ಮುಂಬರುವ 5 ವರ್ಷ ವಾಹನೋದ್ಯಮದ ಸುವರ್ಣ ಕಾಲ: ಸಿಯಾಮ್
ಮುಂದಿನ ಐದು ವರ್ಷಗಳ ಕಾಲ ವಾಹನೋದ್ಯಮದ ಪಾಲಿಗೆ ಸುವರ್ಣ ಕಾಲಘಟ್ಟವಾಗಿರಲಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಸಿಯಾಮ್) ನಿರೀಕ್ಷೆ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಸೇರಿದ ಸಿಯಾಮ್ ವಾರ್ಷಿಕ ಸಮಾವೇಶದಲ್ಲಿ ಸಮಕಾಲೀನ ಪರಿಸ್ಥಿತಿಯಲ್ಲಿ ವಾಹನೋದ್ಯಮ ಎದುರಿಸುತ್ತಿರುವ ಸಮಸ್ಯೆ ಹಾಗೂ ಭವಿಷ್ಯದ ಯೋಜನೆಯ ಚರ್ಚೆ ನಡೆಸಲಾಯಿತು. ಈ ನಡುವೆ ಎಲ್ಲ ವಾಹನ ತಯಾರಕ ಸಂಸ್ಥೆಗಳು ವಾಹನ ಮಾರುಕಟ್ಟೆಯಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುವ ಅಗತ್ಯವಿದೆ ಎಂಬ ಅಭಿಮತ ವ್ಯಕ್ತಪಡಿಸಿತ್ತು.
ಇದು ಸಿಯಾಮ್ನ 54ನೇ ವಾರ್ಷಿಕ ಸಮಾವೇಶವಾಗಿದ್ದು, ಆಟೋ ಜಗತ್ತಿನ ಅನೇಕ ಪ್ರಭಾವಿ ವ್ಯಕ್ತಿಗಳು ಭಾಗವಹಿಸಿದ್ದರು. ಅಲ್ಲದೆ ಭಾರತೀಯ ಆರ್ಥಿಕತೆ ವೃದ್ಧಿಯಲ್ಲಿ ವಾಹನೋದ್ಯಮದ ಪಾತ್ರ ದೊಡ್ಡದ್ದು ಎಂಬುದನ್ನು ಮನಗಂಡರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಿಯಾಮ್ ಅಧ್ಯಕ್ಷ ಹಾಗೂ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯ ಉಪಾಧ್ಯಕ್ಷರಾಗಿರುವ ವಿಕ್ರಂ ಕಿರ್ಲೊಸ್ಕರ್, ಅನೇಕ ನಿರ್ಣಾಯಕ ಕಾಲಘಟ್ಟದಲ್ಲಿ ಸರಕಾರವು ಬೆಂಬಲ ಸೂಚಿಸಿರುವುದು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.
ಅಲ್ಲದೆ ಐದು ಅಂಶಗಳನ್ನು ವಿಕ್ರಂ ಅವರು ಬೊಟ್ಟು ಮಾಡಿ ತೋರಿಸಿದರು. ಆರ್ಥಿಕ ನೀತಿ, ಎಮಿಷನ್, ಸೇಫ್ಟಿ ರೋಡ್ ಮ್ಯಾಪ್, ಸ್ಪರ್ಧಾತ್ಮಕ ನಿಯಮ ಜೊತೆ ವಾಹನ ತಂತ್ರಜ್ಞಾನ, ಇಂಧನ ಮತ್ತು ವಾಣಿಜ್ಯ ನೀತಿಗಳ ಬಗ್ಗೆ ಉಲ್ಲೇಖ ಮಾಡಿದರು.
ಏತನ್ಮಧ್ಯೆ ದೇಶವನ್ನು ವಾಹನ ಕೇಂದ್ರವಾಗಿ ಮಾರ್ಪಡಿಸುವ ನೂತನ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಿಯನ್ನು ಶ್ಲಾಘಿಸಿದರು.


Click it and Unblock the Notifications








