ಕರ್ನಾಟಕದಲ್ಲಿ ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್ಬೆಲ್ಟ್ ಕಡ್ಡಾಯ: ಉಲ್ಲಂಘಿಸಿದರೆ ಸಾವಿರ ರೂ. ದಂಡ
ಕಾರು ಅಪಘಾತಗಳಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇತ್ತೀಚೆಗೆ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನದ ಬಳಿಕ ಕಾರಿನ ಸೀಟ್ ಬೆಲ್ಟ್ ದೇಶದಲ್ಲಿ ವಿಚಾರ ಭಾರಿ ಚರ್ಚೆಯಾಗಿತ್ತು.

ಇದೀಗ ಕರ್ನಾಟಕದಲ್ಲಿ ಕಾರುಗಳಲ್ಲಿ ಚಾಲಕನ ಜತೆಗೆ ಸಹ ಪ್ರಯಾಣಿಕರೂ ಕೂಡ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆಯಂತೆ ಹೊಸ ನಿಯಮ ಜಾರಿಗೆ ತಂದಿರುವ ಪೊಲೀಸ್ ಇಲಾಖೆಯು, ನಿಯಮ ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು 500 ರೂ. ನಿಂದ 1 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಬಾಡಿಗೆ ಅಥವಾ ಖಾಸಗಿ ಕಾರುಗಳಲ್ಲಿ ಚಾಲಕನ ಜತೆಗೆ ಸಹ ಪ್ರಯಾಣಿಕರೂ ಕೂಡ ಇನ್ನೂ ಮುಂದೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತ ಆರ್. ಹಿತೇಂದ್ರ ಆದೇಶದಲ್ಲಿ ಸೂಚಿಸಿದ್ದಾರೆ.

ಈ ಮೊದಲು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 500 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಇನ್ನೂ ಮುಂದೆ ಸೀಟ್ ಬೆಲ್ಟ್ ಧರಿಸದೇ ಇದ್ದರೆ 1000 ರೂ. ದಂಡ ವಿಧಿಸುವಂತೆ ರಾಜ್ಯದ ಎಲ್ಲಾ ಕಮೀಷನರೇಟ್ ಮತ್ತು ಎಸ್ಪಿಗಳಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ

ಪ್ರಯಾಣಿಕರ ಸಂಖ್ಯೆ 8ಕ್ಕಿಂತ ಕಡಿಮೆ ಇರುವ ವಾಹನಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. 2019ರ ಮೋಟಾರು ವಾಹನ ಕಾಯಿದೆ ಪ್ರಕಾರ, ಸೆಕ್ಷನ್ 194ರಡಿ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ' ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಅಪಘಾತದಲ್ಲಿ ಮೃತಪಟ್ಟ ವೇಳೆ, ಭಾರತದಲ್ಲಿ ಮಾರಾಟವಾಗುವ ಕಾರುಗಳು ಮತ್ತು ರಸ್ತೆ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದರಿಂದ ಸರ್ಕಾರ ವಾಹನಗಳ ನಿಯಮದಲ್ಲೂ ಹಲವು ಬದಲಾವಣೆ ಮಾಡುತ್ತಿದೆ.

ಪ್ರಮುಖವಾಗಿ ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿಯಾಗುತ್ತಿಲ್ಲ. ಕಾರು ಪ್ರಯಾಣಿಕರ ಸುರಕ್ಷತೆ ನಿಯಮ ಮತ್ತಷ್ಟು ಬಿಗಿಯಾಗಿದೆ. ಈ ಹಿಂದೆ ಕಾರು ಚಾಲಕ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿತ್ತು. ಇದೀಗ ಕಾರು ಚಾಲಕನ ಜೊತೆಗೆ ಕಾರಿನಲ್ಲಿರುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ.

ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (54) ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ತಮ್ಮ ಮರ್ಸಿಡಿಸ್ ಜಿಎಲ್ಜಿ ಕಾರಿನಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮುಂಬೈಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು.

ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಭಾನುವಾರ ಮಧ್ಯಾಹ್ನ 3.15ಕ್ಕೆ ಸೂರ್ಯ ನದಿ ಬಳಿ ಗಂಟೆಗೆ 120 ಕಿ.ಮೀಗೂ ಹೆಚ್ಚು ವೇಗದಲ್ಲಿ ಕಾರು ಸಾಗುತ್ತಿತ್ತು ಎನ್ನಲಾಗಿದೆ. ಅನಾಹಿತಾ ಅವರು ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಲು ಯತ್ನಿಸಿದ್ದಾರೆ.

ಇದೇ ವೇಳೆ ಮುಂದಿರುವ ವಾಹನದ ಬಲಬದಿಯಲ್ಲಿ ಜಾಗವಿಲ್ಲದ ಕಾರಣ ಎಡಭಾಗದಿಂದ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಸೇತುವೆ ಬರುತ್ತಿರುವ ಕಾರಣ ಅನಿರೀಕ್ಷಿತವಾಗಿ ಆ ಪ್ರದೇಶದಲ್ಲಿ ಡಿವೈಡರ್ ಎದುರಾಗಿದೆ. ಅನಾಹಿತಾ ಅವರ ಅತಿ ವೇಗದ ಕಾರಣ ಕಾರನ್ನು ನಿಯಂತ್ರಿಸಲು ಸಾಧ್ಯವಾಗದೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ.

ಈ ಪರಿಣಾಮ ಕಾರು ತೀವ್ರವಾಗಿ ಜಖಂಗೊಂಡಿದ್ದು, ಕಾರಿನ ಹಿಂದಿನ ಸೀಟಿನಲ್ಲಿದ್ದ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಪಾಂಡೋಲ್ ಡಿಕ್ಕಿಯ ರಭಸಕ್ಕೆ ಸಾವನ್ನಪ್ಪಿದ್ದಾರೆ. ಮುಂಭಾಗದಲ್ಲಿ ಕುಳಿತಿದ್ದ ಅನಾಹಿತಾ ಮತ್ತು ಆಕೆಯ ಪತಿ ಡೇರಿಯಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ನೆರೆಹೊರೆಯವರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅತಿವೇಗದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿದೆ ಎಂದು ಅಪಘಾತದ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

ಟಾಟಾ ಸನ್ಸ್ ಗ್ರೂಪ್ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ನಂತರ, ಸೈರಸ್ ಮಿಸ್ತ್ರಿ 2012 ರಲ್ಲಿ ಗ್ರೂಪ್ನ ಅಧ್ಯಕ್ಷರಾದರು. ಬಳಿಕ 2016 ರವರೆಗೆ ಕಂಪನಿಯಲ್ಲಿ ತಮ್ಮ ಅಧ್ಯಕ್ಷ ಸ್ಥಾನವನ್ನು ಮುಂದುವರೆಸಿದ್ದರು. ಈ ಅಪಘಾತದ ಬಗ್ಗೆ ಹಲವರಿಗೆ ಅನುಮಾನಗಳಿವೆ. ಕಾರಿನ ಮುಂಭಾಗ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.

ಹೀಗಾದಲ್ಲಿ ಅಪಘಾತದ ಪರಿಣಾಮ ಮುಂದಿನ ಸೀಟಿನಲ್ಲಿದ್ದವರಿಗೆ ಹೆಚ್ಚಾಗಿರುತ್ತದೆ. ಆದರೆ ಈ ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಸಾವನ್ನಪ್ಪಿದ್ದು, ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬದುಕುಳಿದಿದ್ದು ಹೇಗೆ? ಇದಕ್ಕೆ ಮುಖ್ಯ ಕಾರಣ ಸೀಟ್ ಬೆಲ್ಟ್ ಧರಿಸದಿರುವುದು. ಈ ಪ್ರಯಾಣದ ವೇಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರುವ ಸಾಧ್ಯತೆ ಇದೆ.

ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರುವ ಸಾಧ್ಯತೆ ಕಡಿಮೆ. ಸೀಟ್ ಬೆಲ್ಟ್ ಧರಿಸದ ಕಾರಣ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಾಗ ಇಬ್ಬರೂ ಪಲ್ಟಿಯಾಗಿ ತಲೆಗೆ ಗಂಭೀರ ಹೊಡೆತ ಬಿದ್ದಿರಬಹುದು. ಈ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಸೀಟ್ ಬೆಲ್ಟ್ ಧರಿಸಿದ್ದರೆ, ಅವರು ಕೂಡ ಗಾಯಗಳೊಂದಿಗೆ ಬದುಕುಳಿಯುವ ಸಾಧ್ಯತೆ ಇರುತಿತ್ತು. ಈ ಅಪಘಾತದಿಂದ ನಾವು ಇನ್ನೊಂದು ಪಾಠ ಕಲಿಯಬೇಕು. ರಸ್ತೆಯಲ್ಲಿ ವಾಹನವನ್ನು ಓವರ್ ಟೇಕ್ ಮಾಡಬೇಕಾದರೆ ಬಲ ಬದಿಯಲ್ಲಿಯೇ ಓವರ್ ಟೇಕ್ ಮಾಡಬೇಕು.

ಏಕೆಂದರೆ ಭಾರತದಲ್ಲಿ ವಾಹನಗಳನ್ನು ರೈಟ್ ಹ್ಯಾಂಡ್ ಡ್ರೈವ್ ವ್ಯವಸ್ಥೆಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಬಲಭಾಗದಲ್ಲಿ ಹಾದುಹೋಗಲು ಪ್ರಯತ್ನಿಸಿದಾಗ, ಮುಂಭಾಗದಲ್ಲಿ ಅಡಚಣೆಯಿದ್ದರೆ ಚಾಲಕನಿಗೆ ತಿಳಿಯುತ್ತದೆ. ಆದ್ದರಿಂದ ಚಾಲಕ ತಕ್ಷಣ ಎಚ್ಚೆತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಎಡಭಾಗದಲ್ಲಿ ಓವರ್ಟೇಕ್ ಮಾಡಲು ಪ್ರಯತ್ನಿಸಿದರೆ, ಕಾರು ಸಂಪೂರ್ಣವಾಗಿ ಎಡಕ್ಕೆ ಚಲಿಸಿದ ನಂತರವೇ ಚಾಲಕನಿಗೆ ಮುಂದೆ ಏನಿದೆ ಎಂದು ತಿಳಿಯುತ್ತದೆ.


Click it and Unblock the Notifications








