ಏರ್ ಶೋ ವೇಳೆ ಫೈರ್ ಶೋ: ಪಾರ್ಕಿಂಗ್ನಲ್ಲಿದ್ದ 100ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿ..!
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ 2019ರ ಏರ್ ಶೋ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿ ಅವಘಡದಲ್ಲಿ 100ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ.

ಈ ಬಾರಿ ಏರ್ ಶೋ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದರೂ ಕೂಡಾ ಕೆಲವು ಅಹಿತಕರ ಘಟನೆಗಳು ಏರ್ ಶೋ ಪ್ರದರ್ಶನಕ್ಕೆ ಬರುವ ವೀಕ್ಷಕರಲ್ಲಿ ಭಯ ಹುಟ್ಟಿಸುವಂತ ವಾತಾವರಣ ನಿರ್ಮಾಣವಾಗಿರುವುದು ಸುಳ್ಳಲ್ಲ. ಯಾಕೆಂದ್ರೆ ಏರ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಎರಡು ಹೆಲಿಕ್ಯಾಪ್ಟರ್ ಮಧ್ಯೆ ಡಿಕ್ಕಿಯಾಗಿ ಓರ್ವ ವಿಂಗ್ ಕಮಾಂಡರ್ ಬಲಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ.

ಏರ್ ಶೋ ವೀಕ್ಷಣೆಗಾಗಿ ಬರುವವರಿಗಾಗಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದ್ದ ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 100ಕ್ಕೂ ಹೆಚ್ಚು ಕಾರುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.

ಪಾರ್ಕಿಂಗ್ ಸ್ಥಳದಲ್ಲಿ ಹುಲ್ಲು ಬೆಳೆದಿದ್ದು, ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯ ಕಿಡಿಯು ಪಾರ್ಕ್ ಸುತ್ತುವರಿದೆ. ಈ ವೇಳೆ ಕಾರಿನ ಟೈರ್ಗಳಿಗೂ ತಗುಲಿದ ಬೆಂಕಿಯು ಕೆಲವೇ ನಿಮಿಷಗಳಲ್ಲಿ ಇಡಿ ಪಾರ್ಕಿಂಗ್ ಸ್ಥಳವನ್ನು ಸುತ್ತುವರಿದೆ.

ಘಟನೆ ವೇಳೆ ಸ್ಥಳದಲ್ಲಿ ಯಾರ ಇಲ್ಲದಿರುವ ಕಾರಣ ಬೆಂಕಿ ಅವಘಡ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಏರ್ ಶೋ ನಲ್ಲಿ ಮಗ್ನನಾಗಿದ್ದ ಜನಕ್ಕೆ ದಟ್ಟ ಹೊಗೆ ಕಾಣಿಸಿಕೊಂಡಾಗಲೇ ಅಗ್ನಿ ದುರಂತ ಸಂಭವಿಸಿರುವುದು ಬೆಳಕಿಗೆ ಬಂದಿದೆ.

ಅಗ್ನಿಅವಘಡ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಅಗ್ನಿಯ ಜ್ವಾಲೆಯ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದು, ದಟ್ಟವಾದ ಹೊಗೆಯಿಂದಾಗಿ ಕಾರ್ಯಾಚರಣೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.

ಇನ್ನು ಘಟನೆಯಿಂದಾಗಿ ಸ್ಥಳದಲ್ಲಿ ಭಯದ ವಾತಾವರಣ ಶುರುವಾಗಿದ್ದು, ಬೆಂಕಿಯ ಕೆನ್ನಾಲಿಗೆ ಕಂಡು ಕಾರು ಮಾಲೀಕರು ಬೆಂಕಿಯಿಂದ ತಮ್ಮ ವಾಹನಗಳನ್ನು ರಕ್ಷಿಸಿಕೊಳ್ಳಲು ಪರದಾಟುತ್ತಿದ್ದಾರೆ.

ಸುಟ್ಟು ಬಿಸಾಕಿದ ಸಿಗರೇಟ್ನಿಂದ ನಡೆಯಿತೆ ಅನಾಹುತ?
ಕೆಲವು ವರದಿಗಳ ಪ್ರಕಾರ, ಒಣಗಿದ ಹುಲ್ಲಿನ ಮೇಲೆ ಸೇದಿ ಬಿಸಾಕಿದ ಸಿಗರೇಟು ಈ ಅಗ್ನಿ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಮೊದಲಿಗೆ ಒಣಹುಲ್ಲಿಗೆ ಹೊತ್ತಿಕೊಂಡ ಬೆಂಕಿ, 5ನೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರುಗಳಿಗೆ, ದ್ವಿಚಕ್ರ ವಾಹನಗಳಿಗೆ ವ್ಯಾಪಿಸಿದೆ.
MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಈ ವೇಳೆ 300ಕ್ಕೂ ಹೆಚ್ಚು ವಾಹನಗಳ ಟೈರ್ಗೆ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿ 100ರಿಂದ 150 ಕಾರುಗಳ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಆದ್ರೆ ಟಿವಿ ಚಾನಲ್ಗಳಲ್ಲಿ ಸುಟ್ಟ ವಾಹನಗಳ ಸಂಖ್ಯೆಯ 300ಕ್ಕೂ ಹೆಚ್ಚು ಎಂದು ಹೇಳುತ್ತಿವೆ.

ಇನ್ನು ಬೆಂಗಳೂರಿನಿಂದಲೇ ದೆಹಲಿಗೆ ಸ್ಥಳಾಂತರವಾಗಬೇಕಾಗಿದ್ದ ಏರೋ ಇಂಡಿಯಾ ಪ್ರದರ್ಶನದ 12ನೇ ಆವೃತ್ತಿಯು ಆರಂಭದ ದಿನದಿಂದಲೂ ದುರಂತಗಳಿಂದಲೇ ವಿವಾದಕ್ಕೀಡಾಗಿದೆ. ಶೋ ಆರಂಭದ ಹಿಂದಿನ ದಿನ ರಿಹರ್ಸಲ್ ನಡೆಸುತ್ತಿರುವಾಗ ಎರಡು ಯುದ್ಧ ವಿಮಾನಗಳು ಒಂದಕ್ಕೊಂದು ತಗುಲಿ, ನೆಲಕ್ಕುರುಳಿದ್ದರಿಂದ ಸಾಹಿಲ್ ಗಾಂಧಿ ಎಂಬ ಪೈಲಟ್ ಸಾವಿಗೀಡಾದ್ದರು.
MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್ನಲ್ಲಿ ಬೈಕ್ ರೈಡ್ ಮಾಡಿದ ಯುವಕ
ಈಗ, ಶೋ ಇನ್ನೇನು ಒಂದು ದಿನ ಮಾತ್ರ ಬಾಕಿಯಿದೆ ಎನ್ನುವಾಗ ನೂರಾರು ವಾಹನಗಳು ಬೆಂಕಿಗಾಹುತಿಯಾಗಿದ್ದು, ಪ್ರಕರಣದ ಕುರಿತು ಪೂರ್ತಿ ತನಿಖೆ ನಡೆದ ನಂತರವಷ್ಟೇ ನಿಖರವಾದ ಕಾರಣ ಬಯಲಿಗೆ ಬರಬೇಕಿದೆ.


Click it and Unblock the Notifications








