ಕಾರುಗಳ ಸಾಗಣಿಕೆಗೆ ಆವೇಗ ತುಂಬಿದ 'ಆಟೋ ಎಕ್ಸ್ ಪ್ರೆಸ್'
ವಾಹನ ಕ್ಷೇತ್ರದಲ್ಲಿ ಅಗಾಧ ಆದಾಯ ಅವಕಾಶವನ್ನು ಮನಗಂಡಿರುವ ಭಾರತೀಯ ರೈಲ್ವೆ, ತನ್ನ ಚೊಚ್ಚಲ ವಾಹನ ಸಾಗಣಿಕಾ ರೈಲು 'ಆಟೋ ಎಕ್ಸ್ಪ್ರೆಸ್' ಲೋಕಾರ್ಪಣೆ ಮಾಡಿದೆ. ಇದು ಹರಿಯಾಣದ ಗುರ್ಗಾಂವ್ ನಿಂದ ನಮ್ಮ ಕರ್ನಾಟಕದ ಬೆಂಗಳೂರು ಹೊರವಲಯದಲ್ಲಿರುವ ನಡವಂದ ರೈಲ್ವೆ ನಿಲ್ದಾಣಕ್ಕೆ ಮೊದಲ ಪ್ರಯಾಣವನ್ನು ಬೆಳೆಸಿದೆ.
ವಾಹನಗಳ ಸರಕು ಸಾಗಣಿಕೆಯಲ್ಲಿ ಶೇಕಡಾ 25ರಷ್ಟು ಶೇರನ್ನು ಗುರಿಯಿರಿಸಿಕೊಂಡಿರುವ ಭಾರತೀಯ ರೈಲ್ವೆ, ಇದಕ್ಕಾಗಿ ಸುಸ್ಸುಜ್ಜಿತ ಹಾಗೂ ಹೆಚ್ಚು ಸುರಕ್ಷಿತ ರೈಲನ್ನು ಬಿಡುಗಡೆ ಮಾಡಿದೆ.

ರಸ್ತೆ ಮಾರ್ಗವಾಗಿ ಬೃಹತ್ ಕಂಟೈನರ್ ಗಳಲ್ಲಿ ಹೊಚ್ಚ ಹೊಸ ಕಾರುಗಳ ಸಾಗಣಿಕೆ ವೇಳೆ ಸುರಕ್ಷತೆಯ ಬಗ್ಗೆ ಭೀತಿ ಕಾಡುತ್ತದೆ. ಆದರೆ ಅತಿ ಸುರಕ್ಷಿತ ಮಾರ್ಗ ಎನಿಸಿಕೊಂಡಿರುವ ರೈಲ್ವೆ ಮಾರ್ಗವಾಗಿ ಬಹಳ ವೇಗವಾಗಿ ಗಮ್ಯಸ್ಥಾನವನ್ನು ತಲುಪಬಹುದಾಗಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ರೈಲ್ವೆ ಸಚಿವ ಸುರೇಶ್ ಪ್ರಭು, "ನಮ್ಮ ಜನಸಂಖ್ಯೆಯಂತೆ ವಾಹನಗಳ ಸಂಖ್ಯೆಯು ಅತಿ ವೇಗದಲ್ಲಿ ವರ್ಧಿಸುತ್ತಿದೆ. ಬಹುಶ: ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವಲಯವು ಇದಾಗಿದೆ. ಹಾಗಾಗಿ ಇದನ್ನು ಸ್ವಾಧೀನಪಡಿಸಲು ಸಾಧ್ಯವಾದ್ದಲ್ಲಿ ರೈಲ್ವೆಗೆ ಪ್ರಮುಖ ಆದಾಯ ಮೂಲವಾಗಿ ಮಾರ್ಪಾಡುಗೊಳ್ಳಲಿದೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತುಲುಪುವುದು ಆಟೋ ಎಕ್ಸ್ ಪ್ರೆಸ್ ವಾಹನ ಸಾಗಣಿಕಾ ಬಂಡಿಯ ಮುಖ್ಯ ಉದ್ದೇಶವಾಗಿರಲಿದೆ. ತನ್ಮೂಲಕ ಭಾರತೀಯ ರೈಲ್ವೆ ಹೆಚ್ಚು ವಿಶ್ವಾಸಾರ್ಹತೆಗೆ ಪಾತ್ರವಾಗಲಿದೆ.

ಪ್ರತಿ ತಿಂಗಳಲ್ಲಿ 2000ದಷ್ಟು ಕಾರುಗಳನ್ನು ಗುರ್ಗಾಂವ್ ನಿಂದ ಕರ್ನಾಟಕದ ನಿಡವಂದಕ್ಕೆ ರವಾನಿಸಲಾಗುತ್ತಿದೆ. ಈಗ ಆಟೋ ಎಕ್ಸ್ ಪ್ರೆಸ್ ರೈಲಿನ ಬಿಡುಗಡೆಯೊಂದಿಗೆ ಈ ಸಂಖ್ಯೆಯೀಗ 6000 ಯುನಿಟ್ ಗಳಿಗೆ ಏರಿಕೆಯಾಗಲಿದೆ.

ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸಲು ಸಾಮರ್ಥ್ಯ ಹೊಂದಿರುವ ಆಟೋ ಎಕ್ಸ್ ಪ್ರೆಸ್, ಸಮಯ ಉಳಿತಾಯವನ್ನು ಮಾಡಲಿದೆ. ಇದರೊಂದಿಗೆ 70 ತಾಸುಗಳ ಯಾತ್ರೆಯು 57 ತಾಸಿಗೆ ಇಳಿಕೆಯಾಗಲಿದೆ.

ಮುಂದಿನ ದಿನಗಳಲ್ಲಿ ಈ ಯೋಜನೆಯು ದೇಶದ ಇತರೆಡೆಗಳಿಗೆ ವ್ಯಾಪಿಸಲಿದೆ. ದೇಶದಲ್ಲಿ ಸ್ಥಿತಗೊಂಡಿರುವ ಪ್ರಮುಖ ವಾಹನ ವಲಯಗಳಿಂದ ಪ್ರಮುಖ ನಗರಗಳಿಗೆ ಕಾರುಗಳನ್ನು ರವಾನಿಸುವ ಮೂಲಕ ಭಾರತೀಯ ರೈಲ್ವೆ ಆದಾಯದ ಮಾರ್ಗ ಕಂಡುಕೊಳ್ಳಲಿದೆ.


Click it and Unblock the Notifications








