ಮಣ್ಣಿನ ಸಂರಕ್ಷಣೆ ಅಭಿಯಾನ: ಸದ್ಗುರು ವಾಸುದೇವ್ ಅವರಿಂದ 30 ಸಾವಿರ ಕಿ.ಮೀ ಏಕಾಂಗಿ ಪ್ರಯಾಣ
ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯಂದು ನಡೆದ ಕಾರ್ಯಕ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಈಶಾ ಯೋಗ ಕೇಂದ್ರದಿಂದ ಮಣ್ಣು ಸಂರಕ್ಷಿಸುವ(SAVE SOIL) ಜಾಗತಿಕ ಆಂದೋಲನದ ಭಾಗವಾಗಿ 100 ದಿನಗಳಲ್ಲಿ 27 ರಾಷ್ಟ್ರಗಳಲ್ಲಿ 30,000 ಕಿಮೀ ಏಕಾಂಗಿಯಾಗಿ ಮೋಟಾರ್ ಸೈಕಲ್ ಪ್ರಯಾಣ ಮಾಡುವುದಾಗಿ ಹೇಳಿದ್ದಾರೆ.

ಮಣ್ಣಿನ ಸವೆತವನ್ನು ತಡೆಗಟ್ಟಲು ಜನರು ಮತ್ತು ಸಂಸ್ಥೆಗಳನ್ನು ಜಾಗೃತಗೊಳಿಸುವ ಉದ್ದೇಶದಿಂದ ಲಂಡನ್ ನಿಂದ ಭಾರತಕ್ಕೆ ಬೈಕ್ ಮೂಲಕ ಏಕಾಂಗಿಯಾಗಿ ಪ್ರಯಾಣಿಸಲು ಯೋಜಿಸಿರುವುದಾಗಿ ತಿಳಿಸಿದರು. ಈ ಪ್ರಯಾಣದ ಸಮಯದಲ್ಲಿ, ಅವರು ವಿಶ್ವದ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ. ಎಲ್ಲಾ ದೇಶಗಳಲ್ಲಿ ಮಣ್ಣಿನ ಸವೆತವನ್ನು ತಡೆಗಟ್ಟಬಲ್ಲ ನೀತಿಗಳನ್ನು ಅಳವಡಿಸಿಕೊಳ್ಳುವಂತೆ ಅಲ್ಲಿನ ಜನರಿಗೆ ಮನವಿ ಮಾಡಲಿದ್ದಾರೆ. "ನಾವು ಎರಡು ವರ್ಷಗಳಿಂದ ಮಣ್ಣು ಉಳಿಸಿ ಆಂದೋಲನದಲ್ಲಿ ತೊಡಗಿಕೊಂಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸದ್ಗುರು ಹೇಳಿದರು. ನೀವು ಕೃಷಿ ಭೂಮಿಯನ್ನು ಹೊಂದಿದ್ದರೆ, ಕನಿಷ್ಠ ಶೇಕಡಾ 3-6 ರಷ್ಟು ಸಾವಯವ ಅಂಶವು ಮಣ್ಣಿನಲ್ಲಿ ಇರಬೇಕು ಎಂಬ ನೀತಿಯನ್ನು 192 ದೇಶಗಳಲ್ಲಿ ತರುವ ಪ್ರಯತ್ನದಿಂದಾಗಿ ಈ ಚಳುವಳಿ ಆರಂಭವಾಗಿದೆ. ಇದು ಭವಿಷ್ಯದ ಪೀಳಿಗೆಗೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬೈಕ್ ಮೂಲಕ 30,000 ಕಿ.ಮೀ ಪ್ರಯಾಣ
ಇಶಾ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ 30,000- ಕಿಲೋಮೀಟರ್ ಏಕಾಂಗಿ ಮೋಟಾರ್ಸೈಕಲ್ ಪ್ರಯಾಣವನ್ನು ಮಾರ್ಚ್ 21 ರಂದು ಯುಕೆಯಿಂದ ಆರಂಭಿಸಲಿದ್ದಾರೆ. 100 ದಿನಗಳ ಬೈಕ್ ಪ್ರಯಾಣವು 27 ದೇಶಗಳು ಮತ್ತು 30,000 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ.

ಮಣ್ಣು ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿದ ಸದ್ಗುರು, ಇದು ಪ್ರತಿಭಟನೆಯ ವಿಧಾನವೂ ಅಲ್ಲ ಅಥವಾ ಬಲವಂತದ ತಂತ್ರವೂ ಅಲ್ಲ. ಬದಲಾಗಿ ಇದು ನಾಗರಿಕರ ಇಚ್ಛೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. "ಈ 100 ದಿನಗಳಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರೂ ಐದರಿಂದ ಹತ್ತು ನಿಮಿಷಗಳ ಕಾಲ ಮಣ್ಣಿನ ಬಗ್ಗೆ ಯೋಚಿಸಬೇಕಾಗುತ್ತದೆ. ಇಡೀ ಜಗತ್ತು 100 ದಿನಗಳ ಕಾಲ ಮಣ್ಣಿನ ಸಂರಕ್ಷಣೆಯ ಬಗ್ಗೆ ಮಾತನಾಡುವುದು ಬಹಳ ಮುಖ್ಯ ಎಂದರು.

ಮಣ್ಣಿನ ಮಹತ್ವವನ್ನು ಉಲ್ಲೇಖಿಸಿದ ಸದ್ಗುರು ಜಗ್ಗಿ ವಾಸುದೇವ್ ಅವರು, ವಿಜ್ಞಾನಿಗಳು ಮತ್ತು ವಿಶ್ವಸಂಸ್ಥೆಯ ಏಜೆನ್ಸಿಗಳು ಕೇವಲ 55 ವರ್ಷಗಳ ಕೃಷಿಯೋಗ್ಯ ಮಣ್ಣನ್ನು ಮಾತ್ರ ಭೂಮಿಯ ಮೇಲೆ ಇರುವುದಾಗಿ ಅಂದಾಜಿಸಿದ್ದಾರೆ. ತಜ್ಞರು ವಿಶ್ವದಲ್ಲಿ ಭೀಕರ ಅಂತರ್ಯುದ್ಧಕ್ಕೆ ಕಾರಣವಾಗಬಹುದಾದ ವಿಪತ್ತು ಆಹಾರ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸಿದ್ದಾರೆ ಎಂದರು. ಈ ಚಳವಳಿಯಲ್ಲಿ ಭಾಗವಹಿಸುವ ಪ್ರೇಕ್ಷಕರೊಂದಿಗೆ ಭಾವನಾತ್ಮಕ ಮನವಿ ಮಾಡಿದ ಸದ್ಗುರು, "ಸಾವಿನ ನಂತರ ಮಣ್ಣಾದ ಅದೇ ಸ್ಥಳದಿಂದ ಮೊಳಕೆಗಳು ಹೊರಬರುತ್ತವೆ. ಈ ಮೂಲಕ ನಮಗೆ ಪುನರ್ಜನ್ಮ ನೀಡುವ ಮಣ್ಣು ಅತ್ಯಂತ ಮಹತ್ವದ್ದು. ಇದೇ ಮಣ್ಣು ನಾವು ಸತ್ತ ನಂತರವೂ ಜೀವರಾಶಿಗೆ ಆಹಾರ ಒದಗಿಸುತ್ತದೆ ಎಂದರು.

ಸದ್ಗುರುಗಳು ಯುಎನ್ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್(ಯುಎನ್ ಸಿಸಿಡಿ) ಜೊತೆ ಕನ್ವೆನ್ಷನ್ ಆಫ್ ಪಾರ್ಟಿಟೀಸ್ (COP15)ನ 15 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ(ಡಬ್ಲ್ಯುಇಎಫ್) ವ್ಯಾಪಾರ, ರಾಜಕೀಯ ಮತ್ತು ಸಾಮಾಜಿಕ ನಾಯಕರ ಅಂತರರಾಷ್ಟ್ರೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಯುನೈಟೆಡ್ ನೇಷನ್ಸ್ ಕನ್ವೆನ್ಷನ್ (UNCCD), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಮತ್ತು ವಿಶ್ವ ಆಹಾರ ಕಾರ್ಯಕ್ರಮ (WFP) ಕೆಲವು ಜಾಗತಿಕ ಏಜೆನ್ಸಿಗಳು ಮಣ್ಣು ಉಳಿಸಿ ಚಳವಳಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ.


Click it and Unblock the Notifications








