ರಸ್ತೆ ಮಾರ್ಗವಾಗಿ ಬೈಕಲ್ಲಿ ದೆಹಲಿಯಿಂದ ಕೇರಳಕ್ಕೆ ಸಾಹಸ ಪಯಣ
ಸಾಹಸಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಇಲ್ಲೊಬ್ಬ ಬೈಕ್ ಉತ್ಸಾಹಿಯೊಬ್ಬರು ದೆಹಲಿಯಿಂದ ಕೇರಳಕ್ಕೆ ಬೈಕ್ನಲ್ಲಿ ಪಯಣಿಸಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣ ದೆಹಲಿಯಿಂದ ಆರಂಭಿಸಿದ್ದ ಇಜಾಜ್ ಮೊಹಮ್ಮದ್ ಕೇರಳದ ಕಲ್ಲಿಕೋಟೆಯಲ್ಲಿ ಪಯಣ ಕೊನೆಗೊಳಿಸಿದ್ದರು.
ಕಳೆದ ಜೂನ್ 12ರಂದು ತಮ್ಮ ಪಯಣ ಆರಂಭಿಸಿದ್ದ ಇಜಾಜ್ ಮೊಹಮ್ಮದ್ 17ರಂದು ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ತರಹನೇ ದೀರ್ಘ ಪಯಣ ಕೈಗೊಳ್ಳಲು ಇಚ್ಛಿಸುವವರಿಗೆ ಇಜಾಜ್ ಸಲಹೆಗಳನ್ನು ಕೊಡಲು ಬಯಸುತ್ತಿದ್ದಾರೆ. ರಸ್ತೆ ಮಾರ್ಗದಲ್ಲಿ ಇಜಾಜ್ಗೆ ಎದುರಾದ ತೊಂದರೆಗಳೇನು? ಸಮಗ್ರ ಮಾಹಿತಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ಇದು ಯಾವ ದಾಖಲೆಗಾಗಿ ಮಾಡಿದ ಪಯಣವಲ್ಲ. ಹಾಗಿದ್ದರೂ ಅನಧಿಕೃತ ದಾಖಲೆಗಳ ಪಟ್ಟಿಯಲ್ಲಿ ಇದು ಸೇರಿಕೊಂಡಿರುವುದು ವಿಶೇಷ. ತಮ್ಮ ನೆಚ್ಚಿನ ಹೋಂಡಾ ಯೂನಿಕಾರ್ನ್ ಡಾಜ್ಲರ್ 150 ಸಿಸಿ ಬೈಕ್ನಲ್ಲಿ ಇಜಾಜ್ ಈ ಸಾಧನೆ ಮಾಡಿದ್ದಾರೆ.

ಹೀಗೆ ಕಡಿಮೆ ಸಿಸಿ ಬೈಕ್ನಲ್ಲಿ ಹೆಚ್ಚು ದೂರ ಸಂಚರಿಸುವುದು ಇಜಾಜ್ ಗುರಿಯಾಗಿತ್ತು. ಈ ಮೂಲಕ 2,500 ಕೀ.ಮೀ. ದೂರ ಕ್ರಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೆಟ್ರೋಲ್ಗಾಗಿ 4,000 ರು. ಖರ್ಚು ಮಾಡಿದ್ದನ್ನು ಬಿಟ್ಟರೆ ಒಟ್ಟಾರೆ 18,000 ರುಪಾಯಿಗಳು ವೆಚ್ಚವಾಗಿದ್ದವು.

ದಕ್ಷಿಣ ದೆಹಲಿಯಿಂದ ಆರಂಭಿಸಿದ ಪಯಣವು ಜೈಪುರ-ವಡೋದರಾ-ಮುಂಬೈ-ರತ್ನಗಿರಿ-ಪಣಜಿ-ಉಡುಪಿ-ಮಂಗಳೂರು ಹಾದಿಯಾಗಿ ಕೇರಳ ಗಡಿ ಪ್ರದೇಶವನ್ನು ತಲುಪಿದ್ದರು. ಅಂತಿಮವಾಗಿ ಕಲ್ಲಿಕೋಟೆಯಲ್ಲಿ ತಮ್ಮ ಜೈತ್ರಯಾತ್ರೆಯನ್ನು ಕೊನೆಗೊಳಿಸಿದರು.

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 21 ಹರೆಯದ ಇಜಾಜ್ ಸಿನೆಮಾ ಕ್ಷೇತ್ರದಲ್ಲೂ ತಮ್ಮ ಅಭಿರುಚಿಯನ್ನು ಹೊಂದಿದ್ದಾರೆ. ಅವರ ವೈಯಕ್ತಿಕ ಬಯಕೆ ಏನೆಂದರೆ ಉತ್ತರ ಪೂರ್ವ ರಾಜ್ಯಗಳಲ್ಲಿ ಭುಗಿಲೆಲುತ್ತಿರುವ ವರ್ಣಭೇದ ನೀತಿ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಾಕ್ಷ್ಯಚಿತ್ರ ರಚಿಸುವುದಾಗಿದೆ.

ಸಹಜವಾಗಿಯೇ ಜೂನ್ ತಿಂಗಳಲ್ಲಿ ಉಷ್ಣಾಂಶ ಜಾಸ್ತಿಯಾಗಿದ್ದರಿಂದ ದೆಹಲಿಯಿಂದ ಮಹಾರಾಷ್ಟ್ರದ ವರೆಗೂ ರಾತ್ರಿ ಪಯಣ ಬೆಳೆಸಿದ್ದರು. ಅಲ್ಲದೆ ರಾತ್ರಿ ವೇಳೆಯ ಪಯಣ ತುಂಬಾನೇ ಸವಾಲಿನಿಂದ ಕೂಡಿರುತ್ತದೆ ಎಂದವರು ಅಭಿಪ್ರಾಯಪಡುತ್ತಾರೆ.

ತಮ್ಮ ಯಾತ್ರೆಯುದ್ಧಕ್ಕೂ ಸರಾಸರಿ ಗಂಟೆಗೆ 45 ಕೀ.ಮೀ. ವೇಗವನ್ನು ಕಾಯ್ದುಕೊಂಡಿದ್ದ ಇಜಾಜ್, ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ವೇಗವರ್ಧನೆಯಲ್ಲೂ ಏರುಪೇರು ತಂದಿದ್ದರು.

ಭಾರತದ ರಸ್ತೆ ಪರಿಸ್ಥಿತಿಗಳ ಬಗ್ಗೆ ಮಾತನಾಡಿರುವ ಇಜಾಜ್, ಗುಜರಾತ್ನ ವಡೋದರಾ-ಅಹಮದಾಬಾದ್ ಎಕ್ಸ್ಪ್ರೆಸ್ ವೇ ಹಾಗೂ ಮುಂಬೈ-ಪುಣೆ ಎಕ್ಸ್ಪ್ರೆಸ್ ವೇ ಅತ್ಯುತ್ತಮವಾಗಿದೆ ಎಂದಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ತಂದಿರುವ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

ಮುಂಬೈ-ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ರಾತ್ರಿ ಎರಡು ಗಂಟೆಯ ಸಮಯದಲ್ಲಿ ವಾಹನ ಚಲಾಯಿಸಿರುವ ಘಟನೆಯನ್ನು ಇಜಾಜ್ ನೆನಪಿಸಿಕೊಳ್ಳುತ್ತಾರೆ. ರಾತ್ರಿ ಪಯಣಕ್ಕೆ ಅರಣ್ಯಧಿಕಾರಿಗಳ ಅನುಮಿತಿಯಿಲ್ಲದಿದ್ದರೂ ಅದನ್ನು ಲೆಕ್ಕಿಸದೇ ಇಜಾಜ್ ತಮ್ಮ ಸಾಹಸ ಯಾತ್ರೆಯನ್ನು ಕೈಗೊಂಡಿದ್ದರು.

ಈ ಸಂದರ್ಭದಲ್ಲಿ ದೀರ್ಘ ಪಯಣ ಕೈಗೊಳ್ಳಲು ಇಚ್ಛಿಸುವ ಯುವ ಬೈಕ್ ಉತ್ಸಾಹಿಗಳಿಗೆ ಸಲಹೆ ಕೊಡಲು ಬಯಸುತ್ತಿರುವ ಇಜಾಜ್, ಯಾವತ್ತೂ ಸಾಹಸ ಮನೋಭಾವ ಕೈಬಿಡಬಾರದು ಎನ್ನುತ್ತಾರೆ.

ಎಲ್ಲರೂ ಕಡಿಮೆ ವೇಗದಲ್ಲಿ ಸಂಚರಿಸಲು ಸಲಹೆ ಕೊಡುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿರುವ ಇಜಾಜ್ ಅಪಘಾತಕ್ಕೆ ವೇಗ ಕಾರಣವಲ್ಲ. ಬದಲಾಗಿ ಸುರಕ್ಷಿತ ಪಯಣ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಡುತ್ತಾರೆ.

ಅಂದ ಹಾಗೆ ನೀವು ಸಹ ಬೈಕ್ನಲ್ಲಿ ದೀರ್ಘ ಪಯಣ ಹಮ್ಮಿಕೊಂಡಿದ್ದಲ್ಲಿ ನಿಮ್ಮ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








