ವೈಕುಂಠ ಏಕಾದಶಿಯಂದು ಕೃಷ್ಣಯ್ಯ ಶೆಟ್ಟಿ ಹಿಟ್ ಆಂಡ್ ರನ್

ರಾಜ್ಯದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಕಾರು(ಕೆಎ-01. ಎಂಎಫ್-3973) ಉಪ್ಪಾರಪೇಟೆಯ ಶೇಷಾದ್ರಿ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ವಕೀಲರ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆದರೆ ಹಿಟ್ ಆಂಡ್ ರನ್ ತಂತ್ರ ಅನುಸರಿಸಿದ ಕೃಷ್ಣಯ್ಯ ಶೆಟ್ಟಿ ಕಾರು ಚಾಲಕ ದೇವರಾಜು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಗಳು ಹೇಳಿವೆ.
ಮಾಜಿ ಸಚಿವರ ಕಾರು ಡಿಕ್ಕಿ ಹೊಡೆದಾಗ ಬೈಕ್ ಸವಾರ ಜಗದೀಶ್ ನೆಲಕ್ಕೆ ಬಿದ್ದಿದ್ದರು. ಅವರ ಎಡಗೈ ಎಲುಬು ಮುರಿದಿತ್ತು. ಆದರೆ ಗಾಯಗೊಂಡ ವ್ಯಕ್ತಿಗೆ ಕೃಷ್ಣಯ್ಯ ಶೆಟ್ಟಿ ಯಾವುದೇ ಮಾನವೀಯತೆ ತೋರಿಸಲಿಲ್ಲ. ಬದಲಿಗೆ ಕಾರು ಚಾಲಕ ದೇವರಾಜು ಹಿಟ್ ಆಂಡ್ ರನ್ ತಂತ್ರ ಅನುಸರಿಸಿದ್ದರು.
ಗಾಯಗೊಂಡ ಜಗದೀಶನನ್ನು ತಕ್ಷಣ ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ಕುರಿತು ದೂರು ದಾಖಲಿಸದಂತೆ ಮತ್ತು ಚಿಕಿತ್ಸೆ ವೆಚ್ಚ ಭರಿಸುವುದಾಗಿ ಕೃಷ್ಣಯ್ಯ ಶೆಟ್ಟಿ ಪಿಎ ಸುರೇಶ್ ತಿಳಿಸಿದ್ದರಂತೆ. ಕೃಷ್ಣಯ್ಯ ಶೆಟ್ಟಿ ಅಳಿಯ ಹರ್ಷವರ್ಧನ ಕೂಡ ಜಗದೀಶನನ್ನು ಭೇಟಿಯಾಗಿದ್ದರು. ಹಿಟ್ ಆಂಡ್ ರನ್ ದೂರಿಗೆ ಬದಲಾಗಿ ಸ್ವಯಂ ಆಕಸ್ಮಿಕ ಅಪಘಾತ ದೂರು ದಾಖಲಿಸುವಂತೆ ಸೂಚಿಸಿದ್ದರು ಎಂದು ವರದಿಗಳು ಹೇಳಿವೆ.
ಕೊನೆಗೂ ಕೃಷ್ಣಯ್ಯ ಶೆಟ್ಟಿ ಕಾರಿನಲ್ಲಿ ತಾವಿರಲಿಲ್ಲ ಎಂದು ವಾದಿಸಿದ್ದಾರೆ. ಜಗದೀಶ್ ಗೆ 40 ಸಾವಿರ ರು. ಪರಿಹಾರ ನೀಡಿದ್ದು ಉಳಿದ ಹಣವನ್ನು ಶೀಘ್ರದಲ್ಲಿ ನೀಡುವುದಾಗಿ ಹೇಳಿದರಂತೆ. ಮಾಜಿ ಸಚಿವರೊಬ್ಬರು ಕನಿಷ್ಠ ಕರುಣೆ, ಅನುಕಂಪವಿಲ್ಲದೇ ವರ್ತಿಸಿದ್ದು ಮಾತ್ರ ಯಾರಿಗೂ ಇಷ್ಟವಾಗುವಂತ್ತಿಲ್ಲ.
ಸಂಚಾರಿ ನೀತಿ ನಿಯಮಗಳನ್ನು ಪಾಲಿಸಿ ಎಂದು ಹೇಳುವ ಸರಕಾರ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಸುರಕ್ಷಿತ ಪ್ರಯಾಣ ಎಲ್ಲರ ಆದ್ಯತೆಯಾಗಬೇಕು.(ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








