ಅಪಘಾತ ಪ್ರಕರಣಗಳಲ್ಲಿ ಸಾವು ಸಂಭವಿಸಿದ್ರೆ ಚಾಲಕನಿಗೆ ಮರಣದಂಡನೆ
ಅಪಘಾತ ಪ್ರಕರಣಗಳನ್ನ ತಡೆಯುವ ಉದ್ದೇಶದಿಂದ ಈಗಾಗಲೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಕಠಿಣ ನಿಯಮಗಳನ್ನ ಜಾರಿಗೆ ತರುತ್ತಿದ್ದು, ಇದೀಗ ಬಾಂಗ್ಲಾದೇಶದಲ್ಲಿ ಅಪಘಾತ ಮಾಡಿ ಇತರರ ಸಾವಿಗೆ ಕಾರಣವಾಗುವ ಚಾಲಕನಿಗೆ ಮರಣದಂಡನೆ ನೀಡುವ ಕಾನೂನನ್ನ ಅಸ್ತಿತ್ವಕ್ಕೆ ತರಲು ಮುಂದಾಗಿದೆ.

ಕಳೆದ ವಾರದ ಹಿಂದಷ್ಟೇ ಬಸ್ ಚಾಲಕನೊಬ್ಬನ ಬೇಜವಾಬ್ದಾರಿಯಿಂದಾಗಿ ಅಪಘಾತದಲ್ಲಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿದ್ದರು. ಇದರಿಂದ ಬಿದಿಗಿಳಿದು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟಿಸಿದ್ದ ವಿದ್ಯಾರ್ಥಿ ಸಮೂಹವು ಅಮಾಯಕ ಪ್ರಾಣ ತೆಗೆದುಕೊಳ್ಳುವ ಚಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಬಾಂಗ್ಲಾ ಸರ್ಕಾರವು ಮರಣದಂಡನೆ ವಿಧಿಸುವ ಬಗ್ಗೆ ಹೊಸ ಕಾನೂನು ಅಸ್ತಿತ್ವಕ್ಕೆ ತರುವ ಕುರಿತು ಚಿಂತನೆ ನಡೆಸಿದೆ.

ಇದುವರೆಗೆ ಬಾಂಗ್ಲಾದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಜನಸಾಮಾನ್ಯರು ಮೃತಪಟ್ಟಿದ್ದಲ್ಲಿ ಚಾಲಕನಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ನೀಡುವ ಕಾನೂನು ಚಾಲ್ತಿಯಲ್ಲಿದ್ದು, ಇದಕ್ಕೆ ತಿದ್ದುಪಡಿ ತರುವ ಮೂಲಕ ಮರಣದಂಡನೆ ಶಿಕ್ಷೆ ನೀಡುವ ಕಾನೂನು ಜಾರಿಗೆ ಸಿದ್ದತೆ ನಡೆಸಿದೆ.

ಒಂದು ವೇಳೆ ಹೊಸ ಕಾನೂನು ಕಾನೂನು ಅಸ್ತಿತ್ವಕ್ಕೆ ಬಂದಿದ್ದೇ ಆದಲ್ಲಿ ಇದು ಜಗತ್ತಿನಲ್ಲಿ ಇದುವರೆಗೆ ಇರುವ ಅತಿ ಕಠಿಣ ಶಿಕ್ಷೆಗಳಲ್ಲಿ ಒಂದಾಗಲಿದ್ದು, ಇದರಿಂದ ಚಾಲಕರು ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಂತೆ ಮೈ ಎಲ್ಲಾ ಕಣ್ಣಾಗಿಸಿಕೊಂಡು ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ಬಂದೊಗಿದೆ.

ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಎಲ್ಲಾ ಅಪಘಾತ ಪ್ರಕರಣಗಳು ಕೇವಲ ವಾಹನ ಸವಾರರ ಕಡೆಯಿಂದಲೇ ಆದ ಪ್ರಮಾದಗಳಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಪಾದಾಚಾರಿಗಳು ಸಹ ಸರಿಯಾದ ರೀತಿಯಲ್ಲಿ ರಸ್ತೆ ದಾಟದೇ ಇರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತವೆ. ಹೀಗಾಗಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾ ಸರ್ಕಾರವು ಹೊಸ ಕಾನೂನು ಅಸ್ತಿತ್ವಕ್ಕೆ ತರುತ್ತಿದೆ.

ಒಂದು ರೀತಿಯಲ್ಲಿ ಈ ಕಾನೂನು ಕಠಿಣ ಅನ್ನಿಸಿದರೂ ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಲು ಇದು ಸಹಕಾರಿಯಾಗಲಿದ್ದು, ಸುರಕ್ಷಿತ ಚಾಲನೆಗಾಗಿ ಇಂತಹ ಕಠಿಣ ಕಾನೂನು ನಮ್ಮ ದೇಶದಲ್ಲೂ ಅಸ್ತಿತ್ವಕ್ಕೆ ತಂದಲ್ಲಿ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗುವುದು ತಪ್ಪುತ್ತದೆ.

ಪರಿಹಾರದ ಮೊತ್ತವನ್ನ 10 ಪಟ್ಟು ಹೆಚ್ಚಳ..!
ವಿದೇಶಿಗಳಷ್ಟೇ ಅಲ್ಲದೇ ಭಾರತದಲ್ಲೂ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸದ ಹಿನ್ನೆಲೆ ಅನೇಕ ವಾಹನ ಸವಾರರು ಮತ್ತು ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಮೃತರ ಕುಟುಂಬಗಳ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರವು ಸದ್ಯ ಪಾವತಿ ಮಾಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಳ ಮಾಡಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ ಇದುವರೆಗೆ ಒದಗಿಸಲಾಗುತ್ತಿದ್ದ ಪರಿಹಾರದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರವು, ಪರಿಹಾರದ ಮೊತ್ತವನ್ನು ಪಡೆಯುವಲ್ಲಿ ಇದುವರೆಗೆ ಇದ್ದ ಕೆಲವು ನಿಯಮಗಳನ್ನು ಸಡಿಸಲಾಗಿರುವುದು ಮತ್ತೊಂದು ಪ್ರಮುಖ ವಿಚಾರ.

ಸದ್ಯ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ರೂ. 50 ಸಾವಿರ ಪರಿಹಾರ ನೀಡುತ್ತಿದ್ದು, ಅಪಘಾತಗಳಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ರೂ.25 ಸಾವಿರ ಪರಿಹಾರ ಒದಗಿಸುತ್ತಿದೆ.

ಆದ್ರೆ ಕೆಲವು ಅಪಘಾತ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಒದಗಿಸಲಾಗುವ ರೂ. 50 ಸಾವಿರ ಅಥವಾ ಗಾಯಾಳುಗಳಿಗೆ ಒದಗಿಸಲಾಗುವ ರೂ. 25 ಸಾವಿರ ಪರಿಹಾರ ಯಾವುದಕ್ಕೂ ಸಾಲದು. ಕಾರಣ, ಮೃತ ವ್ಯಕ್ತಿಯನ್ನು ನಂಬಿಕೊಂಡ ಕುಟುಂಬಸ್ಥರ ಪಾಡು ಹೇಳತಿರದು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಪರಿಹಾರ ಮೊತ್ತವನ್ನು 50 ಸಾವಿರದಿಂದ 5 ಲಕ್ಷ ಹೆಚ್ಚಿಸಿದ್ದು, ಗಾಯಾಳುಗಳಿಗೆ 25 ಸಾವಿರದಿಂದ 2.5 ಲಕ್ಷ ಪರಿಹಾರ ಒದಗಿಸುವ ಸುತ್ತೋಲೆಗೆ ಸಹಿ ಹಾಕಿದೆ. ಜೊತೆಗೆ ಹೊಸ ನಿಯಮವು ಈ ಕೂಡಲೇ ಜಾರಿಗೆ ಬರುವಂತೆ ನಿರ್ದೇಶನ ನೀಡಲಾಗಿದೆ.

ಹೀಗಾಗಿ ಕೇಂದ್ರ ಸರ್ಕಾರ ಹೊಸ ನಿಯಮದಂತೆ, ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರು 5 ಲಕ್ಷ ಪರಿಹಾರಕ್ಕೆ ಅರ್ಹರಾಗಿದ್ದು, ಕೆಲವು ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬಗಳು ಇನ್ನು ಹೆಚ್ಚಿನ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಮೃತರ ಕುಟಂಬಗಳಿಗೆ ಕೇಂದ್ರ ಸರ್ಕಾರವು ಒದಗಿಸುವ ರೂ. 5 ಲಕ್ಷ ಪರಿಹಾರವಲ್ಲದೇ ಇನ್ನು ಹೆಚ್ಚಿನ ಪರಿಹಾರ ಬಯಸಿದ್ದಲ್ಲಿ ಮೃತ ವ್ಯಕ್ತಿಯ ವಯಸ್ಸು 24ಕ್ಕಿಂತ ಹೆಚ್ಚು ಇರಬೇಕೆಂಬ ನಿಯಮವನ್ನು ಉಲ್ಲೇಖ ಮಾಡಿದ್ದು, ಅಂತವರು ಮಾತ್ರ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ ಟ್ರಿಬ್ಯೂನಲ್(ಎಂಎಸಿಟಿ)ನಲ್ಲಿ ಹೆಚ್ಚಿನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ರೂ. 5 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಬೇಕಿದ್ದಲ್ಲಿ ಅಪಘಾತದಲ್ಲಿ ಮೃತ ವ್ಯಕ್ತಿಯ ವಯಸ್ಸು, ಆರ್ಥಿಕ ಹಿನ್ನೆಲೆ, ಮೃತ ವ್ಯಕ್ತಿಯ ಆದಾಯವನ್ನೇ ನಂಬಿಕೊಂಡವರ ಸಂಖ್ಯೆಯ ಆಧಾರದ ಮೇಲೆ ಹೆಚ್ಚಿನ ಪರಿಹಾರ ಸಿಗಲಿದ್ದು, ಇದಕ್ಕಾಗಿ ಕಾನೂನಾತ್ಮಾಕವಾಗಿ ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿ ಕುಟುಂಬಕ್ಕೆ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕವಾಗಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದು, ಅಷ್ಟೇ ಪ್ರಮಾಣದಲ್ಲಿ ಅಪಘಾತಗಳ ಸಂಖ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವು ಕಠಿಣ ರಸ್ತೆ ನಿಯಮಗಳನ್ನು ಜಾರಿಗೆ ತರುತ್ತಿದೆ.


Click it and Unblock the Notifications








