ಕಡ್ಡಾಯ ಹೆಲ್ಮೆಟ್ ವಿರುದ್ಧ ತಿರುಗಿಬಿದ್ದ ಜನಪ್ರತಿನಿಧಿಗಳು ಮಾಡಿದ್ದೇನು ಗೊತ್ತಾ?
ಹೆಲ್ಮೆಟ್ ಬಳಕೆ ಮಾಡುವುದು ಯಾಕೆ ಹೇಳಿ? ಅದು ನಮ್ಮ ರಕ್ಷಣೆಗಾಗಿಯೇ ಇದೆಯೇ ಹೊರತು ಬೇರೆಯವರಿಗಲ್ಲ. ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೆಲ್ಮೆಟ್ ಬಳಕೆ ಮಾಡಿದರೂ ಸಹ ಅದು ಆಗಬಹುದಾದ ದುರಂತಗಳಿಂದ ನಮ್ಮನ್ನು ಪಾರು ಮಾಡಬಲ್ಲದು. ಆದ್ರೆ ಹೆಲ್ಮೆಟ್ ಬಳಕೆ ಬೇಡವೇ ಬೇಡ ಎಂದು ಪ್ರತಿಭಟನೆ ಮಾಡುವವರಿಗೆ ಏನೆಂದೂ ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ.

ಹೌದು, ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದಾಗಿ ದೇಶಾದ್ಯಂತ ನೂರಾರು ಅಪಘಾತಗಳು ಸಂಭವಿಸುತ್ತಿದ್ದು, ಹೆಲ್ಮೆಟ್ ಇಲ್ಲದ ಪರಿಣಾಮ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಜೀವರಕ್ಷಕವಾಗಿರುವ ಹೆಲ್ಮೆಟ್ ಬಳಕೆ ವಿರೋಧಿಸುತ್ತಿರುವ ಕೆಲವರು ಮಾತ್ರ ಯಾವುದೇ ಕಾರಣಕ್ಕೂ ಹೆಲ್ಮೆಟ್ ಬಳಕೆ ಮಾಡಲ್ಲ ಎನ್ನುವ ಶಪಥ ಮಾಡುತ್ತಿದ್ದಾರೆ.

ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಸಾರಿಗೆ ಇಲಾಖೆ ಮತ್ತು ಆಯಾ ರಾಜ್ಯ ಸರ್ಕಾರಗಳು ಕೆಲವು ಕಠಿಣ ನಿಯಮಗಳನ್ನು ಜಾರಿ ತರುತ್ತಿವೆ. ಇವುಗಳಲ್ಲಿ ಬೈಕ್ ಸವಾರರಿಗೆ ಹೆಚ್ಚಿನ ಸುರಕ್ಷತೆ ನೀಡಬಲ್ಲ ಹೆಲ್ಮೆಟ್ ಕಡ್ಡಾಯ ಬಳಕೆ ಕೂಡಾ ಒಂದು. ಆದ್ರೆ ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಉಗ್ರ ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಪಘಾತಗಳ ಸಂದರ್ಭದದಲ್ಲಿ ಬೈಕ್ ಸವಾರರಿಗೆ ಸುರಕ್ಷತೆ ಸಿಗಲಿ ಎನ್ನುವ ಉದ್ದೇಶದಿಂದ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವಂತೆ ದೇಶದ ಪ್ರತಿ ನಗರದಲ್ಲೂ ಸೂಕ್ತ ಕ್ರಮ ಕೈಗೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು, ಹೆಲ್ಮೆಟ್ ಬಳಕೆ ಮಾಡದ ಸವಾರರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದಾರೆ.

ಟ್ರಾಫಿಕ್ ಪೊಲೀಸರ ಕ್ರಮದಿಂದ ರೊಚ್ಚಿಗೆದ್ದಿರುವ ಮಹಾರಾಷ್ಟ್ರದ ಜನತೆ ಕೇಂದ್ರದ ಸಾರಿಗೆ ಇಲಾಖೆಯ ಮಹತ್ವದ ಯೋಜನೆಯನ್ನು ಅಣುಕಿಸಿರುವುದಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಘಟನೆಯು ದೇಶದ ಪ್ರತಿಷ್ಠಿತ ಪುಣೆ ನಗರದಲ್ಲಿ ನಡೆದಿದ್ದು, ಪುಣೆ ನಗರದ ಪೊಲೀಸ್ ಕಮಿಷನರ್ ಕೆ.ವೆಂಕಟಾಚಲಂ ಅವರು ಜನವರಿ 1, 2019 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂದು ಆದೇಶಿಸಿದ್ದು, ಇದರಿಂದ ವಾಹನ ಸವಾರರು ಪೊಲೀಸರ ವಿರುದ್ದವೇ ತಿರುಗಿಬಿದ್ದಿದ್ದಾರೆ.

ಪೊಲೀಸ್ ಕಮಿಷನರ್ ಕೆ.ವೆಂಕಟಾಚಲಂ ಅವರ ಆದೇಶದ ವಿರುದ್ಧ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪ್ರತಿನಿಧಿಗಳು, ಉದ್ಯಮಿಗಳು ಜೊತೆಗೆ ಎನ್ಜಿಒಗಳು ಮತ್ತು ಆರ್ಟಿಐ ಕಾರ್ಯಕರ್ತರನ್ನು ಒಳಗೊಂಡಂತೆ ಹಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಹೆಲ್ಮೆಟ್ ಕಡ್ದಾಯ ಬೇಡ ಎನ್ನುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದಲೇ ಈ ಪ್ರತಿಭಟನೆ ನಡೆಯುತ್ತಿದ್ದು, ಜನತೆಯ ಆಶಯಕ್ಕೆ ವಿರುದ್ಧವಾಗಿ ಪೊಲೀಸರು ಹೊಸ ಕಾಯ್ದೆ ತರುತ್ತಿರುವುದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರ ಪಟ್ಟುಹಿಡಿದ್ದಾರೆ.

ಆದ್ರೆ ಪ್ರತಿಭಟನಾಕರರ ಬೇಡಿಕೆಗೆ ಯಾವುದೇ ಸೊಪ್ಪು ಹಾಕದ ಪೊಲೀಸರು ಎಷ್ಟೇ ಪ್ರತಿಭಟನೆ ಮಾಡಿದರೂ ಸಹ ಹೊಸ ಕಾಯ್ದೆ ಕಡ್ಡಾಯವಾಗಿ ಅನುಷ್ಠಾನ ತರುವುದಾಗಿ ಹೇಳಿಕೊಂಡಿದ್ದು, ಇದೀಗ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಲ್ಮೆಟ್ ಸಮಾಧಿ ಮಾಡಿ ಆಕ್ರೋಶ
ಕಡ್ಡಾಯ ಹೆಲ್ಮೆಟ್ ಬೇಡವೆಂದರೂ ಹೊಸ ನಿಯಮ ಜಾರಿಗೆ ತರುತ್ತಿರುವ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜನಪ್ರತಿಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ನಿನ್ನೆಯಷ್ಟೇ ಹೆಲ್ಮೆಟ್ ಸಮಾಧಿ ಮಾಡಿ ವಿನೂತನಲಾಗಿ ಪ್ರತಿಭಟಿಸಿವೆ.
MOST READ: ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಹೆದ್ದಾರಿಗಳಲ್ಲಿ ಹೆಲ್ಮೆಟ್ ಬಳಕೆಗೆ ಮಾತ್ರವೇ ನಮ್ಮ ಬೆಂಬಲ ಎಂದಿರುವ ಪ್ರತಿಭಟನಾಕಾರರು ನಗರದ ಒಳಗೆ ಹೆಲ್ಮೆಟ್ ಬಳಕೆಯಿಂದಾಗಿ ಬೈಕ್ ಸವಾರರಿಗೆ ಅನುಕೂಲಕ್ಕಿಂತಲೂ ಅನಾನೂಕಲವೇ ಹೆಚ್ಚು ಎಂದು ವಾದಿಸುತ್ತಿದ್ದು, ಶ್ರವಣದೋಷ ಸೇರಿದಂತೆ ಹಲವು ತೊಂದರೆಗಳಾಗಲಿವೆ ಎನ್ನುತ್ತಿವೆ.

ಜೊತೆಗೆ ಕಡ್ಡಾಯ ಹೆಲ್ಮೆಟ್ಗಿಂತಲೂ ಪುಣೆ ನಗರದಲ್ಲಿ ಗಂಟೆಗೆ 25ಕಿ.ಮಿ ವೇಗದಲ್ಲೂ ಸಂಚಲಿಸಲು ಸಾಧ್ಯವಿರದ ರಸ್ತೆಗಳನ್ನು ಅಗಲಿಕರಣ ಮಾಡುವತ್ತ ಗಮನಹರಿಸಿ ಎನ್ನುತ್ತಿರುವ ಪ್ರತಿಭಟನಾಕಾರರು, ಎಷ್ಟೇ ಕಠಿಣ ನಿಯಮ ಜಾರಿಗೆ ತಂದ್ರು ಹೆಲ್ಮೆಟ್ ಮಾತ್ರ ಮುಟ್ಟುವುದಿಲ್ಲ ಎನ್ನುತ್ತಿದ್ದಾರೆ.
MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಅದೇನೇ ಇರಲಿ, ಹೆಲ್ಮೆಟ್ ಇರುವುದು ನಮ್ಮ ಸರಕ್ಷತೆಗಾಗಿಯೇ ಇರುವುದನ್ನು ಪ್ರತಿಭಟನಾಕಾರರು ಮರೆಯಬಾರದು. ಒಂದು ವೇಳೆ ಹೆಲ್ಮೆಟ್ ಇಲ್ಲದೇ ಆಗುವ ದುರಂತಗಳಿಗೆ ಯಾರೂ ಹೊಣೆಯಾಗುತ್ತಾರೆ ಎನ್ನುವುದು ಮುಂದಿನ ಪ್ರಶ್ನೆ. ಹೀಗಾಗಿ ಇಂತಹ ಪ್ರತಿಭಟನೆಗಳಲ್ಲಿ ಅರ್ಥವಿಲ್ಲ ಎನ್ನಬಹುದು. ಹಾಗಾದ್ರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?


Click it and Unblock the Notifications








