ಬೈಕ್ ಸ್ಟಂಟ್ ವೀಡಿಯೊ ಶೇರ್ ಮಾಡಿದ ಆನಂದ್ ಮಹೀಂದ್ರಾ
ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬೈಕ್ ಸವಾರನೊಬ್ಬ ಕಾನೂನುಬಾಹಿರವಾಗಿ ಬೈಕ್ ಸವಾರಿ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ನೋಡಿದ ಸಾರ್ವಜನಿಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಪಾಯಕಾರಿ ವೀಡಿಯೊಗಳು ಇಂಟರ್ ನೆಟ್ ನಲ್ಲಿ ವೇಗವಾಗಿ ಜನಪ್ರಿಯವಾಗುತ್ತಿವೆ.

ಈ ಹಿಂದೆ ಇದೇ ರೀತಿಯ ಹಲವು ವೀಡಿಯೊಗಳು ವೈರಲ್ ಆಗಿದ್ದವು. ಅಂತಹ ವೀಡಿಯೊವೊಂದನ್ನು Mahindra ಗ್ರೂಪ್ ಅಧ್ಯಕ್ಷರದ ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರು ವೈರಲ್ ಆಗುವ ವಿಷಯಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಕಾಲ ಕಾಲಕ್ಕೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಈ ಬಾರಿ ಅವರು ಶೇರ್ ಮಾಡಲಾದ ವೀಡಿಯೊವೊಂದಕ್ಕೆ ಕಾಮೆಂಟ್ ಮಾಡಿರುವುದು ವಿಶೇಷ. ಆನಂದ್ ಮಹೀಂದ್ರಾ ರವರು ಕಾಮೆಂಟ್ ಮಾಡಿರುವ ವೀಡಿಯೊವನ್ನು ವ್ಯಕ್ತಿಯೊಬ್ಬರು Tesla ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್ ರವರನ್ನು ಗೇಲಿ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೆರಿಕಾ ಮೂಲದ ವಿಶ್ವ ವಿಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಕಳೆದ ಕೆಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸುತ್ತಿದೆ.

Tesla ಕಂಪನಿಯ ಉತ್ಪಾದನಾ ಘಟಕವು ಕರ್ನಾಟಕದಲ್ಲಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಕಂಪನಿ ಸ್ಪಷ್ಟನೆ ನೀಡಿಲ್ಲ. ಟೆಸ್ಲಾ ಕಂಪನಿಯು ಚಾಲಕ ರಹಿತ ಕಾರುಗಳನ್ನು ಬಿಡುಗಡೆಗೊಳಿಸಿದೆ. ಈ ಕಾರಿಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತವೆ. ಆದರೂ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಆನಂದ್ ಮಹೀಂದ್ರಾರವರು ಶೇರ್ ಮಾಡಲಾದ ವೀಡಿಯೊವೊಂದಕ್ಕೆ ಕಾಮೆಂಟ್ ಮಾಡಿದ್ದಾರೆ.

ಡಾ. ಅಜಯಿತಾ ಎಂಬುವವರು ಟೆಸ್ಲಾದ ಚಾಲಕ ರಹಿತ ಕಾರುಗಳು ಭಾರತದಲ್ಲಿ ಬಿಡುಗಡೆಗೊಳಿಸಬೇಕು ಎಂದು ಹೇಳಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್'ಗೆ ಕಾಮೆಂಟ್ ಮಾಡಿರುವ ಆನಂದ್ ಮಹೀಂದ್ರಾರವರು, ಹಿಂದಿ ಚಿತ್ರದ ಹಾಡೊಂದನ್ನು ಉಲ್ಲೇಖಿಸಿ, ನಾನು ಈ ವೀಡಿಯೊವನ್ನು ಇಷ್ಟಪಡುತ್ತೇನೆ. ನಾನು ಪ್ರಯಾಣಿಕ, ಸ್ನೇಹಿತರೇ. ಚಾಲಕ ತನ್ನ ಸ್ಥಳದಲ್ಲಿಲ್ಲಎಂದು ಹೇಳಿದ್ದಾರೆ.

ಆನಂದ್ ಮಹೀಂದ್ರಾ ರವರು ಈ ವೀಡಿಯೊವನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಕೆಲವು ಆ ವ್ಯಕ್ತಿಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ ರೀತಿ ಸ್ಟಂಟ್ ಮಾಡಲು ಅವಕಾಶ ನೀಡುವುದಿಲ್ಲ. ವೀಡಿಯೊದಲ್ಲಿರುವ ಈ ವ್ಯಕ್ತಿ ಹೆಲ್ಮೆಟ್ ಕೂಡ ಧರಿಸಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ವ್ಯಕ್ತಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತಮ್ಮ ಟ್ವೀಟ್'ಗೆ ವಿರೋಧ ವ್ಯಕ್ತವಾದ ಕೂಡಲೇ ಆನಂದ್ ಮಹೀಂದ್ರಾ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ನಲ್ಲಿ, ಹೌದು, ನಾನು ಪ್ರಯಾಣಿಕನಾಗಿದ್ದೇನೆ. ಬೈಕ್ ಸವಾರ ತನ್ನ ಸ್ಥಳದಲ್ಲಿ ಇಲ್ಲ ಹಾಗೂ ಹೆಲ್ಮೆಟ್ ಧರಿಸಿಲ್ಲ. ಯಾರೂ ಈ ರೀತಿಯ ಸಾಹಸಕ್ಕೆ ಕೈ ಹಾಕಬಾರದು ಎಂದು ಹೇಳಿದ್ದಾರೆ. ಈ ರೀತಿ ಸ್ಟಂಟ್ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಇದರಿಂದ ಬೈಕ್ ಸವಾರರು ಗಾಯಗೊಳ್ಳುವುದು ಮಾತ್ರವಲ್ಲದೇ ಕೆಲವೊಮ್ಮೆ ಪ್ರಾಣ ಹಾನಿಯೂ ಸಂಭವಿಸಬಹುದು. ರಸ್ತೆಯಲ್ಲಿ ಸಂಚರಿಸುವ ಇತರ ಸಾರ್ವಜನಿಕರಿಗೂ ತೊಂದರೆ ತಪ್ಪಿದ್ದಲ್ಲ. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದಿರುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವುದನ್ನು ಸಹ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ಈ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಳಿದವರು ಆತನಂತೆ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿದರೆ ಅಪಾಯ ಖಚಿತ. ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸುಮಾರು 1.20 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ.
ಈ ರೀತಿಯ ಕಾನೂನುಬಾಹಿರ ಕೃತ್ಯಗಳನ್ನು ಹೊರ ಜಗತ್ತಿನ ಮುಂದೆ ಇಡುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತದೆ. ಯಾರಾದರೂ ಈ ರೀತಿಯ ಘಟನೆಗಳನ್ನು ರೆಕಾರ್ಡ್ ಮಾಡಿ ಅಪ್ ಲೋಡ್ ಮಾಡಿದರೆ ಅವು ಪೊಲೀಸರ ಗಮನಕ್ಕೆ ಬಂದು ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಈ ವ್ಯಕ್ತಿಯಿಂದ ಉಳಿದವರ ಸಂಚಾರಕ್ಕೆ ಅಡ್ಡಿಯಾಗಿರಲೂ ಬಹುದು. ಬೇರೆಯವರು ಅಪ್ ಲೋಡ್ ಮಾಡಿರುವ ವೀಡಿಯೊ ನೋಡಿ ಈ ವ್ಯಕ್ತಿಯೂ ಈ ಕೃತ್ಯಕ್ಕೆ ಕೈಹಾಕಿರಬಹುದು.

ಇತ್ತೀಚಿಗೆ ಈ ರೀತಿ ನಿಯಮ ಉಲ್ಲಂಘಿಸುವವರ ಬಗ್ಗೆ ಹಲವು ವೀಡಿಯೊಗಳು ವೈರಲ್ ಆಗುತ್ತಿವೆ. ಕಳೆದ ತಿಂಗಳು ಸೆಪ್ಟೆಂಬರ್ನಲ್ಲಿ Toyota Innova ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹೃದ್ರೋಗಿಯೊಬ್ಬರನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸಿದ್ದ ವೀಡಿಯೊ ವೈರಲ್ ಆಗಿತ್ತು. ಆತ ಸುಮಾರು 5 ಕಿ.ಮೀ ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸಿದ್ದ. ಈ ಘಟನೆ ನೆರೆ ರಾಜ್ಯ ಕೇರಳದಲ್ಲಿ ನಡೆದಿತ್ತು.ಇತ್ತೀಚೆಗೆ ವಯೋವೃದ್ಧರೊಬ್ಬರು ಹೆಚ್ಚು ಸುದ್ದಿಯಾಗಿದ್ದರು. ಆ ವೃದ್ದರು ಸುಮಾರು 3 ಕಿ.ಮೀ ದೂರ ಕಾಲುವೆ ನಿರ್ಮಿಸಿ ತಮ್ಮ ಊರಿಗೆ ನೀರು ಬರುವಂತೆ ಮಾಡಿದ ಕಾರಣ ಅವರ ಬಗ್ಗೆ ಹೆಚ್ಚು ಸುದ್ದಿಯನ್ನು ಬಿತ್ತರಿಸಲಾಯಿತು. ಈ ಮೂಲಕ ಆ ವಯೋವೃದ್ದರು ತಮ್ಮ ಹಳ್ಳಿಯಲ್ಲಿ ಮಾತ್ರವಲ್ಲದೆ ಇಂಟರ್ ನೆಟ್ ಮೂಲಕ ದೇಶಾದ್ಯಂತ ಸುದ್ದಿಯಾದರು. ವಿವಿಧ ಸುದ್ದಿ ಮಾಧ್ಯಮಗಳು ಅವರ ಬಗ್ಗೆ ಸುದ್ದಿಯನ್ನು ಪ್ರಕಟಿಸಿದವು. ಈ ಸುದ್ದಿಗೆ ಸ್ಪಂದಿಸಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಈ ರೈತನಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಆ ವಯೋವೃದ್ಧ ರೈತನಿಗೆ ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಮೂಲಕ ತಿಳಿಸಿದ್ದಾರೆ.


Click it and Unblock the Notifications








