ರಸ್ತೆ ಅಪಘಾತಗಳ ತೀವ್ರತೆ ತಡೆಯಲು ಕೇಂದ್ರ ಸರ್ಕಾರದಿಂದ ಮತ್ತಷ್ಟು ಟಫ್ ರೂಲ್ಸ್ ಜಾರಿ
ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಳಪೆ ಹೆಲ್ಮೆಟ್ಗಳ ಬಳಕೆಯು ಹೆಚ್ಚಳವಾಗಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ. ಹೀಗಾಗಿ ಕಳಪೆ ಹೆಲ್ಮೆಟ್ ಬಳಕೆಯನ್ನು ತಡೆಯಲು ಕೇಂದ್ರದ ಸಾರಿಗೆ ಇಲಾಖೆಯು ಮೋಟಾರು ವಾಹನ ಕಾಯ್ದೆಯಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡಿದೆ.

ಭಾರತದಲ್ಲಿ ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆಯನ್ನು ಜಾರಿಗೆ ತರುವಲ್ಲಿ ವಿವಿಧ ರಾಜ್ಯಗಳು ಯಶಸ್ವಿಯಾಗುತ್ತಿದ್ದರೂ ಕಳಪೆ ಹೆಲ್ಮೆಟ್ ಬಳಕೆಯನ್ನು ತಡೆಯುವಲ್ಲಿ ವಿಫಲವಾಗುತ್ತಿವೆ. ವಾಹನ ಸವಾರರು ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟದ ಬಗ್ಗೆ ತಡೆಕೆಡಿಸಿಕೊಳ್ಳದೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಳಪೆ ಗುಣಮಟ್ಟದ ಹೆಲ್ಮೆಟ್ಗಳನ್ನು ಬಳಸುತ್ತಿರುವುದು ವಾಹನ ಸವಾರರ ಪ್ರಾಣ ಹಾನಿಗೆ ಪ್ರಮುಖ ಕಾರಣವಾಗುತ್ತಿವೆ.

ಇದೇ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಳೆದ ವರ್ಷವೇ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, 2021ರ ಜೂನ್ 1 ರಿಂದಲೇ ಅನ್ವಯವಾಗುವಂತೆ ಐಎಸ್ಐ ಅಥವಾ ಬಿಎಸ್ಐ ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಆದೇಶ ನೀಡಿತ್ತು.

ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರೂ ಹಲವಾರು ಹೆಲ್ಮೆಟ್ ತಯಾರಕ ಕಂಪನಿಗಳು ಅಗ್ಗದ ಬೆಲೆಯ ಹೆಲ್ಮೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಿದ್ದವು. ಇದಕ್ಕಾಗಿ ಉತ್ಪಾದಕರಿಗೆ ಮತ್ತು ಬಳಕೆದಾರರಿಗೂ ಅನ್ವಯವಾಗುವ ಹೊಸ ನಿಯಮ ಜಾರಿಗೆ ತಂದಿದ್ದ ಸಾರಿಗೆ ಇಲಾಖೆಯು ಮೊದಲ ಕಳಪೆ ಹೆಲ್ಮೆಟ್ ತಯಾಕರ ವಿರುದ್ಧ ಸಮರ ಸಾರಿತ್ತು.

ಕಳಪೆ ಹೆಲ್ಮೆಟ್ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಕಠಿಣ ಶಿಕ್ಷೆ ಘೋಷಣೆ ಮಾಡಿದ್ದ ಕೇಂದ್ರ ಸಾರಿಗೆ ಇಲಾಖೆಯು ಕಳಪೆ ಹೆಲ್ಮೆಟ್ ಮಾರಾಟ ಕಂಡುಬಂದಲ್ಲಿ ತಯಾಕರಿಗೆ ಮತ್ತು ಮಾರಾಟಗಾರರಿಗೆ ಒಂದು ವರ್ಷ ಜೈಲು ಇಲ್ಲವೆ ರೂ.1 ಲಕ್ಷ ದಂಡ ವಿಧಿಸುವ ನಿಯಮವನ್ನು ಅಧಿಕೃತಗೊಳಿಸಿತ್ತು.

ಇದೀಗ ಕೇಂದ್ರ ಸರ್ಕಾರವು ಕಳಪೆ ಹೆಲ್ಮೆಟ್ ಬಳಕೆದಾರರಿಗೂ ಕೂಡಾ ಅನ್ವಯಿಸುವಂತೆ ಮೋಟಾರು ವಾಹನ ಕಾಯ್ದೆಯಲ್ಲಿ ಹೊಸ ನಿಯಮವನ್ನು ಸೇರ್ಪಡೆ ಮಾಡಲಾಗಿದ್ದು, ಸುರಕ್ಷಾ ಮಾನದಂಡಗಳನ್ನು ಪೂರೈಸಿರುವ ಹೆಲ್ಮೆಟ್ ಮಾದರಿಗಳನ್ನು ಮಾತ್ರವೇ ಬಳಕೆ ಮಾಡುವಂತೆ ಮನವಿ ಮಾಡಿದೆ.

ಗುಣಮಟ್ಟದ ಹೆಲ್ಮೆಟ್ ನಿಯಮ ಉಲ್ಲಂಘಿಸಿದ್ದಲ್ಲಿ ರೂ. 1 ಸಾವಿರ ತನಕ ದಂಡ ನಿಗದಿಪಡಿಸಲಾಗಿದ್ದು, ಒಂದು ವೇಳೆ ಯಾವುದೇ ಮಾದರಿಯ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಿದ್ದರೆ ಗರಿಷ್ಠ ರೂ. 2 ಸಾವಿರ ತನಕ ದಂಡ ವಿಧಿಸಬೇಕಾಗುತ್ತದೆ.

ಹಾಗೆಯೇ ಹೆಲ್ಮೆಟ್ ಧರಿಸಿ ಅದರ ಬೆಲ್ಟ್ ಧರಿಸದಿದ್ದರೂ ಕೂಡಾ ದಂಡ ವಿಧಿಸಲಾಗುತ್ತಿದ್ದು, ಹೆಲ್ಮೆಟ್ ಬಕಲ್ ಹಾಕದಿದ್ದರೂ ಕೂಡಾ ಇನ್ಮುಂದೆ ಗರಿಷ್ಠ ರೂ.1 ಸಾವಿರ ದಂಡ ಪಾವತಿ ಮಾಡಬೇಕಾಗುತ್ತದೆ.

ಇದರೊಂದಿಗೆ ಕೇಂದ್ರ ಸಾರಿಗೆ ಇಲಾಖೆಯು ಹೊಸ ಮೋಟಾರ್ ವಾಹನ ಕಾಯ್ದಯಲ್ಲಿ ಇನ್ನು ಕೆಲವು ರಸ್ತೆ ನಿಯಮ ಉಲ್ಲಂಘನೆಗಳಿಗೆ ಕಠಿಣ ಕಾನೂನು ಕ್ರಮಗಳನ್ನು ಪ್ರಸ್ತಾಪಿಸಲಾಗಿದ್ದು, ಸಿಗ್ನಲ್ ಜಂಪ್ ಮಾಡುವ ವಾಹನ ಸವಾರರಿಗೆ ಗರಿಷ್ಠ ರೂ. 2 ಸಾವಿರ ತನಕ ದಂಡ ಮತ್ತು ನಿಯಮ ಉಲ್ಲಂಘಿಸಿ ಪುಟ್ಪಾತ್ಗಳ ಮೇಲೆ ವಾಹನ ಚಲಾಯಿಸುವವರ ಮೇಲೆ ರೂ. 1 ಸಾವಿರ ದಂಡ ನಿಗದಿಪಡಿಸಲಾಗಿದೆ.

ಜೊತೆಗೆ ನಿಮಯ ಉಲ್ಲಂಘಿಸಿ ವಾಹನಗಳ ಲಗೇಜ್ ತುಂಬಿಸುವ ವಾಹನ ಮಾಲೀಕರ ವಿರುದ್ದವೂ ದುಬಾರಿ ದಂಡವನ್ನು ಜಾರಿಗೆ ತರಲಾಗಿದ್ದು, ನಿಯಮ ಮೀರಿ ಲಗೇಜ್ ಸಾಗಿಸುವ ವಾಹನಗಳಿಗೆ ರೂ. 20 ಸಾವಿರ ತನಕ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಹೊಸ ದಂಡಗಳ ಪಟ್ಟಿಯಲ್ಲಿ ಆ್ಯಂಬುಲೆನ್ಸ್ಗಳಿಗೆ ಅಡ್ಡಿಪಡಿಸುವ ವಾಹನ ಸವಾರರಿಗೂ ಕೂಡಾ ದುಬಾರಿ ದಂಡ ವಿಧಿಸಲಾಗಿದ್ದು, ಆ್ಯಂಬುಲೆನ್ಸ್ ಸಾಗಲು ಅಡ್ಡಿ ಉಂಟುಮಾಡಿದ್ದಲ್ಲಿ ರೂ. 10 ಸಾವಿರ ತನಕ ದಂಡ ಹಾಕಲಾಗುತ್ತದೆಯೆಂತೆ.

ಭಾರತದಲ್ಲಿ ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆ ಅಪಘಾತ ಪ್ರಕಣಗಳು ಕೂಡಾ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಅಪಘಾತಗಳ ಸಂಖ್ಯೆಯನ್ನು ತಡೆಯಲು ಮೋಟಾರ್ ವಾಹನ ಕಾಯ್ದೆಯಲ್ಲಿ ನಿರಂತರವಾಗಿ ಬದಲಾವಣೆಗಳನ್ನು ತರಲಾಗುತ್ತಿದೆ.

ಅಪಘಾತಗಳ ಸಂಖ್ಯೆ ತಗ್ಗಿಸುವುದರ ಜೊತೆಗೆ ಅಪಘಾತಗಳಲ್ಲಿ ತೀವ್ರತೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ವಾಹನಗಳ ಸುರಕ್ಷಾ ಮಾನದಂಡಗಳನ್ನು ಕಠಿಣಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಕಾನೂನು ಕ್ರಮಗಳು ಹಂತ-ಹಂತವಾಗಿ ಜಾರಿಗೆ ಬರಲಿವೆ.

ವರದಿಗಳ ಪ್ರಕಾರ ಕಳೆದ ವರ್ಷ ಸುಮಾರು 4.43 ಲಕ್ಷ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 1.37 ಲಕ್ಷ ಜನ ಸಾವನ್ನಪ್ದಿದ್ದರು. ಇದರಲ್ಲಿ ಶೇ.25 ರಷ್ಟು ದ್ವಿಚಕ್ರ ವಾಹನ ಸವಾರರೇ ಸಾವಪ್ಪಿದ್ದು, ಹೀಗಾಗಿ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲು ನಿರಂತರವಾಗಿ ಮೋಟಾರ್ ವಾಹನ ಕಾಯ್ದಯಲ್ಲಿ ಬದಲಾವಣೆ ತರಲಾಗುತ್ತಿದೆ.


Click it and Unblock the Notifications








