ರಸ್ತೆ ಮಧ್ಯೆ ಚಕ್ರಗಳು ಪಂಚರ್; ತುರ್ತಾಗಿ ಏನು ಮಾಡಬೇಕು?
ಇತ್ತೀಚೆಗೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ನಲ್ಲಿ ಬಸ್ಸು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ದಾರುಣವಾಗಿ ಮೃತಪಟ್ಟಿದ್ದರಲ್ಲದೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪೊಲೀಸ್ ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಪಂಚರ್ ಆಗಿರುವ ಮಾರುತಿ ಸ್ವಿಫ್ಟ್ ಕಾರಿನ ಚಕ್ರವನ್ನು ಬದಲಾಯಿಸಲು ರಸ್ತೆ ತಿರುವಿನ ಬದಿಯಲ್ಲಿ ನಿಲುಗಡೆಗೊಳಿಸಲಾಗಿತ್ತು. ಇದರ ಹತ್ತಿರವೇ ರಸ್ತೆಯ ಮೊದಲ ಲೇನ್ ನಲ್ಲಿ ಸ್ವಿಫ್ಟ್ ಕಾರಿಗೆ ಬೆಂಬಲ ನೀಡಲು ಟೊಯೊಟಾ ಇನ್ನೋವಾ ಕಾರನ್ನು ನಿಲ್ಲಿಸಲಾಗಿತ್ತು.
ಮುಂಜಾವಿನ ಹೊತ್ತು ಆಗಿರುವುದರಿಂದ ದಟ್ಟ ಮಂಜು ಆವರಿಸಿದ್ದರಿಂದ ಸತಾರಾದಿಂದ ವೇಗವಾಗಿ ಬರುತ್ತಿದ್ದ ಐಷಾರಾಮಿ ಬಸ್ ನೇರವಾಗಿ ಎರಡು ಕಾರುಗಳಿಗೂ ಬಲವಾಗಿ ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಎರಡು ಕಾರುಗಳ ಜೊತೆಗೆ ಬಸ್ ಕಂದಕಕ್ಕೆ ಉರುಳಿತ್ತು. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿತ್ತು.

ಈ ಅಪಘಾತವನ್ನು ಕೂಲಂಕುಷವಾಗಿ ಪರೀಶೀಲಿಸಿದಾಗ ಕಾರಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ದೊಡ್ಡ ಎಡವಟ್ಟು ಮಾಡಿರುವುದು ಕಂಡುಬರುತ್ತದೆ. ಚಕ್ರಗಳು ಪಂಚರ್ ಆದಾಗ ಅಗತ್ಯ ಕ್ರಮಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ.

ಚಕ್ರಗಳನ್ನು ಬದಲಾಯಿಸುವಾಗ ಕಾರಿನ ಮಾಲಿಕ ಪಾರ್ಕಿಂಗ್ ಲೈಟ್ ಗಳನ್ನು ಆನ್ ಮಾಡಿದ್ದಲ್ಲಿ ಸಂಭವನೀಯ ಅಪಘಾತವನ್ನು ತಪ್ಪಿಸಬಹುದಾಗಿತ್ತು. ಪ್ರಸ್ತುತ ಲೇಖನದಲ್ಲಿ ರಸ್ತೆ ಮಧ್ಯೆ ಎದುರಾಗುವ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಎಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಲಿದ್ದೇವೆ.

ರಸ್ತೆಗಳಿಗೆ ನಿರಂತರ ಸಂಪರ್ಕ ಇರುವುದರಿಂದ ಚಕ್ರಗಳು ಪಂಚರ್ ಆಗುವ ಪ್ರಸಂಗ ಪದೇ ಪದೇ ಎದುರಾಗಬಹುದು. ಇದನ್ನು ತಪ್ಪಿಸಲು ನಿರಂತರ ಅಂತರಾಳದಲ್ಲಿ ಅಧಿಕೃತ ಸರ್ವೀಸ್ ಸೆಂಟರ್ ಗೆ ತೆರಳಿ ಪರೀಶೀಲನೆ ನಡೆಸಿ ನಿಮ್ಮ ಕಾರಿನ ಚಕ್ರಗಳ ಬಾಳ್ವಿಕೆಯನ್ನು ಪರೀಶೀಲಿಸಬಹುದಾಗಿದೆ.

ಚಕ್ರಗಳು ಪಂಚರ್ ಆದಾಗ ಮೊದಲು ಮಾಡಬೇಕಾದ ಅಗತ್ಯ ಕ್ರಮ ಏನೆಂದರೆ ಆದಷ್ಟು ಬೇಗನೇ ಕಾರನ್ನು ರಸ್ತೆಯ ಬದಿಗೆ ಸರಿಸುವ ಪ್ರಯತ್ನ ಮಾಡಬೇಕು. ಫ್ಲ್ಯಾಟ್ ಚಕ್ರದಲ್ಲೂ ಸ್ವಲ್ಪ ದೂರದ ವರೆಗೆ ಸಾಗುವುದರಿಂದ ನಿಯಂತ್ರಣ ಕಳೆದುಕೊಳ್ಳದಂತೆ ನೋಡಿಕೊಂಡು ನಿಧಾನವಾಗಿ ವಾಹನವನ್ನು ಬದಿಗೆ ಸರಿಸಬೇಕು.

ಇದು ಸಾಧ್ಯವಾಗದಿದ್ದಲ್ಲಿ ತಕ್ಷಣವೇ ಹಜಾರ್ಡ್ ಲೈಟ್ ಆನ್ ಮಾಡಿಟ್ಟುಕೊಳ್ಳಿ. ಅಲ್ಲದೆ ತಕ್ಷಣವೇ ಕಾರಿಂದ ಹೊರಬರುವ ಪ್ರಯತ್ನ ಮಾಡಬೇಡಿ. ಯಾಕೆಂದರೆ ಹೆದ್ದಾರಿಯಲ್ಲಿ ಹಿಂಬದಿಯಿಂದ ಶರವೇಗದಲ್ಲಿ ವಾಹನಗಳು ಬರುವುದರಿಂದ ಅಪಾಯವನ್ನು ಆಹ್ವಾನಿಸಲಿದೆ.

ಕಾರನ್ನು ಬದಿಗೆ ಸರಿಸಿ ಎಮರ್ಜನ್ಸಿ ಬ್ರೇಕ್ ಹಾಕಿದ ಬಳಿಕ ಮಗದೊಮ್ಮೆ ಹಜಾರ್ಡ್ ಬೆಳಕಿನ ನೆರವನ್ನು ಪಡೆಯಿರಿ. ಯಾವುದೇ ಕಾರಣಕ್ಕೆ ತಿರುವುಗಳಲ್ಲಿ ಕಾರು ನಿಲ್ಲಿಸುವ ಗೋಜಿಗೆ ಹೋಗಬೇಡಿರಿ.

ಹಜಾರ್ಡ್ ಲೈಟ್ ಆನ್ ಮಾಡಿಟ್ಟ ಮಾತ್ರಕ್ಕೆ ಅಪಾಯದ ಬಗ್ಗೆ ಸೂಚನೆ ನೀಡಿದಂತಾಗುವುದಿಲ್ಲ. ಈ ನಿಟ್ಟಿನಲ್ಲಿ ಬದಿಗೆ ಸರಿಸಿದ ಬಳಿಕ ಸ್ವಲ್ಪ ಅಂತರದಷ್ಟು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತಿಫಲಕ ಅಥವಾ ಕಲ್ಲುಗಳನ್ನಿಡುವ ಮೂಲಕ ಎದುರು ಬದುರಾಗಿ ಬರುವ ವಾಹನಗಳಿಗೆ ಆತಂಕದ ಸೂಚನೆ ನೀಡಬಹುದು.

ಇಲ್ಲಿ ವಿವೇಚನಾ ಬುದ್ಧಿ ಹೆಚ್ಚು ಉಪಯೋಗಿಸಬೇಕಾಗಿದ್ದು, ಮುಂಭಾಗ ಅಥವಾ ಹಿಂಭಾಗದಿಂದ ಬರುವ ವಾಹನಗಳಿಗೆ ಕಾಣುವಂತಹ ರೀತಿಯಲ್ಲಿ ರಸ್ತೆ ಬದಿಯಲ್ಲಿ ವಾಹನವನ್ನು ಪಾರ್ಕ್ ಮಾಡಿಟ್ಟುಕೊಳ್ಳಿರಿ.

ರಾತ್ರಿ ವೇಳೆಯಲ್ಲಿ ಪಂಚರ್ ತೊಂದರೆ ಎದುರಾದ್ದಲ್ಲಿ ಮಗದೊಮ್ಮೆ ಹಜಾರ್ಡ್ ಲೈಟ್ ಆನ್ ಮಾಡಿಡಲು ಮರೆಯದಿರಿ. ಬಳಿಕ ಕಾರಿನ ಇಂಟಿರಿಯರ್ ಲೈಟ್ ಆನ್ ಮಾಡಿಟ್ಟುಕೊಳ್ಳಿ. ಆದರೆ ಕಾರಿನಿಂದ ಹೊರಬರುವ ಸಾಹಸಕ್ಕೆ ಮುಂದಾಗಬಾರದು.

ಬಳಿಕ ಕಾರಿನಲ್ಲಿದ್ದುಕೊಂಡೇ ಕೆಂಪು ಅಥವಾ ಬಿಳಿ ಬಟ್ಟೆಯ ಸಹಾಯದಿಂದ ಹೊರಗಡೆ ಬೀಸುತ್ತಿರಿ. ಇದು ಹಿಂಬದಿಯಿಂದ ಬರುವ ವಾಹನಗಳು ನಿಮ್ಮ ಅಪಾಯವನ್ನು ಅರಿತು ನೆರವಿಗೆ ಧಾವಿಸಲು ಸಹಕಾರಿಯಾಗಲಿದೆ.

ಹಜಾರ್ಡ್ ಬೆಳಕಿನ ಬಳಿ ಸುರಕ್ಷಿತವಾಗಿ ನಿಲ್ಲುವ ಮೂಲಕವೂ ನೆರವನ್ನು ಯಾಚಿಸಬಹುದಾಗಿದೆ. ಇನ್ನು ರೋಡ್ ಸೈಡ್ ಅಸಿಸ್ಟನ್ಸ್ ಅಥವಾ ತುರ್ತು ಸೇವೆಗಾಗಿ ಪೊಲೀಸ್ ಗೂ ಕರೆ ಮಾಡಬಹುದಾಗಿದೆ.

ರಸ್ತೆ ಬದಿಗೆ ಮುಖ ಮಾಡಿಕೊಂಡು ನಿಂತುಕೊಂಡು ಯಾವುದೇ ರಿಪೇರಿ ಕೆಲಸಕ್ಕೆ ಮುಂದಾಗಬೇಡಿ. ಇದು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡೆತಡೆ ಮಾಡುವುದಲ್ಲದೆ ಅಪಾಯವನ್ನು ಆಹ್ವಾನಿಸಲಿದೆ.


Click it and Unblock the Notifications








