ಕೊನೆಗೂ ಕನ್ಫರ್ಮ್ ಆಯ್ತು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
ಇತ್ತೀಚೆಗಷ್ಟೇ ಹೊರಬಿದ್ದಿರುವ ಘೋಷಣೆಯೊಂದು ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡು ಜನತೆಗೆ ಸಂತಸ ತಂದಿದೆ. ಹೌದು, ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ವಂದೇ ಭಾರತ್ ರೈಲು ವೇಗವಾಗಿ ಓಡಲಿದೆ ಎಂದು ವರದಿಯಾಗಿದೆ.

ಇಲ್ಲಿಯವರೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಎಲ್ಲಿಯೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕಾರ್ಯನಿರ್ವಹಿಸಲಿಲ್ಲ. ಬದಲಾಗಿ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಭಾರತದ ವಿವಿಧ ಭಾಗಗಳಲ್ಲಿ ಕಾರ್ಯಾಚರಿಸುತ್ತಿವೆ. ಪ್ರಸ್ತುತ ವರದಿಗಳ ಪ್ರಕಾರ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಮೈಸೂರು ಮತ್ತು ಚೆನ್ನೈ ನಡುವೆ ಸಂಚರಿಸಲಿದೆ.

ಚೆನ್ನೈನಿಂದ ಹೊರಡುವ ಈ ರೈಲು ರಾಜ್ಯ ರಾಜಧಾನಿ ಬೆಂಗಳೂರಿನ ಮೂಲಕ ಮೈಸೂರಿಗೆ ಹೋಗಲಿದೆಯಂತೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಈ ವಂದೇ ಭಾರತ್ ರೈಲು ನವೆಂಬರ್ 10 ರಿಂದ ಕಾರ್ಯಾಚರಣೆಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ. ಆದರೆ ಇದು ಭಾರತದ 5ನೇ ವಂದೇ ಭಾರತ್ ಎಕ್ಸ್ ಪ್ರೆಸ್ ಎಂಬುದು ಗಮನಾರ್ಹ. ಈ 5ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ನಿರೀಕ್ಷೆಯಿದೆ. ಹೇಗೋ ವಂದೇ ಭಾರತ್ ಎಕ್ಸ್ ಪ್ರೆಸ್ ದಕ್ಷಿಣ ಭಾರತ ತಲುಪಿ ಜನರ ಹುಬ್ಬೇರುವಂತೆ ಮಾಡಿದೆ.

ಇದೀಗ ವಂದೇ ಭಾರತ್ ಎಕ್ಸ್ ಪ್ರೆಸ್ ಅನ್ನು ಮೇಲ್ದರ್ಜೆಗೇರಿಸಿರುವುದು ಗಮನಾರ್ಹ. ಇದನ್ನು ವಂದೇ ಭಾರತ್ 2.0 ಎಂದು ಕರೆಯಲಾಗುತ್ತದೆ. ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಕೇವಲ 52 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು. ಅದೇ ಸಮಯದಲ್ಲಿ, ಈ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿಲೋಮೀಟರ್ ಆಗಿದೆ.

ಹಾಗಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಸಮಯವನ್ನು ಉಳಿಸುವುದರ ಜೊತೆಗೆ, ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸುವಂತಹ ಅನುಭವವನ್ನು ಸಹ ನೀಡುತ್ತದೆ. ಅಲ್ಲದೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳು ಮತ್ತು ಸುರಕ್ಷತಾ ಸೌಲಭ್ಯಗಳನ್ನು ಹೊಂದಿವೆ.

ಹಿಂದಿನ ಆವೃತ್ತಿಗೆ ಹೋಲಿಸಿದರೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ತೂಕವನ್ನು ಕಡಿಮೆ ಮಾಡಲಾಗಿದೆ ಎಂಬುದೂ ಇಲ್ಲಿ ಗಮನಾರ್ಹವಾಗಿದೆ. ಹಿಂದಿನ ಆವೃತ್ತಿಯು 430 ಟನ್ಗಳಷ್ಟಿತ್ತು. ಆದರೆ ನವೀಕರಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ಕೇವಲ 392 ಟನ್ ತೂಕ ಹೊಂದಿದೆ. ಮುಂಬರುವ ದಿನಗಳಲ್ಲಿ ನಾವು ಭಾರತದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ನೋಡಬಹುದು.

ಅಪಘಾತವಾಗಿ ಟೀಕೆಗೆ ಗುರಿಯಾಗಿದ್ದ ವಂದೇ ಭಾರತ್
ಈ ಹಿಂದೆ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮುಂಭಾಗವು ಅಹಮದಾಬಾದ್ ಬಳಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಹಾನಿಯಾಗಿತ್ತು. ಆ ಸಮಯದಲ್ಲಿ ರೈಲು ಗಾಂಧಿನಗರಕ್ಕೆ ಹೊರಟಿತ್ತು. ಘಟನೆಯು ಅಹಮದಾಬಾದ್ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಸಂಭವಿಸಿತ್ತು.

ಡ್ಯಾಮೇಜ್ ಆದ ಮುಂಭಾಗದ ಕೋನ್ ಅನ್ನು ಮುಂಬೈನ ಕೋಚ್ ಕೇರ್ ಸೆಂಟರ್ನಲ್ಲಿ ಬದಲಾಯಿಸಲಾಗಿತ್ತು. ನಿರ್ವಹಣೆಯ ಸಮಯದಲ್ಲಿ ಮುಂಬೈ ಸೆಂಟ್ರಲ್ ಡಿಪೋದಲ್ಲಿ ಹಾನಿಗೊಳಗಾದ ನೋಸ್ ಕೋನ್ ಅನ್ನು ಹೊಸದಕ್ಕೆ ಬದಲಾಯಿಸಿ ಯಾವುದೇ ಹೆಚ್ಚುವರಿ ಅಳವಡಿಕೆಯಿಲ್ಲದೇ ರೈಲನ್ನು ಮತ್ತೆ ಸೇವೆಗೆ ತರಲಾಗಿತ್ತು.

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪಶ್ಚಿಮ ರೈಲ್ವೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಇಲಾಖೆ ತಿಳಿಸಿತ್ತು. ಆದರೆ ಇದಾದ ಮರುದಿನವೇ ಮತ್ತೊಂದು ಹಸುವಿಗೆ ಡಿಕ್ಕಿಯಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರೀ ಟೀಕೆಗೆ ಗುರಿಯಾಗಿತ್ತು. ಗುಜರಾತ್ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗದ ಫಲಕಕ್ಕೆ ಸಣ್ಣ ಹಾನಿಯಾಗಿತ್ತು.

ಇಂತಹ ಸಂದರ್ಭಗಳನ್ನು ತಪ್ಪಿಸಲು ಗಾಂಧಿನಗರ-ಅಹಮದಾಬಾದ್ ಪ್ರದೇಶದಲ್ಲಿ ಫೆನ್ಸಿಂಗ್ ರಚಿಸುವುದಾಗಿ ರೈಲ್ವೇಸ್ ಠಾಕೂರ್ ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳ ಕುರಿತು ಹೇಳಿದ್ದರು. ಮಾರ್ಚ್, 2024 ರ ವೇಳೆಗೆ 160 ಕಿ.ಮೀ ವೇಗವನ್ನು ಖಾತರಿಪಡಿಸುವ ಬೇಲಿ ಕಾರ್ಯವನ್ನು ಮಾಡುವುದಾಗಿಯೂ ಹೇಳಿದ್ದಾರೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಪ್ರಸ್ತುತ ಭಾರತದಾದ್ಯಂತ ಸದ್ದು ಮಾಡುತ್ತಿವೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಶ್ಲಾಘಿಸುವವರು ಕೆಲವರಿದ್ದರೆ, ಅದರ ಕೆಲವು ನ್ಯೂನತೆಗಳನ್ನು ಎತ್ತಿ ತೋರಿಸುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇಂತಹ ಹಲವಾರು ವಿಷಯಗಳ ನಡುವೆ, ದಕ್ಷಿಣ ಭಾರತದ ಜನರಿಗೆ ದೊಡ್ಡ ಕನಸಾಗಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಈಗ ಸೇವೆಗೆ ಸಜ್ಜಾಗಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ನಲ್ಲಿ ತಿಳಿಸಿ.


Click it and Unblock the Notifications








