ಈ ರಸ್ತೆಯಲ್ಲಿ ಹೋಗದಿದ್ರು ದಂಡ ಬೀಳುತ್ತೆ..!
ಹೊಸ ಸಂಚಾರಿ ನಿಯಮಗಳು ಜಾರಿಗೆ ಬಂದ ನಂತರ ಬೇಕಾಬಿಟ್ಟಿಯಾಗಿ ದಂಡ ವಿಧಿಸಲಾಗುತ್ತಿದೆ. ತಾವು ಮಾಡದೇ ಇರುವ ತಪ್ಪಿಗೆ ನಮಗೆ ಎಲ್ಲಿ ದಂಡ ಬೀಳುವುದೋ ಎಂಬ ಆತಂಕದಲ್ಲಿಯೇ ಜನರು ಕಾಲ ಕಳೆಯುವಂತಾಗಿದೆ.

ದ್ವಿಚಕ್ರ ವಾಹನ ಸವಾರರಿಗೆ ಸೀಟ್ ಬೆಲ್ಟ್ ಧರಿಸಿಲ್ಲವೆಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತಿದ್ದರೆ, ನಾಲ್ಕು ಚಕ್ರ ವಾಹನಗಳ ಸವಾರರಿಗೆ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಈಗ ನೋಯಿಡಾದಲ್ಲಿರುವ ಎಕ್ಸ್ ಪ್ರೆಸ್ವೇನಲ್ಲಿ ಹೋಗದೇ ಇದ್ದರೂ ದಂಡ ವಿಧಿಸಲಾಗುತ್ತಿದೆ.

ಆರು ಪಥದ, 165 ಕಿ.ಮೀ ದೂರವಿರುವ ಯಮುನಾ ಎಕ್ಸ್ ಪ್ರೆಸ್ವೇ ನಲ್ಲಿ ಇದುವರೆಗೂ ಆ ರಸ್ತೆಯಲ್ಲಿ ಹೋಗದೇ ಇರುವ ವಾಹನ ಸವಾರರಿಗೆ ವೇಗವಾಗಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ. ಇನ್ನೂ ಕೆಲವರಿಗೆ ಸರಿಯಾದ ಕಾರಣಕ್ಕೆ ದಂಡವನ್ನು ವಿಧಿಸಲಾಗಿದೆ.

ಆದರೆ ತಪ್ಪಾದ ಫೋಟೊಗಳನ್ನು ದಂಡದ ಚಲನ್ ಜೊತೆಗೆ ನೀಡಿರುವ ಕಾರಣಕ್ಕೆ ವಾಹನ ಸವಾರರು ಗೊಂದಲಕ್ಕೀಡಾಗಿದ್ದಾರೆ. ನೋಯಿಡಾ ಟ್ರಾಫಿಕ್ ಪೊಲೀಸರ ಟ್ವಿಟರ್ ಖಾತೆಗೆ ಈ ರೀತಿಯ ದೋಷಪೂರಿತ ಚಲನ್ಗಳಿಗೆ ಸಂಬಂಧಪಟ್ಟಂತೆ ಹಲವಾರು ದೂರುಗಳನ್ನು ನೀಡಲಾಗಿದೆ.

ಇದಕ್ಕೆ ಪ್ರತಿಯಾಗಿ ನೋಯಿಡಾ ಟ್ರಾಫಿಕ್ ಪೊಲೀಸರು, ಈ ದೋಷಕ್ಕೆ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಹಾಗೂ ನಿಯಮಗಳನ್ನು ಉಲ್ಲಂಘಿಸುವವರಿಗೆ ಚಲನ್ಗಳನ್ನು ವಿತರಿಸುವ ಎನ್ಐಸಿಯನ್ನು ದೂಷಿಸಿದೆ.

ಅಂತಹುದೇ ಒಂದು ಘಟನೆಯಲ್ಲಿ ಹೋಂಡಾ ಅಮೇಜ್ ಕಾರಿನ ಮಾಲೀಕರಿಗೆ ಯಮುನಾ ಎಕ್ಸ್ ಪ್ರೆಸ್ವೇನಲ್ಲಿ ವೇಗವಾಗಿ ಕಾರು ಚಾಲನೆ ಮಾಡಿದ ಕಾರಣಕ್ಕೆ ರೂ.2,000 ದಂಡ ವಿಧಿಸಲಾಗಿದೆ. ಆದರೆ ಚಲನ್ನಲ್ಲಿ ನಮೂದಿಸಿರುವ ದಿನದಂದು ತಾವು ಆ ರಸ್ತೆಯಲ್ಲಿ ಹೋಗಿಯೇ ಇಲ್ಲವೆಂದು ಕಾರಿನ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಅಲಿಘಡದ ಭಾರತೀಯ ಜನತಾ ಯುವ ಮೋರ್ಚಾದ ಮಾಜಿ ಅಧ್ಯಕ್ಷರಾದ ಯತಿನ್ ದೀಕ್ಷಿತ್ರವರಿಗೆ ದಂಡ ವಿಧಿಸಲಾಗಿದೆ. ಚಲನ್ ಜೊತೆಗೆ ಕಳುಹಿಸಿರುವ ಫೋಟೊದಲ್ಲಿ ಬೇರೆ ವಾಹನದ ಫೋಟೊವನ್ನು ಲಗತ್ತಿಸಲಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ನೋಯಿಡಾ ಟ್ರಾಫಿಕ್ ಪೊಲೀಸ್ ಹಾಗೂ ಉತ್ತರ ಪ್ರದೇಶದ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಯತಿನ್ರವರು, ಯಾರೋ ಮಾಡಿರುವ ತಪ್ಪಿಗೆ ನನಗೆ ದಂಡ ವಿಧಿಸಲಾಗಿದೆ. ಎಂತಹ ಕಾರ್ಯ ದಕ್ಷತೆ. ಡಿಜಿಟಲ್ ಚಲನ್ನಲ್ಲಿ ನಮೂದಿಸಿರುವ ವಾಹನದ ಸಂಖ್ಯೆಯು ಸಹ ತಪ್ಪಾಗಿದೆ ಎಂದು ಹೇಳಿದ್ದಾರೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಈ ಬಗ್ಗೆ ಮಾತನಾಡಿರುವ ನೋಯಿಡಾ ಪೊಲೀಸರು ಯಾರಿಗಾದರೂ ತಪ್ಪಾಗಿ ಚಲನ್ ಬಂದಿದ್ದರೆ, ದಂಡವನ್ನು ಪಾವತಿಸುವ ಮುನ್ನ ಸೆಕ್ಟರ್ 14 ಎ ಕಚೇರಿಗೆ ದೂರು ನೀಡಬಹುದು ಎಂದು ಹೇಳಿದ್ದಾರೆ. ಸಂಚಾರಿ ವಿಭಾಗದ ಎಸ್ಪಿ ಅನಿಲ್ ಜಾರವರು ಮಾತನಾಡಿ, ತಪ್ಪುಗಳನ್ನು ಸರಿಪಡಿಸಲು ಎನ್ಐಸಿ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಯಮುನಾ ಎಕ್ಸ್ ಪ್ರೆಸ್ವೇ ಯೋಜನಾ ವಿಭಾಗದ ಜನರಲ್ ಮ್ಯಾನೇಜರ್ ಕೆ ಕೆ ಸಿಂಗ್ರವರು ಮಾತನಾಡಿ, ಕ್ಯಾಮರಾಗಳು ವಾಹನಗಳ ನಂಬರ್ ಅನ್ನು ತಪ್ಪಾಗಿ ದಾಖಲಿಸಿರುವ ಸಾಧ್ಯತೆಗಳಿವೆ. ಈ ರೀತಿಯ ದೂರುಗಳು ಪ್ರಥಮ ಬಾರಿಗೆ ದಾಖಲಾಗಿವೆ. ಆದರೂ ಸಹ ತಪ್ಪನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ಹೊಸ ಕಾಯ್ದೆಯ ವಿರುದ್ಧ ಹಲವು ರಾಜ್ಯ ಸರ್ಕಾರಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.


Click it and Unblock the Notifications








