ಬೆಂಗಳೂರು ನಗರ ಮಧ್ಯೆ ದೈತ್ಯ ಅನಕೊಂಡ; ಬೆಚ್ಚಿಬಿದ್ದ ಜನ!
ಬಿಡುವಿಲ್ಲದ ವೇಳೆ, ಸಾರ್ವಜನಿಕರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನವಾಗಿದ್ದರು. ಸ್ವಲ್ಪ ಹೊತ್ತಿನಲ್ಲೇ ಎಲ್ಲರಲ್ಲೂ ಗಾಬರಿ ಆವರಿಸಿತ್ತು. ನೋಡ ನೋಡುತ್ತಲೇ ವಿಷಯ ನಗರದೆಲ್ಲೆಡೆ ಮಿಂಚಿನ ವೇಗದಲ್ಲಿ ಪಸರಿಸಿತೊಡಗಿತ್ತು.
ನೆರೆದಿದ್ದ ಎಲ್ಲರಲ್ಲೂ ವಿಷಯ ಏನೆಂಬುದು ತಿಳಿದುಕೊಳ್ಳುವ ಹಂಬಲ. ಆದರೆ ಹತ್ತಿರ ಹೋಗುವ ಧೈರ್ಯ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಅದು ಅಂತಿಂಥ ಹಾವಲ್ಲ. ದಕ್ಷಿಣ ಅಮೆರಿಕಾ ಹಾಗೂ ಆಫ್ರಿಕಾದ ದಟ್ಟಾರಣ್ಯದಲ್ಲಿ ಮಾತ್ರ ಕಾಣ ಸಿಗುವ ಪ್ರಪಂಚದ ಅತಿ ದೊಡ್ಡ ಹಾವು 'ಅನಕೊಂಡ'.

ಆಗಲೇ ಓರ್ವ ವ್ಯಕ್ತಿಯನ್ನು ಅನಕೊಂಡ ನುಂಗಿಯಾಗಿತ್ತು. ರಕ್ತಸಿಕ್ತವಾದ ಆತನ ಕೈಗಳೂ ಅನಾಕೊಂಡ ಬಾಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇವೆಲ್ಲವೂ ಬೆಂಗ್ಳೂರಿಗರನ್ನು ಬೆಚ್ಚಿ ಬೀಳಿಸಿದ ಕ್ಷಣಗಳು.
ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್

ವಿಷಯ ಏನೆಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲೂ ಕಾಡುತ್ತಿತ್ತು. ವಿಷಯದ ಗಂಭೀರತೆಯ ಬಗ್ಗೆ ಆಳವಾಗಿ ಚರ್ಚಿಸಿದಾಗ ರಸ್ತೆ ಮಧ್ಯೆಗಳ ನಡುವೆ ಸೃಷ್ಟಿಯಾಗಿರುವ ದೊಡ್ಡ ಗುಂಡಿಗಳನ್ನು ಲೆಕ್ಕಿಸದೇ ಚಿರನಿದ್ರೆಗೆ ಜಾರಿರುವ ಆಡಳಿತ ವರ್ಗವನ್ನು ಎಚ್ಚರಿಸುವ ಕೆಲಸ ಇದಾಗಿತ್ತು ಎಂಬುದು ತಿಳಿದು ಬಂದಿತ್ತು.
ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್

ನಮ್ಮ ಬೆಂಗಳೂರು ಫೌಂಡೇಷನ್ (ಎನ್ಬಿಎಫ್) ಕಾರ್ಯಕರ್ತರು ಯಶವಂತಪುರದಲ್ಲಿ ಈ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಪ್ರಸ್ತುತ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.
ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್

ಎರಡು ತಿಂಗಳುಗಳ ಹಿಂದೆಯಷ್ಟೇ ಇದಕ್ಕೆ ಸಮಾನವಾದ ಘಟನೆಯಲ್ಲಿ ನಗರ ಮಧ್ಯೆ ಮೊಸಳೆ ಎದ್ದು ಕಾಣಿಸಿತ್ತು. ಅಂದು ಮೈಸೂರು ಕಲಾವಿದ ಬಾದಲ್ ನಂಜುಂಡಸ್ವಾಮಿ ಸುಲ್ತಾನ್ ಪಾಳ್ಯ ಮುಖ್ಯ ರಸ್ತೆಯ ಮಧ್ಯೆ ಉಂಟಾದ ದೊಡ್ಡ ಗುಂಡಿಯೊಳಗೆ 12 ಅಡಿ ಉದ್ದದ ಕೃತಕ ಮೊಸಳೆಯನ್ನು ತಂದು ಮೌನ ಪ್ರತಿಭಟನೆ ನಡೆಸಿದ್ದರು.

ಒಟ್ಟಿನಲ್ಲಿ ಈಗಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸಂಬಂಧ ಸಾರ್ವಜನಿಕರಿಂದಲೂ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ.
ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್


Click it and Unblock the Notifications








