ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ತಮ್ಮ ಪ್ರತಾಪ ತೋರಿದ ಪ್ರತಾಪ್ ಸಿಂಹ
ಹನುಮ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಿಳಿಕೆರೆ ಗ್ರಾಮಕ್ಕೆ ಆಗಮಿಸುತ್ತಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪೊಲೀಸರ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿದ ಘಟನೆ ನಡೆದಿದೆ.
ಹನುಮ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಿಳಿಕೆರೆ ಗ್ರಾಮಕ್ಕೆ ಆಗಮಿಸುತ್ತಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪೊಲೀಸರ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿದ ಘಟನೆ ನಡೆದಿದೆ.

ಭಾರತದಲ್ಲಿ ನಿಯಮಗಳನ್ನು ಅನುಸರಿಸದೇ ಇರುವ ಕಾರಣಕ್ಕಾಗಿ ಪೊಲೀಸರೊಂದಿಗೆ ಜಗಳವಾಡಿಕೊಂಡು ಕೊನೆಗೆ ಬಂಧನಕ್ಕೊಳಗಾಗಿರುವ ಜನರನ್ನು ನಾವು ಹೆಚ್ಚಾಗಿ ನೋಡಿದ್ದೇವೆ. ಈ ಸಾಲಿನಲ್ಲಿ ನಮ್ಮ ಕರ್ನಾಟಕದ ಯುವ ಬಿಜೆಪಿ ಲೋಕಸಭೆ ಸಂಸದರಾದ ಪ್ರತಾಪ್ ಸಿಂಹ ಸಹ ಸೇರಿಕೊಂಡಿದ್ದಾರೆ ಎನ್ನಬಹುದು.

ಕರ್ನಾಟಕ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ಸಂಸದ ಎಂಬ ದರ್ಪ ತೋರಿಸಿದ್ದಾರೆ. ತಮ್ಮ ದುರ್ವರ್ತನೆ ಮೂಲಕ ಸಾಕಷ್ಟು ಬಾರಿ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿರುವ ಸಿಂಹ ಮತ್ತೆ ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಹೌದು, ಈ ಬಾರಿ ಸಂಸದ ಪ್ರತಾಪ್ ಸಿಂಹ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಕೋಪದಿಂದ ಬ್ಯಾರಿಕೇಡ್ ಮೇಲೆಯೇ ಕಾರು ಹತ್ತಿಸಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ.

ಸಂಸದ ಪ್ರತಾಪ್ ಸಿಂಹ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರೀತಿಯ ದುರ್ವರ್ತನೆ ತೋರಿಸಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಿಳಿಕೆರೆಯ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ಸಿಂಹ ಅವರ ಕಾರನ್ನು ಕೆಲವು ಕಾರಣಗಳಿಂದ ತಡೆಯಲಾಗಿತ್ತು. ಇದನ್ನು ಕಂಡ ಎಂ.ಪಿ ಕಾರಿನಿಂದ ದಿಡೀರ್ ಕೆಳಗಿಳಿದು ಪೊಲೀಸರೊಂದಿಗೆ ವಾಗ್ವಾದ ನೆಡೆಸಿದ್ದಾರೆ.

ನಂತರ ತಮ್ಮ ಇನ್ನೋವಾ ಕಂಪನಿಯ ಕ್ರಿಸ್ಟ ಕಾರಿನ ಚಾಲಕನನ್ನು ಸೀಟಿನಿಂದ ಇಳಿಸಿ ತಾವೇ ಕಾರನ್ನು ಚಲಾಯಿಸಿ, ಮುಂದೆ ಇದ್ದ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿ ನಂತರ ಪೊಲೀಸರ ಮೇಲೆ ಕಾರು ಓಡಿಸುವೆ... ಎನ್ನುವ ರೀತಿಯಲ್ಲಿ ಕಾರು ಚಲಾವಣೆಗೆ ಮುಂದಾಗಿದ್ದಾರೆ.
ಈ ಸಂಬಂಧ ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದು, ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ನಂತರ ನೆಡೆದ ಬೆಳವಣಿಗೆಯಲ್ಲಿ ಪ್ರತಾಪ್ ಸಿಂಹ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.


Click it and Unblock the Notifications








