ನಾಡಿನಾದ್ಯಂತ ಆಯುಧ ಪೂಜೆ ಸಡಗರ- ವಾಹನಗಳ ಪೂಜೆಯ ಹಿಂದಿನ ವಿಶೇಷತೆ ಏನು?
ದೇಶದ್ಯಂತ ಆಯುಧ ಪೂಜೆ ಸಂಭ್ರಮ ಮನೆಮಾಡಿದ್ದು, ಆಯುಧಗಳನ್ನು ಸಿಂಗರಿಸಿ ಭಕ್ತಿಯಿಂದ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ವೇಳೆ ವಾಹನಗಳ ಪೂಜೆಗೂ ಹೆಚ್ಚಿನ ಮಹತ್ವವಿದ್ದು, ವಾಹನ ಪೂಜೆಯ ಹಿಂದಿನ ಮಹತ್ವದ ಕುರಿತು ಈ ಲೇಖನದಲ್ಲಿ ನಾವಿಂದು ಚರ್ಚಿಸಿದ್ದೇವೆ.

ದೇಶದ್ಯಾಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬಗಳನ್ನು ಅದ್ಧೂರಿ ಆಚರಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನವಾದ ವಿಶಜದಶಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವ ಚಾಕುವನಿಂದ ಹಿಡಿದು ದೇಶದ ಗಡಿ ಕಾಯುವ ಅತ್ಯಾಧುನಿಕ ಯುದ್ಧ ವಿಮಾನಗಳಗೆ ಆಯುಧ ಪೂಜೆ ನೇರವೇರಿಸಲಾಗುತ್ತದೆ. ಈ ವೇಳೆ ವಾಹನಗಳಿಗೆ ಪೂಜೆ ಸಲ್ಲಿಕೆ ಹಿಂದೆಯೂ ಹಲವು ನಂಬಿಕೆಗಳಿವೆ.

ಆಯುಧ ಪೂಜೆಯಂದು ಮಾಲೀಕರು ತಮ್ಮ ವಾಹನಗಳನ್ನು ತೊಳೆದು, ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಶಿಣವನ್ನು ಹಚ್ಚಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಕುಂಬಳ ಕಾಯಿ ಒಡೆದು ಪೂಜೆ ಸಲ್ಲಿಸುವುದು ವಾಡಿಕೆ.

ಹೀಗಾಗಿಯೇ ಆಯುಧ ಪೂಜೆ ದಿನದಂದು ಮಾವಿನ ಸೊಪ್ಪು, ಬಾಳೆ ಗಿಡ, ಕಬ್ಬು ಹಾಗೂ ಚಂಡು ಹೂವುಗಳಿಂದ ಆಲಂಕರಿಸಿದ್ದ ವಾಹನಗಳು ಮದುವಣಗಿತ್ತಿಯಂತೆ ರಸ್ತೆಯೆಲ್ಲೆಡೆ ಓಡಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ.

ನೂತನ ವಾಹನ ಖರೀದಿಗಾರರು ಹೆಚ್ಚಾಗಿ ಆಯುಧ ಪೂಜೆಯಂದೇ ತಮ್ಮ ಕಾರು, ಬೈಕ್ಗಳಿಗೆ ಪೂಜೆ ಸಲ್ಲಿಸಿ ಮೊದಲ ಪ್ರಯಾಣ ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ವಾಹನಗಳಿಗೆ ದೀರ್ಘ ಬಾಳ್ವಿಕೆ ಪ್ರಾಪ್ತಿಯಾಗುವುದರೊಂದಿಗೆ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ.

ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವಿಕ ಶಕ್ತಿ ಇದ್ದೇ ಇರುತ್ತದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ.

ಗ್ರಾಮೀಣ ಪ್ರದೇಶದಲ್ಲೂ ಆಯುಧ ಪೂಜೆಗೆ ಅತಿ ಹೆಚ್ಚು ಮಹತ್ವವಿದ್ದು, ರೈತರು ತಮ್ಮ ಕೃಷಿ ಸಾಮಾಗ್ರಿಗಳನ್ನು ಪೂಜಿಸುತ್ತಾರೆ. ಅತ್ತ ಗ್ಯಾರೇಜ್ ನಲ್ಲಿ ಆಯುಧ ಪೂಜೆಯಂದು ವಿಶೇಷ ಪೂಜೆಯನ್ನು ನಡೆಸಿ ಮಾಲೀಕರು ತಮ್ಮ ಕೆಲಸಗಾರರಿಗೆ ವಿಶೇಷ ಬೋನಸ್, ವಸ್ತ್ರಗಳನ್ನು ನೀಡಿ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.
MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಆಯುಧಗಳ ಪೂಜೆಯ ಹಿಂದಿನ ಸತ್ಯ
ದ್ವಾಪರ ಯುಗದಲ್ಲಿ ಪಾಂಡವರು 13 ವರ್ಷಗಳ ವನವಾಸ ಮುಗಿಸಿ ಬಂದ ಬಳಿಕ ಒಂದು ವರ್ಷದ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಡುತ್ತಾರೆ.

ತದನಂತರ ವನವಾಸದ ಮುಗಿಸಿ ಬಂದು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಆಯುಧಗಳನ್ನು ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿ ಇದೇ ಪ್ರತೀತಿ ಮುಂದುವರಿದುಕೊಂಡು ಬಂದಿರುವುದು ವಿಶೇಷ.

ಈ ಸಂಬಂಧ ಓದುಗರ ಜೊತೆಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








