ಓಎಲ್ಎಕ್ಸ್ ಮೂಲಕ ಪೊಲೀಸರನ್ನೇ ಯಮಾರಿಸಲು ಬಂದವನೂ ಕೊನೆಗೂ ಲಾಕ್..!
ಆನ್ಲೈನ್ ಮೂಲಕ ಸೆಕೆಂಡ್ ವಸ್ತುಗಳನ್ನು ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ ಎಚ್ಚರವಾಗಿರಿ. ಇಲ್ಲವಾದ್ರೆ ಆನ್ಲೈನ್ ಖದೀಮರ ಮಾತಿಗೆ ಮರುಳಾದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದಲ್ಲದೇ ಇನ್ಯಾರೋ ಮಾಡುವ ತಪ್ಪಿಗೆ ನೀವು ಕಂಬಿ ಎಣಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

ಹೌದು, ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಸುಲಭವಾಗಿ ಮಾರಲು ಮತ್ತು ಖರೀದಿಸಲು ಅನುಕೂಲಕವಾಗಿರುವ ಓಎಲ್ಎಕ್ಸ್ ಜಾಲತಾಣದಲ್ಲಿ ಆನ್ಲೈನ್ ಖದೀಮರ ಸಂಖ್ಯೆ ಹೆಚ್ಚುತ್ತಿದ್ದು, ಬಣ್ಣದ ಮಾತುಗಳ ಮೂಲಕವೇ ಅಮಾಯಕನ್ನು ಯಾಮಾರಿಸುತ್ತಿದ್ದಾರೆ. ನಿನ್ನೆಯೂ ಕೂಡಾ ಇಂತದ್ದೆ ಒಂದು ಪ್ರಕರಣವನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನೊಬ್ಬನ್ನು ಕೊನೆಗೂ ಲಾಕ್ ಮಾಡಿದ್ದಾರೆ.

ಅಂದಹಾಗೆ ಈ ಫೋಟೋದಲ್ಲಿ ಕಾಣಿಸುತ್ತಿರುವ ಯುವಕನ ಹೆಸರು ಮಹಮ್ಮದ್ ಸಲೀಂ(30). ದುಡಿದು ತಿನ್ನು ಅಂದ್ರೆ ಅಮಾಯಕರಿಂದ ಕಿತ್ತು ತಿನ್ನುವುದನ್ನೇ ಕಾಯಕ ಮಾಡಿಕೊಂಡಿದ್ದ ಈತ ಇದೀಗ ಕಂಬಿ ಎಣಿಸುತ್ತಿರುವುದಕ್ಕೆ ಒಂದು ಬಲವಾದ ಕಾರಣವಿದೆ.

ವರ್ಷದ ಹಿಂದಷ್ಟೇ ಕ್ಯಾಬ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಲೀಂ, ಕೆಜಿ ಹಳ್ಳಿಯ ಬಳಿಯ ಗೋವಿಂದಪುರದಲ್ಲಿ ವಾಸವಿದ್ದ. ಇತ್ತೀಚೆಗೆ ಕ್ಯಾಬ್ ಡ್ರೈವಿಂಗ್ ಕೆಲಸಕ್ಕೂ ಗುಡ್ ಬೈ ಹೇಳಿದ್ದ ಈತ ಫುಲ್ ಟೈಂ ಆಗಿ ಬೈಕ್ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ಕಳ್ಳತನವನ್ನು ಸಹ ಯಾವುದೇ ರಿಸ್ಕ್ ಇಲ್ಲದೇ ಮಾಡಬೇಕೆಂಬ ಪಾಲಿಸಿ ಹೊಂದಿದ್ದ ಸಲೀಂ ಆಯ್ದುಕೊಂಡಿದ್ದೆ ಓಎಲ್ಎಕ್ಸ್.

ಓಎಲ್ಎಕ್ಸ್ನಲ್ಲಿ ಬೈಕ್ ಮಾರಾಟಕ್ಕಿದೆ ಎನ್ನುವ ಜಾಹೀರಾತು ನೋಡುತ್ತಿದ್ದ ಮಹಮ್ಮದ್ ಸಲೀಂ, ಬೈಕ್ ಮಾಲೀಕರನ್ನು ನಯವಾಗಿ ವಂಚಿಸುತ್ತಿದ್ದ. ಬೈಕ್ ಖರೀದಿ ಮಾಡುವುದಾಗಿ ನಗರದ ವಿವಿಧಡೆ ಸ್ಪಾಟ್ ಫಿಕ್ಸ್ ಮಾಡುತ್ತಿದ್ದ ಸಲೀಂ, ಟೆಸ್ಟ್ ರೈಡ್ ಮಾಡುವುದಾಗಿ ಹೇಳಿ ಬೈಕ್ ಸಮೇತ ಪರಾರಿಯಾಗುತ್ತಿದ್ದ. ಜೊತೆಗೆ ಬೈಕ್ ಮಾಲೀಕರಿಗೆ ಗುರುತ ಸಿಗದಂತೆ ಮಾಡಲು ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಕೂಡಾ ಬದಲಿಸುತ್ತಿದ್ದ.

ಹೀಗೆ ಸನತ್ ಕುಮಾರ್ ಭಟ್ ಎಂಬುವವರಿಗೂ ಯಾಮಾರಿಸಿದ್ದ ಇದೇ ಸಲೀಂ, ಓಎಲ್ಎಕ್ಸ್ನಲ್ಲಿ ಮಾರಾಟಕ್ಕೆ ಈಡಲಾಗಿದ್ದ ಯಮಹಾ ಎಫ್ಜೆಡ್ ಬೈಕ್ ಅನ್ನು ತಾನು ಖರೀದಿಸಲು ಸಿದ್ದನಿರುವುದಾಗಿ ಸನತ್ ಅವರನ್ನು ಸಂಪರ್ಕ ಮಾಡಿದ್ದ. ರಾಹುಲ್ ಹೆಸರಿನೊಂದಿಗೆ ಸನತ್ ಜೊತೆಗೆ ವ್ಯವಹಾರ ನಡೆಸಿದ್ದ ಸಲೀಂ, 2014ರ ಎಫ್ಜೆಡ್ ಮಾಡಲ್ಗೆ ರೂ.35 ಸಾವಿರ ನೀಡುವುದಾಗಿ ಹೇಳಿದ್ದ.

ಸರಿ ಬಂದಷ್ಟು ಹಣ ತೆಗೆದುಕೊಂಡು ಬೈಕ್ ಮಾರಾಟ ಮಾಡಲು ನಿರ್ಧರಿಸಿದ ಸನತ್ ಕುಮಾರ್ ಅವರು ಕಳೆದ ಏಪ್ರಿಲ್ನಲ್ಲಿ ಹೆಬ್ಬಾಳದ ಬಳಿ ದಾಖಲೆಗಳ ಸಮೇತ ಬೈಕ್ ಅನ್ನು ಸಲೀಂ ಕೈಗೆ ಒಪ್ಪಿಸಿದ್ದರು. ಈ ವೇಳೆ ಸನತ್ ಕುಮಾರ್ಗೆ ಮಾತಿನಲ್ಲೇ ಮರಳು ಮಾಡಿದ ಸಲೀಂ ಒಂದು ರೌಂಡ್ ಟೆಸ್ಟ್ ರೈಡ್ ಮಾಡುವುದಾಗಿ ಹೇಳಿದ್ದ.

ಆದ್ರೆ ಸಲೀಂ ಖದೀಮ ಎಂಬುವುದನ್ನು ಅರಿಯದ ಸನತ್ ಕುಮಾರ್ ಅವರು ಟೆಸ್ಟ್ ರೈಡ್ ಒಪ್ಪಿಗೆ ಸೂಚಿಸಿದ್ದಾರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸಲೀಂ ದಾಖಲೆಗಳ ಸಮೇತ ಬೈಕ್ನೊಂದಿಗೆ ಪರಾರಿಯಾಗಿದ್ದ. 5 ನೀಮಿಷ ಅಂದವನು ಒಂದು ಗಂಟೆಯಾದ್ರು ಬರೆದೆ ಇದ್ದಾಗ ಈ ಕುರಿತು ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದಾದ ಬಳಿಕ ಖದೀಮನ ಪತ್ತೆಗೆ ಸುಮಾರು 3 ತಿಂಗಳು ಕಾಲ ತನಿಖೆ ಮಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಆನ್ಲೈನ್ನಲ್ಲೇ ಸುಳ್ಳು ಜಾಹೀರಾತು ನೀಡುವ ಮೂಲಕವೇ ಆರೋಪಿಗೆ ಖೆಡ್ಡಾ ತೊಡಿದ್ದ ಪೊಲೀಸರು ಅತಿ ಕಡಿಮೆ ಬೆಲೆಯಲ್ಲಿ ಬೈಕ್ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದರು. ಆದ್ರೆ ಪೊಲೀಸರ ಪ್ಲ್ಯಾನ್ ಅರಿಯದ ಖದೀಮನು ಮಾರಾಟಕ್ಕಿರುವ ಬೈಕ್ ಅನ್ನು ತಾನೇ ಖರೀದಿ ಮಾಡುವುದಾಗಿ ಕರೆ ಮಾಡಿದ್ದಾನೆ.

ಈ ಹಿಂದೆ ಕೆಲವು ಬೈಕ್ ಮಾಲೀಕರಿಗೆ ಯಾಮಾರಿಸಿದ ಮಾದರಿಯಲ್ಲೇ ಪೊಲೀಸರಿಗೂ ಯಾಮಾರಿಸಲು ಮುಂದಾದಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಖದೀಮನಿಂದ ಒಟ್ಟು ನಾಲ್ಕು ಕದ್ದ ಬೈಕ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಓಎಲ್ಎಕ್ಸ್ ಮೂಲಕ ಬೈಕ್ ಮಾಲೀಕರನ್ನು ಯಾಮಾರಿಸಿ ಕಳ್ಳತನ ಮಾಡುತ್ತಿದ್ದ ಸಲೀಂ ಯಾವುದೇ ಕಾರಣಕ್ಕೂ ಆ ಬೈಕ್ಗಳನ್ನು ಮರುಮಾರಾಟ ಮಾಡುತ್ತಿರಲಿಲ್ಲ. ಬದಲಾಗಿ ವೀಲ್ಹಿಂಗ್ ಮಾಡಲು ಬಳಕೆ ಮಾಡುತ್ತಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
Source: Bangalore Mirror

ಹೀಗಾಗಿ ಆನ್ಲೈನ್ ಮೂಲಕ ಯಾವುದೇ ವಸ್ತುವನ್ನು ಮಾರಾಟ ಮಾಡುವುದಾಗಲಿ ಅಥವಾ ಖರೀದಿ ಮಾಡುವಾಗ ಇಂತಹ ಖದೀಮರ ಬಗ್ಗೆ ಎಚ್ಚರವಹಿಸುವುದು ಒಳಿತು. ಇಲ್ಲವಾದ್ರೆ ಖದೀಮರ ಕುತಂತ್ರಕ್ಕೆ ಬಲಿಯಾಗಬೇಕಾಗುವುದಲ್ಲದೇ ಕದ್ದ ವಸ್ತುಗಳನ್ನು ಅಗ್ಗದ ಬೆಲೆಗಳಲ್ಲಿ ಖರೀದಿ ಮಾಡಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಬಹುದು.


Click it and Unblock the Notifications








