ವರ್ಲ್ಡ್ ಕ್ರಾಸ್ Rally: ಕನ್ನಡಿಗ ಸಂತೋಷ್ ಸ್ಪರ್ಧೆ
ಬಹು ರಾಷ್ಟ್ರೀಯ ಸೂಪರ್ ಕ್ರಾಸ್ ಹಾಗೂ ಡರ್ಟ್ ಟ್ರಾಕ್ ಚಾಂಪಿಯನ್ ಆಗಿರುವ ಬೆಂಗಳೂರಿನ ಸಿಎಸ್ ಸಂತೋಷ್ ಇದೀಗ ವರ್ಲ್ಡ್ ಕ್ರಾಸ್ ಕಂಟ್ರಿ Rally ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ.
ಮೊದಲ ಹಂತದ ಚಾಂಪಿಯನ್ಶಿಪ್ ಅಬುದಾಬಿಯಲ್ಲಿ ಎಪ್ರಿಲ್ 4ರಿಂದ ಹಾಗೂ ಎರಡನೇ ಸುತ್ತಿನ Rally ಎಪ್ರಿಲ್ 21ರಿಂದ ಖತಾರ್ನಲ್ಲಿ ಜರಗಲಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯನೊಬ್ಬನಿಗೆ ಅಬುದಾಬಿ ಡೆಸಾರ್ಟ್ ಚಾಲೆಂಜ್ನಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆತಿದೆ.
14ನೇ 'ರೇಡ್ ಡಿ ಹಿಮಾಲಯ' ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಆಲಂಕರಿಸಿರುವುದೇ ಸಂತೋಷ್ಗೆ ಇಂತಹದೊಂದು ಬಹುದೊಡ್ಡ ಅವಕಾಶ ಹರಸಿಕೊಂಡು ಬಂದಿದೆ. ಇದೀಗ ಅಗ್ರ 20ರ ಪಟ್ಟಿಯೊಳಗೆ ಪ್ರವೇಶ ಪಡೆಯುವ ಗುರಿಯಿರಿಸಿಕೊಂಡಿದ್ದಾರೆ.
ಅಂದ ಹಾಗೆ ದಿನ ಬೆಳಗಾಗುವುದರೊಳಗೆ ಸಂತೋಷ್ ಮಹತ್ತರ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಕಳೆದ ಹತ್ತು ವರ್ಷಗಳಿಂದ ರೇಸಿಂಗ್ ಜಗತ್ತಿನಲ್ಲಿ ನಡೆಸಿರುವ ಅವಿರತ ಪ್ರಯತ್ನವೇ 29ರ ಹರೆಯದ ಸಂತೋಷ್ ಸಾಹಸಕ್ಕೆ ಕೈಗನ್ನಡಿಯಾಗಿದೆ. ಸೂಪರ್ ಕ್ರಾಸ್, ಮೊಟೊ ಕ್ರಾಸ್ನಿಂದ ಹಿಡಿದು ಡರ್ಟ್ ಟ್ರ್ಯಾಕ್ ವರೆಗೂ ತಮ್ಮ ಪ್ರಭಾವ ಬೀರಿರುವ ಸಂತೋಷ್ ಏಷಿಯನ್ ಮೊಟೊಕ್ರಾಸ್ ಚಾಂಪಿಯನ್ಶಿಪ್ನಲ್ಲಿ ಗರಿಷ್ಠ ಫಿನಿಷರ್ ಮಾಡಿದ ಮೊದಲ ಭಾರತೀಯ (2008ರಲ್ಲಿ 4ನೇ ಸ್ಥಾನ) ಎನಿಸಿಕೊಂಡಿದ್ದರು.

ವರ್ಲ್ಡ್ ಕ್ರಾಸ್ ಕಂಟ್ರಿ Rally ಮುನ್ನಡಿಯಾಗಿ ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂತೋಷ್, ಉತ್ತಮ ನಿರ್ವಹಣೆ ನೀಡುವ ಭರವಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರೈಡ್ ಡಿ ಹಿಮಾಲಯ ವಿಜೇತ ಹೋಂಡಾ ಸಿಆರ್ಎಫ್ ಬೈಕ್ ಪ್ರದರ್ಶನಕ್ಕಿಟ್ಟಿದ್ದರು.

ಇನ್ನು ಅಬುದಾಬಿ ವರ್ಲ್ಡ್ ಕ್ರಾಸ್ ಕಂಟ್ರಿ Rally ಚಾಂಪಿಯನ್ಶಿಪ್ಗಾಗಿ ಸಂತೋಷ್ ಸುಜುಕಿಯ ಶಕ್ತಿಶಾಲಿ ಬೈಕ್ ಬಳಕೆ ಮಾಡಲಿದ್ದಾರೆ.

2015ನೇ ಇಸವಿಯ ಡಕಾರ್ Rally ಚಾಂಪಿಯನ್ಶಿಪ್ನಲ್ಲಿ ಸ್ಪರ್ದಿಸುವ ಸ್ಪಷ್ಟ ಗುರಿ ಹೊಂದಿರುವ ಸಂತೋಷ್ ಈಗಾಗಲೇ ಕಠಿಣ ಪ್ರಯತ್ನ ಆರಂಭಿಸಿದ್ದು, ಮುಂಬರುವ ವರ್ಲ್ಡ್ ಕ್ರಾಸ್ ಕಂಟ್ರಿ Rally ಭದ್ರ ಅಡಿಪಾಯ ಒದಗಿಸಿಕೊಡಲಿದೆ.

ಈಗಾಗಲೇ ಡಕಾರ್ Rally ವಿಜೇತ ಅಮೆರಿಕದ ಜಿಮ್ಮಿ ಲೆವಿಸ್ ಜತೆ ಒಂದು ವಾರ ವಿನಿಯೋಗಿಸಿರುವ ಸಂತೋಷ್, ನೆವಡಾದಲ್ಲಿ ನೇವಿಗೇಷನ್ ತರಬೇತಿ ಪಡೆದುಕೊಂಡಿದ್ದಾರೆ. ಇದು ಕೂಡಾ ಈ ಯುವ ಸಾಹಸಿಗನಿಗೆ ನೆರವಾಗಲಿದೆ.

ಭಾರತೀಯ ಮೊಟೊಕ್ರಾಸ್ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನಿಡುತ್ತಿರುವ ಸಂತೋಷ್, ಬೆಳೆದು ಬರುತ್ತಿರುವ ಯುವ ಪ್ರತಿಭಾವಂತ ರೈಡರ್ಗಳಿಗೆ ಸ್ಪೂರ್ತಿಯಾಗಿದ್ದಾರೆ. ಇನ್ನು ಸಂತೋಷ್ ಬೆಂಗ್ಳೂರಿಗ ಎಂಬುದು ಕನ್ನಡಿಗರ ಖುಷಿಗೆ ಪಾರವೇ ಇಲ್ಲದಂತಾಗಿದೆ.


Click it and Unblock the Notifications








