ಇದ್ದಕ್ಕಿದ್ದಂತೆ ಬೆಂಕಿಗಾಹುತಿಯಾಗಿದ್ದ ಸ್ಕೋಡಾ ಕಾರು: ಮಾಲೀಕನ ಹೋರಾಟಕ್ಕೆ ಮಣಿದು ಹೊಸ ಕಾರು ನೀಡಿದ ಕಂಪನಿ
ಕಳೆದ ಜುಲೈ ತಿಂಗಳಿನಲ್ಲಿ ಅಪಾರ್ಟ್ಮೆಂಟ್ ಒಂದರ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಆಗ ಕಂಪನಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸುದ್ದಿ ವೈರಲ್ ಆಗುತ್ತಿದ್ದಂತೆ ಇದೀಗ ಅಂತಿಮವಾಗಿ ಮಾಲೀಕರು ಬ್ರಾಂಡ್ನಿಂದ ಹೊಸ ಕಾರನ್ನು ಪಡೆದಿದ್ದಾರೆ.

ಮಾಹಿತಿ ಪ್ರಕಾರ, ಮಾಲೀಕರು ವಿಮಾ ಪಾಲಿಸಿಯ ಅಡಿಯಲ್ಲಿ ಹೊಸ ಕಾರನ್ನು ಪಡೆದಿದ್ದಾರೆ. ಈ ಹೊಸ ಕಾರು ಮಾಲೀಕರ ವಿಮೆಯಿಂದ ಬಂದಿದೆಯೇ ಅಥವಾ ಬೇರೆ ವ್ಯವಸ್ಥೆ ಮಾಡಲಾಗಿದೆಯೇ ಎಂಬುದು ನಮಗೆ ಖಚಿತವಾಗಿಲ್ಲ. ಅದೇನೇ ಇದ್ದರೂ, ಮಾಲೀಕರು ಈಗ ಹೊಸ ಸ್ಲಾವಿಯಾವನ್ನು ಸ್ವೀಕರಿಸಿದ್ದಾರೆ.

ಈ ಘಟನೆ ನಡೆದ ನಾಲ್ಕು ತಿಂಗಳ ನಂತರ ಹೊಸ ಕಾರನ್ನು ಪಡೆದಿದ್ದಾರೆ. ಘಟನೆಯ ವೀಡಿಯೊಗಳು ಮತ್ತು ಪೋಸ್ಟ್ಗಳು ಅಂತರ್ಜಾಲದಲ್ಲಿ ವೈರಲ್ ಆದ ನಂತರವೇ ಸ್ಕೋಡಾ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಮಾಲೀಕ ಅಭಿಷೇಕ್ ಭಾಟಿಯಾ ಹೇಳಿದ್ದಾರೆ.

ಮಾಲೀಕರ ಪ್ರಕಾರ, ರಾತ್ರಿ 10 ಗಂಟೆಗೆ ಕಾರನ್ನು ನಿಲ್ಲಿಸಿದ್ದರು, ಬೆಳಗಿನ ಜಾವ 3 ಗಂಟೆಗೆ ತಾನಾಗಿಯೇ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯು ಈ ವರ್ಷದ ಜುಲೈನಲ್ಲಿ ಸಂಭವಿಸಿದೆ ಆದರೆ ವೀಡಿಯೊಗಳು ಇದೀಗ ಹೊರಬಂದಿವೆ. ವೀಡಿಯೊದಲ್ಲಿ ನೆಲಮಾಳಿಗೆಯಲ್ಲಿ ನಿಲ್ಲಿಸಿದ ಸ್ಲಾವಿಯಾಗೆ ಬೆಂಕಿ ಬಿದ್ದಿರುವುದನ್ನು ಕಾಣಬಹುದು.
ಅದೇ ಸಮಯದಲ್ಲಿ ಸ್ಕೋಡಾ ಸ್ಲಾವಿಯಾದ ಸೇಫ್ಟಿ ಅಲಾರಾಂಗಳು ಕೂಡ ಆಫ್ ಆಗಿವೆ ಎಂದು ಮಾಲೀಕರು ಹೇಳಿಕೊಂಡಿದ್ದಾರೆ. ಅಲ್ಲದೇ ಕಾರಿನಲ್ಲಿ ಅನೇಕ ಸ್ಫೋಟಗಳು ಕೂಡ ಸಂಭವಿಸಿವೆ, ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಮಾಲೀಕರು ಅನೇಕ ಅಗ್ನಿಶಾಮಕಗಳನ್ನು ಬಳಸಿದ್ದರು.

ಅಲ್ಲದೇ ಅಗ್ನಿಶಾಮಕ ಸಿಬ್ಬಂದಿ ಕೂಡ ಪ್ರಯತ್ನಿಸಿದರಾದರೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು, ಇದರಿಂದ ಬೇಸರಗೊಂಡಿದ್ದ ಮಾಲೀಕ ಕಂಪನಿ ವಿರುದ್ಧ ಸತತವಾಗಿ ಪ್ರಶ್ನಿಸಿ ಹೊಸ ಕಾರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಚ್ನಲ್ಲಿ ಖರೀದಿ
ಸುಟ್ಟು ಕರಕಲಾಗಿದ್ದ ಕಾರನ್ನು ಮಾರ್ಚ್ನಲ್ಲಿ ಖರೀದಿಸಲಾಗಿದೆ. ಓಡೋಮೀಟರ್ ರೀಡಿಂಗ್ ಪ್ರಕಾರ ವಾಹನವು ಕೇವಲ 4,000 ಕಿ.ಮೀ ಕ್ರಮಿಸಿದೆ ಎಂದು ಸೂಚಿಸುತ್ತಿದೆ. ಹೊಚ್ಚ ಹೊಸ ಕಾರು ಅಗ್ನಿಗಾಹುತಿಯಾದ ಕುರಿತು ಮಾಲೀಕ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.

ಆದರೆ ಸ್ಕೋಡಾ ಅಧಿಕಾರಿಗಳು ವೀಡಿಯೊವನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದರು. ಹಲವಾರು ವಿನಂತಿಗಳ ನಂತರ ವೀಡಿಯೊವನ್ನು ತೆಗೆದುಹಾಕಿರುವುದಾಗಿ ಅಭಿಷೇಕ್ ಹೇಳಿಕೊಂಡಿದ್ದಾರೆ. ಇದಾದ ಬಳಿಕ ಸ್ಕೋಡಾ ಇಂಡಿಯಾ ತಂಡವೂ ವಾಹನ ತಪಾಸಣೆಗೆ ಬಂದರೂ ಕ್ರಮ ಕೈಗೊಂಡಿರಲಿಲ್ಲ.

ವಾಹನದಲ್ಲಿ ಯಾವುದೇ ಬಾಹ್ಯ ಮಾರ್ಪಾಡುಗಳು ಅಥವಾ ಬಿಡಿಭಾಗಗಳನ್ನು ಅಳವಡಿಸಲಾಗಿಲ್ಲ ಎಂದು ಅಭಿಷೇಕ್ ಭಾಟಿಯಾ ಹೇಳಿದ್ದಾರೆ. ಇದು ಕಾರಿನ ಟಾಪ್ ಎಂಡ್ ರೂಪಾಂತರವಾಗಿದೆ. ಆದರೂ ಸ್ಕೋಡಾ ಇಂಡಿಯಾ ಅಭಿಷೇಕ್ ಅವರನ್ನು ನೇರವಾಗಿ ವಿಮೆಯನ್ನು ಸಂಪರ್ಕಿಸಿ ಕ್ಲೈಮ್ ಪಡೆಯಲು ಕೇಳಿಕೊಂಡಿದೆ.

ವಿಮಾ ಪೂರೈಕೆದಾರರೊಂದಿಗೆ ನಾಲ್ಕು ತಿಂಗಳ ಜಗಳದ ನಂತರ, ಅವರು ಅಂತಿಮವಾಗಿ ತಪಾಸಣೆಯಲ್ಲಿ ಉತ್ಪಾದನಾ ದೋಷಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಅಭಿಷೇಕ್ ಹೇಳಿದರು. ಆದರೆ ಸ್ಕೋಡಾ ಇಂಡಿಯಾ ಉತ್ಪಾದನಾ ದೋಷಗಳ ಆರೋಪಗಳನ್ನು ಸ್ವೀಕರಿಸಲಿಲ್ಲ, ಬದಲಿಗೆ ತಮ್ಮ ವಾದವನ್ನು ಮುಂದುವರೆಸಿತ್ತು.

ಒಂದು ಪ್ರಮುಖ ಬ್ರಾಂಡ್ನ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಸಾಮಾನ್ಯ ವಿಷಯಲ್ಲ. ಹಾಗೆಯೇ ಸ್ಕೋಡಾ ಸ್ಲಾವಿಯಾ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಏಕೈಕ ದಾಖಲಾದ ಘಟನೆ ಕೂಡ ಇದೇ ಮೊದಲು. ಬೆಂಕಿಯ ಹಿಂದೆ ಹಲವಾರು ಕಾರಣಗಳಿರಬಹುದು, ಮೊದಲು ಗ್ರಾಹಕರಿಗೆ ಪ್ರತಿಕ್ರಿಯಿಸಬೇಕಾದದ್ದು ಕಂಪನಿಯ ಕರ್ತವ್ಯವಾಗಿದೆ.

ಇನ್ನು MQB A0-IN ಪ್ಲಾಟ್ಫಾರ್ಮ್ ಅನ್ನು ಬೇಸ್ ಆಗಿಸಿಕೊಂಡು ಸ್ಕೋಡಾ ಸ್ಲಾವಿಯಾವನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಸ್ಕೋಡಾ ಸ್ಲಾವಿಯಾ ಜನಪ್ರಿಯ ರಾಪಿಡ್ಗೆ ಬದಲಿಯಾಗಿ ಬಂದ ಮಾದರಿಯಾಗಿದೆ. ಅದರ ಆಗಮನದ ನಂತರ, ಸ್ಲಾವಿಯಾ ಸ್ಕೋಡಾದಿಂದ ಮತ್ತೊಂದು ಜನಪ್ರಿಯ ಮಾರಾಟದ ಮಾದರಿಯಾಯಿತು.

ಪೆಟ್ರೋಲ್ ಎಂಜಿನ್ನೊಂದಿಗೆ ಸೆಡಾನ್ ಆಗಿ ಬಿಡುಗಡೆಯಾದ ಹೊಸ ಸ್ಕೋಡಾ ಸ್ಲಾವಿಯಾ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ 115 PS ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಎಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಸ್ಕೋಡಾ ಕಾರುಗಳು ಮಾರುಕಟ್ಟೆಯಲ್ಲಿ ಮಧ್ಯಮ ವಿಭಾಗದ ಪ್ರೀಮಿಯಂ ಕಾರುಗಳಾಗಿರುವುದರಿಂದ ಭಾರತದಲ್ಲಿ ಉತ್ತಮ ಗ್ರಾಹಕರನ್ನು ಹೊಂದಿದೆ. ಇಂತಹ ಘಟನೆಗಳು ಸುದ್ದಿಯಾದರೆ ಬ್ರಾಂಡ್ ತನ್ನ ಜನಪ್ರಯಿತೆಯನ್ನು ಕಳೆದುಕೊಳ್ಳುತ್ತದೆ. ಕಂಪನಿಗೆ ಕೆಟ್ಟ ಹೆಸರು ಬಾರದಂತೆ ಮಾಲೀಕನಿಂದ ಉತ್ಪಾದನಾ ದೋಷವೆಂಬ ಆರೋಪಗಳನ್ನು ಹೊರಹೊಮ್ಮದಂತೆ ಮಾಡಿ, ಹೊಸ ಕಾರನ್ನು ಕೈಸೇರಿಸಿದ್ದಾರೆ. ಬ್ರಾಂಡ್ನ ಜನಪ್ರಿಯತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಇದೊಂದು ಗಿಮ್ಮಿಕ್ ಅಂತಲೂ ಹಲವರು ಭಾವಿಸಿದ್ದಾರೆ.


Click it and Unblock the Notifications








