ಹಸಿರು ತೆರಿಗೆ: ಕಾರು ಮಾಲಿಕರ ಮೇಲೆ ಬ್ರಹ್ಮಾಸ್ತ್ರ

ಯೋಜನಾ ಆಯೋಗದ ಕಾರ್ಯಸಮಿತಿ ಹಸಿರು ಸೆಸ್ ಮತ್ತು ನಗರ ಸಾರಿಗೆ ತೆರಿಗೆ ವಿಧಿಸುವ ಶಿಫಾರಸು ಮಾಡಿದೆ. ಗ್ರೀನ್ ಸೆಸ್ ಪ್ರಸ್ತಾಪಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡುವ ನಿರೀಕ್ಷೆಯಿದೆ.
ಏನಿದು ಗ್ರೀನ್ ಸೆಸ್: ಪರಿಸರ ಸ್ನೇಹಿಯಲ್ಲದ ಸರಕು ಮತ್ತು ಸೇವೆಯ ಮೇಲೆ ವಿಧಿಸುವ ತೆರಿಗೆಯೇ ಗ್ರೀನ್ ಸೆಸ್. ಈ ಮೂಲಕ ಮಾಲಿನ್ಯ ನಿಯಂತ್ರಿಸುವುದು ಹಸಿರು ತೆರಿಗೆ ಉದ್ದೇಶ. ಪರಿಸರ ಮಾಲಿನ್ಯದಲ್ಲಿ ವಾಹನಗಳ ಪಾತ್ರ ಪ್ರಮುಖವಾಗಿರುವುದರಿಂದ ಹಸಿರು ಸೆಸ್ ವಿಧಿಸಲು ನಿರ್ಧರಿಸಲಾಗಿದೆ.
ಹೊಸ ನೀತಿಗೆ ಅಂಕಿತ ದೊರಕಿದರೆ ಪ್ರತಿಲೀಟರ್ ಪೆಟ್ರೋಲ್ ಗೆ ಹೆಚ್ಚುರಿ 2 ರು ತೆರಿಗೆ ನೀಡಬೇಕು. ಜೊತೆಗೆ ಪೆಟ್ರೋಲ್ ಕಾರು, ಬೈಕ್, ಸ್ಕೂಟರ್ ಒಟ್ಟು ವೆಚ್ಚದ ಮೇಲೆ ಶೇಕಡ 7ರಷ್ಟು ಮತ್ತು ಡೀಸೆಲ್ ವಾಹನಗಳ ಒಟ್ಟು ವೆಚ್ಚದ ಮೇಲೆ ಶೇಕಡ 20ರಷ್ಟು ಹಸಿರು ಸೆಸ್ ವಿಧಿಸಲಾಗುತ್ತದೆ. ಹಳೆಯ ವಾಹನಗಳ ವಿಮೆ ಮೇಲೆ ಶೇಕಡ 3 ರಷ್ಟು ಹಸಿರು ತೆರಿಗೆ ವಿಧಿಸಲಾಗುತ್ತದೆ.
ಇದರಿಂದ ಜನರು ಖಾಸಗಿ ವಾಹನ ಖರೀದಿ ಆಸೆ ಬಿಟ್ಟು ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಾರೆ. ವಾಹನ ಬಳಕೆ ಕಡಿಮೆಯಾಗುವುದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಆದರೆ ಈ ತೆರಿಗೆ ಕಾರು ಖರೀದಿಯ ಕನಸ್ಸಿನಲ್ಲಿರುವ ಮಧ್ಯಮ ವರ್ಗದವರಿಗೆ ಹೆಚ್ಚು ಅಪಾಯ ಉಂಟುಮಾಡಲಿದೆ. ಶ್ರೀಮಂತರ ವಿಷಯ ಬಿಟ್ಟುಬಿಡೋಣ.
ಈಗ ಹೆಚ್ಚಿನ ಜನರು ಪೆಟ್ರೋಲ್ ಕಾರು ಖರೀದಿ ಬಿಟ್ಟು ಡೀಸೆಲ್ ಕಾರು ಖರೀದಿಸುತ್ತಿದ್ದಾರೆ(ಡೇಂಜರ್ ಡೀಸೆಲ್ ಕಾರು). ಡೀಸೆಲ್ ವಾಹನಗಳ ಒಟ್ಟು ವೆಚ್ಚದ ಮೇಲೆ ಶೇಕಡ 20ರಷ್ಟು ಹಸಿರು ಸೆಸ್ ವಿಧಿಸುವ ಪ್ರಸ್ತಾಪವಿದೆ. ಡೀಸೆಲ್ ಕಾರಿನ ಮೇಲೆ ಇನ್ನು ಹಲವು ಬ್ರಹ್ಮಾಸ್ತ್ರ ಪ್ರಯೋಗವಾಗುವ ಸಾಧ್ಯತೆಯಿದೆ.
ಸಿಂಗಪುರದಲ್ಲಿ ಖಾಸಗಿ ಕಾರುಗಳ ಮೇಲೆ ಕಠಿಣ ನೀತಿಗಳಿವೆ. ಅಲ್ಲಿ ಸಣ್ಣಪುಟ್ಟ ಟ್ರಾಫಿಕ್ ಅಪರಾಧಗಳಿಗೂ ಭಯಾನಕ ದಂಡ, ಲೈಸನ್ಸ್ ರದ್ದು ಇತ್ಯಾದಿ ಕ್ರಮಕೈಗೊಳ್ಳಲಾಗುತ್ತದೆ. ಭಾರತ ಕೂಡ ಸಿಂಗಪುರದಂತೆ ನಿಧಾನವಾಗಿ ಕಠಿಣ ಟ್ರಾಫಿಕ್ ನಿಯಮ ಅಳವಡಿಸುತ್ತದೆಯೇ ಗೊತ್ತಿಲ್ಲ.
ಆದರೆ ಒಂದು ವಿಷಯ ಗಮನಿಸಬೇಕು. ಸಿಂಗಪುರದಲ್ಲಿ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ. ಅಲ್ಲಿ ಹೆಚ್ಚಿನ ಜನರು ಕಾರು ಹೊಂದಿಲ್ಲ. ಅವರು ಈಗಲೂ ಸಾರ್ವಜನಿಕ ಸಾರಿಗೆಯನ್ನೇ ಬಳಸುತ್ತಾರೆ. ಯಾಕೆಂದರೆ ಅಲ್ಲಿನ ಸಾರಿಗೆ ವ್ಯವಸ್ಥೆ ಅಷ್ಟು ಉತ್ತಮವಾಗಿದೆ ಎಂದು ಸಿಂಗಾಪುರ ಸ್ನೇಹಿತರೊಬ್ಬರ ಅಭಿಪ್ರಾಯ.
ಈ ತೆರಿಗೆ ಮೂಲಕ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸುಮಾರು 22,40,804 ಕೋಟಿ ರು. ಸಂಗ್ರಹಿಸುವ ಗುರಿಗೆ ಸಹಕರಿಸಲಿದೆಯಂತೆ. ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡದೇ ಕಾರು ಮಾಲಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಈ ತೆರಿಗೆ ನೀತಿಗೆ ಬಹುಪರಾಕ್ ಎನ್ನಬಹುದೇ? (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








