ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದ ಚಾಲಕರಿಗೆ ಜೈಲು ಶಿಕ್ಷೆ
ನಡು ರಸ್ತೆಯಲ್ಲಿ ಅಪಘಾತದ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ನಿರ್ಲಕ್ಷ್ಯ ವಹಿಸುತ್ತಿರುವ ಘಟನೆಗಳು ಪದೇ ಪದೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗುತ್ತಿದೆ. ಇತ್ತೀಚೆಗಿನ ವರದಿಯ ಪ್ರಕಾರ 2015ನೇ ಸಾಲಿನಲ್ಲಿ ದೇಶದ ರಸ್ತೆಗಳಲ್ಲಿ ನಡೆದಿರುವ ರಸ್ತೆ ಅಪಘಾತಕ್ಕೆ 1.46 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿ 3.6 ನಿಮಿಷದಲ್ಲಿ ವ್ಯಕ್ತಿಯೋರ್ವರು ಮೃತಪಡುತ್ತಿದ್ದಾರೆ.
ಅಚ್ಚರಿಯೆಂಬಂತೆ ಬಹುತೇಕ ಅಪಘಾತ ಪ್ರಸಂಗಗಳಲ್ಲಿ ಚಾಲಕ, ಪಾದಚಾರಿ ನಿರ್ಲಕ್ಷ್ಯದಿಂದಾಗಿಯೇ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ಲಭಿಸದಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

ನಡು ರಸ್ತೆಯಲ್ಲಿ ಬಿದ್ದಿರುವ ಗಾಯಾಳುಗಳ ದೇಹದಿಂದ ರಕ್ತ ಹರಿದು ಹೋಗುತ್ತಿದ್ದರೂ ಕೋರ್ಟ್, ಪೊಲೀಸ್ ಇತ್ಯಾದಿ ಕೇಸ್ ಗಳ ಬಗ್ಗೆ ಭಯಪಟ್ಟು ಯಾರೂ ಸಹ ನೆರವಾಗಲು ಬಯಸುವುದಿಲ್ಲ.

ಬಹುತೇಕ ಸಂದರ್ಭದಲ್ಲಿ ನೆರವು ಮಾಡಲು ಬಯಸುವುವರು ಆಸ್ಪತ್ರೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ವೈದ್ಯಕೀಯ ನೆರವಿಗೆ ವಿಳಂಬವುಂಟಾಗುತ್ತದೆ.

ಸರಿಯಾದ ಸಮಯಕ್ಕೆ ಅಪಘಾತ ನಡೆದ ಸ್ಥಳಕ್ಕೆ ತಲುಪಲು ಆಂಬುಲೆನ್ಸ್ ಗಳು ವಿಫಲವಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮೀಪದಲ್ಲಿರುವ ವ್ಯಕ್ತಿಗಳೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಬೇಕಾಗಿರುವುದು ಅತಿ ಮುಖ್ಯವೆನಿಸುತ್ತದೆ.

ಇಂತಹದೊಂದು ಮುಖ್ಯವಾದ ಪ್ರಸ್ತಾವನೆಗೆ ಕೇಂದ್ರ ಸರಕಾರ ಅಸ್ತು ಎಂದಿದ್ದು, ಗಾಯಾಳುಗಳಿಗೆ ನೆರವಾಗದ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನಿರಾಕರಿಸುವ ಚಾಲಕರ ಮೇಲೆ ಆರು ತಿಂಗಳ ಸಜೆ ಅಥವಾ 2,000 ರು.ಗಳ ವರೆಗೆ ದಂಡ ವಿಧಿಸಲಾಗುವುದು.

ಅದೇ ಹೊತ್ತಿಗೆ ರಸ್ತೆ ನಿಯಮ ಉಲ್ಲಂಘನೆಗೆಗಾಗಿ ಗರಿಷ್ಠ 10,000 ರು.ಗಳ ವರೆಗೆ ದಂಡ ಅಥವಾ ಎರಡು ವರ್ಷಗಳ ಜೈಲುವಾಸ ನೀಡುವಂತೆ ಶಿಫಾರಸು ಮಾಡಲಾಗಿದೆ.

ಅಪಾಯಕಾರಿ ಚಾಲನೆ, ಅಮಿತ ವೇಗ, ಚಾಲನೆ ವೇಳೆ ಮೊಬೈಲ್ ಬಳಕೆ, ಸಿಗ್ನಲ್ ಜಂಪ್, ಪಾನಮತ್ತ ಚಾಲನೆ ಹಾಗೂ ಹೆಲ್ಮೆಟ್ ರಹಿತ ಚಾಲನೆ ಕಂಡುಬಂದ್ದಲ್ಲಿ ತತ್ ಕ್ಷಣದಲ್ಲಿ ಚಾಲನಾ ಪರವಾನಗಿ ರದ್ದುಗೊಳಿಸಲಾಗುವುದು.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ನಿಯಮ ಜಾರಿಗೆ ಬಂದಿದ್ದು ಕಳೆದ ಆರು ತಿಂಗಳಲ್ಲಿ ಮೂರು ಲಕ್ಷದಷ್ಟು ಮಂದಿಯ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.


Click it and Unblock the Notifications








