ಮೋಟಾರ್ ವಿಮೆ ಖರೀದಿಸುವಾಗ ನಿಮಗೆ ಈ ಪ್ರಶ್ನೆಗಳು ಬಂದಿದೆಯಾ?
ಪ್ರತಿಯೊಂದು ವಾಹನವು ಕೂಡಾ ಮೋಟಾರ್ ವೆಹಿಕಲ್ ಕಾಯ್ದೆ ಅನ್ವಯ ವಿಮೆಯನ್ನು ಹೊಂದಿರಲೇಬೇಕು. ಹೀಗಾಗಿ ವಾಹನ ವಿಮೆ ಖರೀದಿಸುವ ಮುನ್ನ ವಾಹನ ಮಾಲೀಕರು ವಿಮೆ ಕುರಿತಾದ ಕೆಲವು ಪ್ರಮುಖ ವಿಚಾರಗಳನ್ನು ತಿಳಿದುಕೊಂಡಿದ್ದಲ್ಲಿ ವಾಹನ ಮಾಲೀಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಎನ್ನುವುದು ನಮ್ಮ ಆಶಯ.

ಸಾಮಾನ್ಯವಾಗಿ ವಾಹನ ವಿಮೆಯನ್ನು ಪೆಟ್ರೋಲ್ ಬಂಕ್ಗಳಲ್ಲಿ ಅಥವಾ ಇನ್ಯಾವುದೋ ವಿಮಾ ಸಂಸ್ಥೆಗಳಲ್ಲಿ ಕೇವಲ ಐದು ನಿಮಿಷಗಳಲ್ಲಿ ಪಡೆದುಕೊಳ್ಳುವ ಅವಕಾಶ ಇದೀಗ ಬಹುತೇಕ ಕಡೆಗಳಲ್ಲಿ ತೆರೆಯಲಾಗುತ್ತಿದೆ. ಆದರೆ ನಷ್ಟ ಪರಿಹಾರ ಪಡೆದುಕೊಳ್ಳುವ ಸಂದರ್ಭದಲ್ಲಿ ಅಷ್ಟು ಸುಲಭವಾಗಿ ಪರಿಹಾರ ಸಿಗುವುದಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಯಾಕೆಂದರೆ ವಿಮೆ ಮಾಡಿಸುವಾಗ ಸುಲಭ ದಾಖಲೆಗಳ ಮೂಲಕ ಹಣ ಪಡೆಯವ ವಿಮಾ ಸಂಸ್ಥೆಗಳು ನಷ್ಟ ಪರಿಹಾರ ಒದಗಿಸುವ ಸಂದರ್ಭದಲ್ಲಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಹೀಗಾಗಿ ಸುಲಭವಾಗಿ ನಷ್ಟ ಪರಿಹಾರ ಸಿಗಬೇಕಿದ್ದಲ್ಲಿ ಕೆಲವು ವಿಚಾರಗಳನ್ನು ನೀವು ತಪ್ಪದೇ ತಿಳಿದುಕೊಂಡಿರಬೇಕಿರುತ್ತದೆ.

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲಾ ವಾಹನಗಳ ಮಾಲೀಕರು ವಿಮೆಯನ್ನು ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ಹೀಗಾಗಿ ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ಮೋಟಾರು ವಿಮೆಯ ಅಗತ್ಯವೇನು?
ವಾಹನ ಚಾಲನೆ ಮಾಡುವಾಗ ಅನೀರಿಕ್ಷಿತವಾಗಿ ಅಪಘಾತಗಳು ಸಂಭವಿಸಬಹುದು. ಈ ವೇಳೆ ವಾಹನ ಮಾಲೀಕರು ಈ ಕೆಳಕಂಡವರ ಸುರಕ್ಷತೆ ಅವರ ಜವಾಬ್ದಾರಿಯಾಗಿರುತ್ತದೆ.
* ಸಹ ಪ್ರಯಾಣಿಕರು,
* ನಿಮ್ಮ ಸಹ ಚಾಲಕರು,
* ಇತರ ಜನರ ಆಸ್ತಿ,
* ಪಾದಚಾರಿಗಳು,
* ಸ್ವತ: ನೀವೇ

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?
ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ 'ಎ' ಎಂಬುದು ಮೂರನೇ ವ್ಯಕ್ತಿ ವಿಮಾ ಹಾಗೂ ಪಾಲಿಸಿ 'ಬಿ' ಎಂಬುದು ಸಮಗ್ರ ಪಾಲಿಸಿಯಾಗಿದೆ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ.

ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಮೂರನೇ ವ್ಯಕ್ತಿಯ ವಾಹನ ವಿಮೆ ಅಪಾಯ ನೀತಿ ಎಂದರೇನು?
ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ನಿಮ್ಮ ವಿಮಾ ವಾಹನದಿಂದಾಗಿ ಮೂರನೇ ವ್ಯಕ್ತಿಗೆ ಯಾವುದೇ ಶಾಶ್ವತ ಗಾಯ ಅಥವಾ ಮರಣ ಸಂಭವಿಸಿದ್ದಲ್ಲಿ ಹಾಗೆಯೇ ನಿಮ್ಮ ವಿಮಾ ವಾಹನದಿಂದಾಗಿ ಯಾವುದೇ ಹಾನಿ ಸಂಭವಿಸಿದ್ದಲ್ಲಿ (ವಾಹನ ಹೊರತುಪಡಿಸಿ) ಇದು ರಕ್ಷಣೆಯನ್ನು ಒದಗಿಸುತ್ತದೆ.

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?
ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲೀಕರಿಗಾಗುವ ನಷ್ಟವನ್ನು ಸಹ ಭರಿಸುತ್ತದೆ.

ಜೊತೆಗ ಸಮಗ್ರ ವಿಮೆಯಲ್ಲಿ ಮ್ಯೂಸಿಕ್ ಸಿಸ್ಟಂ, ಎಸಿ ಮುಂತಾದ ಕಾರು ಆಕ್ಸೆಸರಿಗಳಿಗೂ ವಿಮೆ ದೊರಕುತ್ತವೆ. ಇದಕ್ಕಾಗಿ ಹೆಚ್ಚುವರಿ ವಿಮೆ ಹಣ ಭರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇದು ದುಬಾರಿ ಎನಿಸಿಕೊಂಡರೂ ಸಮಗ್ರ ವಿಮೆ ಮಾಡಿಸಿದ್ದಲ್ಲಿ ಉತ್ತಮ.

ನೊ ಕ್ಲೈಂ ಬೋನಸ್ (ಎನ್ಸಿಬಿ) ಎಂದರೇನು?
ಸುಲಭವಾಗಿ ಹೇಳಬೇಕೆಂದರೆ ಅಪಘಾತ ನಡೆಸದ ಚಾಲಕರು ನೋ ಕ್ಲೈಂ ಬೋನಸ್(ಎನ್ಸಿಬಿ)ಗೆ ಅರ್ಹರಾಗುತ್ತಾರೆ. ಅಂದರೆ ಮೊದಲ ವಿಮಾ ಅವಧಿಯಲ್ಲಿ ಕ್ಲೈಮ್ ಮಾಡದಿದ್ದಲ್ಲಿ ಮುಂದಿನ ಪಾಲಿಸಿಯಲ್ಲಿ ಡಿಸ್ಕೌಂಟ್ ದೊರಕಲಿದೆ. ಹಾಗೆಯೇ ಒಂದು ವಿಮಾ ಕಂಪನಿಯಿಂದ ಇನ್ನೊಂದು ವಿಮಾ ಕಂಪನಿಗೆ ಬದಲಾದಲೂ ಎನ್ಸಿಬಿ ಸೌಲಭ್ಯ ಮುಂದುವರಿಸಿಕೊಂಡು ಹೋಗಬಹುದು. ಐದು ವರ್ಷದ ವರೆಗೂ ಯಾವುದೇ ಕ್ಲೈಮ್ ಮಾಡದಿದ್ದಲ್ಲಿ ಪ್ರೀಮಿಯಂನಲ್ಲಿ ಶೇ. 50ರಷ್ಟು ಡಿಸ್ಕೌಂಟ್ ಪಡೆಯಬಹುದು.

ಎನ್ಸಿಬಿ ಸೌಲಭ್ಯ ಇಂತಿದೆ:
ಒಂದು ವರ್ಷದ ವರೆಗೂ ಕ್ಲೈಮ್ ಮಾಡದಿದ್ದಲ್ಲಿ- 20%
2 ವರ್ಷದ ವರೆಗೂ ಕ್ಲೈಮ್ ಮಾಡದಿದ್ದಲ್ಲಿ- 25%
ಸತತ 3 ವರ್ಷದ ವರೆಗೆ ಕ್ಲೈಮ್ ಮಾಡದಿದ್ದಲ್ಲಿ- 35%
ಸತತ 4 ವರ್ಷದ ವರೆಗೆ ಕ್ಲೈಮ್ ಮಾಡದಿದ್ದಲ್ಲಿ- 45%
ಸತತ 5 ವರ್ಷದ ವರೆಗೆ ಕ್ಲೈಮ್ ಮಾಡದಿದ್ದಲ್ಲಿ- 50%

ಆಟೋ ದುರಸ್ತಿ ಮತ್ತು ವಾಹನ ವಿಮೆ ನಡುವಿನ ವ್ಯತ್ಯಾಸ ಏನು?
ಆಟೋ ದುರಸ್ತಿ ವಿಮಾ ಪಾಲಿಸಿಯು, ಕಾರಿಗೆ ಹಾನಿಯುಂಟಾದ ನಿರ್ದಿಷ್ಟ ಪ್ರದೇಶದ ನಷ್ಟ ಪರಿಹಾರವನ್ನು ಮಾತ್ರ ಭರಿಸುತ್ತದೆ. ಇನ್ನೊಂದೆಡೆ ವಾಹನ ವಿಮಾ ಪಾಲಿಸಿಯು ವಾಹನ ಮಾಲೀಕ ಹಾಗೂ ವಾಹನ ವಿಮಾ ಸಂಸ್ಥೆಯ ನಡುವೆ ಕರಾರು ಹೊಂದಿರುತ್ತಲ್ಲದೆ ನಿರ್ದಿಷ್ಟ ಸಮಯದಲ್ಲಿ ಕಾರಿಗೆ ಹಾನಿ ಸಂಭವಿಸಿದ ಎಲ್ಲ ಭಾಗಗಳಿಗೂ ಪರಿಹಾರ ಭರಿಸುತ್ತದೆ.

ವಿಮೆ ಕ್ಲೈಮ್ ಮಾಡಲು ಬೇಕಾಗಿರುವ ದಸ್ತಾವೇಜುಗಳು?
ವಿಮಾ ಪಾಲಿಸಿಯ ಅಸಲಿ ಪತ್ರ,
ವಾಹನದ ರಿಜಿಸ್ಟ್ರೇಷನ್ ಬುಕ್,
ಡ್ರೈವಿಂಗ್ ಲೈಸನ್ಸ್ನ ಅಸಲಿ ಪತ್ರ,
ಅಪಘಾತದ ಎಫ್ಐಆರ್ ಪತ್ರ,
ಮೂರನೇ ವ್ಯಕ್ತಿಯ ಅಪಘಾತದ ವೈದ್ಯಕೀಯ ವೆಚ್ಚದ ರಶೀದಿ,
ವಾಹನ ಡ್ಯಾಮೇಜ್ ರಿಪೇರಿ ರಶೀದಿ

ವಿಮಾ ಪರಿಹಾರ
ಮೇಲೆ ಹೇಳಲಾದ ಎಲ್ಲಾ ದಾಖಲೆಗಳನ್ನು ಸಮರ್ಪಿಸಿದ ಬಳಿಕವೇ ವಿಮಾ ಕಂಪನಿಯು ಓರ್ವ ಸರ್ವೆಯರನ್ನು ನೇಮಕಗೊಳಿಸುತ್ತದೆ. ಅವರು ಸತ್ಯಾಸತ್ಯತೆಯನ್ನು ಪರೀಶೀಲಿಸಿ ಹಾನಿಗೊಳಗಾದ ಕಾರನ್ನು ಪರಿಕ್ಷೀಸಿ ರಿಪೇರಿ ಅಂದಾಜು ಲೆಕ್ಕ ಹಾಕುತ್ತಾರೆ. ಆದ್ದರಿಂದ ಕಾರು ವಿಮೆ ಸರ್ವೇಯರ್ ತಪಾಸಣೆ ಮಾಡಿದ ಬಳಿಕವಷ್ಟೇ ದುರಸ್ತಿ ಮಾಡಿಸಬೇಕು. ಕಾರು ದುರಸ್ತಿಗೊಳಿಸಿದ ಬಳಿಕ ಅಂತಿಮ ಅಂದಾಜು ಸ್ಟ್ಯಾಂಪ್ ರಶೀದಿ ಕಾರು ವಿಮಾ ಕಂಪನಿಗೆ ಸಲ್ಲಿಸಬೇಕಾಗುತ್ತದೆ.

ಹಾಗೊಂದು ವೇಳೆ ನಿಮ್ಮ ಕಾರು ಕಳವಾಗಿದ್ದಲ್ಲಿ, ವಿಮಾ ಕಂಪನಿ ಜತೆ ಹತ್ತಿರದ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಬೇಕಾಗುತ್ತದೆ. ಅಲ್ಲದೆ ಮೊದಲು ಕಾರು ನೊಂದಾವಣಿ ಮಾಡಿದ್ದ ಆರ್ಸಿ ಆಫೀಸಿನಲ್ಲೂ ಪ್ರಕರಣ ದಾಖಲಿಸಬೇಕಾಗುತ್ತದೆ. ಆ ಬಳಿಕ ನಕಲಿ ಆರ್ಸಿ ಬುಕ್ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಇನ್ನು ಕಳ್ಳತನ ಪ್ರಕರಣದಲ್ಲಿ ಆರ್ಟಿಒ ಮತ್ತು ಪೊಲೀಸ್ಗೆ ಕಳವಾದ ಕಾರು ವಾಪಾಸ್ ಗಿಟ್ಟಿಸಿಕೊಳ್ಳುವ ಕಾರ್ಯವಿಧಾನ ಪೂರ್ತಿಗೊಳಿಸಲು ನಿರ್ದಿಷ್ಟ ಸಮಯ ತೆಗೆದುಕೊಳ್ಳುವುದರಿಂದ ವಿಮೆ ಕ್ಲೈಮ್ ಮಾಡಲು ಹೆಚ್ಚು ತೆಗೆದುಕೊಳ್ಳಬಹುದು.


Click it and Unblock the Notifications








