ಡೈರಿ: ಬದುಕೆಂಬ ಮೊಬೈಲ್ ಡಿಸ್ಕನೆಕ್ಟ್ ಆಗದಿರಲಿ
ನನ್ನ ಓರಗೆಯ ವ್ಯಕ್ತಿಯೊಬ್ಬರು ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡ ಘಟನೆ ನನ್ನನ್ನು ವಿಹ್ವಲಗೊಳಿಸಿದೆ. ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡಿದ್ರೆ ಪ್ರಾಣವಾದರೂ ಉಳಿಯಬಹುದಿತ್ತೇನೋ. ಆ ಹುಡುಗ ಅಪಘಾತವಾಗುವ ಸಂದರ್ಭದಲ್ಲಿ ಫೋನಿನಲ್ಲೂ ಮಾತನಾಡುತ್ತಿದ್ದ. ಆ ಎರಡು ತಪ್ಪುಗಳಿಗೆ ತನ್ನ ಪ್ರಾಣವನ್ನೇ ತೆತ್ತಿದ್ದ.
ಪ್ರತಿದಿನ ಪತ್ರಿಕೆಗಳಲ್ಲಿ ಅಪಘಾತದ ಸುದ್ದಿಗಳು ಇದ್ದೇ ಇರುತ್ತವೆ. ಅದರಲ್ಲೂ ದ್ವಿಚಕ್ರವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವರೇ ಹೆಚ್ಚು. ಸಂಚಾರಿ ನಿಯಮಗಳನ್ನು ಪಾಲಿಸದೆ ಇರುವುದು ಮತ್ತು ಸುರಕ್ಷತೆಯ ಸಾಧನಗಳನ್ನು ಬಳಸದೆ ಇರುವುದು ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಜನರ ಪ್ರಾಣ ಕಬಲಿಸುತ್ತಿದೆ.
ದ್ವಿಚಕ್ರ ವಾಹನ ಸವಾರಿ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಕೂಡ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ. ಬೈಕ್ ರೈಡ್ ಮಾಡುತ್ತ ಫೋನಿನಲ್ಲಿ ಕರೆ ಮಾಡಿ ಎಲ್ಲೋ ಮಾತಿನಲ್ಲಿ ಕಳೆದುಹೋಗುತ್ತಾರೆ. ಇಂತಹ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿ, ಅಥವಾ ಇನ್ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ.
ಬೆಂಗಳೂರಿನಂತಹ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಟೈಂ ಪಾಸ್ ಮಾಡಲು ಕೆಲವರು ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುತ್ತ ರಸ್ತೆ ದಾಟುವ ಜನರಿಗೆ ಅಥವಾ ಬೇರೆ ವಾಹನಗಳಿಗೆ ಅಪಘಾತ ಮಾಡುತ್ತಾರೆ. ಅಂಕಿಅಂಶಗಳ ಪ್ರಕಾರ ದ್ವಿಚಕ್ರವಾಹನ ಅಪಘಾತಗಳಲ್ಲಿ ಶೇಕಡ 80ರಷ್ಟು ಜನರು ಪ್ರಾಣ ಕಳೆದುಕೊಳ್ಳಲು ಹೆಲ್ಮೆಟ್ ಧರಿಸದೆ ಇರುವುದೇ ಪ್ರಮುಖ ಕಾರಣವಾಗಿದೆ.
ಹಲವು ಸಂಘ ಸಂಸ್ಥೆಗಳು ಸಂಚಾರಿ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಕುರಿತು ಹಲವು ಜಾಥಗಳು, ವಿಚಾರಗೋಷ್ಠಿಗಳು ಹೆಚ್ಚಾಗಬೇಕಿದೆ. ಫೇಸ್ ಬುಕ್ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲೂ ಸಂಚಾರಿ ನೀತಿನಿಯಮಗಳ ಕುರಿತು ಎಚ್ಚರ ಮೂಡಿಸುವ ಪ್ರಕ್ರಿಯೆ ಹೆಚ್ಚಾಗಬೇಕಿದೆ.
ಈಗ ಹೆಲ್ಮೆಟ್ ಧರಿಸದೇ ಇರುವುದಕ್ಕೆ ನೂರು ರುಪಾಯಿ ದಂಡವಿದೆ. ಇದು ತೀರಾ ಕಡಿಮೆ ಎನ್ನುವುದು ನನ್ನ ಅಭಿಪ್ರಾಯ. ಹೆಲ್ಮೆಟ್ ಧರಿಸದೆ ಇರುವುದು ಅಥವಾ ಮೊಬೈಲ್ ಫೋನ್ ಬಳಕೆ ಮಾಡುವುದು ಸಂಚಾರಿ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಹೆಚ್ಚಿನವರು ಟ್ರಾಫಿಕ್ ಪೊಲೀಸರನ್ನು ಕಂಡಾಕ್ಷಣ ಮಾತ್ರ ಹೆಲ್ಮೆಟ್ ಧರಿಸುತ್ತಾರೆ. ಸ್ವಯಂಪ್ರೇರಿತವಾಗಿ ಹೆಲ್ಮೆಟ್ ಧರಿಸುವ ಮನೋಭಾವ ಬರಬೇಕಿದೆ.
ನೀವು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ನಿಮ್ಮನ್ನು ನಂಬಿರುವರು ಅನಾಥರಾಗುತ್ತಾರೆ. ನಿಮ್ಮ ಮೇಲೆ ಕನಸುಗಳನ್ನು ಇಟ್ಟುಕೊಂಡವರ ಬದುಕು ಕಮರಿ ಹೋಗಬಹುದು. ಅಮೂಲ್ಯ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ. ಡ್ರೈವಿಂಗ್ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡದಿರಿ.
ನಿಮ್ಮ ಬದುಕೆಂಬ ಫೋನ್ ಸ್ವಿಚ್ ಆಫ್ ಆಗದಿರಲಿ.
ಓದಿ: ಆಟೋ ಅಡ್ಡೆಯಲ್ಲಿ ಕುಳಿತ ಪಡ್ಡೆ ವೇಗಿಯ ಬ್ರಿಲಿಯಂಟ್ ಐಡಿಯಾಸ್


Click it and Unblock the Notifications









