45 ಜನ ಬಲಿಯಾದದ್ದು ಜವರಾಯನಿಗೋ ಇಲ್ಲ ಸಾರಿಗೆ ಇಲಾಖೆಗೋ?
ಬೆಂಗಳೂರಿನಿಂದ ಹೈದರಾಬಾದಿಗೆ ಹೊರಟಿದ್ದ ಜಬ್ಬರ್ ಟ್ರಾವೇಲ್ಸ್ನ ಬಸ್ಸು ನಿನ್ನೆ ಬೆಳಿಗ್ಗೆ ಸುಟ್ಟು ಕರಕಲಾಗಿ ಅದರಲ್ಲಿದ್ದ 45 ಪ್ರಯಾಣಿಕರು ಪ್ರಾಣದ ಆಹುತಿ ಪಡೆದ ಸುದ್ಧಿತಿಳಿದು ನಿಜಕ್ಕೂ ಮನನೊಂದಿತು. ಆ ಬಸ್ಸಿನಲ್ಲಿದ್ದ ಅದೆಷ್ಟೋ ಜನ ತಿಂಗಳುಗಳ ನಂತರ ಹೆತ್ತ ತಾಯಿಯನ್ನು ನೋಡಲು, ತಂದೆಯೊಂದಿಗೆ ದೀಪಾವಳಿಯ ಬೆಳಕು ಕಾಣಲುಹೊರಟಿದ್ದರು. ಇನ್ನೆಷ್ಟೋ ಜನ ದೂರವಿದ್ದ ಹೆಂಡತಿ ಮಕ್ಕಳನ್ನು ನೋಡಲು, ಕೆಲವರು ಜೀವನೋಪಾಯಕ್ಕಾಗಿ ಕೆಲಸ ಹುಡಕಿ ಹೊರಟಿದ್ದರು. ಆದರೆ ಆ ಹೆದ್ದಾರಿಯಲ್ಲಿ ಕಾಯುತ್ತ ಕುಳಿತಿದ್ದ ಜವರಾಯ ಆ ಎಲ್ಲರನ್ನು ಒಟ್ಟಿಗೆ ಬಲಿತೆಗೆದುಕೊಂಡ. ಹಬ್ಬದ ಸವಿಯುನ್ನಲು ಹೊರಟವರು ಶವವಾಗಿ ಹೋದರು. ಯಾರ ತಪ್ಪಿಗೆ ದೇವರು ಅದ್ಯಾರಿಗೆ ಶಿಕ್ಷೆ ನೀಡಿದನೋ ಒಂದು ಅರಿವಾಗಲಿಲ್ಲ.
ಹೇಳಿ ಕೇಳಿ ಅದು ವೋಲ್ವೋ ಬಸ್. ಸುರಕ್ಷಿತ ಹಾಗೂ ಕಡಿಮೆ ಅವದಿಯ ಪ್ರಯಾಣವೆಂಬ ಕಾರಣಕ್ಕೆ ನಾಲ್ಕು ಕಾಸು ಹೆಚ್ಚು ತೆತ್ತಾದರು ನಾವು ವೋಲ್ವೋ ಬಸ್ಸಿನಲ್ಲಿ ಓಡಾಡುತ್ತೇವೆ. ಯಾವ ಕಡೆಯಿಂದ ಅಪಘಾತ ಸಂಭವಿಸಿದರೂ ಅತಿ ಕಡಿಮೆ ಪರಿಣಾಮವಾಗುವಂತಹ ಸಂಯೋಜನೆ ಅದರದು. 44 ಜನ ಪ್ರಯಾಣಿಕರು, ಒಬ್ಬ ನಿರ್ವಾಹಕ ಹಾಗೂ ಒಬ್ಬ ಚಾಲಕನನ್ನು ಹೊತ್ತೊಯ್ಯಬಲ್ಲ ಆ ಬಸ್ಸಿನಲ್ಲಿ ಪರಿಮಿತಿಗೂ ಮೀರಿ 5 ಜನ ಅಂದರೆ ಒಟ್ಟು 51 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅತ್ಯುತ್ತಮ ನಿರ್ವಹಣೆ ಹಾಗೂ ಅತಿ ಸುರಕ್ಷಿತ ಬಸ್ಸಿನ ಗತಿಯೇ ಹೀಗಾದರೆ ಸಾಮಾನ್ಯ ಬಸ್ಸುಗಳು ಅಥವಾ ಸಾಮಾನ್ಯ ಸಾರಿಗೆ ವಾಹನಗಳ ಗತಿ ಏನು ? ತಾಂತ್ರಿಕ ವಿಷಯಗಳೇನೇ ಏನೇ ಇರಲಿ, ಅವಘಡ ಸಂಭವಿಸಿರುವುದಕ್ಕೆ ನೇರ ಹೊಣೆ ಯಾರು ಎಂಬುದು ಇಂದಿನ ಪ್ರಶ್ನೆ.
ಮೊಟ್ಟ ಮೊದಲಾಗಿ ಜಬ್ಬರ್ ಟ್ರಾವೆಲ್ಸ್ಗೆ ಸೇರಿದ ಆ ಬಸ್ಸು ಟಿಕೆಟ್ ನೀಡಿ ಪ್ರಯಾಣಿಕರನ್ನು ಸಾಗಿಸಲು ಅನುಮತಿ ಹೊಂದಿರಲಿಲ್ಲ. ಆ ಬಸ್ಸಿನಲ್ಲಿ ಪರಿಮಿತಿಗೂ ಮೀರಿ 5 ಜನಹೆಚ್ಚಿನ ಪ್ರಯಾಣಿಕರಿದ್ದರು (ಆ ಪ್ರಯಾಣಿಕರು ಎಲ್ಲಿ ಕೂತು ಪ್ರಯಾನಿಸುತ್ತಿದ್ದಿರಬಹುದೆಂದು ಊಹಿಸಿ, ಹೆಚ್ಚಾದ ಪ್ರಯಾಣಿಕರು ಸಾಮಾನ್ಯವಾಗಿ ಕೂರುವುದು ಕ್ಯಾಬಿನ್ ನಲ್ಲೆ ).ಇನ್ನು ಬಸ್ಸು ಘಂಟೆಗೆ 110 ಕೀ.ಮೀ.ಗೂ ಅಧಿಕ ವೇಗದಲ್ಲಿ ಸಂಚರಿಸುತ್ತಿತ್ತಂತೆ! ಬಸ್ಸಿನಲ್ಲಿ ಸುಮಾರು 4 ಕ್ವಿಂಟಾಲ್ಗೂ ಅಧಿಕ ಬಟ್ಟೆ ಸಾಗಿಸಲಾಗುತ್ತಿತ್ತು (ಅದು ಪ್ರಯಾನಿಕರದ್ದಲ್ಲ). ಮೂಟೆಗಟ್ಟಲೆ ಕೂದಲನ್ನು ಲೋಡ್ ಮಾಡಲಾಗಿತ್ತು. ಹೀಗಿರುವಾಗ ಬೆಂಕಿ ಬಿದ್ದರೆ ಇಷ್ಟು ದೊಡ್ಡ ಅವಘಡವಾಗದೆ ಇದ್ದೀತೆ ? ಹಾಗಾದರೆ ಈ ಎಲ್ಲ ಬೇಜವಾಬ್ದಾರಿ ವಿಷಯಗಳಿಗೆ ಯಾರು ಹೊಣೆ ? ಈ ವಿಷಯವಾಗಿ ಬರಿ ಒಂದು ಸಾರಿಗೆ ಏಜನ್ಸಿಯನಷ್ಟೇ ದೂರಬೇಕೆ ಇಲ್ಲ ಪೂರ್ತಿ ವ್ಯವಸ್ಥೆಯೇ ಇದಕ್ಕೆ ಹೊನೆಗಾರಣೆ ?

ಮೊದಲಾಗಿ ಪರವಾನಗಿ ಇಲ್ಲದ ಬಸ್ಸು , ಎರಡನೆಯದಾಗಿ ಹೆಚ್ಚಿನ ಪ್ರಯಾಣಿಕರು, ಅನಾವಶ್ಯಕ ವಸ್ತುಗಳ ಸಾಗಾಟ, ಇಷ್ಟೆಲ್ಲಾ ಎಡವಟ್ಟುಗಳಿದ್ದರೂ ಅದನ್ನೆಲ್ಲ ಪ್ರಶ್ನಿಸದ ಇಲಾಖೆಯವರು, ಸಂಜೆ ಹೊತ್ತಲ್ಲಿ ಪ್ರತಿ ಒಂದು ಟ್ರಾವೆಲ್ ಏಜನ್ಸಿಯಿಂದ ಜೇಬಿಗೆ ಹತ್ತೋ ಇಪ್ಪತ್ತೋ ಸೇರಿಸಿ ಮನೆ ಸೆರಿಕೊಳ್ಳೋ ಪೋಲಿಸನವರು. ಸಮಯಕ್ಕೆ ಸರಿಯಾಗಿ ಪ್ರಶ್ನಿಸದ ಸಾರಿಗೆ ಇಲಾಖೆಯ ಅಧಿಕಾರಿಗಳು, ಕಟ್ಟು ನಿಟ್ಟಿನ ಕ್ರಮ ನೀಡದ ಸರ್ಕಾರ ಹಾಗು ಸಾರಿಗೆ ಮಂತ್ರಿಗಳು, ಆತುರದಿಂದ ವಾಹನ ಓಡಿಸೋ ಅವಿವೇಕಿ ಚಾಲಕರು ಹೀಗೆ ಒಂದೋ ಎರಡಲ್ಲದೆ ಅದೆಷ್ಟೋ ಲೋಪಗಳು ಸೇರಿ ಆ ಅಮಾಯಕರನ್ನು ಬಲಿ ಪಡೆದವು.. ಹೀಗೆ ನಡೆದರೆ ಇನ್ನು ಅದೆಷ್ಟು ಜನರ ಪ್ರಾಣ ಹೀಗೆ ನಡು ರಾತೋ ರಾತ್ರಿಯೇ ಹಾರಿಹೊಗುವುದು ನಾ ಕಾಣೆ....

ಅದಲ್ಲದೆ ಅಪಘಾತದ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ . ಪ್ರಯಾಣಿಸುತ್ತಿದ್ದ 51 ಜನರ ಪೈಕಿ 33 ಜನರ ಹೆಸರು ಮಾತ್ರ ನೋಂದಾಯಿಸಲ್ಪಟ್ಟಿದ್ದರೆ, ಇನ್ನುಳಿದವರು ಯಾರು, ಅವರ ಬಳಿ ವಸ್ತುಗಳು ಯಾವುವು ? ಇದು ಅಪಘಾತವೇ ಅಥವಾ ಒಂದು ಯೋಜಿತ ಸಂಚೆ ಅನ್ನುವುದು ತಿಳಿಯಬೇಕಾಗಿದೆ. ಬಸ್ಸಿನಲ್ಲಿ ತುಂಬಿಸಿದ್ದ ಪ್ರಯಾಣಿಕರದಲ್ಲದ ವಸ್ತುಗಳ ಬಗ್ಗೆ ನಿಖರವಾದ ಮಾಹಿತಿಯು ಜಬ್ಬರ ಟ್ರಾವೆಲ್ಸ್ ಬಳಿ ಇಲ್ಲ ಎಂಬುವುದು ಇನ್ನೊಂದು ಆಘಾತಕಾರಿ ಸುದ್ದಿಯೇ. ಹೀಗಿರುವಾಗ ಮಡಿದವರು ವ್ಯವಸ್ಥೆಗೆ ಬಲಿಯಾದರೊ ಅಥವಾ ಯಾರದೋ ಸಂಚಿಗೆ ವ್ಯವಸ್ಥಿಥವಾಗಿಯೇ ಬಲಿಯಾದರೋ ತಿಳಿಯದು.

ಜಬ್ಬರ ಟ್ರಾವೆಲ್ಸ್ ಒಂದು ಉದಾಹರಣೆಯಷ್ಟೇ, ಇಂತಹ ಅದೆಷ್ಟೋ ಸಾರಿಗೆ ಏಜನ್ಸಿಗಳು ದಿನ ನಿತ್ಯ ಅಮಾಯಕರ ಬದುಕಿನಲ್ಲಿ ಆಟವಾಡುತ್ತವೆ ಎಂಬುದನ್ನ ನಾವು ಗಮನಿಸಿಯೇ ಇಲ್ಲ. ಇಂದು ಇಷ್ಟು ದೊಡ್ಡ ಅನಾಹುತ ಸಂಭವಿಸಿದ ಮೇಲೆ ಆ ಅಪಾಯದ ಅರಿವಾಗಿದೆ ಅಷ್ಟೇ. ಯೋಚಿಸಿ ನೋಡಿ . ಉದಾಹರಣೆಗೆ ..ಇಂದಿಗೂ ಪ್ರತಿ ದಿನ ರಾಣಿಬೇನ್ನೂರಿನಿಂದ SRE ಎಂಬ ಸಾರಿಗೆ ಬಸ್ಸು ಬೆಂಗಳೂರಿಗೆ ಬರುತ್ತದೆ, ಆ ಬಸ್ಸಿನಲ್ಲಿ ಸುಮಾರು 40 ಕ್ಕೂ ಅಧಿಕ ಜನ ಪ್ರಯಾಣಿಸಬಹುದು. ಆದರೆ ಪ್ರಯಾಣಿಕರಷ್ಟೇ ಅಲ್ಲದೆ ಆ ಬಸ್ಸು ಪ್ರತಿ ನಿತ್ಯ ಅವಶ್ಯಕತೆಗಿಂತ ಹೆಚ್ಚಿನ ಲಗೇಜ್ ತುಂಬಿಕೊಂಡು ರಾತ್ರಿ 11.30ಕ್ಕೆ ರಾಣಿಬೇನ್ನೂರಿನಿಂದ ಹೊರಟು ಬೆಳಿಗ್ಗೆ ಸುಮಾರು 5 ಗಂಟೆಗೆ ಯಶವಂತಪುರ ತಲುಪುತ್ತದೆ. ಅಂದರೆ ಕೇವಲ 5 ಘಂಟೆ 30 ನಿಮಿಷಕ್ಕೆ ಸುಮಾರು 300 ಕಿ ಮೀ, 4೦ ಜನ ಪ್ರಯಾಣಿಕರನ್ನು ಹೊತ್ತು, ಸುಮಾರು ಟನ್ಗಳಷ್ಟುತೂಕದ ಲಗೇಜ್ ಸೇರಿಸಿಕೊಂಡು ರಾತ್ರಿ ಇಡಿ ಪ್ರಯಾಣಿಸಿ ಬೆಂಗಳೂರು ಸೇರುವ ಈ ಬಸ್ಸು ಇಂದಿಗೂ ರಾಜಾ ರೋಷವಾಗಿ ಓಡಾಡುತ್ತದೆ. ಅಲ್ಲದೆ ಆಗಿಂದಾಗಲೇ ಅಂದರೆ ಸುಮಾರು ಬೆಳಿಗಿನ 6 ಘಂಟೆಗೆ ಮತ್ತೆ ರಾಣಿಬೇನ್ನೂರಿಗೆ ವಾಪಸ್ ಆಗೋ ಪ್ರಯಾಣ ಆರಂಭಿಸುತ್ತದೆ. ಹಗಲು ರಾತ್ರಿ ಎಡಬಿಡದೇ ವಾಹನ ಚಲಾಯಿದರೆ ಚಾಲಕನ ಪರಿಸ್ಥಿತಿ ಏನು ? ಆತ ಬಸ್ಸು ಓಡಿಸುವಾಗಲೇ ನಿದ್ದೆ ಮಾಡಿದರೆ ಪ್ರಯಾಣಿಕರ ಗತಿ ಏನು ?

ಇನ್ನು ಮಂಗಳೂರು ಉಡುಪಿ ಮಧ್ಯ್ ಓಡಾಡುವ ಬಸ್ಸುಗಳ ಅಪ್ಪಾ ಪೋಲಿತನ ತಿಳಿಯದವರ್ಯಾರಿದ್ದಾರೆ ? 3-4 ರುಪಾಯಿಗಾಗಿ ಒಬ್ಬ ಪ್ರಯಾಣಿಕನನ್ನು ಹಿಡಿಯಲು ಆ ಬಸ್ಸು ಚಾಲಕರು ನಡೆಸುವ ಪೈಪೋಟಿ ದೇವರಿಗೆ ಪ್ರೀತಿ. ಬೆಳಗಾವಿಯಿಂದ ಬಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಹುಬ್ಬಳ್ಳಿಗೆ ಓಡುವ ಉತ್ತರ ಕರ್ನಾಟಕದ ಖಾಸಗಿ (RR )ಬಸ್ಸುಗಳು, ಬೆಂಗಳೂರಿನಲ್ಲೇ ಕಲಾಸಿಪಾಳ್ಯದಿಂದ ಹೊಸೂರು ನೆಲಮಂಗಲಕ್ಕೆ ಹೋಗುವ ಪುಡಾರಿ ಬಸ್ಸುಗಳು ಒಂದೋ ಎರಡೋ ? ಇವುಗಳನ್ನೆಲ್ಲ ಕಂಡು ಕಾಣದಂತಿದ್ದು ಇಂದು ಅವಘಡವಾದ ಮೇಲೆ ಸುದ್ದಿ ವಾಹಿನಿಗಳ ಮುಂದೆ ಬಂದು ಕಣ್ಣಿರು ಸುರಿಸುವ ನಮ್ಮ ಮಂತ್ರಿಗಳು ಯಾಕೆ ಸ್ವಯಂ ಪ್ರೇರಿತವಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳುವುದಿಲ್ಲ?

ಇದೆ ತರಹದ ನಿರ್ಲಕ್ಷತೆಯಿಂದಲ್ಲವೇ ಕ.ರಾ.ರ.ಸಾ.ನಿಯ ವೋಲ್ವೋ ಬಸ್ಸು ಬೆಳಗಾವಿಯ ಬಳಿ ಉರಳಿ ಬಿದ್ದು ಇನ್ಫೋಸಿಸ್ 5 ಇಂಜಿನಿಯರುಗಳ ಬಲಿ ಪಡೆದದ್ದು ? ಇದೆತರಹದ ನಿರ್ಲಕ್ಷತೆಯಿಂದಲ್ಲವೇ ಇನ್ನೊಂದು ಬಸ್ಸು ಗುಂಡ್ಯ ಚೆಕ್ ಬಳಿ ಮರದ ದಿಮ್ಮೆ ಹೊತ್ತುಯುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದದ್ದು ? ಇಂತಹ ನಿಷ್ಕಾಳಜಿ ತನದಿಂದಲೇ ಅಲ್ಲವೇ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ನಿರ್ವಾಹಕ ಚಲಾಯಿಸಿ ರಾಯಚೂರಿನ ಬಳಿ ನದಿ ಕಾಲುವೆಗೆ ಇಳಿಸಿ 40 ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು ?

ಇನ್ನೂ ಅದೆಷ್ಟು ಈ ತರಹದ ಮಾರಣಹೊಮಗಳು ನಡೆದ ಮೇಲೆ ನಮ್ಮ ಅಧಿಕಾರಿಗಳು, ಸಾರಿಗೆ ಸಚಿವರು, ಸರ್ಕಾರ ಎಚ್ಚುತ್ತುಕೊಳ್ಳುವುದೋ ಗೊತ್ತಿಲ್ಲ. ಇನ್ನು ಹಣಕಾಸಿನ ವಿಷಯಕ್ಕೆ ಬರುವುದಾದರೆ ನಮ್ಮ ಸರ್ಕಾರಕ್ಕೆ ಯಾವುದರ ಮೇಲೂ ನಿಗಾ ಇಲ್ಲ ಎಂಬುವುದು ಜಗಜ್ಜಾಹಿರಾಗಿದೆ. ಈ ಹಬ್ಬ ಹರಿದಿನಗಳು ಬರೋದೆ ತಡ ಎಲ್ಲ ಬಸ್ಸುಗಳ ಪ್ರಯಾಣ ದರ 3 ಪಟ್ಟು ಹೆಚ್ಚಾಗುತ್ತವೆ. ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ ಪ್ರಯಾಣ ದರ ಐನೂರು ರುಪಾಯಿ ಆದರೆ ಇಂತಹ ಸಂಧರ್ಭಗಳಲ್ಲಿ ಅದು ಹೆಚ್ಚು ಕಮ್ಮಿ 2 ಸಾವಿರ. ಅದನ್ನು ಯಾಕೆ ಎಂದು ಪ್ರಶ್ನಿಸುವ ಸರ್ಕಾರವೂ ಇಲ್ಲ ಅಧಿಕಾರಿಗಳು ಇಲ್ಲ. ನಗರ ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ಹರಿಯದೇ ಕಾಸುಕಿತ್ತು ಕೊಳ್ಳೋ ನಿರ್ವಾಹಕರು, ಟಿಕೆಟ್ ಕೊಟ್ಟು ಚಿಲ್ಲರೆ ಮರಳಿಸದ ಅವರ ಆಟಗಳು. ರಾಜಾಜಿ ನಗರದಲ್ಲಿ ಟಿಕೆಟ್ ಕಾಯ್ದಿರಿಸಿದರೆ ಮಲ್ಲೇಶ್ವರಂ ಮುಖಾಂತರ ಬಸ್ ಓಡಿಸಿ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳೋ ಸಾರಿಗೆ ಬಸ್ಸುಗಳು. ಹೀಗೆ ಹತ್ತು ಹಲವಾರು ಹುಳುಕುಗಳು ಜನರನ್ನು ಕಾಡುವ ಪರಿಯ ಬಗ್ಗೆ ನಮ್ಮ ಸರ್ಕಾರ ನಿಜಕ್ಕೂ ಎಚ್ಚೆತ್ತುಕೊಳ್ಳಬೇಕಿದೆ.

ಕ್ರಮಭದ್ದ ಹಾಗು ಶಿಶ್ತಿನ ಸಾರಿಗೆಗೆ ಮಣಿಯದೆ ಹೋದಲ್ಲಿ ಒಂದಿನ ನಾವು ನಮ್ಮ ಪ್ರೀತಿ ಪಾತ್ರರನ್ನೋ ಅಥವಾ ನಮ್ಮ ಪ್ರಾಣವನ್ನೇ ಕಳೆದುಕೊಳ್ಳಬಹುದು. ಆ ದುರ್ಗತಿ 4 ಕಾಸು ತಿಂದು ತೆಪ್ಪಗೆ ಕೂರೋ ಪೋಲಿಸಪ್ಪನ ಮಕ್ಕಳಿಗೋ, 4 ಕಾಸಿಗಾಗಿ ಪರವಾನಗಿ ಪರಿಮಿತಿ ಪರಿಕ್ಷಿಸದ ಸಾರಿಗೆ ಇಲಾಖೆಯ ಅಧಿಕಾರಿಗೋ. ಅಥವಾ ಎಲ್ಲ ಕಂಡು ಕಾಣದ ಹಾಗೆ ಕೂತಿರುವ ಸರ್ಕಾರದ ಮಂತ್ರಿಗಳಿಗೂ ಬರಬಹುದು ಅನ್ನೋದನ್ನ ಅರಿಯಬೇಕಿದೆ.


Click it and Unblock the Notifications








