ವಾಹನ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡಿದರೂ ಬೀಳಲಿದೆ ದಂಡ..!
ವಾಹನ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡುವುದು ಭಾರತದಲ್ಲಿ ಕಾನೂನು ಬಾಹಿರ. ಈ ನಿಯಮವನ್ನು ಉಲ್ಲಂಘಿಸುವವರಿಗೆ ಪ್ರತಿದಿನವೂ ಪೊಲೀಸರು ದಂಡವನ್ನು ವಿಧಿಸುತ್ತಲೇ ಇದ್ದಾರೆ. ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ವಾಹನ ಸವಾರರು ರಸ್ತೆ ಪಕ್ಕ ವಾಹನ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಾರೆ.

ಆದರೆ ಇನ್ನು ಮುಂದೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡಿದರೂ ದಂಡ ಬೀಳಲಿದೆ. ಫೆಬ್ರವರಿ ತಿಂಗಳಿನಿಂದ ಚಂಡೀಗಢ ಪೊಲೀಸರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುವ ವಾಹನ ಚಾಲಕರಿಗೆ ದಂಡ ವಿಧಿಸಲಿದ್ದಾರೆ.

ಮೊದಲ ಬಾರಿಗೆ ರೂ.500 ದಂಡ ವಿಧಿಸಲಾಗುವುದು. ಎರಡನೇ ಬಾರಿಯಿಂದ ರೂ.1,000 ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ಹೊಸ ಮೋಟಾರು ವಾಹನ ಕಾಯ್ದೆಯನ್ವಯ ವಿಧಿಸಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ವಾಹನ ಚಾಲಕರು ಈ ರೀತಿ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಏಕಾಏಕಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ರಸ್ತೆ ಅಪಘಾತಗಳಾಗುತ್ತವೆ. ಬೇರೆಯವರಿಗೆ ತೊಂದರೆಯುಂಟಾಗುತ್ತಿದೆ. ಇಂಟರ್ಸೆಕ್ಟರ್ ಹಾಗೂ ಜಂಕ್ಷನ್ಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತದೆ.

ಚಂಡೀಗಢದಲ್ಲಿರುವ ಮೂರು ಪ್ರಮುಖ ರಸ್ತೆಗಳಾದ ದಕ್ಷಿಣ್ ಮಾರ್ಗ್, ಮಧ್ಯ ಮಾರ್ಗ್ ಹಾಗೂ ಉದ್ಯೋಗ್ ಮಾರ್ಗ್ಗಳ ಮೇಲೆ ಪೊಲೀಸರು ಹೆಚ್ಚು ನಿಗಾವಹಿಸಲಿದ್ದಾರೆ. ಈ ಮೂರು ರಸ್ತೆಗಳಲ್ಲಿ 2019ರಲ್ಲಿ ಹೆಚ್ಚಿನ ಪ್ರಮಾಣದ ಅಪಘಾತಗಳು ಉಂಟಾಗಿವೆ.

ಚಂಡೀಗಢ ಪೊಲೀಸರು 2020ರಲ್ಲಿ ಅಪಘಾತದ ಪ್ರಮಾಣವನ್ನು 75ಕ್ಕೆ ಇಳಿಸುವ ಯೋಜನೆಯನ್ನು ಹೊಂದಿದ್ದಾರೆ. ಈ ಗುರಿಯನ್ನು ಸಾಧಿಸುವುದಕ್ಕಾಗಿ ಪೊಲೀಸರು ಮೋಟಾರು ವಾಹನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿದ್ದಾರೆ.

ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಮೊದಲು ಪೊಲೀಸರು ಈ ಕುರಿತು ಜನರಲ್ಲಿ ಜಾಗೃತಿಯನ್ನು ತರಲು ಮುಂದಾಗಿದ್ದಾರೆ. ವಾಹನ ಚಾಲಕರು ಹಿಂದೆ ಬರುವ ವಾಹನಗಳಿಗೆ ಯಾವುದೇ ಸೂಚನೆಯನ್ನು ನೀಡದೇ ತಮ್ಮ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಅಪಘಾತಗಳಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಚಂಡೀಗಢ ಪೊಲೀಸರು ತಿಳಿಸಿದ್ದಾರೆ.

ಈ ದಂಡವನ್ನು ಮುಖ್ಯ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುವ ಚಾಲಕರಿಗೆ ವಿಧಿಸಲಾಗುವುದೆಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ಮೂರು ಪ್ರಮುಖ ರಸ್ತೆಗಳಲ್ಲಿನ ಯಶಸ್ಸನ್ನು ನೋಡಿಕೊಂಡು ಉಳಿದ ಮುಖ್ಯ ರಸ್ತೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಆದರೆ ಸಣ್ಣ ಪುಟ್ಟ ರಸ್ತೆಗಳಲ್ಲಿ ಮೊಬೈಲ್ನಲ್ಲಿ ಮಾತನಾಡುವ ವಾಹನ ಚಾಲಕರಿಗೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. ಸಂಚಾರಿ ಪೊಲೀಸರು ಸರಿಯಾದ ಮಾರ್ಗದಲ್ಲಿ ಚಲಿಸದೇ ಇರುವ ವಾಹನಗಳಿಗೂ ದಂಡ ವಿಧಿಸುವ ಯೋಜನೆಯನ್ನು ಹೊಂದಿದ್ದಾರೆ.

ನೇರವಾಗಿ ಹೋಗಬೇಕಿರುವ ವಾಹನ ಸವಾರರು ಎಡ ಬದಿಯ ಲೇನ್ನಲ್ಲಿ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದ್ದಾರೆ. ಇದರಿಂದಾಗಿಯೂ ಅಪಘಾತಗಳು ಸಂಭವಿಸುತ್ತಿವೆ. ಚಂಡೀಗಢ ಪೊಲೀಸರು ಇದಕ್ಕೂ ಸಹ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಚಂಡೀಗಢ ಪೊಲೀಸರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರಲ್ಲಿ ಭಾರತದಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಚಂಡೀಗಢ ಪೊಲೀಸರ ಈ ಕಠಿಣ ಕ್ರಮಗಳಿಂದಾಗಿ ಮುಂಬರುವ ದಿನಗಳಲ್ಲಿ ಚಂಡೀಗಢ ನಗರದ ಸಂಚಾರ ವ್ಯವಸ್ಥೆಯು ಉತ್ತಮವಾಗುವ ಸಾಧ್ಯತೆಗಳಿವೆ.


Click it and Unblock the Notifications








