ಟ್ರಾಫಿಕ್ನಲ್ಲಿ ಸಿಲುಕಿದ್ದ ಮಿನಿಸ್ಟರ್ ಕಾರಿಗೆ ದಾರಿ ಬಿಡದವನ ಮೇಲೆ ಪೊಲೀಸರ ಹಲ್ಲೆ: ವಿಡಿಯೋ ವೈರಲ್
ಭಾರತದಲ್ಲಿ ಮಂತ್ರಿಗಳು, ದೊಡ್ಡ ದೊಡ್ಡ ಅಧಿಕಾರಿಗಳಿಗೆ ರಕ್ಷಣೆ ನೀಡುವ ಹಿನ್ನೆಲೆ ಪೊಲೀಸರು ಕಟ್ಟು ನಿಟ್ಟಾದ ಭದ್ರತೆ ತೆಗೆದುಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಸಾಮಾನ್ಯ ಜನರು ತೊಂದರೆಗಳನ್ನು ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ಹಲವು ಘಟನೆಗಳು ಈ ಹಿಂದೆಯೂ ಸಾಕಷ್ಟು ಬೆಳಕಿಗೆ ಬಂದಿವೆ. ಇತ್ತೀಚೆಗೆ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ದೇಶದ ಪ್ರಮುಖ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ರಕ್ಷಣೆಗಾಗಿ ಅವರ ಬೆಂಗಾವಲು ಪಡೆಯ ವಾಹನಗಳಿಗೆ ಯಾವುದೇ ಅಡೆತಡೆಯಿಲ್ಲದೆ ಪೊಲೀಸರು ರಕ್ಷಣೆ ಕಲ್ಪಿಸುತ್ತಾರೆ. ಇಕ್ಕಟ್ಟಾದ ರಸ್ತೆಗಳನ್ನು ತೆರವುಗೊಳಿಸಲು ಕೆಲವೊಮ್ಮೆ ಪೊಲೀಸರು ವಾಹನ ಚಾಲಕರ ಮೇಲೆ ಹೆಚ್ಚು ಕಠಿಣವಾಗಿ ವರ್ತಿಸುತ್ತಾರೆ.

ಇತ್ತೀಚೆಗೆ, ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ 'ಜಿತೇಂದ್ರ ಅವದ್' ಅವರು ಕೊಲ್ಹಾಪುರದಿಂದ ವಾಹನಗಳ ಬೆಂಗಾವಲುಗಳೊಂದಿಗೆ ಭಾವಸಿಂಗಿ ರಸ್ತೆಗೆ ಹೋಗುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.

ಮಂತ್ರಿ ಜಿತೇಂದ್ರ ಅವದ್ ಹೋಗುವ ಸಂಪೂರ್ಣ ರಸ್ತೆ ತುಂಬಾ ಜನದಟ್ಟಣೆಯಿಂದ ಕೂಡಿತ್ತು. ಇದರಿಂದ ಸಚಿವರ ಕಾರು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತು. ಟ್ರಾಫಿಕ್ ಪೊಲೀಸರು ಸಚಿವರನ್ನು ಟ್ರಾಫಿಕ್ ಜಾಮ್ನಿಂದ ಹೊರತರಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಮಧ್ಯೆ ಪೊಲೀಸ್ ವಾಹನಕ್ಕೆ ನಿರ್ದೇಶನ ನೀಡಲಾಗುತ್ತಿದ್ದು, ವಾಹನಕ್ಕೆ ಸ್ಥಳಾವಕಾಶ ಕಲ್ಪಿಸಲು ಸಚಿವರ ಕಾರು ಮುನ್ನುಗ್ಗುತ್ತಿರುವುದು ಕಂಡುಬರುತ್ತದೆ.

ಆ ಸಮಯದಲ್ಲಿ ಪೊಲೀಸರು ಅಲ್ಲಿಯೇ ಇದ್ದ ಮಹೀಂದ್ರಾ ಬೊಲೆರೊ ಚಾಲಕನಿಗೆ ಬೆಂಗಾವಲು ಪಡೆ ಮುನ್ನಡೆಸುವಂತೆ ಆದೇಶಿಸುತ್ತಾರೆ. ಆದರೆ ರಸ್ತೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಬೊಲೆರೊ ಚಾಲಕ ವೇಗವಾಗಿ ಮುಂದೆ ಸಾಗಲು ಸಾಧ್ಯವಾಗಲಿಲ್ಲ ಹಾಗೂ ಹೊರಬರಲು ಆಗಲಿಲ್ಲ. ಇದರಿಂದ ಜಿತೇಂದ್ರ ಅವದ್ ಅವರ ಬೆಂಗಾವಲು ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿತು.

ಬೊಲೆರೊವನ್ನು ತ್ವರಿತವಾಗಿ ಹೊರತೆಗೆಯಲಿಲ್ಲ ಎಂಬ ಕಾರಣಕ್ಕೆ ಚಾಲಕನ ಮೇಲೆ ಕೈ ಮಾಡಿದ್ದಾರೆ. ಇಲ್ಲಿ ನೀವು ಸಚಿವರ ಬೆಂಗಾವಲು ಪಡೆಯಲ್ಲಿ ಸೈರನ್ ಹೊಂದಿರುವ ಕಾರನ್ನು ಸಹ ಗಮನಿಸಬಹುದು. ಭಾರತ ಸರ್ಕಾರವು ಈಗಾಗಲೇ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ, ಆಂಬ್ಯುಲೆನ್ಸ್ನಂತಹ ತುರ್ತು ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನದಲ್ಲಿ ಸೈರನ್ ಇರಬಾರದು.

ಆದರೆ, ಈ ನಿಯಮವನ್ನು ರಾಜಕಾರಣಿಗಳು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಕೆಲವೊಮ್ಮೆ ರಾಜಕಾರಣಿಗಳು ಮತ್ತು ವಿಐಪಿ ವಾಹನಗಳು ಆಂಬ್ಯುಲೆನ್ಸ್ನಂತಹ ತುರ್ತು ವಾಹನಗಳನ್ನು ಸಹ ನಿಲ್ಲಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ನಲ್ಲಿ ರೋಗಿಗಳು ಸಾವನ್ನಪ್ಪಿದ ಪ್ರಕರಣಗಳೂ ಬೆಳಕಿಗೆ ಬಂದಿವೆ. ಈ ಬಗ್ಗೆ ಸರ್ಕಾರಗಳು ಹೆಚ್ಚು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅಗತ್ಯವಿದೆ.

ಪ್ರಸ್ತುತ ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯ್ದೆಯಡಿ, ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ದಳದಂತಹ ತುರ್ತು ವಾಹನಗಳಿಗೆ ದಾರಿ ಮಾಡಿಕೊಡದ ವಾಹನ ಚಾಲಕರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಇದು ವಾಹನ ಬಳಸುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ.

ತುರ್ತು ವಾಹನಗಳಿಗೆ ಸೈರನ್ ಮತ್ತು ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ರಸ್ತೆಯಲ್ಲಿ ತಡೆಯುವ ವಾಹನಗಳನ್ನು ಸುಲಭವಾಗಿ ಗುರುತಿಸಬಹುದು. ಈ ಮೂಲಕ ಮೋಟಾರು ವಾಹನ ಕಾಯಿದೆ 2019 ರ ಪ್ರಕಾರ, ಒಟ್ಟು ರೂ. 10,000 ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಬಳಕೆದಾರರು ತುರ್ತು ವಾಹನಗಳಿಗೆ ದಾರಿ ಮಾಡಿಕೊಡಬೇಕು.

ಬೆಂಗಳೂರಿನಲ್ಲಿ ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಅವರಿಗಾಗಿ ಪೊಲೀಸರು ರಸ್ತೆಗಳನ್ನು ಬ್ಯಾರಿಕೇಡ್ ಅಡ್ಡ ಹಾಕಿದ್ದ ಕಾರಣ ಆಂಬ್ಯುಲೆನ್ಸ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತು. ಇದಲ್ಲದೆ, ಏಪ್ರಿಲ್ನಲ್ಲಿ ದೆಹಲಿಯಲ್ಲಿ ವಿಐಪಿವೊಬ್ಬರು ಹೋಗುತ್ತಿದ್ದಾಗ ರಕ್ತಸ್ರಾವವಾಗುತ್ತಿದ್ದ ಮಗುವನ್ನು ಹೊತ್ತ ಆಂಬುಲೆನ್ಸ್ ಅನ್ನು ನಿಲ್ಲಿಸಲಾಯಿತು. ನಿಜವಾಗಲೂ ಇಂತಹ ಘಟನೆಗಳು ಮನಸ್ಸನ್ನು ಕಲುಕುವಂತೆ ಮಾಡುತ್ತವೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಜವಾಬ್ದಾರಿಯುತ ಸ್ಥಾನದಲ್ಲಿರುವವರು ಖಂಡಿತವಾಗಿಯೂ ಈ ಬಗ್ಗೆ ಸ್ವಲ್ಪ ಯೋಚಿಸಬೇಕು. ತಮ್ಮ ಅಧಿಕಾರಕ್ಕೆ ಕಾರಣವಾದ ಜನರ ಮೇಲೆ ಇಂತಹ ದೌರ್ಜನ್ಯಗಳು ನಡೆಯುವ ಸಂಸ್ಕೃತಿಯಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ತಮ್ಮ ವಾಹನಗಳನ್ನು ಸಾಧ್ಯವಾದಷ್ಟು ಟ್ರಾಫಿಕ್ ಇರುವ ರಸ್ತೆಗಳಿಗಿಂತ ಇತರೆ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲದೇ ಆಂಬುಲೆನ್ಸ ಗಳನ್ನು ತಡೆಯುವ ಕೆಟ್ಟ ಪದ್ದತಿಯನ್ನು ನಿರ್ಮೂಲಿಸಬೇಕು.


Click it and Unblock the Notifications








