ಹೈವೇಗಳಲ್ಲಿ ವಾಹನ ಪಾರ್ಕಿಂಗ್ ಮಾಡುವ ಮುನ್ನ ಎಚ್ಚರ..!
ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವವರ ವಿರುದ್ಧ ಕೆಂಡಾಮಂಡಲವಾಗಿರುವ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಹೆಚ್ಎಐ) ದಂಡ ವಿಧಿಸುವ ಅಧಿಕಾರವನ್ನು ನೀಡಲು ಮುಂದಾಗಿದೆ.

ಇದರಿಂದಾಗಿ ಇನ್ನು ಮುಂದೆ ಎನ್ಹೆಚ್ಎಐ ನಿಯಮಗಳನ್ನು ಉಲ್ಲಂಘಿಸಿ ಹೆದ್ದಾರಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವವರಿಗೆ ದಂಡ ವಿಧಿಸಲಾಗುವುದು. ಜೊತೆಗೆ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು. ಒಂದು ವಾರದೊಳಗೆ ವಶಕ್ಕೆ ಪಡೆದಿರುವ ವಾಹನಗಳ ದಂಡವನ್ನು ಪಾವತಿಸದಿದ್ದಲ್ಲಿ ಅಂತಹ ವಾಹನಗಳನ್ನು ಹರಾಜು ಹಾಕಲಾಗುವುದು.

ಸದ್ಯಕ್ಕೆ ಎನ್ಹೆಚ್ಎಐಗೆ ನಿಯಮಗಳನ್ನು ಉಲ್ಲಂಘಿಸಿ ಹೆದ್ದಾರಿಗಳಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ದಂಡ ವಿಧಿಸುವ ಯಾವುದೇ ಅಧಿಕಾರವಿಲ್ಲ. ಹೆದ್ದಾರಿಗಳಲ್ಲಿ ನಿಲ್ಲಿಸಲಾಗುವ ವಾಹನಗಳನ್ನು ಟೋಯಿಂಗ್ ಮಾಡಲು ಅಥವಾ ಪಕ್ಕಕ್ಕೆ ಸರಿಸುವ ಅಧಿಕಾರವನ್ನು ಮಾತ್ರ ಹೊಂದಿದೆ. ಹೊಸ ಅಧಿಸೂಚನೆ ನಂತರ ಎನ್ಹೆಚ್ಎಐ ಹೆಚ್ಚಿನ ಅಧಿಕಾರವನ್ನು ಪಡೆಯಲಿದೆ.

ಈ ಬಗ್ಗೆ ಮಾತನಾಡಿರುವ ಗುರುಗ್ರಾಮದ ಎನ್ಹೆಚ್ಎಐ ಯೋಜನೆಯ ನಿರ್ದೇಶಕ ಹಾಗೂ ಹೆದ್ದಾರಿ ಅಧಿಕಾರಿ ಅಶೋಕ್ ಶರ್ಮಾರವರು, 2002ರ ನ್ಯಾಷನಲ್ ಹೈವೇ (ಲ್ಯಾಂಡ್ ಹಾಗೂ ಟ್ರಾಫಿಕ್) ಕಾಯ್ದೆಯ ಸೆಕ್ಷನ್ 24 ಹಾಗೂ 27ರ ಅನ್ವಯ ಎಲ್ಲಾ ಯೋಜನಾ ನಿರ್ದೇಶಕರು ಹೆದ್ದಾರಿಯಲ್ಲಿನ ರಸ್ತೆ ಹಾಗೂ ಸಂಚಾರಿ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬಹುದೆಂದು ಹೇಳಿದ್ದಾರೆ.

ಇದರ ಜೊತೆಗೆ ಕೇಂದ್ರ ಸಾರಿಗೆ ಸಚಿವಾಲಯವು ಹೊಸ ಅಧಿಸೂಚನೆಯನ್ನು ಹೊರಡಿಸಿ, ಹೆದ್ದಾರಿಗಳಲ್ಲಿ ನಿಯಮ ರೂಪಿಸುವ ಹಾಗೂ ಸಂಚಾರಿ ನಿರ್ವಹಣೆಯ ಅಧಿಕಾರವನ್ನು ಎನ್ಹೆಚ್ಐಡಿಸಿ ಹಾಗೂ ಲೋಕೊಪಯೋಗಿ ಇಲಾಖೆಯ ನ್ಯಾಷನಲ್ ಹೈವೇ ವಿಂಗ್ಗಳಿಗೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಅಥವಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ರವರುಗಳು, ರಾಷ್ಟ್ರೀಯ ಹೆದ್ದಾರಿಗಳ ನಿಯಂತ್ರಣ (ಲ್ಯಾಂಡ್ ಹಾಗೂ ಟ್ರಾಫಿಕ್) ಕಾಯ್ದೆ 2002 ರ ಸೆಕ್ಷನ್ 24, 26, 27, 30, 33, 36, 37 ಹಾಗೂ 4ರ ಅಡಿಯಲ್ಲಿ ಹೆದ್ದಾರಿಯ ಅಧಿಕಾರ ಹಾಗೂ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.

ಇವರುಗಳಿಗೆ ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಆಡಳಿತವನ್ನು ನಿರ್ವಹಿಸುವ ಅಧಿಕಾರವನ್ನು ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇವರುಗಳು ತಮ್ಮ ವ್ಯಾಪ್ತಿಗೆ ಬರುವ ಹೈವೇಗಳಲ್ಲಿನ ಭೂಮಿಯನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯಲಿದ್ದಾರೆ, ಅತಿಕ್ರಮಣಕಾರರನ್ನು ತೆರೆವುಗೊಳಿಸಲಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾದ ವಾಹನಗಳನ್ನು ತೆರವುಗೊಳಿಸಿ ಅದಕ್ಕೆ ಸಂಬಂಧಪಟ್ಟ ಶುಲ್ಕವನ್ನು ಹಾಗೂ ದಂಡವನ್ನು ವಸೂಲು ಮಾಡಲಿದ್ದಾರೆ. ಇದರ ಜೊತೆಗೆ ಎನ್ಹೆಚ್ಎಐ ಅಧಿಕಾರಿಗಳು ಈಗ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಯಾವುದೇ ರಸ್ತೆಗಳನ್ನು ಮುಚ್ಚಬಹುದು, ನಿಯಂತ್ರಿಸಬಹುದು ಅಥವಾ ಬೇರೆಡೆಗೆ ತಿರುಗಿಸಬಹುದು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಅಗತ್ಯ ಬಿದ್ದಲ್ಲಿ ಹೆದ್ದಾರಿಯಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ಮುಚ್ಚಬಹುದು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಬದಲಾವಣೆಗಳ ಬಗ್ಗೆ ಪೊಲೀಸ್ ಹಾಗೂ ಇತರ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಎಲ್ಲಾ ಔಪಚಾರಿಕತೆಗಳು ಪೂರ್ಣಗೊಂಡ ನಂತರ ಎನ್ಎಚ್ಎಐ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲು ಪ್ರಾರಂಭಿಸುತ್ತಾರೆ ಎಂದು ಅವರಿಗೆ ತಿಳಿಸಲಾಗಿದೆ ಎಂದು ಶರ್ಮಾರವರು ಹೇಳಿದರು.

ಹೇಗೆ ಕಾರ್ಯಚರಣೆ ನಡೆಸಬೇಕು ಎಂಬ ವಿಧಾನಗಳನ್ನು ರೂಪಿಸಲಾಗುತ್ತಿದೆ. ಕಾರ್ಯಾಚರಣೆ ವಿಧಾನ, ದಂಡದ ಮೊತ್ತ ಹಾಗೂ ನಿಯಮಗಳನ್ನು ಉಲ್ಲಂಘಿಸುವವರನ್ನು ವಿಚಾರಣೆಗೊಳಪಡಿಸುವ ವಿಧಾನಗಳ ಕರಡನ್ನು ರಚಿಸಲಾಗುತ್ತಿದೆ.

ಈ ಕರಡನ್ನು ರಚಿಸಿದ ನಂತರ ಅಕ್ರಮವಾಗಿ ಪಾರ್ಕಿಂಗ್, ಅತಿಕ್ರಮಣ ಹಾಗೂ ಅಕ್ರಮ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾಹನಗಳನ್ನು ವಶಕ್ಕೆ ಪಡೆದು ವಾಹನಗಳ ಮಾಲೀಕರಿಗೆ ದಂಡ ಪಾವತಿಸಿ ವಾಹನಗಳನ್ನು ವಾಪಸ್ ಪಡೆಯಲು ಒಂದು ವಾರ ಕಾಲಾವಕಾಶ ನೀಡಲಾಗುವುದು.

ಒಂದು ವಾರದೊಳಗೆ ದಂಡ ಪಾವತಿಸದಿದ್ದಲ್ಲಿ ವಾಹನಗಳನ್ನು ಹರಾಜು ಹಾಕಲಾಗುವುದು. ವಾಹನಗಳನ್ನು ವಶಕ್ಕೆ ಪಡೆಯಲು ಹಾಗೂ ಹರಾಜು ಹಾಕಲು ಎನ್ಹೆಚ್ಎಐ ವಿಚಾರಣಾ ಸ್ಥಳವನ್ನು ಸಿದ್ಧಪಡಿಸುತ್ತಿದೆ.

ಇನ್ನು ಮುಂದೆ ಎನ್ಹೆಚ್ಎಐನ ಕಾರ್ಯ ವಿಧಾನವು ಪೊಲೀಸ್ ಇಲಾಖೆಯ ವಿಧಾನದಂತಿರಲಿದೆ. ಇದುವರೆಗೂ ಎನ್ಹೆಚ್ಎಐ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರಲಿಲ್ಲ. ಹೊಸ ಅಧಿಸೂಚನೆಯ ನಂತರ ಹೆಚ್ಚಿನ ಅಧಿಕಾರವನ್ನು ಪಡೆಯಲಿದೆ ಎಂದು ಮತ್ತೊಬ್ಬ ಎನ್ಹೆಚ್ಎಐ ಅಧಿಕಾರಿ ತಿಳಿಸಿದರು.


Click it and Unblock the Notifications








