ರಾಜ್ಯ ಸರ್ಕಾರದಿಂದ ಹೊಸ ಕಾನೂನು- ವಾಹನಗಳ ಖರೀದಿ ಇನ್ಮುಂದೆ ಅಷ್ಟು ಸುಲಭವಲ್ಲ..!
ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ಹೀಗಿರುವಾಗ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಸರ್ಕಾರವು ಸದ್ಯದಲ್ಲೇ ಕೆಲವು ಕಠಿಣ ಸಾರಿಗೆ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೊನ್ನೆಯಷ್ಟೇ ಖಡಕ್ ವಾರ್ನ್ ಮಾಡಿದ್ದ ಸುಪ್ರೀಂಕೋರ್ಟ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಳೆಯ ಕಾರುಗಳನ್ನು ಬ್ಯಾನ್ ಮಾಡುವಂತೆ ಆದೇಶ ನೀಡಿತ್ತು.

ಹೀಗಾಗಿ, ರಾಷ್ಟ್ರ ರಾಜಧಾನಿ ದಿಲ್ಲಿಯ ಪರಿಸ್ಥಿತಿ ಬೆಂಗಳೂರಿಗೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಸಂಬಂಧ ರಾಜ್ಯ ಸರ್ಕಾರವು ಚಿಂತನೆ ನಡೆಸಿದ್ದು, ಹೊಸ ಕಾಯ್ದೆ ಅನುಷ್ಠಾನದಿಂದ ಆಗಬಹುದಾದ ಸಾಧಕ-ಭಾದಕಗಳ ಕುರಿತಾಗಿ ಪರಿಶೀಲನೆ ನಡೆಸುತ್ತಿದೆ.

ಹೊಸ ವಾಹನಗಳ ನೋಂದಣಿಯನ್ನು 2 ವರ್ಷಗಳ ಕಾಲ ನಿಷೇಧ ಮಾಡುವ ಕುರಿತು ಸುಳಿವು ನೀಡಿದ್ದ ರಾಜ್ಯ ಸರ್ಕಾರವು ಇದೀಗ ಆ ಕಾಯ್ದೆ ಅನುಷ್ಠಾನ ಬೇಡವೆಂದು ಹಿಂದೆ ಸರಿದಿದ್ದು, ಅದರ ಬದಲಾಗಿ ಪಾರ್ಕಿಂಗ್ ಸ್ಥಳ ಇಲ್ಲದೆ ಖರೀದಿ ಮಾಡುವ ವಾಹನಗಳ ನೋಂದಣಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಈ ಬಗ್ಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರೇ ಮಾತನಾಡಿದ್ದು, ವಿಧಾನಸಭೆಯಲ್ಲಿ ನಡೆದ ಸಾರಿಗೆ ಅಧಿನಿಯಮ 69ರ ಕಾಯ್ದೆ ಮೇಲೆ ನಡೆದ ಚರ್ಚೆಯಲ್ಲಿನ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಲಿನ್ಯ ತಡೆಯಲು ಮುಂದಿನ ದಿನಗಳಲ್ಲಿ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ಮಾಡುತ್ತಿರುವುದಾಗಿ ತಿಳಿಸಿದರು.

ಆದ್ರೆ ವಾಹನ ನೋಂದಣಿ ನಿಷೇಧದ ಬಗ್ಗೆ ಸ್ಪಷ್ಟಪಡಿಸಿದ ಸಚಿವರು, ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿ ನಿಷೇಧ ಅಸಾಧ್ಯ. ಯಾಕೆಂದ್ರೆ ಆಟೋ ರಿಕ್ಷಾಗಳ ನೋಂದಣಿಗೆ ಈ ಹಿಂದೆ ನಿಷೇಧ ಹೇರಿದಾಗ ಆಟೋ ಚಾಲಕರು ಹೈಕೋರ್ಟ್ನಲ್ಲಿ ಪ್ರಶ್ನಿಸಿ ಇದಕ್ಕೆ ತಡೆಯಾಜ್ಞೆ ತಂದಿದ್ದರು' ಎಂದರು.

ಅದರ ಬದಲಾಗಿ ವಾಹನ ನೋಂದಣಿಯನ್ನು ತಗ್ಗಿಸಲು ಸಾಧ್ಯವಿರುವ ಹೊಸ ಕಾಯ್ದೆಗಳನ್ನು ಜಾರಿ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆದಿದ್ದು, ಬೆಂಗಳೂರಿನ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲದೆ ಖರೀದಿ ಮಾಡುವ ಹೊಸ ವಾಹನಗಳ ನೋಂದಣಿಯನ್ನು ತಡೆಯಬಹುದು ಎಂದಿದ್ದಾರೆ.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಈಗಾಗಲೇ 1 ಕೋಟಿಗೆ ಸನಿಹದಲ್ಲಿದ್ದು, ನಿತ್ಯ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಇದರಿಂದ ಸಾರಿಗೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜೊತೆ ಕಳೆದ ತಿಂಗಳಷ್ಟೇ ಚರ್ಚೆನಡೆಸಿದ್ದ ಡಿಸಿಎಂ ಪರಮೇಶ್ವರ್ ಅವರು ಹೊಸ ವಾಹನಗಳ ನೋಂದಣಿಗೆ ಬ್ರೇಕ್ ಹಾಕುವ ಬಗ್ಗೆ ಸುಳಿವು ನೀಡಿದ್ದರು.

ಒಂದು ವೇಳೆ ಹೊಸ ವಾಹನ ನೋಂದಣಿಯನ್ನು ಏಕಾಏಕಿ ಬಂದ್ ಮಾಡುವುದರಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವದನ್ನು ಅರಿತಿರುವ ರಾಜ್ಯ ಸರ್ಕಾರವು, ನಿಷೇಧದ ಬದಲಾಗಿ ನೋಂದಣಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ.
MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

1 ಕೋಟಿಗೆ ತಲುಪಿದ ವಾಹನಗಳ ಸಂಖ್ಯೆ..!
ಸದ್ಯ ಬೆಂಗಳೂರಿನಲ್ಲಿ 70 ಲಕ್ಷಕ್ಕೂ ಹೆಚ್ಚು ನೋಂದಣಿ ಪಡೆದ ವಾಹನಗಳಿದ್ದು, ಹೊರಗಿನಿಂದ ಬಂದು ಹೋಗುವ ವಾಹನಗಳ ಸಂಖ್ಯೆಯು ಲೆಕ್ಕಕ್ಕಿಲ್ಲ. ಜೊತೆಗೆ ಪ್ರತಿ ದಿನ ಬೆಂಗಳೂರಿನಲ್ಲಿ 2500ಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿ ಪಡೆದುಕೊಳ್ಳುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ 2020ಕ್ಕೆ ಒಂದು ಕೋಟಿ ತಲುಪಲಿದೆಯೆಂತೆ.

ಕಳೆದ ತಿಂಗಳ ಹಿಂದಷ್ಟೇ 32 ಸಾವಿರ ಹಳೆಯ ವಾಹನಗಳ ಹೊಗೆ ತಪಾಸಣೆ ಮಾಡಿದ್ದ ರಾಜ್ಯ ಮಾಲಿನ್ಯ ನಿಯಂತ್ರಣವು, 14% ರಷ್ಟು ಪೆಟ್ರೋಲ್ ವಾಹನಗಳು ಹಾಗೂ 25% ರಷ್ಟು ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿತ್ತು.

ಮುಂದುವರಿದು, ಬೆಂಗಳೂರು ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ರಿಂಗ್ ರಸ್ತೆಗಳತ್ತ ಡೈವರ್ಟ್ ಮಾಡಬೇಕು ಎಂದು ಮನವಿ ಮಾಡಿದ್ದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು, ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂಬ ಸಲಹೆ ನೀಡಿತ್ತು.
MOST READ: ಜನಸಾಮಾನ್ಯರ ಮೇಲೆ ಕೇಸ್ ಜಡಿಯುವ ಪೊಲೀಸರಿಗೆ ಡಿಸಿಎಂ ಪುತ್ರಿಯ ದರ್ಬಾರ್ ಯಾಕೆ ಕಾಣಿಸ್ತಾ ಇಲ್ಲ?

ಅದ್ರೆ ಈ ಬಗ್ಗೆ ಮೊದಮೊದಲ ಅಸಡ್ಡೆ ಮಾಡಿದ್ದ ರಾಜ್ಯ ಸರ್ಕಾರವು ಇದೀಗ ಎಚ್ಚೆತ್ತಿಕೊಂಡಿದ್ದು, ಹೊಸ ವಾಹನ ಖರೀದಿದಾರರನ್ನು ಸಾರ್ವಜನಿಕ ಸಾರಿಗೆ ಬಳಸುವಂತೆ ಉತ್ತೇಜಿಸಲು ಅಧಿಕ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಕುರಿತಂತೆ ನಿರ್ಣಯವನ್ನು ಸಹ ಕೈಗೊಂಡಿದೆ.

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಸರಿಯಾಗಿ ದುರಸ್ತಿ ಮಾಡದ ಹಳೆಯ ಬಿಎಂಟಿಸಿ ಬಸ್ಗಳೇ ಅತಿ ಹೆಚ್ಚು ಮಾಲಿನ್ಯ ಉತ್ಪತ್ತಿ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಖಾಸಗಿ ವಾಹನ ಬಳಕೆದಾರರು ಹೊಸ ವಾಹನ ಖರೀದಿ ಮೇಲೆ ನಿಯಂತ್ರಣ ಹೇರುವುದು ಎಷ್ಟು ಸರಿ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.

ಒಟ್ಟಿನಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಕ್ರಮಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು ಸದ್ಯದಲ್ಲೇ ಹೊಸ ವಾಹನ ನೋಂದಣಿಗೆ ಕೆಲವು ಕಠಿಣ ನಿಯಮಗಳನ್ನು ಜಾರಿತರುವುದಲ್ಲದೇ ವಾಹನಗಳ ವಿಮೆ, ಪಾರ್ಕಿಂಗ್ ಶುಲ್ಕಗಳನ್ನು ಸಹ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ.


Click it and Unblock the Notifications








