ಸಿಂಗ್ ಈಸ್ ಕಿಂಗ್; ಬಡಗಿ ಮರದ ಹಲಗೆಯಲ್ಲಿ ಮಾಡಿದ ವಿಶಿಷ್ಟ ಕಾರು
ಸದಾ ಹೊಸತನ ತರುವ ವಾಹನ ಲೋಕದಲ್ಲಿ ನಾವಿಂದು ಬಡಗಿಯು ಮರದ ಹಲಗೆಯಿಂದ ತಯಾರಿಸಿದ ವಿಶಿಷ್ಟ ಕಾರೊಂದನ್ನು ಪರಿಚಯಿಸಲಿದ್ದೇವೆ. ಪಂಜಾಬ್ನ ಅಪ್ಪ-ಮಗ ಸೇರಿಕೊಂಡು ಈ ಸುಂದರ ಕಾರಿಗೆ ಕೆತ್ತನೆ ಕೆಲಸ ಮಾಡಿದ್ದಾರೆ.
ಪ್ರಸ್ತುತ ಕಾರು ರಸ್ತೆ ಸಂಚಾರಕ್ಕೂ ಕಾನೂನು ಮಾನ್ಯತೆಯನ್ನು ಪಡೆದುಕೊಂಡಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಅಷ್ಟೇ ಯಾಕೆ ದೇಶದ ಜನಪ್ರಿಯ ಮಾರುತಿ ಕಾರು ಎಂಜಿನ್ ಅನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಇವೆಲ್ಲದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಪಂಜಾಬ್ ನ ವಾಹನ ಉತ್ಸಾಹಿ 23ರ ಹರೆಯದ ಅಮನ್ ದೀಪ್ ಸಿಂಗ್ ಅವರಿಗೆ ಕಾಲೇಜ್ ನಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲೇ ಇಂತಹದೊಂದು ಯೋಚನೆ ಹುಟ್ಟಿಕೊಂಡಿತ್ತು. ಇದಕ್ಕಾಗಿ ಅಪ್ಪ ಮೊಹಿಂದರ್ ಸಿಂಗ್ (55) ಸಹಾಯವನ್ನು ಬೇಡಿಕೊಂಡಿದ್ದರು.

ಆಗಲೇ ಮರಕೆಲಸದಲ್ಲಿ 45 ವರ್ಷಗಳ ಅನುಭವ ಸಂಪಾದಿಸಿರುವ ಅಪ್ಪ, ಮಗನ ಈ ವಿನೂತನ ಕೆಲಸವನ್ನು ಪ್ರೋತ್ಸಾಹಿಸಿದರು. ಇದರಂತೆ ಅಪ್ಪ-ಮಗ ಇಬ್ಬರು ಸೇರಿ ಸರಿ ಸುಮಾರು ಎರಡು ವರೆ ತಿಂಗಳುಗಳ ಕಠಿಣ ಪರಿಶ್ರಮದ ಬಳಿಕ ತಮ್ಮ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕಾಗಿ ತಮ್ಮ ಮನೆಯಲ್ಲೇ ವರ್ಕ್ ಶಾಪ್ ಮಾಡಿಕೊಂಡಿರುವ ಇವರು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದರು. ಈಗ ಅತ್ಯುತ್ತಮ ನಿರ್ವಹಣೆಯ ಮರದ ಕಾರಿನ ಒಡೆಯರಾಗಿದ್ದಾರೆ.

ಈ ವುಡನ್ ಕಾರಿನಲ್ಲಿ ಮಾರುತಿ 800 ಕಾರಿನ ಎಂಜಿನ್ ಹಾಗೂ ಡ್ರಮ್ ಬ್ರೇಕ್, ಪೆಟ್ರೋಲ್ ಟ್ಯಾಂಕ್, ಸ್ಟೀರಿಂಗ್ ವೀಲ್ ಹಾಗೂ ಸ್ಟೀರಿಂಗ್ ರಾಡ್ ಗಳಂತಹ ಸ್ಪೇರ್ ಭಾಗಗಳನ್ನು ಜೋಡಣೆ ಮಾಡಲಾಗಿದೆ.

ಇದೇ ಕಾರಣಕ್ಕಾಗಿ ಕಾನೂನುನಿಂದ ಯಾವುದೇ ತೊಡಕು ಎದುರಾಗಿಲ್ಲ. ಅಲ್ಲದೆ ಚಕ್ಕಂದವಾಗಿ ಪಾಟಿಯಾಲಾ ನಗರದೆಲ್ಲೆಡೆ ಸ್ವಚ್ಚಂದವಾಗಿ ಸಂಚರಿಸುತ್ತಿರುತ್ತಾರೆ.

ಪ್ರಸ್ತುತ ಮರದ ಕಾರನ್ನು ನಗರಕ್ಕಿಳಿಸಿದಾಗ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದರ ಕೆತ್ತನೆಯ ರೂಪವನ್ನು ಜನರು ಬಹಳ ಕುತೂಹಲದಿಂದ ವೀಕ್ಷಿಸುತ್ತಿದ್ದು, ನಂಬಲಾಗುತ್ತಿಲ್ಲ ಎಂದಿದ್ದಾರೆ.

ಮನೆಯ ಪೀಠೋಪಕರಣಗಳಿಗೆ ಹೆಸರುವಾಸಿಯಾಗಿರುವ ಅತಿ ದುಬಾರಿ ತೇಗದ ಮರವನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಇದರಿಂದಾಗಿ ನಿರ್ವಹಣಾ ವೆಚ್ಚ ಕೂಡಾ ಅತ್ಯಂತ ಕಡಿಮೆಯಾಗಿದೆ ಎಂದಿದ್ದಾರೆ.

ಪ್ರಸ್ತುತ ಕಾರು ಈಗಾಗಲೇ 20,000 ಕೀ.ಮೀ. ಯಾತ್ರೆಯನ್ನು ಪೂರ್ಣಗೊಳಿಸಿದ್ದು, ಎಂಜಿನ್ ಗೆ ಸಂಬಂಧಪಟ್ಟ ಸಣ್ಣ ಪುಟ್ಟ ಕೆಲಸಗಳನ್ನು ಬಿಟ್ಟರೆ ಬೇರೆ ಯಾವುದೇ ಹೆಚ್ಚುವರಿ ನಿರ್ವಹಣಾ ಖರ್ಚು ಎದುರಾಗಿಲ್ಲ ಎಂದು ಮೊಹಿಂದರ್ ತಿಳಿಸುತ್ತಾರೆ.

ಕಾರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಕೆಲವೊಂದು ಬಾರಿ ಮಳೆಯಲ್ಲೂ ನೆನೆದು ಬಂದಿದೆ. ಇನ್ನು ಆಕರ್ಷಣೆ ಕಾಪಾಡಲು ಆಗೊಮ್ಮೆ ಹೀಗೊಮ್ಮೆ ಪಾಲಿಶ್ ಮಾಡುತ್ತಿರುತ್ತೇವೆ ಎಂದಿದ್ದಾರೆ.

ಮಗನ ಈ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿರುವ ತಾಯಿ ಜಸ್ವಿಂದರ್ ಕೌರ್ ಕೂಡಾ ಈಗಾಗಲೇ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಪುತ್ರನಿಗೆ ಜೀವನದಲ್ಲಿ ಎಲ್ಲ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ನಾನು ಯಾವತ್ತೂ ಓರ್ವ ಕಾರು ಉತ್ಸಾಹಿಯಾಗಿದ್ದು, ಸದಾ ಹೊಸತನವನ್ನು ಬಯಸುತ್ತೇನೆ. ಇನ್ನು ಮುಂದೆಯೂ ಇನ್ನು ಹೆಚ್ಚಿನ ವಿಂಟೇಜ್ ಕಾರುಗಳನ್ನು ವಿನ್ಯಾಸ ಮಾಡಲಿದ್ದೇನೆ ಎಂದು ಅಮನ್ ದೀಪ್ ತಮ್ಮ ಜೀವನಾಭಿಲಾಷೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.

ವಿಂಟೇಜ್ ಹಾಗೂ ಆಧುನಿಕ ನೋಟದ ಮಿಶ್ರಣ ನನ್ನ ಗುರಿಯಾಗಿದೆ. ಮರದಿಂದಲೇ ಇನ್ನು ಹೆಚ್ಚಿನ ಕಾರುಗಳನ್ನು ಕೆತ್ತನೆ ಮಾಡಲಿದ್ದು, ಭವಿಷ್ಯದಲ್ಲಿ ನೀವಿದನ್ನು ನೋಡುವಿರಿ ಎಂದಿದ್ದಾರೆ.
ಬಡಗಿ ಮರದ ಹಲಗೆಯಲ್ಲಿ ಮಾಡಿದ ವಿಶಿಷ್ಟ ಕಾರು- ವೀಡಿಯೋ ವೀಕ್ಷಿಸಿ


Click it and Unblock the Notifications








