2011 ಬಜೆಟ್: ವಾಹನೋದ್ಯಮದ ನಿರೀಕ್ಷೆಗಳು

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ಕೂಡ ದೇಶದ ಪ್ರಗತಿಯನ್ನು ಹೆಚ್ಚಿಸುವಂತಿರಬೇಕು. ವಾಹನಗಳಿಗೆ ಬೇಡಿಕೆ ಇಳಿಕೆ ಕಂಡರೂ, ವಾಹನ ತಯಾರಿಕ ಘಟಕ ನಿರ್ಮಾಣಕ್ಕೆ ಕಂಪನಿಗಳು ಹಿಂಜರಿಯಬಾರದು. ಹೂಡಿಕೆದಾರರು ಹೆಚ್ಚಿನ ಭರವಸೆ ಹೊಂದಬೇಕು. ಹೀಗಾದರೆ ಮಾತ್ರ ಎರಡು ವರ್ಷದ ಹಿಂದಿನ ಆರ್ಥಿಕ ಹಿಂಜರಿತದ ಕಡೆಗೆ ಆರ್ಥಿಕ ವ್ಯವಸ್ಥೆ ಹೋಗುತ್ತಿಲ್ಲವೆಂಬ ಭರವಸೆ ಹೂಡಿಕೆದಾರರಲ್ಲಿ ಮೂಡಬೇಕು ಎಂದು ಚೇತನ್ ಹೇಳುತ್ತಾರೆ.
ಸಣ್ಣ ಫ್ಲಾಷ್ ಬ್ಯಾಕ್: ಕಳೆದ ಆರ್ಥಿಕ ವರ್ಷದ ಬಜೆಟ್ ನಲ್ಲಿ ಹಲವು ಉತ್ತೇಜನ ಪ್ಯಾಕೇಜ್ ಹಿಂಪಡೆದರೂ ದೇಶದ ವಾಹನ ಮಾರುಕಟ್ಟೆ ಅಭಿವೃದ್ಧಿಯತ್ತ ಮುಖ ಮಾಡಿದೆ. ಇಂಧನ ದರ ಹೆಚ್ಚಳ, ಹಣದುಬ್ಬರ ಏರಿಳಿತ ಮತ್ತು ಬಡ್ಡಿದರಗಳು ಏರಿಕೆ ಕಂಡರೂ ವಾಹನ ಕ್ಷೇತ್ರದ ಸಕ್ಸಸ್ ಸ್ಟೋರಿಗೆ ಏನೂ ಕುಂದಾಗಿರಲಿಲ್ಲ. ತೆರಿಗೆ ಸಂಗ್ರಹ ಗುರಿ ಮತ್ತು ಇತರ ಆದಾಯಗಳು ಏರಿಕೆ ಕಂಡು ಆರ್ಥಿಕತೆ ಗಮನಾರ್ಹ ಪ್ರಗತಿಯತ್ತ ಮುಖ ಮಾಡಿರುವುದರಿಂದ ವಾಹನ ಮಾರುಕಟ್ಟೆಯೂ ಸಾಕಷ್ಟು ಪ್ರಗತಿ ದಾಖಲಿಸಿದೆ.
ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ: ಪರಿಸರ ಸ್ನೇಹಿ, ಇಂಧನ ದಕ್ಷತೆಯ ವಾಹನಗಳಿಗೆ ಹೆಚ್ಚಿನ ಉತ್ತೇಜನಾ ನೀಡುವ ಅಗತ್ಯವಿದೆ ಎಂದು ಚೇತನ್ ಕಕಾರಿಯಾ ಹೇಳುತ್ತಾರೆ. ಹೈಬ್ರಿಡ್ ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇಂತಹ ವಾಹನ ಆಮದಿಗೆ ಆಮದು ಸುಂಕ ಕಡಿಮೆ ಮಾಡುವ ಅಗತ್ಯವಿದೆ. ವಾಣಿಜ್ಯ ವಾಹನ ಸೆಗ್ಮೆಂಟ್ ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಹೈಬ್ರಿಡ್ ಸೆಗ್ಮೆಂಟ್ ವಾಹನ ಖರೀದಿಗೆ ಬಡ್ಡಿದರ ವಿನಾಯಿತಿ ಮತ್ತು ವಿಶೇಷ ಸಾಲ ಸೌಲಭ್ಯವಿರಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.
ಇಂಧನ ದರ ಮತ್ತು ಹಣದುಬ್ಬರ: ಬಿಡಿಭಾಗಗಳ ದರ ಏರಿಕೆಯಿಂದ ವಾಹನ ದರ ಹೆಚ್ಚಾದರೂ ಮಾರಾಟದ ಪ್ರಮಾಣದ ಮೇಲೆ ಯಾವುದೇ ಹಿನ್ನಡೆಯಾಗುವ ನಿರೀಕ್ಷೆಯಿಲ್ಲ. ಇಂಧನ ದರ ಏರಿಕೆ ಮತ್ತು ಹಣದುಬ್ಬರದ ಏರಿಳಿತ ಕೂಡ ಅಭಿವೃದ್ಧಿಗೆ ಒಂದಿಷ್ಟು ಹಿನ್ನಡೆ ತರಲಿದೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಆರ್ಥಿಕ ಪ್ರಗತಿಗೆ ಅಜೆಂಡಾ ರೂಪಸಿ ಹಣದುಬ್ಬರ ಟ್ರೆಂಡ್ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು.
ರಫ್ತು ಮತ್ತು ಆಮದು: ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿನ ಹಿಂಜರಿತವು ವಾಹನ ರಫ್ತಿನ ಮೇಲೆ ಹೊಡೆತ ನೀಡಿದೆ. ಚೀನಾದಂತಹ ದೇಶಗಳು ವೆಚ್ಚ ಕಡಿತದಂತಹ ಕಾರ್ಯತಂತ್ರದ ಮೊರೆ ಹೋಗಿವೆ. ರಫ್ತಿನ ಮೇಲೆ ತೆರಿಗೆ ವಿನಾಯಿತಿ ಇನ್ನೂ ಮುಂದುವರೆದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳಿವೆ. ಇಂಧನ ಮತ್ತು ಇತರ ಕಮಾಡಿಟಿಗಳ ಮೇಲಿನ ಹಲವು ಲೆವಿ ದರಗಳನ್ನು ಕಡಿಮೆ ಮಾಡಿದ್ದು ಕೂಡ ದೇಶದ ವಾಹನ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಚೇತನ್ ಕಕಾರಿಯಾ ಹೇಳುತ್ತಾರೆ.
ಮೂಲಸೌಕರ್ಯ ಅಭಿವೃದ್ಧಿ: ಭಾರತದಲ್ಲಿ ಈಗಲೂ ದ್ವಿಚಕ್ರವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅದರ ಮಾರುಕಟ್ಟೆ ಪಾಲು ಅತ್ಯಧಿಕವಾಗಿದೆ. ರಸ್ತೆ, ಸಾರ್ವಜನಿಕ ಸಾರಿಗೆ ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ರಸ್ತೆ ಸೌಕರ್ಯ ವಿಸ್ತಾರಗೊಳಿಸುವದು ಪರಿಸರ ಮಾಲಿನ್ಯವನ್ನೂ ಕಡಿಮೆಗೊಳಿಸುತ್ತದೆ. ದ್ವಿಚಕ್ರ ವಾಹನಗಳಿಗಿಂತ ವಾಣಿಜ್ಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಬೇಕು.
ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯತಂತ್ರಗಳು ಈಗ ಕೇವಲ ಇನ್-ಹೌಸ್ ಮಟ್ಟದಲ್ಲಿದೆ. ಇಂತವುಗಳ ಹೊರಗುತ್ತಿಗೆ ಹೆಚ್ಚಿಸಬೇಕು. ಮತ್ತು ಭಾರತವುನ್ನು ನಾಲೆಡ್ಜ್ ಬ್ಯಾಂಕ್ ಆಗಿ ರೂಪಿಸಲು ಹೆಚ್ಚಿನ ಒತ್ತು ನೀಡಬೇಕು. ಕನಿಷ್ಠ ಪರ್ಯಾಯ ತೆರಿಗೆ(ಎಂಎಟಿ)ಯನ್ನು ಹೆಚ್ಚುಮಾಡದೇ ಸಾಮಾನ್ಯ ತೆರಿಗೆ ನಡುವೆ ಹೊಂದಾಣಿಕೆ ಇರುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಚೇತನ ಕಕಾರಿಯಾ ಹೇಳುತ್ತಾರೆ.


Click it and Unblock the Notifications








