ ಕೇಂದ್ರ ಮಾರಾಟ ತೆರಿಗೆಯಲ್ಲಿ ಶೇಕಡ 95ರಷ್ಟು ವಿನಾಯಿತಿ ಮತ್ತು ಎಚ್ಎಂಎಸ್ಐಗೆ ವಿತರಣೆ ಮಾಡಿರುವ 96 ಎಕರೆ ಘಟಕಕ್ಕೆ ರಿಜಿಸ್ಟ್ರೇಷನ್ ಶುಲ್ಕವನ್ನು ವಿನಾಯಿತಿ ಮಾಡಲಾಗಿದೆ.
"ಆದರೆ ಕಂಪನಿಯು ಶೇಕಡ 80ರಷ್ಟು ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಕಡ್ಡಾಯ. ಇದಕ್ಕೆ ತಪ್ಪಿದರೆ ಈ ವಿನಾಯಿತಿಗಳನ್ನೆಲ್ಲ ವಾಪಸ್ ಪಡೆಯಲಾಗುವುದು" ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯು ಹೋಂಡಾ ಘಟಕಕ್ಕೆ ಸುಮಾರು 1,300 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಈ ಘಟಕವು ವರ್ಷಕ್ಕೆ 18 ಲಕ್ಷ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಹೋಂಡಾ ಘಟಕವು 3,200 ಜನರಿಗೆ ನೇರ ಮತ್ತು ಕಡಿಮೆಯೆಂದರೂ 1,500 ಜನರಿಗೆ ಪರೋಕ್ಷ ಉದ್ಯೋಗ ನೀಡಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಹೋಂಡಾ ಘಟಕದ ಶಂಕುಸ್ಥಾಪನೆ ನಡೆದಿತ್ತು.


Click it and Unblock the Notifications








