ಹೆಲ್ಮೆಟ್ ಇಲ್ಲದೆ ಬೈಕ್ ರೈಡ್- ತಡೆದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಬಿಜೆಪಿ ಮುಖಂಡ..!
ಹೆಲ್ಮೆಟ್ ಇಲ್ಲದೆಯೇ ಬೈಕ್ ಸವಾರಿ ಮಾಡುವುದು ಅಪರಾಧ ಎಂಬುವುದು ಗೊತ್ತಿದ್ದರೂ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಇಲ್ಲದೆಯೇ ಬೈಕ್ ಚಾಲನೆ ಮಾಡುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತೆವೆ. ಆದ್ರೆ ತಪ್ಪು ಮಾಡಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕ ಮೇಲೂ ತಾನು ಮಾಡಿದ್ದೆ ಸರಿ ಎನ್ನುವವರ ವಾದವನ್ನು ಕೇಳಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಹಲವಾರು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ಸಹ ಬಹುತೇಕ ವಾಹನ ಸವಾರರು ಸಂಚಾರಿ ನಿಯಮಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ತಪ್ಪು ಮಾಡುವ ವಾಹನ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ ಪ್ರಶ್ನೆ ಮಾಡಿದ ಪೊಲೀಸರ ಮೇಲೆಯೇ ಬಿಜೆಪಿ ಮುಖಂಡನೊಬ್ಬ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ಹೌದು, ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ಬಿಜೆಪಿ ಮುಖಂಡನೊಬ್ಬ ಹೆಲ್ಮೆಟ್ ಇಲ್ಲದೆಯೇ ಬೈಕ್ ಸವಾರಿ ಮಾಡುತ್ತಿದ್ದ. ಈ ವೇಳೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದೆಯೇ ವಾಹನಗಳ ಮಧ್ಯೆ ನುಗ್ಗಲು ಯತ್ನಿಸಿದ ಅರವಿಂದ್ ಸಿಂಗ್ ಎಂಬಾತನನ್ನು ತಡೆಯಲು ಯತ್ನಿಸಿದ್ದಾರೆ.

ಆದ್ರೆ ಪೊಲೀಸರ ಮಾತಿಗೂ ಕ್ಯಾರೆ ಎನ್ನದೇ ವಾಹನಗಳ ಮಧ್ಯೆ ನುಗ್ಗಲು ಯತ್ನಿಸಿದಾಗ ಬೈಕ್ ಕೀ ಕಿತ್ತುಕೊಂಡಿರುವ ಪೊಲೀಸರು ರಸ್ತೆ ಬದಿಗೆ ಬರುವಂತೆ ಸೂಚಿಸಿದ್ದಾರೆ. ಇಷ್ಟಕ್ಕೆ ಗರಂ ಆದ ಅರವಿಂದ್ ಸಿಂಗ್ ಟ್ರಾಫಿಕ್ ಪೊಲೀಸ್ ಪೇದೆಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ಹಲ್ಲೆಗೂ ಮುಂದಾಗಿದ್ದಾನೆ.

ಅದೇ ಸಮಯಕ್ಕೆ ಸ್ಥಳದಲ್ಲೇ ಇದ್ದ ಹಿರಿಯ ಟ್ರಾಫಿಕ್ ಪೊಲೀಸರು ಬಿಜೆಪಿ ಮುಂಖಡನನ್ನು ವಶಕ್ಕೆ ಪಡೆದಿರುವುದಲ್ಲದೇ ಕರ್ತವ್ಯಕ್ಕೆ ಅಡ್ಡಿ ಮತ್ತು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಹಿನ್ನೆಲೆಯಲ್ಲಿ ಹಲವಾರು ಕೇಸ್ಗಳನ್ನು ಜಡಿದು ಬೈಕ್ ಅನ್ನು ಸಹ ಸೀಜ್ ಮಾಡವಾಗಿದೆ. ಈ ವೇಳೆಯೂ ಹಿರಿಯ ಪೊಲೀಸರಿಗೂ ಅವಾಜ್ ಹಾಕುತ್ತಿರುವ ಬಿಜೆಪಿ ಮುಖಂಡ ಅರವಿಂದ್ ಸಿಂಗ್, 'ತನ್ನ ಬೈಕ್ ಹೆಲ್ಮೆಟ್ ಹಾಕುವುದು ತನ್ನಿಷ್ಟ' ಎನ್ನುವ ದಾಟಿಯಲ್ಲಿ ವಾದ ಮಾಡುತ್ತಿರುವ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಹೆಲ್ಮೆಟ್ ಬಳಕೆ ಮಾಡುವುದು ಯಾಕೆ ಹೇಳಿ? ಅದು ನಮ್ಮ ರಕ್ಷಣೆಗಾಗಿಯೇ ಇದೆಯೇ ಹೊರತು ಬೇರೆಯವರಿಗಲ್ಲ ಎಂಬುವುದು ಮೊದಲು ಅರಿತುಕೊಳ್ಳಬೇಕು. ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೆಲ್ಮೆಟ್ ಬಳಕೆ ಮಾಡಿದರೂ ಸಹ ಅದು ಆಗಬಹುದಾದ ದುರಂತಗಳಿಂದ ನಮ್ಮನ್ನು ಪಾರು ಮಾಡಬಲ್ಲದು. ಪರಿಸ್ಥಿತಿ ಹೀಗಿದ್ದರೂ ಕೂಡಾ ಹೆಲ್ಮೆಟ್ ಬಳಕೆ ಬೇಡವೇ ಬೇಡ ಎಂದು ಪ್ರತಿಭಟನೆ ಮಾಡುವವರೂ ಇದ್ದಾರೆ ಎಂದ್ರೆ ನೀವು ನಂಬಲೇಬೇಕು.

ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಸಾರಿಗೆ ಇಲಾಖೆ ಮತ್ತು ಆಯಾ ರಾಜ್ಯ ಸರ್ಕಾರಗಳು ಕೆಲವು ಕಠಿಣ ನಿಯಮಗಳನ್ನು ಜಾರಿ ತಂದಿದ್ದು, ಇವುಗಳಲ್ಲಿ ಬೈಕ್ ಸವಾರರಿಗೆ ಹೆಚ್ಚಿನ ಸುರಕ್ಷತೆ ನೀಡಬಲ್ಲ ಹೆಲ್ಮೆಟ್ ಕಡ್ಡಾಯ ಬಳಕೆ ಕೂಡಾ ಒಂದು. ಆದ್ರೆ ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಉಗ್ರ ಪ್ರತಿಭಟನೆಗಳನ್ನು ನಡೆಸುತ್ತಿರುವುದನ್ನು ನೋಡಿದರೆ ಅದಕ್ಕಿಂತ ಹಾಸ್ಯಾಸ್ಪದ ಮತ್ತೊಂದಿಲ್ಲ.

ಯಾಕೆಂದ್ರೆ, ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವುದನ್ನ ದೇಶದ ಬಹುತೇಕ ರಾಜ್ಯಗಳಲ್ಲಿ ಕಡ್ಡಾಯಗೊಳಿಸಲಾಗಿದ್ದು, ನಿಯಮ ಪಾಲಿಸದ ಬೈಕ್ ಸವಾರರನ್ನು ಹಿಡಿದು ದಂಡ ವಸೂಲಿ ಸಹ ಮಾಡಲಾಗುತ್ತಿದೆ. ಆದರೆ ಹೆಲ್ಮೆಟ್ ಬಳಕೆಯ ವಿರುದ್ಧ ಮಹಾರಾಷ್ಟ್ರದಲ್ಲಿ ದೊಡ್ಡ ಜನಾಂದೋಲನ ನಡೆಯುತ್ತಿದ್ದು, ಹೆಲ್ಮೆಟ್ ಕಡ್ಡಾಯ ವಿಚಾರ ಇದೀಗ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಹೆಲ್ಮೆಟ್ ಕಡ್ಡಾಯ ಬಳಕೆಯ ಕುರಿತಂತೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಬೈಕ್ ಸವಾರರ ಮಧ್ಯೆ ದೊಡ್ಡ ಗೊಂದಲವೇ ನಿರ್ಮಾಣವಾಗಿದ್ದು, ನಿಯಮ ಉಲ್ಲಂಘಿಸುವ ಬೈಕ್ ಸವಾರರ ವಿರುದ್ಧ ಕ್ರಮಕೈಗೊಳ್ಳುತ್ತಿರುವ ಪೊಲೀಸರ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಅಲ್ಲಿನ ಜನಪ್ರತಿನಿಧಿಗಳು ಸಹ ಕೈ ಜೋಡಿಸಿದ್ದು, ಟ್ರಾಫಿಕ್ ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಮಹಾರಾಷ್ಟ್ರದಲ್ಲಿ ಈಗಾಗಲೇ ಹೆಲ್ಮೆಟ್ ಬಳಕೆಯು ಕಡ್ಡಾಯವಾಗಿದ್ದು, ಜನಾಕ್ರೋಶದಿಂದಾಗಿ ಜನಪ್ರತಿನಿಧಿಗಳು ಮತ್ತು ಟ್ರಾಫಿಕ್ ಪೊಲೀಸರು ಗೊಂದಲದಲ್ಲಿ ಸಿಲುಕುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.

ಇದರಿಂದಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಪೊಲೀಸರಿಗೆ ಹೊಸ ಸೂಚನೆ ಒಂದನ್ನು ನೀಡಿದ್ದು, ಹೆಲ್ಮೆಟ್ ಹಾಕದ ಬೈಕ್ ಸವಾರರನ್ನು ತಡೆದು ಕಿರುಕುಳ ನೀಡದೆ ಇ-ಚಲನ್ ಮೂಲಕವೇ ದಂಡ ವಸೂಲಿ ಮಾಡಿ ಎಂದಿದ್ದಾರೆ.

ಇ-ಚಲನ್ ಮೂಲಕ ದಂಡವಸೂಲಿ ಮಾಡಲು ಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವಾಗಿ ಪೊಲೀಸ್ ಇಲಾಖೆಗೆ ಭರವಸೆ ನೀಡಿರುವ ದೇವೇಂದ್ರ ಫಡ್ನವಿಸ್ ಅವರು, ಹೆಲ್ಮೆಟ್ ಇಲ್ಲ ಎಂಬ ಕಾರಣಕ್ಕೆ ಬೈಕ್ ಸವಾರರನ್ನು ತಡೆದು ಕಿರುಕುಳ ನೀಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಹಾಗಂತ ಹೆಲ್ಮೆಟ್ ಬಳಕೆ ಮಾಡದ ಬೈಕ್ ಸವಾರರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದು ಅರಿತಿರುವ ಫಡ್ನವಿಸ್, ಬೈಕ್ ಸವಾರರಿಗೆ ಸಮಾಧಾನ ಪಡಿಸಲು ಜಾಣ್ಮೆಯ ಕ್ರಮ ಅನುಸರಿಸಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ಹೆಲ್ಮೆಟ್ ಬಳಕೆಯ ವಿಚಾರವು ಇದೀಗ ಮಹಾರಾಷ್ಟ್ರದಲ್ಲಿ ಹೊಸ ವಿವಾದವನ್ನೇ ಸೃಷ್ಠಿಸಿದ್ದು, ಹೆಲ್ಮೆಟ್ ಬಳಕೆ ಮಾಡದ ಬೈಕ್ ಸವಾರರನ್ನು ತಡೆಯಬೇಡಿ, ಅದರ ಬದಲಾಗಿ ಇ-ಚಲನ್ ಮೂಲಕ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿಗಳೇ ಆದೇಶಿಸಿದ್ದಾರೆ.


Click it and Unblock the Notifications








