ಟೊಯೊಟಾ; ಕೆಲಸಕ್ಕೆ ಹಿಂತಿರುವಂತೆ ಕಾರ್ಮಿಕರಿಗೆ ಸರಕಾರ ಸೂಚನೆ
ಕಳೆದ ಕೆಲವು ತಿಂಗಳುಗಳಿಂದ ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಸಂಸ್ಥೆಯ ಬೆಂಗಳೂರು ಘಟಕದಲ್ಲಿ ಭುಗಿಲೆದ್ದಿರುವ ಕಾರ್ಮಿಕ ಸಮಸ್ಯೆಗಳಿಗೆ ಕೊನೆಗೂ ಕರ್ನಾಟಕ ರಾಜ್ಯ ಸರಕಾರದ ಮಧ್ಯ ಪ್ರವೇಶದಿಂದ ಇತ್ಯರ್ಥವಾಗಿದೆ. ಮುಂದುವರಿದ ಬೆಳವಣಿಗೆಯಲ್ಲಿ ಬೆಂಗಳೂರು ಹೊರವಲಯದಲ್ಲಿ ಸ್ಥಿತಗೊಂಡಿರುವ ಎರಡು ಘಟಕಗಳಲ್ಲಿ ಉತ್ಪಾದನೆ ಪುನರಾರಂಭಿಸುವಂತೆ ಟೊಯೊಟಾ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗೆ ಸರಕಾರ ಸೂಚನೆಯಿತ್ತಿದೆ.
ಶನಿವಾರ ನಡೆದ ಮಾತುಕತೆಯ ಬಳಿಕ ಇಂತಹದೊಂದು ಪೂರಕವಾದ ಬೆಳವಣಿಗೆ ಕಂಡುಬಂದಿದೆ. ಈ ಬಗ್ಗೆ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಟೊಯೊಟಾ, ಕೈಗಾರಿಕಾ ಶಾಂತಿ ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳುವ ಸಲುವಾಗಿ ಕೆಲಸ ಸಹಜ ಸ್ಥಿತಿಗೆ ಮರಳುವಂತೆ ಕರ್ನಾಟಕ ರಾಜ್ಯ ಸರಕಾರ ಸೂಚನೆ ನೀಡಿದೆ ಎಂದು ತಿಳಿಸಿದೆ.

ಈ ಹಿಂದೆ ಬೀಗ ಮುದ್ರೆಯನ್ನು (ಲಾಕೌಟ್) ತೆರಳುಗೊಳಿಸಿದ್ದ ಸಂಸ್ಥೆಯು, ಕರಾರುವೊಂದಕ್ಕೆ ಸಹಿ ಹಾಕಿದ ಬಳಿಕ ಕೆಲಸಕ್ಕೆ ಹಾಜರಾಗುವಂತೆ ಕಾರ್ಮಿಕರ ಮೇಲೆ ಒತ್ತಡ ಹೇರಿತ್ತು. ಆದರೆ ಇದನ್ನು ಲೆಕ್ಕಿಸದ ಕಾರ್ಮಿಕರು, ಸರದಿ ನಿರಶನ ಸತ್ಯಾಗ್ರಹವನ್ನು ಆರಂಭಿಸಿದ್ದರು. ಇದೀಗ ಸರಕಾರ ಹೊರಡಿಸಿರುವ ಆಜ್ಞಾಪನೆ ಪ್ರಕಾರ, ಸಂಸ್ಥೆಯು ಕರಾರಿಗೆ ಸಹಿ ಹಾಕುವಂತೆಯೇ ಕೆಲಸಗಾರರನ್ನು ಒತ್ತಡ ಹೇರುವಂತಿಲ್ಲ. ಅದೇ ಹೊತ್ತಿಗೆ ಕಾರ್ಮಿಕರು ಬೇಷರತ್ತಾಗಿ ಕೆಲಸಕ್ಕೆ ಮರಳಬೇಕಾಗಿದೆ ಎಂದಿದೆ.
ಇದೇ ಸಂದರ್ಭದಲ್ಲಿ ಕಾರ್ಮಿಕರ ವೇತನ ಸಮಸ್ಯೆಯನ್ನು ಕೈಗಾರಿಕಾ ವಿವಾದ ನ್ಯಾಯಮಂಡಳಿಯು ಬಗೆ ಹರಿಸಲಿದೆ. ಇದು ಕಾರ್ಮಿಕರ ಹಾಗೂ ಆಡಳಿತ ನಡುವಣ ಎಲ್ಲಾ ಸಂಬಂಧಪಟ್ಟ ಸಮಸ್ಯೆಗಳಿಗೆ ತೀರ್ಪು ನೀಡಲಿದೆ. ಇನ್ನುಳಿದಂತೆ ಅಮಾನತುಗೊಂಡಿರುವ ಕಾರ್ಮಿಕರ ಪುನರ್ ನೇಮಕ ವಿಚಾರವನ್ನು ಸ್ವಯಂ ಟೊಯೊಟಾ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಂಘಟನೆಗಳು ನೋಡಿಕೊಳ್ಳಲಿದೆ.
ಇದುವರೆಗೆ ಟೊಯೊಟಾ ಘಟಕದಲ್ಲಿ ಉತ್ಪಾದನೆ ಕುಂಠಿತವಾಗಿದ್ದರೂ ನಿಲುಗಡೆಗೊಂಡಿರಲಿಲ್ಲ. ಸಂಸ್ಥೆಯು ಸುಪ್ರವೈಸರಿ ಸ್ಟಾಫ್ ಹಾಗೂ ಕಾರ್ಮಿಕ ಸಂಘಟನೆಗಳ ರಹಿತ ಕಾರ್ಮಿಕರ ಬೆಂಬಲದೊಂದಿಗೆ ಉತ್ಪಾದನೆ ಮುಂದುವರಿಸಿತ್ತು.


Click it and Unblock the Notifications








