ಕರ್ನಾಟಕ ಪ್ರವಾಸೋದ್ಯಮಕ್ಕೂ ರೆಕ್ಕೆ ಪುಕ್ಕ ತುಂಬಿತೇ 'ಜಲವಿಮಾನ'
ಭಾರತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಕಾರ್ಯ ಮಗ್ನವಾಗಿರುವ ಕೇಂದ್ರ ಸರಕಾರವು ದೆಹಲಿ-ಆಗ್ರಾ ನಡುವೆ ಬಹುನಿರೀಕ್ಷಿತ 'ಜಲವಿಮಾನ' ಸೇವೆಯನ್ನು ಆರಂಭಿಸುವ ಇರಾದೆಯಲ್ಲಿದೆ. ಈ ಸಂಬಂಧ ಹೇಳಿಕೆ ಕೊಟ್ಟಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ದೇಶದ ಕಡಲ ಇತಿಹಾಸವನ್ನು ಮರು ರಚಿಸಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಮೂರು ತಿಂಗಳೊಳಗೆ ಜಲವಿಮಾನ ಯೋಜನೆಯು ಆರಂಭಗೊಳ್ಳಲಿದೆ. ಅಷ್ಟಕ್ಕೂ ಈ ಮಹತ್ತರ ಯೋಜನೆ ಕರ್ನಾಟಕಕ್ಕೂ ವ್ಯಾಪಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದು ಕರ್ನಾಟಕ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನವನ್ನೇ ನೀಡಲಿದೆ.

ಜಲವಿಮಾನ ಹಾರಾಟಕ್ಕಾಗಿ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ. ಎಲ್ಲ ಕಡೆಗಳಿಂದಲೂ ಹಸಿರು ನಿಶಾನೆ ದೊರಕಿದ ಬಳಿಕವಷ್ಟೇ ಹಾರಾಟ ನನಸಾಗಲಿದೆ.

ಚಕ್ರದ ಬದಲಾಗಿ ಹಾವುಗೆಗಳನ್ನು ಹೊಂದಿರುವ ಜಲವಿಮಾನಗಳು ನೀರಿನಿಂದಲೇ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಕಳೆದ ಮಾರ್ಚ್ 11ಕ್ಕೆ ಅನುಮೋದನೆ ದೊರಕಿರುವ ಜಲಮಾರ್ಗ ಮಸೂದೆಯಲ್ಲಿ ದೇಶದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವತ್ತ ಕಣ್ಣಾಯಿಸಲಾಗಿದ್ದು, 106ರಷ್ಟು ಒಳ ಜಲಮಾರ್ಗಗಳಲ್ಲಿ ಜಲವಿಮಾನಗಳನ್ನು ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಐದರಷ್ಟು ಜಲವಿಮಾನಗಳು ಸೇವೆಯಲ್ಲಿದೆ.

ಇದರ ಹೊರತಾಗಿ ನಿಕಟ ಭವಿಷ್ಯದಲ್ಲೇ ಜಲ ಬಸ್ ಮತ್ತು ಹೋವರ್ ಕ್ರಾಫ್ಟ್ ಗಳನ್ನು ಪರಿಚಯಿಸುವ ಇರಾದೆಯನ್ನು ಕೇಂದ್ರ ಸರಕಾರ ಹೊಂದಿದೆ. ಇದು ಯಮುನಾ ಸೇರಿದಂತೆ ದೇಶದ ಇತರ ಭಾಗಗಳಿಗೂ ವ್ಯಾಪಿಸಲಿದೆ.

ಈ ಮಹತ್ತರ ಯೋಜನೆಗೆ ದೆಹಲಿ ಜಲ ಮಂಡಳಿ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಸಹ ಕೈಜೋಡಿಸಲಿದೆ. ಅಲ್ಲದೆ ಬಹುಬೇಗನೇ ಜಲ ವಿಮಾನ ಯೋಜನೆ ಕಾರ್ಯಗತಗೊಳಿಸುವ ಇರಾದೆಯಲ್ಲಿದೆ.

ಭಾರತಕ್ಕೆ ಜಲ ವಿಮಾನಗಳನ್ನು ರವಾನಿಸಲು ಕೆನಡಾ ಮತ್ತು ರಷ್ಯಾ ಸಂಸ್ಥೆಗಳು ಉತ್ಸುಕತೆಯನ್ನು ತೋರಿದೆ. ಅಂದ ಹಾಗೆ ಅಮೆರಿಕ ನಿರ್ಮಿತ ಜಲ ಬಸ್ಸುಗಳು ಅತಿ ಶೀಘ್ರದಲ್ಲೇ ಮುಂಬೈನಲ್ಲಿ ಓಡಾಟ ಆರಂಭಿಸಲಿದೆ.


Click it and Unblock the Notifications








