ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು
ಸಂಚಾರಿ ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಗುಜರಾತ್ನ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಪೊಲೀಸರ ಕ್ರಮ ಖಂಡಿಸಿ ವ್ಯಾನ್ಗಳು, ಆಟೋರಿಕ್ಷಾ ಹಾಗೂ ಬಸ್ ಮಾಲೀಕರ ಪ್ರತಿಭಟನೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹೌದು, ನಿಯಮಬಾಹಿರವಾಗಿ ಸಂಚರಿಸುತ್ತಿದ್ದ 31 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಹಮದಾಬಾದ್ನಲ್ಲಿರುವ ನಿಕೋಲ್ ಪ್ರದೇಶದಲ್ಲಿ ಓವರ್ಲೋಡ್ ಆಗಿದ್ದ ವ್ಯಾನ್ನಿಂದ ಮೂವರು ಶಾಲಾ ಮಕ್ಕಳು ಬಿದ್ದ ನಂತರ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯನ್ನು ಪ್ರತಿಭಟಿಸಿ, ಶಾಲಾ ವ್ಯಾನ್ಗಳು ಮತ್ತು ಆಟೋರಿಕ್ಷಾಗಳು ಮುಷ್ಕರ ನಡೆಸುತ್ತಿವೆ. ಮುಷ್ಕರವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ವಾಹನಗಳಿಲ್ಲದೇ ಪರದಾಡುತ್ತಿರುವ ವಿದ್ಯಾರ್ಥಿಗಳನ್ನು ವಡೋದರಾ ಪೊಲೀಸರೇ ತಮ್ಮ ಇಲಾಖೆಯ ವಾಹನಗಳಲ್ಲಿ ಶಾಲೆಗೆ ತಲುಪಿಸುತ್ತಿದ್ದಾರೆ.

ವಡೋದರಾದ ಪೊಲೀಸ್ ಇಲಾಖೆ ವಿದ್ಯಾರ್ಥಿಗಳನ್ನು ಶಾಲೆಗೆ ತಲುಪಿಸಲು 46 ಪೊಲೀಸ್ ಬೈಕುಗಳನ್ನು, 21 ಪಿಸಿಆರ್ ವ್ಯಾನ್ಗಳನ್ನು ಹಾಗೂ 9 ಬೊಲೆರೊ ಎಂಯುವಿಗಳನ್ನು ಒದಗಿಸಿದೆ. ಪೊಲೀಸ್ ಇಲಾಖೆಯ ವರದಿಗಳ ಪ್ರಕಾರ, ಈ ವಾಹನಗಳು ಸುಮಾರು 250 ಶಾಲಾ ಮಕ್ಕಳನ್ನು ನಗರದ ವಿವಿಧ ಶಾಲೆಗಳಿಗೆ ತಲುಪಿಸಿವೆ.

ಪೊಲೀಸ್ ವಾಹನಗಳನ್ನೇರಿ ಸಮವಸ್ತ್ರದಲ್ಲಿ ಶಾಲೆಗೆ ಹೋಗುತ್ತಿರುವ ಶಾಲಾ ಮಕ್ಕಳ ಚಿತ್ರಗಳು ಹಾಗೂ ವೀಡಿಯೊಗಳು ವೈರಲ್ ಆಗಿವೆ. ವಡೋದರಾ ಸಂಚಾರ ವಿಭಾಗದ ಎಸಿಪಿ ಎ.ಕೆ.ವಾಣಾನಿರವರು ಮಾತನಾಡಿ, ವಿದ್ಯಾರ್ಥಿಗಳನ್ನು ಕರೆದೊಯ್ಯುವ ಪ್ರತಿಯೊಂದು ವಾಹನವು ಕೆಲವೊಂದು ಸುರಕ್ಷ ಮಾನದಂಡಗಳನ್ನು ಪಾಲಿಸಬೇಕು.

ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದೊಯ್ಯಬಾರದು. ನಾವು ವಡೋದರಾದಲ್ಲಿ ಓವರ್ಲೋಡ್ ವಾಹನಗಳ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದನ್ನು ಪ್ರತಿಭಟಿಸಿ ವಾಹನ ಚಾಲಕರ ಸಂಘವು ಮುಷ್ಕರಕ್ಕೆ ಕರೆ ನೀಡಿದೆ. ಶಾಲೆಗಳು ಈಗಷ್ಟೇ ಪುನರಾರಂಭಗೊಂಡಿವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವುದು ಸಾಧ್ಯವಿಲ್ಲವೆಂದು ನಮಗೂ ತಿಳಿದಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ, ತರಗತಿಗಳನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ನಮ್ಮ ಬೆಳಗಿನ ಸಮಯವನ್ನು ಮೀಸಲಿರಿಸಿ ನೆರವಾಗುತ್ತಿದ್ದೇವೆ.

ಮುಷ್ಕರ ನಿಲ್ಲುವವರೆಗೂ ನಾವು ಅದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು. ಓವರ್ಲೋಡ್ ಆಗಿರುವ ಶಾಲಾ ವ್ಯಾನ್ನಿಂದಾಗಿ ಇತ್ತೀಚೆಗೆ ಅಪಘಾತ ಸಂಭವಿಸಿತು. ವರದಿಗಳ ಪ್ರಕಾರ ಆ ಸಮಯದಲ್ಲಿ ವ್ಯಾನ್ನಲ್ಲಿ 22 ಮಕ್ಕಳಿದ್ದರು. ವ್ಯಾನ್ನಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಪ್ರಯಾಣಿಸುತ್ತಿದ್ದ ಕಾರಣ ವ್ಯಾನಿನ ಬಾಗಿಲನ್ನು ಸರಿಯಾಗಿ ಹಾಕಲಾಗಿರಲಿಲ್ಲ.
MOST READ: ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿಎಂಟಿಸಿ..!

ತಿರುವಿನಲ್ಲಿ, ಮೂವರು ಮಕ್ಕಳು ಕೆಳಗೆ ಬಿದ್ದರು. ಅವರಲ್ಲಿ ಒಬ್ಬರಿಗೆ ಗಾಯಗಳಾಯಿತು. ಕಾನೂನು ಪ್ರಕಾರ ಒಂದು ವ್ಯಾನಿನಲ್ಲಿ ಗರಿಷ್ಠ 14 ಮಕ್ಕಳನ್ನು ಕೊಂಡೊಯ್ಯಲು ಅವಕಾಶವಿದೆ. ಆಟೋ ರಿಕ್ಷಾದಲ್ಲಿ ಆರು ಮಕ್ಕಳನ್ನು ಕರೆದುಕೊಂಡು ಹೋಗುವಂತೆ ನಿಗದಿಪಡಿಸಲಾಗಿದೆ.
MOST READ: ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ನಿಯಮಗಳನ್ನು ಮೀರಿದ ವಾಹನಗಳನ್ನು ಸಂಚಾರ ಪೊಲೀಸರು ಮತ್ತು ಸಂಬಂಧಪಟ್ಟ ವ್ಯಾಪ್ತಿಯ ಆರ್ಟಿಒ ಅಧಿಕಾರಿಗಳು ಜಂಟಿಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ ಪೊಲೀಸರು ಈ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಇದು ಸ್ವಾಗತಾರ್ಹ ಕ್ರಮವಾಗಿದೆ.
MOST READ: ಒಂದು ಲಕ್ಷ ಉತ್ಪಾದನಾ ಗುರಿ ತಲುಪಿದ ಸ್ಕೋಡಾ ರ್ಯಾಪಿಡ್

ಮಕ್ಕಳನ್ನು ಶಾಲೆಗೆ ತಲುಪಿಸಲು ಪೊಲೀಸರು ತಮ್ಮ ಇಲಾಖೆಯ ವಾಹನಗಳನ್ನು ಬಳಸುತ್ತಿರುವುದನ್ನು ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಸಹ ಮಕ್ಕಳು ಶಾಲೆಗಳಿಗೆ ತಲುಪಲು ನೆರವಾಗುತ್ತಿದ್ದಾರೆ.

ಮುಷ್ಕರಗಳನ್ನು ಯಾವಾಗ ಹಿಂಪಡೆಯಲಾಗುವುದು ಎಂದು ತಿಳಿದಿಲ್ಲ. ಸಂಚಾರ ವಿಭಾಗದ ಎಸಿಪಿರವರ ಪ್ರಕಾರ, ಪೊಲೀಸರು ಅಗತ್ಯವಿರುವವರೆಗೂ ಸಹಾಯವನ್ನು ಮುಂದುವರೆಸಲಿದ್ದಾರೆ.


Click it and Unblock the Notifications








