ಇತಿಹಾಸ ಪ್ರಸಿದ್ಧ 'ಪಂಬನ್ ಸೇತುವೆ' ವೈಶಿಷ್ಟ್ಯಗಳು
ಭಾರತ ನೆಲವನ್ನು ರಾಮೇಶ್ವರ ದ್ವೀಪವನ್ನು ಸಂಪರ್ಕಿಸುವ ಇತಿಹಾಸ ಪ್ರಸಿದ್ಧ 'ಪಂಬನ್ ಸೇತುವೆ' 1914ನೇ ಇಸವಿಯ ಫೆಬ್ರವರಿ 24ರಂದು ನಿರ್ಮಾಣಗೊಂಡಿದೆ. 19ನೇ ಶತಮಾನದ ಅಂತ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಸಲುವಾಗಿ ಪಂಬನ್ ಸೇತುವೆ ನಿರ್ಮಿಸಲಾಗಿತ್ತು.
'ಪಾಲ್ಕ್ ಜಲಸಂಧಿ'ಯನ್ನು ಹಾದು ಹೋಗುವ ಪಂಬನ್ ಸೇತುವೆ 2014ರಲ್ಲಿ ಶತಮಾನೋತ್ಸವನ್ನು ಆಚರಿಸಿಕೊಂಡಿದೆ. ಈ ರೈಲ್ವೆ ಸೇತುವೆಯನ್ನು ಕ್ಯಾಂಟಿಲಿವರ್ ಸಿಸ್ಟಂನಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಸಮಾನಂತರವಾಗಿ ರಸ್ತೆ ಸೇತುವೆಯನ್ನು ತೆರೆಯಲಾಗಿದೆ.

ಸಮುದ್ರ ಮೇಲೆ ನಿರ್ಮಿಸಿದ ದೇಶದ ಮೊದಲ ಸೇತುವೆ ಎಂಬ ಹೆಗ್ಗಳಿಕೆಗೆ ಪಂಬನ್ ಸೇತುವೆ ಪಾತ್ರವಾಗಿದೆ.

2.3 ಕೀ.ಮೀ. ಉದ್ದದ ದೇಶದ ಎರಡನೇ ಅತಿ ಉದ್ದದ ಸಮುದ್ರ ಸೇತುವೆ ಇದಾಗಿದೆ. ಪಂಬನ್ ಸೇತುವೆ ಅಗ್ರಸ್ಥಾನವನ್ನು 2010ರಲ್ಲಿ ಬಾಂದ್ರಾ-ವಾರ್ಲಿ ಸೀ ಲಿಂಕ್ ಕಸಿದುಕೊಂಡಿತ್ತು.

1911ನೇ ಇಸವಿಯಲ್ಲಿ ಪಂಬನ್ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಗುಜರಾತ್ ನ ಕಛ್ ನಿಂದ ಬಂದ ಕಾರ್ಮಿಕರು ಮೂರು ವರ್ಷದ ಅವಧಿಯಲ್ಲಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು.

ಬಳಿಕ 1988ರಲ್ಲಿ ರಸ್ತೆ ಸೇತುವೆ ನಿರ್ಮಾಣವಾಗುವ ವರೆಗೂ ಭಾರತ ಮತ್ತು ರಾಮೇಶ್ವರ ದ್ವೀಪವನ್ನು ಸಂಪರ್ಕಿಸುವ ಏಕೈಕ ಮಾರ್ಗ ಪಂಬನ್ ರೈಲು ಸೇತುವೆಯಾಗಿತ್ತು. ಈ ಮುಖಾಂತರ ಬಸ್, ಕಾರುಗಳ ಸಂಚಾರಕ್ಕೂ ಹಾದಿ ತೆರೆದುಕೊಂಡಿತ್ತು.

ಸೇತುವೆಯ ಎತ್ತರವನ್ನು ಹಡಗುಗಳ ಸಂಚಾರಕ್ಕೆ ತಕ್ಕಂತೆ ಹೆಚ್ಚಿಸಬಹುದಾಗಿದೆ. ಇದರ ಮೂಲಕ ಸರಕು ಸಾಗಣೆ ಹಡಗುಗಳು, ಕರಾವಳಿ ಪಡೆಯ ಹಡಗುಗಳು, ಮೀನುಗಾರಿಕಾ ಹಡಗುಗಗಳು ಮತ್ತು ತೈಲ ಟ್ಯಾಂಕರ್ ಗಳು ಹಾದು ಹೋಗುತ್ತದೆ.

ಇಂದಿಗೂ ಪ್ರವಾಸಿಗರು ಮತ್ತು ಇತಿಹಾಸ ಪ್ರಸಿದ್ಧ ರಾಮನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಲು ನೂರರು ಭಕ್ತ ಜನರು ಇದೇ ಹಾದಿ ಮಾರ್ಗವಾಗಿ ಸಂಚರಿಸುತ್ತಾರೆ.

ಈ ಹಿಂದೆ ಪಂಬನ್ ಸೇತುವೆ ಮೀಟರ್ ಗೇಜ್ ರೈಲುಗಳಿಗೆ ಮಾತ್ರ ಅನುಕೂಲಕರವಾಗಿತ್ತು. 2007ರಲ್ಲಿ ಭಾರತೀಯ ರೈಲ್ವೆಯು 'ಪ್ರೊಜೆಕ್ಟ್ ಯೂನಿಗೇಜ್' ಭಾಗವಾಗಿ ಬ್ರಾಡ್ ಗೇಜ್ ರೈಲು ಮಾರ್ಗವಾಗಿಯೂ ಪರಿವರ್ತಿಸಿತ್ತು.

ಮೀಟರ್ ಗೇಜ್ ಮಾರ್ಗವು ಮಂಡಪಂನಿಂದ ಪಂಬನ್ ಸ್ಟೇಷನ್ ವರೆಗಿದೆ. ಅಲ್ಲಿಂದ ಬಳಿಕ ಇಬ್ಭಾಗವಾಗುತ್ತಿದ್ದು, ಒಂದು ಹಳಿ ರಾಮೇಶ್ವರಂ ವರೆಗೆ 10.6 ಕೀ.ಮೀ. ಮತ್ತು ಮಗದೊಂದು ಹಳಿಯು 24 ಕೀ.ಮೀ. ದೂರದ ಧನುಷ್ಕೋಡಿಯನ್ನು ಸಂಪರ್ಕಿಸುತ್ತದೆ.

ದುರಂತ
1964 ಡೀಸೆಂಬರ್ 22ರಂದು ಸಂಭವಿಸಿದ ಚಂಡಮಾರುತದಿಂದಾಗಿ ಪಂಬನ್ ನಿಂದ ಧುನುಷ್ಕೋಡಿಗೆ ಹೋಗುವ ರೈಲು ಹಳಿ ಹಾಳಾಗಿತ್ತು. ಪರಿಣಾಮ ಇತ್ತ ಮಾರ್ಗವಾಗಿ ಸಂಚರಿಸುತ್ತಿದ್ದ ರೈಲು ಅವಘಡಕ್ಕೀಡಾಗಿ 110 ಮಂದಿ ಮೃತಪಟ್ಟಿರುವ ದುರಂತ ಘಟನೆ ನಡೆದಿತ್ತು.


Click it and Unblock the Notifications








