ಕಾರ್ ರೇಸ್ ವೇಳೆ ದುರಂತ- ಅರ್ಜುನ್ ಪ್ರಶಸ್ತಿ ವಿಜೇತ ಗೌರವ್ ಗಿಲ್ ವಿರುದ್ಧ ಕೇಸ್..!
ಕಳೆದ ಶನಿವಾರದಂದು ಆರಂಭಗೊಂಡಿದ್ದ ಇಂಡಿಯನ್ ನ್ಯಾಷನಲ್ ಚಾಂಪಿಯನ್ಶಿಪ್ ವೇಳೆ ಅರ್ಜನ್ ಪ್ರಶಸ್ತಿ ವಿಜೇತ ಗೌರವ್ ಗಿಲ್ ಚಾಲನೆ ಮಾಡುತ್ತಿದ್ದ ಕಾರು ಅಪಘಾತವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿರುವ ರಾಜಸ್ತಾನ ಪೊಲೀಸರು, ಮಹೀಂದ್ರಾ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಗೌರವ್ ಗಿಲ್ ಮತ್ತು ಚಾಂಪಿಯನ್ಶಿಪ್ ಆಯೋಜಕರೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ರಾಜಸ್ತಾನದ ಜೋಧಪುರ್ ಬಳಿ ನಡೆಯುತ್ತಿದ್ದ ಇಂಡಿಯನ್ ನ್ಯಾಷನಲ್ ಚಾಂಪಿಯನ್ಶಿಪ್ ವೇಳೆ ಸ್ಥಳೀಯ ಬೈಕ್ ಸವಾರನೊಬ್ಬ ಅಕ್ರಮವಾಗಿ ರೇಸ್ ಟ್ರ್ಯಾಕ್ಗೆ ನುಗ್ಗಿದ ಪರಿಣಾಮ ಗೌರವ್ ಗಿಲ್ ಇದ್ದ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ನಿಯಂತ್ರಣಕ್ಕೆ ಸಿಗದೇ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ನಿಷೇಧಿತ ವಲಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ನಡುವೆಯೂ ಬೈಕ್ ಸವಾರನು ರೇಸ್ ಟ್ರ್ಯಾಕ್ ಪ್ರವೇಶ ಮಾಡಿದ್ದೆ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿತ್ತು.

ಆದರೆ ದುರಂತದ ಕುರಿತು ತಡವಾಗಿ ಪ್ರಕರಣ ದಾಖಲಿಸಿರುವ ಜೋಧಪುರ್ ಪೊಲೀಸರು ಗೌರವ್ ಗಿಲ್ ಮತ್ತು ಸ್ವರ್ಧಿಗಳಿಗೆ ಮಾರ್ಗಸೂಚಿ ಮಾಡುತ್ತಿದ್ದ ಆಯೋಜಕರೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ವಿಚಾರ ಬೆಳಕಿಗೆ ಬಂದಿದ್ದು, ಮೋಟಾರ್ ಸ್ಪೋರ್ಟ್ಗೆ ನೀಡಿದ ಅನುಮತಿಯ ವ್ಯಾಪ್ತಿಗಿಂತಲೂ ದೂರದಲ್ಲಿ ಸ್ಪರ್ಧೆ ಆಯೋಜಿಸಿದ್ದೆ ಇಂತಹ ಅವಘಡಕ್ಕೆ ಕಾರಣವಾಗಿದೆ ಎಂಬ ಅಂಶವನ್ನು ಪತ್ತೆಹಚ್ಚಲಾಗಿದೆ.

ಗೌರವ್ ಗಿಲ್ ಗುರಿ ತಲುಪಲು ಇನ್ನೇನು 150 ಮೀಟರ್ ಬಾಕಿ ಇರುವಾಗಲೇ ಈ ಘಟನೆ ನಡೆದಿದ್ದು, ಗಂಟೆಗೆ ಸುಮಾರು 140ರಿಂದ 150 ಕಿ.ಮೀ ವೇಗದಲ್ಲಿದ್ದ ರೇಸ್ ಕಾರು ಟ್ರ್ಯಾಕ್ನಲ್ಲಿ ಅಡ್ಡಬಂದ ಬೈಕಿಗೆ ನಿಯಂತ್ರಣ ತಪ್ಪಿ ಡಿಕ್ಕಿಹೊಡೆದಿತ್ತು. ರೇಸ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸುಮಾರು 25 ಅಡಿ ದೂರದವರೆಗೆ ತೂರಿ ಹೋಗಿದ್ದು, ಬೈಕಿನಲ್ಲಿದ್ದ ನರೇಂದ್ರ ಮತ್ತು ಪತ್ನಿ ಪುಷ್ಪಾ ಹಾಗೂ ಪುತ್ರ ಜಿತೇಂದ್ರ ಸ್ಥಳದಲ್ಲೇ ಜೀವಬಿಟ್ಟಿದ್ದರು.

ಅಪಘಾತದಲ್ಲಿ ಗೌರವ್ ಗಿಲ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಚಾಲಕನ ನಿರ್ಲಕ್ಷ್ಯ ಮತ್ತು ಆಯೋಜಕರಿಂದ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನುವ ಆಧಾರದ ಮೇಲೆ ಕೇಸ್ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

ಫಿನಿಶಿಂಗ್ ಹಂತದಲ್ಲಿದ್ದರಿಂದ ಕಾರಿನ ವೇಗವನ್ನು ಮತ್ತಷ್ಟು ಹೆಚ್ಚಿಸಿದ ಪರಿಣಾಮ ಗೌರವ್ ಗಿಲ್ಗೆ ಸಡನ್ ಆಗಿ ಅಡ್ಡಬಂದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಧ್ಯವಾಗಿರಲಿಲ್ಲ. ಮೋಟಾರ್ ಸ್ಪೋರ್ಟ್ನಲ್ಲಿ ಸತತ 6 ಬಾರಿ ಚಾಂಪಿಯನ್ ಆಗಿ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದ ಗೌರವ್ ಗಿಲ್ ಅವರಿಗೆ ಈ ಭೀಕರ ಅಪಘಾತವು ಸಾಕಷ್ಟು ನೋವುಂಟು ಮಾಡಿದೆ.
MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ರಾಷ್ಟ್ರೀಯ ಮಟ್ಟದ ಮೋಟಾರ್ ಸ್ಪೋರ್ಟ್ ಚಾಂಪಿಯನ್ಶಿಪ್ ಆಗಿದ್ದರಿಂದ ಭಾರೀ ಭದ್ರತೆ ಕೈಗೊಳ್ಳಲಾಗಿದ್ದರೂ ಕೂಡಾ ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದ್ದರಿಂದಲೇ ಇಂತದೊಂದು ಅನಾಹುತ ನಡೆದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇನ್ನು ಜೋಧಪುರ್ ಬಳಿ ನಡೆಯುತ್ತಿದ್ದ ಇಂಡಿಯನ್ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಮಹೀಂದ್ರಾ ತಂಡವನ್ನು ಪ್ರತಿನಿಧಿಸಿದ್ದ ಗೌರವ್ ಗಿಲ್, ಎಕ್ಸ್ಯುವಿ300 ಪೆಟ್ರೋಲ್ ಟರ್ಬೋ ರೇಸ್ ಆವೃತ್ತಿಯನ್ನು ಚಾಲನೆ ಮಾಡುತ್ತಿದ್ದರು.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇದರಲ್ಲಿ ಪೆಟ್ರೋಲ್ ಟರ್ಬೋ ಮಾದರಿಯನ್ನು ಗೌರವ್ ಗಿಲ್ ಚಾಲನೆ ಮಾಡುತ್ತಿದ್ದರೆ ಡೀಸೆಲ್ ಆವೃತ್ತಿಯ ಚಾಲನೆಯ ಜವಾಬ್ದಾರಿಯನ್ನು ಅರ್ಮಿತ್ಜ್ ಘೋಷ್ ಅವರಿಗೆ ನೀಡಲಾಗಿತ್ತು. ಎರಡು ಆವೃತ್ತಿಯು ಸಹ ಒಂದೇ ಮಾದರಿಯ ತಾಂತ್ರಿಕ ಅಂಶಗಳನ್ನು ಹೊಂದಿದ್ದರೂ ಸಹ ಗೌರವ್ ಅವರ ಕಾರು ಜೆಕೆ ಟೈರ್ ಸೌಲಭ್ಯ ಹೊಂದಲಿದ್ದರೆ ಘೋಷ್ ಕಾರಿನಲ್ಲಿ ಎಂಆರ್ಎಫ್ ಟೈರ್ ಬಳಕೆ ಮಾಡಲಾಗಿತ್ತು.

ಆದರೆ ಪ್ರತಿಷ್ಠಿತ ಮೋಟಾರ್ ಸ್ಪೋರ್ಟ್ ಕಾರ್ಯಕ್ರಮದ ಕೊನೆಯ ಕ್ಷಣದಲ್ಲಿ ಇಂತದೊಂದು ಭೀಕರ ಅಪಘಾತ ಸಂಭವಿಸಿದ್ದು, ಮೋಟಾರ್ ಸ್ಪೋರ್ಟ್ ಆರು ಬಾರಿ ಚಾಂಪಿಯನ್ ಆಗಿ ಮಿಂಚಿದ್ದ ಗೌರವ್ ಗಿಲ್ಗೆ ಈ ಘಟನೆಗೆ ಸಂಕಷ್ಟ ತಂದಿಟ್ಟಿದೆ.


Click it and Unblock the Notifications








