ವಿನಾ ಕಾರಣ ವಾಹನಗಳನ್ನು ನಿಲ್ಲಿಸದಂತೆ ಸೂಚನೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತರು
ಡಿಸೆಂಬರ್ 18 ರಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ರವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು. ವರ್ಚುವಲ್ ಮೂಲಕ ನಡೆದ ಈ ಸಮಾಲೋಚನಾ ಸಭೆಯಲ್ಲಿ ಕಮಲ್ ಪಂತ್ ರವರು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ವಿನಾ ಕಾರಣ ನಿಲ್ಲಿಸಬಾರದು. ಈ ರೀತಿ ವಾಹನಗಳನ್ನು ನಿಲ್ಲಿಸುವುದರಿಂದ ಏನಾದರೂ ಅನಾಹುತಗಳಾಗಬಹುದು ಎಂದು ಹೇಳಿದರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಚಲಿಸುತ್ತಿರುವ ವಾಹನಗಳನ್ನು ನಿಲ್ಲಿಸುವುದು ಸರಿಯಲ್ಲ. ಬೆಂಗಳೂರು ನಗರದಲ್ಲಿ ಮುಂದೆ ಇಂತಹ ಘಟನೆಗಳು ನಡೆಯಬಾರದು. ಮುಂದೆ ಈ ರೀತಿ ಆಗದಂತೆ ತಡೆಯಲು ಡಿಸಿಪಿಗಳ ಜೊತೆ ಮಾತನಾಡುತ್ತೇನೆ. ಟ್ರಾಫಿಕ್ ನಿಂದ ಯಾರಿಗಾದರೂ ತೊಂದರೆಯಾದರೆ ಅವರು ಸಂಚಾರ ಪೊಲೀಸ್ ವಿಭಾಗದ (ಪೂರ್ವ) ಉಪ ಕಮಿಷನರ್ ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ವಿನಾಕಾರಣ ವಾಹನಗಳನ್ನು ತಡೆದು ಎಲ್ಲ ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಸಂಚಾರಿ ಪೊಲೀಸರಿಗೆ ಈ ಸೂಚನೆ ನೀಡಿದ್ದಾರೆ. ಇದರಿಂದ ವಾಹನ ಸವಾರರು ಹಲವು ನಿಮಿಷ ಕಾಯುವ ಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ 2 ವಾರಗಳಲ್ಲಿ ತಮ್ಮನ್ನು ಎರಡು ಬಾರಿ ಸಂಚಾರಿ ಪೊಲೀಸರು ತಡೆದಿದ್ದರು ಎಂದು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ದೂರು ನೀಡಿದ್ದರು.

ಅವರು ಆ ಸಮಯದಲ್ಲಿ ಟ್ರಾಫಿಕ್ ಪೊಲೀಸರೊಂದಿಗಿನ ತಮ್ಮ ಅನುಭವವನ್ನು ಹೇಳಿದ್ದಾರೆ. ಮೊದಲ ಘಟನೆಯಲ್ಲಿ, ನಾನು ಹೆಲ್ಮೆಟ್ ಧರಿಸಿದ್ದೇ ಆದರೂ ವಾಹನ ದಟ್ಟಣೆ ಹೆಚ್ಚಾಗಿರುವ ಆರ್ಟಿ ನಗರದ ಜಂಕ್ಷನ್ನಲ್ಲಿ ವಿನಾಕಾರಣ ನಿಲ್ಲಿಸಲಾಗಿತ್ತು. ಪೊಲೀಸರು ಕೇಳಿದ ಎಲ್ಲ ದಾಖಲೆಗಳನ್ನು ನೀಡಿದರೂ ಕಾನ್ ಸ್ಟೇಬಲ್ ಒಬ್ಬರು ನನ್ನ ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಂಡು ಕಾಯಲು ಹೇಳಿ ಹೊರಟು ಹೋದರು.

ನನ್ನ ಹೆಸರಿನಲ್ಲಿ ಯಾವುದೇ ದಂಡ ಬಾಕಿ ಉಳಿದಿಲ್ಲ. ವಿಮೆ, ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಇತರೆ ಎಲ್ಲ ದಾಖಲೆಗಳು ನನ್ನ ಬಳಿ ಇದ್ದವು. ಆದರೂ ವಿನಾಕಾರಣ ನನ್ನನ್ನು 15 ನಿಮಿಷ ಕಾಯಿಸಿದರು. ನನ್ನ ಡ್ರೈವಿಂಗ್ ಲೈಸೆನ್ಸ್ ವಾಪಸ್ ಪಡೆಯಲು ಅಧಿಕಾರಿಯೊಂದಿಗೆ ಮಾತನಾಡುವಂತೆ ಕಾನ್ಸ್ ಸ್ಟೆಬಲ್ ಹೇಳಿದರು. ಸಂಬಂಧಪಟ್ಟ ಅಧಿಕಾರಿಯೂ ನನಗೆ ಉತ್ತರ ನೀಡಿಲ್ಲ.

ಕೆಲ ಸಮಯದ ನಂತರ ಪೊಲೀಸ್ ಅಧಿಕಾರಿ ನನ್ನ ಕಡೆ ನೋಡಿ ಎಲ್ಲ ದಾಖಲೆಗಳು ನನ್ನ ಬಳಿ ಇದ್ದುದರಿಂದ ಹೊರಡುವಂತೆ ಹೇಳಿದರು. ನಂತರ ಅವರು ನನ್ನ ಚಾಲನಾ ಪರವಾನಗಿಯನ್ನು ಹಿಂದಿರುಗಿಸಿದರು. ಎರಡನೇ ಬಾರಿ ಪತ್ನಿ ಹಾಗೂ 2 ತಿಂಗಳ ಮಗುವಿನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಸಂಚಾರ ಪೊಲೀಸರು ತಡೆದಿದ್ದರು. ಆ ವೇಳೆ ಎಲ್ಲಾ ದಾಖಲೆಗಳು ಅವರ ಬಳಿ ಇದ್ದವು.

ಆದರೆ ಕಾರನ್ನು ನಿಲ್ಲಿಸಿದ ಸಂಚಾರಿ ಪೊಲೀಸರು ಅವರೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಕಾರಿನಲ್ಲಿದ್ದ ಎಳೆ ಮಗು ಅಳುತ್ತಿದ್ದ ಕಾರಣ ತಮ್ಮನ್ನು ಕಳುಹಿಸುವಂತೆ ಅವರು ಪರಿಪರಿಯಾಗಿ ಬೇಡಿಕೊಂಡರೂ ಅವರನ್ನು ಕಳುಹಿಸದೇ ಸತಾಯಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಬೆದರಿಸಿ ಅವರಿಂದ ತಪ್ಪೊಪ್ಪಿಗೆ ಪಡೆದಿದ್ದಾರೆ ಎಂದು ಆ ಸಾಫ್ಟ್ ವೇರ್ ಇಂಜಿನಿಯರ್ ದೂರು ನೀಡಿದ್ದಾರೆ.

ಪೊಲೀಸರು ದುಡ್ಡು ನಿರೀಕ್ಷಿಸುತ್ತಾರೆ ಎಂಬುದನ್ನು ಅರಿತಿದ್ದರೂ ಅವರು ಲಂಚ ನೀಡದೇ ಹಠ ಹಿಡಿದಿದ್ದಾರೆ. ಇದರಿಂದ ಅವರು ಮತ್ತೆ 20 - 30 ನಿಮಿಷಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಆ ನಂತರ ಪೊಲೀಸರು ಅವರಿಗೆ ಸ್ಥಳದಿಂದ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪೊಲೀಸರಿಗೆ ಈ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಅನ್ನು ಜಾರಿಗೆ ತಂದಿದೆ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಮಹಾರಾಷ್ಟ್ರದಲ್ಲಿ ನಡೆಯುವ ಸಂಚಾರ ಉಲ್ಲಂಘನೆಗೆ ಸಂಬಂಧಿಸಿದ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗಷ್ಟೇ ಅಧಿಸೂಚನೆಯನ್ನು ಹೊರಡಿಸಿದೆ.

ಅದರ ಪ್ರಕಾರ ಪರಿಷ್ಕೃತ ದಂಡದ ಮೊತ್ತವು ಡಿಸೆಂಬರ್ 1ರಿಂದ ಜಾರಿಗೆ ಬಂದಿದೆ. ಈ ಅಧಿಸೂಚನೆಯ ಪ್ರಕಾರ, ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದರಿಂದ ಹಿಡಿದು ರಸ್ತೆಯಲ್ಲಿ ಸಂಚಾರ ನಿರ್ಬಂಧಿಸುವವರೆಗಿನ ಅಪರಾಧಗಳಿಗೆ ಇನ್ನು ಮುಂದೆ ಹೆಚ್ಚು ದಂಡ ವಿಧಿಸಲಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಆಂಬ್ಯುಲೆನ್ಸ್ಗೆ ಅಡ್ಡಿಪಡಿಸಿದರೆ ರೂ. 10,000 ದಂಡ ವಿಧಿಸಲಾಗುತ್ತದೆ.

ಇನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 5,000 ದಂಡ ವಿಧಿಸಲಾಗುತ್ತದೆ. ಮತ್ತೊಂದೆಡೆ, ವಾಹನದ ವಿಮೆ ಇಲ್ಲದೇ ವಾಹನ ಚಾಲನೆ ಮಾಡಿದರೆ ನಂತರ ರೂ 2,000 ದಂಡ ವಿಧಿಸಲಾದರೆ, ವಾಹನಕ್ಕೆ ಯಾವುದೇ ಅನಧಿಕೃತ ಹಸ್ತಕ್ಷೇಪ ಕಂಡು ಬಂದರೆ ರೂ.1,000 ದಂಡ ವಿಧಿಸಲಾಗುತ್ತದೆ. ಇನ್ನು ರಸ್ತೆಗಳಲ್ಲಿ ರೇಸಿಂಗ್ ಮಾಡುವಾಗ ಸಿಕ್ಕಿಬಿದ್ದರೆ ಮೊದಲ ಬಾರಿ ರೂ. 5,000, ಎರಡನೇ ಬಾರಿ ರೂ. 10,000 ದಂಡ ವಿಧಿಸಲಾಗುತ್ತದೆ.

ಜೊತೆಗೆ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದು. ರಿಫ್ಲೆಕ್ಟರ್, ಟೇಲ್ ಲ್ಯಾಂಪ್ ಅಥವಾ ಟರ್ನ್ ಇಂಡಿಕೇಟರ್ಗಳಿಲ್ಲದೆ ವಾಹನ ಚಾಲನೆ ಮಾಡಿದರೆ ರೂ. 1,000 ದಂಡ ವಿಧಿಸಲಾಗುತ್ತದೆ. ವಾಹನದಲ್ಲಿ ನಂಬರ್ ಪ್ಲೇಟ್ ತಪ್ಪಾಗಿ ಅಳವಡಿಸಿದ್ದರೆ ರೂ. 1,000 ದಂಡ ವಿಧಿಸಲಾಗುತ್ತದೆ. ಮತ್ತೊಂದೆಡೆ ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವಾಗ ಸಿಕ್ಕಿಬಿದ್ದವರು ರೂ. 500 ದಂಡ ತೆರಬೇಕಾಗುತ್ತದೆ.

ಇವುಗಳ ಜೊತೆಗೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ರ ಅಡಿಯಲ್ಲಿ ಮೊದಲ ಅಪರಾಧಕ್ಕೆ ಕಾಂಪೌಂಡಿಂಗ್ ಶುಲ್ಕವನ್ನು ರೂ. 500 ಗಳಿಗೆ ಹೆಚ್ಚಿಸಲಾಗಿದೆ. ಎರಡನೇ ಹಾಗೂ ನಂತರದ ಅಪರಾಧಗಳಿಗೆ ರೂ. 1,500 ಸೇರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ಮೋಟಾರು ವಾಹನ ಇಲಾಖೆ, ಟ್ರಾಫಿಕ್ ಪೊಲೀಸ್, ಹೆದ್ದಾರಿ ಪೊಲೀಸ್, ನಗರ ಪೊಲೀಸ್ ಹಾಗೂ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳ ಶ್ರೇಣಿಯನ್ನು ಉಲ್ಲೇಖಿಸಿದೆ.

ಅವರು ಈ ಅಪರಾಧಗಳಿಗೆ ದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿದ್ದಾರೆ. ನಿರ್ದಿಷ್ಟ ಶ್ರೇಣಿಗಿಂತ ಮೇಲ್ಪಟ್ಟ ಅಧಿಕಾರಿಗಳು ಮಾತ್ರ ಸಂಚಾರ ನಿಯಮ ಪ್ರಕರಣಗಳಲ್ಲಿ ದಂಡ ವಿಧಿಸಬಹುದು. ಮೋಟಾರು ವಾಹನಗಳನ್ನು ಒಳಗೊಂಡ ಅಪರಾಧಗಳಿಗೆ, ಟ್ರಾಫಿಕ್ ಶಾಖೆಯನ್ನು ಹೊಂದಿರದ ಜಿಲ್ಲೆಗಳಲ್ಲಿ ಸಹಾಯಕ ಇನ್ಸ್ಪೆಕ್ಟರ್ಗಳು, ಟ್ರಾಫಿಕ್ ಪೊಲೀಸ್ ಹಾಗೂ ಹೆದ್ದಾರಿ ಪೊಲೀಸ್ನ ಸಹಾಯಕ ಸಬ್ ಇನ್ಸ್ಪೆಕ್ಟರ್ ಅಥವಾ ಹೆಡ್ ಕಾನ್ಸ್ಟೆಬಲ್ ಶ್ರೇಣಿಯ ಮೇಲ್ಪಟ್ಟ ಅಧಿಕಾರಿಗಳು ಮಾತ್ರ ದಂಡ ವಿಧಿಸಬಹುದು.

ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನ ಚಾಲನೆ ಮಾಡುವಾಗ ತೋರುವ ನಿರ್ಲಕ್ಷ್ಯವೇ ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಪ್ರಮುಖ ಕಾರಣ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹಳೆ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು.

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ವಾಹನ ಸವಾರರಲ್ಲಿ ಶಿಸ್ತು ಮೂಡಿಸಿ, ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಈ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾರಿಗೆ ಬಂದು 27 ತಿಂಗಳು ಕಳೆದಿದೆ. ಈ 27 ತಿಂಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸುಮಾರು 8 ಕೋಟಿ ಚಲನ್ಗಳನ್ನು ವಿಧಿಸಲಾಗಿದೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications








