ಮದುವೆ ದಿಬ್ಬಣದ ಟೆಂಪೋ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ- ವಧು ಸೇರಿ 7 ಮಂದಿ ದುರ್ಮರಣ
ಮದುವೆ ಸಂಭ್ರಮಕ್ಕಾಗಿ ಹೊರಟ್ಟಿದ್ದ ಟೆಂಪೋ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ವಧು ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕು ಅನಂತವಾಡಿ ಬಳಿ ನಡೆದಿದೆ.
ಟೆಂಪೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬಸ್ ಚಾಲಕ ಸೇರಿದಂತೆ 7ಮಂದಿ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅನಂತವಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಅಪಘಾತದಲ್ಲಿ ಖಾಸಗಿ ಬಸ್ ಚಾಲಕ ಉಮೇಶ್(35), ಟೆಂಪೋದಲ್ಲಿದ್ದ ಪಾಲಾಕ್ಷಿ (38), ಬೇಬಿ(38), ದಿವ್ಯಾ(26), ನಾಗಪ್ಪ(46), ಸುಬ್ರಮಣ್ಯ(15) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.

ಮದುವೆ ಸಂಭ್ರಮಕ್ಕಾಗಿ ಹೊರಟ್ಟಿದ್ದ ಸಂದರ್ಭದಲ್ಲೇ ಈ ದುರಂತ ಸಂಭವಿಸಿದ್ದು, ಇಂದು ಹಸೆಮಣೆ ಏರಬೇಕಿದ್ದ ವಧು ದಿವ್ಯಾ ಕುರ್ಡೇಕರ್ ಕೂಡಾ ಮೃತಪಟ್ಟಿದ್ದಾರೆ.

ಟೆಂಪೋದಲ್ಲಿದ್ದ ಪ್ರಯಾಣಿಕರು ಧಾರವಾಡದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ಖಾಸಗಿ ಬಸ್ ಮಂಗಳೂರು ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದಾಗ ಈ ದುರಂತ ನಡೆದಿದೆ.

ಮೂಲತಃ ದಾವಣಗೆರೆಯವರಾದ ದಿವ್ಯಾ ಅವರ ಮದುವೆ ಹರೀಶ್ ಎಂಬವರ ಜೊತೆ ಇಂದು ಧರ್ಮಸ್ಥಳದಲ್ಲಿ ನಡೆಯಬೇಕಿತ್ತು. ಆದ್ರೆ ಚಾಲಕರ ಅಜಾಗರೂಕತೆ 7 ಮಂದಿ ಪ್ರಾಣವನ್ನೆ ಪಡೆದಿದೆ.

ಇನ್ನೂ ಗಂಭೀರವಾಗಿ ಗಾಯಗೊಂಡವರನ್ನ ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಖಾಸಗಿ ಬಸ್ನಲ್ಲಿದ್ದ ಕೆಲವು ಗಾಯಾಳುಗಳಿಗೆ ಭಟ್ಕಳ ತಾಲೂಕು ಆಸ್ಪತ್ರೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಘಟನೆ ಕುರಿತಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣ ಎನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕೆಲವು ವರದಿಗಳ ಪ್ರಕಾರ ಟೆಂಪೋ ಚಾಲಕನ ತಪ್ಪಿನಿಂದಾಗಿಯೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಪೂರ್ಣ ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿಯಬೇಕಿದೆ.


Click it and Unblock the Notifications








