ವೋಲ್ವೋ ಇಂಧನ ಟ್ಯಾಂಕ್ ಸ್ಫೋಟಗೊಳ್ಳಲು ಸಾಧ್ಯವಿಲ್ಲ?
ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದ ಖಾಸಗಿ ಜಬ್ಬಾರ್ ಟ್ರಾವೆಲ್ಸ್ನ ವೋಲ್ವೋ ಬಸ್ ಆಂಧ್ರ ಪ್ರದೇಶದ ಮೆಹಬೂಬ್ ನಗರದ ಬಳಿ ನಡೆದ ಬಸ್ ದುರಂತದಲ್ಲಿ 45ರಷ್ಟು ಮಂದಿ ಸಜೀವ ದಹನಗೊಂಡಿದ್ದರು. ಪ್ರಸ್ತುತ ವೋಲ್ವೋ ಬಸ್ ಅಧಿಕಾರಿಗಳು ಡೀಸೆಲ್ ಟ್ಯಾಂಕ್ ಸ್ಫೋಟಿಸಲು ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳುವುದರ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ.
ವೋಲ್ವೋ ಬಸ್ಸಿನ ಇಂಧನ ಟ್ಯಾಂಕ್ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅಪಘಾತ ಸಂಭವಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಆದರೆ ಇಂಧನ ಟ್ಯಾಂಕ್ ಒಡೆಯುವ ಸಾಧ್ಯತೆಯೇ ಇಲ್ಲ ಎಂದು ವೋಲ್ವೋ ಬಸ್ ಅಧಿಕಾರಿಗಳು ಸ್ಪಷ್ಟನೆ ನೀಡಿರುವುದು ಎಲ್ಲರಲ್ಲೂ ಕುತೂಹಲ ಮನೆಮಾಡಿದೆ.
ಸಂಬಂಧಪಟ್ಟ ಸುದ್ದಿಗಳು: 45 ಮಂದಿಯ ಬಲಿತೆಗೆದುಕೊಂಡ ವೋಲ್ವೋ ಬಸ್ ಓವರ್ಸ್ಪೀಡ್?

ವೋಲ್ವೋ ಸ್ಪಷ್ಟನೆ...
ಬೆಂಗಳೂರು ಸಮೀಪದ ಘಟಕದಲ್ಲಿ ಕಳೆದೊಂದು ದಶಕದಿಂದ ವೋಲ್ವೋ ಬಸ್ಸುಗಳನ್ನು ತಯಾರಿಸಲಾಗುತ್ತಿದೆ. ಬಸ್ಸಿನಲ್ಲಿದ್ದ ಡೀಸೆಲ್ ಟ್ಯಾಂಕ್ ಅನ್ನು ಲೋಹದಿಂದ ತಯಾರಿಸಲಾಗಿಲ್ಲ. ಬದಲಾಗಿ ವಿಶೇಷವಾಗಿ ಸಿದ್ಧಗೊಳಿಸಲಾದ ರೋಟೊ ವೋಲ್ಡೆಡ್ ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತದೆ. ಇದು ಒತ್ತಡ ಹೆಚ್ಚಾದ ಸಂದರ್ಭದಲ್ಲಿ ಸ್ಪೋಟಗೊಳ್ಳುವುದಿಲ್ಲ ಬದಲಾಗಿ ಇಂಧನ ಬಿರುಕು ಬಿಡುವ ಸಾಧ್ಯತೆ ಹೆಚ್ಚಾಗಿದೆ ಎಂದಿದೆ.

ಒಟ್ಟಿನಲ್ಲಿ ಖಾಸಗಿ ಹವಾ ನಿಯಂತ್ರಿತ ವೋಲ್ವೋ ಬಸ್ ಪಯಣ ಸುರಕ್ಷಿತವೇ? ಎಂಬ ಶಂಕೆ ನಮ್ಮೆಲ್ಲರಲ್ಲೂ ಹುಟ್ಟುಹಾಕಿದೆ. ಮೂಲಗಳ ಪ್ರಕಾರ ಅಪಘಾತಕ್ಕೀಡಾದ ಜಬ್ಬಾರ್ ಬಸ್ಸಿನಲ್ಲಿ ಇಬ್ಬರು ಚಾಲಕರ ಕೊರತೆಯಿತ್ತು. ಈ ಬಗ್ಗೆ ಮಾಲಿಕರಲ್ಲಿ ವಿನಂತಿಸಿದರೂ ನಿರಾಕರಿಸಲಾಗಿತ್ತು ಎಂದು ಬಂಧಿತ ಬಸ್ ಚಾಲಕ ಫಿರೋಜ್ ಖಾನ್ ತಿಳಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿಯಲ್ಲಿ...
ಪ್ರಸ್ತುತ ವೋಲ್ವೋ ಇಂಧನ ಟ್ಯಾಂಕ್ ಸ್ಫೋಟದ ಕುರಿತು ಮಾಹಿತಿ ಪಡೆಯಲು ತನಿಖಾ ದಳವನ್ನು ನೇಮಕಗೊಳಿಸಿದೆ. ಅಲ್ಲದೆ ವೋಲ್ವೋ ಕಂಪನಿ ಸಹ ವಿಶೇಷ ಹಮ್ಮಿಕೊಳ್ಳುವುದಾಗಿ ತಿಳಿಸಿದೆ.

ಪೆಟ್ರೋಕೆಮಿಕಲ್ ಸಾಗಣೆ ಶಂಕೆ
ಇನ್ನೊಂದು ಮೂಲಗಳ ಮಾಹಿತಿಯ ಪ್ರಕಾರ ಬಸ್ಸಿನಲ್ಲಿ ಅನಧಿಕೃತವಾಗಿ ಪೆಟ್ರೋಕೆಮಿಕಲ್ ಪದಾರ್ಥಗಳನ್ನು ಸಾಗಿಸಲಾಗಿತ್ತು. ಇದು ಸಹ ಸ್ಫೋಟದ ಪ್ರಭಾವವನ್ನು ಹೆಚ್ಚಿಸಿರಬಹುದೆಂದು ಶಂಕಿಸಲಾಗಿದೆ.

ದೀಪಾವಳಿ ಸಿಡಿಮದ್ದು
ಇನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿದ್ದ ಯಾತ್ರಿಕರು ತಮ್ಮ ಜತೆ ಸಿಡಿಮದ್ದುಗಳನ್ನು ಕೊಂಡೊಯ್ದಿದ್ದಾರೆಯೇ ಎಂಬುದು ಸಹ ತನಿಖೆಯ ಬಳಿಕವಷ್ಟೇ ಬೆಳಕಿಗೆ ಬರಲಿದೆ.

ಕಪ್ಪು ಚುಕ್ಕೆ
ಒಟ್ಟಿನಲ್ಲಿ ವೋಲ್ವೋ ಬಸ್ ಅಪಘಾತ ದೇಶದ ವಾಹನ ಇತಿಹಾಸದಲ್ಲೇ ಕಪ್ಪು ಚುಕ್ಕೆಯಂತಾಗಿದೆ. ಇದು ಅಕ್ಷರಶ: ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರು ವಿಮಾನ ದುರಂತವನ್ನು ನೆನಪಿಸುವಂತಿದೆ.


Click it and Unblock the Notifications








