ಚುನಾವಣಾ ಪ್ರಚಾರಕ್ಕೆ ಹೊಸ ತಂತ್ರ- ಸಬರ್ ಮತಿಯಿಂದ ಸೀ ಪ್ಲೇನ್ ಮೂಲಕ ಪ್ರಯಾಣ ಮಾಡಿದ ಪಿಎಂ ಮೋದಿ
ರೋಡ್ ಶೋಗೆ ಅನುಮತಿ ನಿರಾಕರಣೆ ಹಿನ್ನೆಲೆ ಪ್ರಧಾನಿ ಮೋದಿ ಪ್ರಚಾರ ಕಾರ್ಯಕ್ಕಾಗಿ ಹೊಸ ತಂತ್ರ ಪ್ರಯೋಗಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಸದ್ಯ ಗುಜರಾತ್ ವಿಧಾನಸಭೆಯ ಎರಡನೇ ಹಂತದ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ಪ್ರಮುಖ ರಾಜಕೀಯ ಪಕ್ಷಗಳನ್ನು ಭಾರೀ ಕಸರತ್ತು ಆರಂಭಿಸಿವೆ. ಹೀಗಾಗಿರುವಾಗ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಪ್ರಚಾರ ಕಣ ರಂಗೇರಿದ್ದು, ರೋಡ್ ಶೋಗೆ ಅನುಮತಿ ನಿರಾಕರಣೆ ಹಿನ್ನೆಲೆ ಪ್ರಧಾನಿ ಮೋದಿ ಪ್ರಚಾರ ಕಾರ್ಯಕ್ಕಾಗಿ ಹೊಸ ತಂತ್ರ ಪ್ರಯೋಗಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

ಚುನಾವಣಾ ಆಯೋಗದ ನಿಯಮಾನುಸಾರ ಚುನಾವಣೆ ಹಿಂದಿನ ದಿನದಂದು ಬಹಿರಂಗ ಪ್ರಚಾರಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕಾಗಿ ನೂತನ ಅಸ್ತ್ರ ಪ್ರಯೋಗಿಸಿದ್ದಾರೆ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಸೀ ಪ್ಲೇನ್ ಬಳಸಿದ್ದು, ಸೀ ಪ್ಲೇನ್ ಮೂಲಕ ಸಬರ್ಮತಿ ನದಿಯಿಂದ 180 ಕಿ.ಮೀ ದೂರದಲ್ಲಿರುವ ಧಾರೋಯ್ ಡ್ಯಾಮ್ಗೆ ಮೋದಿ ಪಯಣಿಸಿದ್ದಾರೆ.
Recommended Video


ಸಬರ್ಮತಿ ನದಿಯಿಂದ ವಿಮಾನ ಟೇಕ್ ಆಫ್ ಆಗಿದ್ದು, ನಿಗದಿತ ಅವಧಿಯಲ್ಲಿ ಧಾಯೋರ್ ಡ್ಯಾಮ್ಗೆ ತಲುಪಿದ ನಂತರ ಅಂಬಾಜಿ ಮಾತೆ ದೇಗುಲಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಮತ್ತೆ ಅದೇ ಮಾರ್ಗವಾಗಿ ಅಹಮದಾಬಾದ್ಗೆ ವಿಶೇಷ ಸೀ ಪ್ಲೇನ್ ಮೂಲಕ ಪ್ರಧಾನಿ ಮೋದಿ ಹಿಂದಿರುಗಲಿದ್ದಾರೆ.

ಇನ್ನು ಹಲವು ವಿಶೇಷ ಸೌಲಭ್ಯಗಳನ್ನು ಹೊತ್ತು ನಿಂತಿರುವ ಸೀ ಪ್ಲೇನ್ 9 ರಿಂದ 15 ಜನರನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯ ಹೊಂದಿದ್ದು, ಟೇಕ್ ಆಫ್ ಹಾಗೂ ಲ್ಯಾಂಡಿಂಗ್ಗಾಗಿ ಈ ವಿಮಾನಕ್ಕೆ ಕೇವಲ 300 ಮೀಟರ್ನಷ್ಟು ಉದ್ದದ ರನ್ವೇ ಇದ್ದರೆ ಸಾಕು ಯಶಸ್ವಿ ಪಯಾಣ ಬೆಳೆಸಬಲ್ಲದು.

ಇದಕ್ಕೆ ಕಾರಣ ಈ ವಿಮಾನದಲ್ಲಿ ಫ್ಲೋಟ್ಗಳು ಇದ್ದು ಇವು ನೀರಿನ ಮೇಲೆ ಲ್ಯಾಂಡ್ ಆಗಲು ನೆರವಾಗುವುದಲ್ಲದೇ ನಿಗದಿತ ಪ್ರದೇಶದಲ್ಲಿ ನಿಲುಗಡೆಗೆ ಸಹಕಾರಿಯಾಗುತ್ತವೆ.

ಹೀಗಾಗಿಯೇ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿರಾಜು ಇನ್ನಿತರ ಅಧಿಕಾರಿಗಳೊಂದಿಗೆ ಸೇರಿ ಸೀ ಪ್ಲೇನ್ ಪ್ರಾತ್ಯಕ್ಷಿಕೆ ನಡೆಸಿದ ನಂತರವೇ ಪ್ರಧಾನಿ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದ್ದರು.

ಪ್ರಧಾನಿ ಮೋದಿ ಕೂಡಾ ನಿನ್ನೆಯಷ್ಟೇ ಸೀ ಪ್ಲೇನ್ನಲ್ಲಿ ಪ್ರಯಾಣಿಸುವ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿಮಾನ, ರಸ್ತೆ ಮತ್ತು ರೈಲ್ವೆ ಸಂಪರ್ಕಗಳ ಜೊತೆ ನಮ್ಮ ಸರ್ಕಾರ ಜಲಮಾರ್ಗಗಳ ಬಳಕೆಗೂ ಶ್ರಮ ವಹಿಸುತ್ತಿವೆ. ಇದು 125 ಕೋಟಿ ಭಾರತೀಯರಿಗಾಗಿ ಎಂದು ಟ್ವೀಟ್ ಮಾಡಿದ್ದರು.

ಜೊತೆಗೆ 'ಎಲ್ಲ ಕಡೆಗೂ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಿಲ್ಲ. ಅಂತಹ ಕಡೆಗಳಲ್ಲಿ ಸೀ ಪ್ಲೇನ್ಗಳನ್ನು ಬಳಸಲು ನಮ್ಮ ಸರಕಾರ ನಿರ್ಧರಿಸಿದೆ' ಎಂದು ಮೋದಿ ಹೇಳಿದ್ದರು.
ಈ ನಡುವೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ರೋಡ್ ಶೋಗಳಿಗೆ ಅಹಮದಾಬಾದ್ ಪೊಲೀಸರು ಅನುಮತಿ ನಿರಾಕರಿಸಿದ್ದರು. ಸಂಚಾರ ಸಮಸ್ಯೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಅಹಿತಕರ ಘಟನೆಗಳು ನಡೆಯಬಹುದು ಎಂಬ ಆತಂಕದಲ್ಲಿ ಪೊಲೀಸರು ಅನುಮತಿ ನೀಡಿರಲಿಲ್ಲ.


Click it and Unblock the Notifications








