ಪೈಲಟ್ ಸಮಯ ಪ್ರಜ್ಞೆ; ಕೊನೆಯ 10 ಸೆಕೆಂಡಿನಲ್ಲಿ ಏರ್ ಆಂಬುಲೆನ್ಸ್ ವಿರೋಚಿತ ಲ್ಯಾಂಡಿಂಗ್
ರೋಗಿಯನ್ನು ಹೊತ್ತುಕೊಂಡು ಪಾಟ್ನಾದಿಂದ ನವದೆಹಲಿಗೆ ಹಾರಾಡುತ್ತಿದ್ದ ಏರ್ ಆಂಬುಲೆನ್ಸ್ ವೊಂದು ಪೈಲಟ್ ನ ಸಮಯ ಪ್ರಜ್ಞೆಯಿಂದಾಗಿ ಪತನಗೊಂಡ ಬಳಿಕವೂ ಎಲ್ಲ ಏಳು ಪ್ರಯಾಣಿಕರು ವಿರೋಚಿತವಾಗಿ ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಬೀಚ್ ಕಿಂಗ್ ಏರ್ ಸಿ-90ಎ ಏರ್ ಆಂಬುಲೆನ್ಸ್ ವಿಮಾನದ ಎರಡೂ ಎಂಜಿನ್ ಗಳು ವೈಫಲ್ಯವನ್ನು ಕಂಡಿದ್ದವು. ಆದರೂ ಧೈರ್ಯ ಕೈಬಿಡದ ಪೈಲಟ್ ಅಮಿತ್ ಕುಮಾರ್, ಕೊನೆಯ 10 ಸೆಕೆಂಡುಗಳಲ್ಲಿ ಸೇಫಾಗಿ ಕ್ರಾಶ್ ಲ್ಯಾಂಡಿಂಗ್ ಮಾಡುವ ಕೆಚ್ಚೆದೆಯ ನಿರ್ಧಾರ ಕೈಗೊಳ್ಳುವ ಮೂಲಕ ಬಹು ದೊಡ್ಡ ಅಪಾಯದಿಂದ ಎಲ್ಲರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಿದುಳಿನ ಹಠಾತ್ ಆಘಾತಕ್ಕೊಳಗಾದ ಅಪ್ಪ ಜೊತೆಗೆ ಮಗಳು ಸೇರಿದಂತೆ ಒಟ್ಟಾರೆ ಏಳು ಮಂದಿ ಸಂಚರಿಸುತ್ತಿದ್ದರು. ಎಂಜಿನ್ ವೈಫಲ್ಯದ ಹಿನ್ನೆಲೆಯಲ್ಲಿ ಆಗ್ನೇಯ ದೆಹಲಿಯ ನಜಾಫ್ ಗರ ಹೊಲ ಪ್ರದೇಶದಲ್ಲಿ ಕ್ರಾಶ್ ಲ್ಯಾಂಡಿಂಗ್ ನಡೆಸಲಾಗಿತ್ತು.

ದೆಹಲಿಗೆ ತಲುಪಲು 40 ಕೀ.ಮೀ. ಮಾತ್ರ ಬಾಕಿ ಇರುವಾಗ ಏರ್ ಆಂಬುಲೆನ್ಸ್ ವಿಮಾನದ ಮೊದಲ ಎಂಜಿನ್ ವೈಫಲ್ಯಕ್ಕೊಳಗಾಗಿತ್ತು. ಬೇಕಾದಷ್ಟು ಇಂಧನ ಇರುವುದರಿಂದ ಎರಡನೇ ಎಂಜಿನ್ ನೆರವಿನಿಂದ ಗಮ್ಯ ಸ್ಥಾನ ತಲುಪಬಹುದೆಂಬುದು ಪೈಲಟ್ ನಿಲುವಾಗಿತ್ತು.

ಆದರೆ ಮತ್ತೆ 10 ನಿಮಿಷವಾಗುವಷ್ಟರಲ್ಲಿ ಎರಡನೇ ಎಂಜಿನ್ ವೈಫಲ್ಯಕ್ಕೊಳಗಾಗಿರುವುದು ಆತಂಕದ ಕ್ಷಣಗಳನ್ನು ಸೃಷ್ಟಿಸುವಂತಾಗಿತ್ತು. ವಿಮಾನ ನಿಲ್ದಾಣ ತಲುಪಲು ಇನ್ನು 15 ಕೀ.ಮೀ. ದೂರಇರುವುದರಿಂದ ವಿಮಾನ ಕ್ರಾಶ್ ಲ್ಯಾಂಡ್ ಮಾಡದೇ ಅನ್ಯ ಮಾರ್ಗವಿರಲಿಲ್ಲ.

ಗಮ್ಯಸ್ಥಾನ ತಲುಪುವುದು ಅಸಾಧ್ಯ ಎಂಬುದನ್ನು ಅರಿತ ಪೈಲಟ್ ತನ್ನ ಸಹ ಪೈಲಟ್ ನೆರವಿನಿಂದ ಕಂಟ್ರೋಲ್ ರೂಂಗೆ ನಿರಂತರ ಸಂಪರ್ಕದಲ್ಲಿ ತೊಡಗಿದ್ದರು. ಕೊನೆಯ 10 ಸೆಕೆಂಡುಗಳಲ್ಲಿ ಸಮಯೋಚಿತ ನಿರ್ಧಾರ ಕೈಗೊಂಡಿದ್ದರು.

3000 ಅಡಿಗಿಂತಲೂ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನದ ಪತನಕ್ಕಾಗಿ ಪೈಲಟ್ ಸೂಕ್ತ ಜಾಗವನ್ನು ಹುಡುಕುತ್ತಿದ್ದರು. ಕೊನೆಗೆ ನಜಾಫ್ ಗರದ ಕೈರ್ ಜಿಲ್ಲೆಯಲ್ಲಿ ಖಾಲಿ ಜಾಗದಲ್ಲಿ ಕ್ರಾಶ್ ಲ್ಯಾಂಡಿಂಗ್ ಮಾಡಲು ನಿರ್ಧರಿಸಿದ್ದರು.

ಮಹಿಳೆ ಸೇರಿದಂತೆ ಎಲ್ಲ ಯಾತ್ರಿಕರ ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಾಗಿರುವುದರಲ್ಲಿ ಅತೀವ ಸಂತಸಗೊಂಡಿದ್ದೇನೆ ಎಂದು 2011ನೇ ಇಸವಿಯಿಂದಲೂ ಸೇವೆಯಲ್ಲಿರುವ ಪೈಲಟ್ ತಿಳಿಸಿದ್ದಾರೆ. ವಿಮಾನದಲ್ಲಿ ಇತರೆ ನಾಲ್ವರಲ್ಲಿ ಓರ್ವ ವೈದ್ಯ, ಮತ್ತೊರ್ವ ವಿಮಾನ ತಾಂತ್ರಿಕ ತಜ್ಞ ಮತ್ತು ಇಬ್ಬರು ರೋಗಿಯ ಸಂಬಂಧಿಕರು ಇದ್ದರು.

ಪ್ರಸ್ತುತ ಎರಡು ಎಂಜಿನ್ ವೈಫಲ್ಯಕ್ಕೊಳಗಾಗಿರುವ ಬಗ್ಗೆ ತಾಂತ್ರಿಕ ದೋಷಗಳನ್ನು ಪತ್ತೆ ಹಚ್ಚಲು ತನಿಖೆ ಹಮ್ಮಿಕೊಳ್ಳಲಾಗಿದೆ. ಬಳಿಕ ರೋಗಿಯನ್ನು ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.


Click it and Unblock the Notifications








