ಇವಿ ವಾಹನಗಳಲ್ಲಿನ ಅಗ್ನಿ ಅವಘಡಗಳೇ ಉದ್ಯಮ ಪ್ರಬುದ್ದಕ್ಕೆ ಕಾರಣವಾಗಿದೆ- ಎಥರ್ ಎನರ್ಜಿ ಸಿಇಒ
ದೇಶಾದ್ಯಂತ ಇವಿ ವಾಹನಗಳ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಹೆಚ್ಚುತ್ತಿರುವ ಅಗ್ನಿ ಅವಘಡಗಳು ಇವಿ ವಾಹನಗಳ ಸುರಕ್ಷತೆ ವಿಚಾರವು ಗ್ರಾಹಕರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಗ್ರಾಹಕರ ಸುರಕ್ಷತೆಗಾಗಿ ಹೊಸ ಇವಿ ವಾಹನಗಳಲ್ಲಿ ಇದೀಗ ಹಲವಾರು ಹೊಸ ಸುರಕ್ಷಾ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ದೇಶಾದ್ಯಂತ ದಾಖಲಾದ ಸರಣಿ ಇವಿ ವಾಹನಗಳಲ್ಲಿನ ಅಗ್ನಿ ಅವಘಡಗಳು ಗ್ರಾಹಕರ ಆಯ್ಕೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಸುರಕ್ಷಾ ಮಾನದಂಡಗಳು ಹೊಸ ಇವಿ ವಾಹನಗಳಿಗೆ ಉತ್ತಮ ಸುರಕ್ಷತೆ ನೀಡುತ್ತಿದ್ದು, ಮುಖ್ಯವಾಗಿ ಬ್ಯಾಟರಿ ಸ್ಪೋಟ ಪ್ರಕರಣಗಳನ್ನು ಪರಿಣಾಮಕಾರಿ ತಗ್ಗಿಸುವತ್ತ ಗಮನಹರಿಸಲಾಗಿದೆ.

ಇವಿ ವಾಹನಗಳಲ್ಲಿ ಅಗ್ನಿ ಅವಘಡಗಳ ಕುರಿತಾಗಿ ಮಾತನಾಡಿರುವ ಪ್ರೀಮಿಯಂ ಸ್ಕೂಟರ್ ಉತ್ಪಾದನಾ ಕಂಪನಿಯಾಗಿರುವ ಎಥರ್ ಎನರ್ಜಿ ಕಂಪನಿಯ ಸಿಇಒ ತರುಣ್ ಮೆಹ್ತಾ ಅವರು ಅಗ್ನಿ ಅವಘಡ ಪ್ರಕರಣಗಳು ಇದೀಗ ಇವಿ ವಾಹನ ಉದ್ಯಮವನ್ನು ಪ್ರಬುದ್ಧಗೊಳಿಸುತ್ತಿದೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಗ್ನಿ ಅವಘಡಗಳ ಪರಿಣಾಮವೇ ಇಂದು ಇವಿ ವಾಹನ ಉದ್ಯಮವು ಎಚ್ಚೆತ್ತುಕೊಳ್ಳಲು ಪ್ರಮುಖ ಕಾರಣಾಗಿದ್ದು, ಇದೀಗ ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಇವಿ ವಾಹನ ಉತ್ಪಾದನಾ ಕಂಪನಿಗಳು ಸುರಕ್ಷತೆಯ ಮೇಲೆ ಗಮನಹರಿಸುವಂತಾಗಿದೆ ಎಂದಿದ್ದಾರೆ.

ಗ್ರಾಹಕರಲ್ಲಿ ಉಂಟಾದ ಸುರಕ್ಷತೆಯ ಅರಿವಿನ ಪರಿಣಾಮ ಉತ್ಪಾದನಾ ಕಂಪನಿಗಳು ಕೂಡಾ ಇಂದು ಗರಿಷ್ಠ ಸುರಕ್ಷತೆಯತ್ತ ಗಮನಹರಿಸಲು ಕಾರಣವಾಗಿದ್ದು, ಅಗ್ನಿ ಅವಘಡಗಳು ಸಂಭವಿಸದಂತೆ ನಾವು ಕೂಡಾ ಗರಿಷ್ಠ ಮಾನದಂಡಗಳನ್ನು ತುರ್ತಾಗಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂದು ತರುಣ್ ಮೆಹ್ತಾ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಮಾತ್ರವಲ್ಲದೆ ಹೊಸದಾಗಿ ಇವಿ ವಾಹನ ಉತ್ಪಾದನೆಗೆ ಪೂರಕವಾದ ಸ್ಟಾರ್ಟ್ಅಪ್ ಕಂಪನಿಗಳಿಗೂ ರಾಜ್ಯ ಸರ್ಕಾರವು ಹಲವಾರು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಇದೀಗ 45ಕ್ಕೂ ಹೆಚ್ಚು ಇವಿ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಇವಿ ವಾಹನಗಳ ನೋಂದಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳು ಮೊದಲ ಸ್ಥಾನದಲ್ಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ತ್ರಿ-ಚಕ್ರ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 14 ಲಕ್ಷ ಇವಿ ವಾಹನಗಳು ನೋಂದಣಿಯಾಗಿವೆ.

ಸಾಮಾನ್ಯ ವಾಹನಗಳ ನೋಂದಣಿ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಇದು ಕಡಿಮೆ ಪ್ರಮಾಣವಾಗಿದ್ದರೂ ಮುಂಬರುವ ವರ್ಷಗಳಲ್ಲಿ ಇವಿ ನೋಂದಣಿಯು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಇವಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ಸೂಕ್ತವಾದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವುದು ಹೊಸ ಸವಾಲಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ಪ್ರವಾಸಿ ತಾಣಗಳು, ಹೆದ್ದಾರಿ ಮತ್ತು ಪ್ರಮುಖ ಸರ್ಕಾರಿ ಕಚೇರಿಗಳ ಆವರಣದಲ್ಲಿ ಕನಿಷ್ಠ ಒಂದು ಸಾವಿರ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ಕರ್ನಾಟಕದ ಇಂಧನ ಸಚಿವರು ಭರವಸೆ ನೀಡಿದ್ದು, ಹೊಸ ಯೋಜನೆ ಅಡಿಯಲ್ಲಿ ಈಗಾಗಲೇ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ.

ಜೊತಗೆ ಇವಿ ವಾಹನಗಳಿಗೆ ಅಗತ್ಯವಾದ ವಿದ್ಯುತ್ ಪೂರೈಕೆಗಾಗಿ ಎಲ್ಲಾ ಸಿದ್ದತೆ ಮಾಡಿಕೊಂಡಿರುವುದಾಗಿ ಹೇಳಿರುವ ಇಂಧನ ಸಚಿವರು ನವೀಕರಿಸಬಹುದಾದ ಇಂಧನ ನೀತಿಯು 5 ವರ್ಷಗಳಿಗೆ ಘೋಷಣೆ ಆಗಿದ್ದು, ಹೊಸ ನೀತಿಯಡಿ 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ ಎಂದಿದ್ದಾರೆ.


Click it and Unblock the Notifications








